Advertisement

ಉಡುಪಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಕೆ

12:06 AM Jun 01, 2019 | Team Udayavani |

ಉಡುಪಿ: ಮಲ್ಪೆ, ಬನ್ನಂಜೆ, ಎಂಜಿಎಂ, ಕಲ್ಸಂಕ, ಶಿರಿಬೀಡು, ಕರಾವಳಿ ಬೈಪಾಸ್‌, ಸಿಂಡಿಕೇಟ್ ಸರ್ಕಲ್, ಟೈಗರ್‌ ಸರ್ಕಲ್, ಎಂಐಟಿ ಜಂಕ್ಷನ್‌ಗಳಲ್ಲಿ ಸಿಗ್ನಲ್ ಅಳವಡಿಸುವ ಬಗ್ಗೆ ಪೊಲೀಸ್‌ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ತಿಳಿಸಿದರು.

Advertisement

ಶುಕ್ರವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಈ ಮಾಹಿತಿ ನೀಡಿದರು.

ಅಜ್ಜರಕಾಡು ಆಸ್ಪತ್ರೆ ಬಳಿ ಬಸ್‌ ನಿಲ್ದಾಣ, ರಿಕ್ಷಾ ನಿಲ್ದಾಣ ಇರುವುದರಿಂದ ಶಾಲಾ ಕಾಲೇಜು ಮಕ್ಕಳು ಹಾಗೂ ಜನರು ಆಸ್ಪತ್ರೆಯ ಗೇಟಿನ ಬಳಿಯೇ ನಿಲ್ಲುತ್ತಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಬಸ್‌ ನಿಲ್ದಾಣವನ್ನು ಬೇರೆ ಕಡೆಗೆ ವರ್ಗಾಯಿಸುವಂತೆ ನಾಗರಿಕರೊಬ್ಬರು ತಿಳಿಸಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದರು.

ಸಂಚಾರಕ್ಕೆ ತೊಂದರೆ
ಬೋರುಗುಡ್ಡೆ ಪರಿಸರದಲ್ಲಿ ರಸ್ತೆ ಗಳಲ್ಲಿ ಡಾಮರು ಕಿತ್ತು ಹೋಗಿದೆ. ಸಂತೆ ಮಾರುಕಟ್ಟೆ ಬಳಿ ಎರಡೂ ಕಡೆಯಿಂದ ವಾಹನ ಚಲಾಯಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಪಾರ್ಕಿಂಗ್‌ ಮಾಡಲಾಗುತ್ತಿದೆ. ಮ್ಯಾನ್‌ ಹೋಲ್ಗಳೂ ಮುಚ್ಚಿಹೋಗಿದ್ದು, ಇಂಟರ್‌ ಲಾಕ್‌ ತೆರೆದಿವೆ. ಇದರ ಮರು ಜೋಡಣೆಯನ್ನೂ ಮಾಡಿಲ್ಲ ಎಂದು ನಾಗರಿಕರೊಬ್ಬರು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಪುರಸಭೆಯವರಿಗೆ ತಿಳಿಸಲಾಗುವುದು ಎಂದರು.

ಬೀದಿ ನಾಯಿಗಳ ಹಾವಳಿ
ಮೂಳೂರು ಉಚ್ಚಿಲ ಪರಿಸರದಲ್ಲಿ ಬೀದಿನಾಯಿಗಳ ಹಾವಳಿಯಿದೆ ಎಂದು ನಾಗರಿಕರೊಬ್ಬರು ತಿಳಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

ರಸ್ತೆಯಲ್ಲೇ ಪಾರ್ಕಿಂಗ್‌
ಬ್ರಹ್ಮಾವರದ ಕೃಷ್ಣಾ ಮಿಲ್ಕ್ ಡೈರಿ, ಹ್ಯಾಂಗ್ಯೋ ಐಸ್‌ಕ್ರೀಂ, ಸುಪ್ರೀಂ ಫೀಡ್ಸ್‌ ಕಡೆಯಿಂದ ಅಧಿಕ ಭಾರದ ಟ್ಯಾಂಕರ್‌ಗಳು ವಿರುದ್ಧ ದಿಕ್ಕಿನಿಂದ ಬರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆ ಉಂಟಾಗು ತ್ತಿದೆ. ಬ್ರಹ್ಮಾವರ ರಾ.ಹೆ. ಬಳಿ ಇರುವ ಕಟ್ಟಡಗಳ ಸಮೀಪ ಶುಭ ಸಮಾರಂಭಗಳು ನಡೆಯುವಾಗ ವಾಹನಗಳನ್ನು ರಸ್ತೆಯಲ್ಲೇ ಪಾರ್ಕಿಂಗ್‌ ಮಾಡಲಾಗುತ್ತಿದೆ ಎಂದು ಒಬ್ಬರು ಕರೆ ಮಾಡಿ ತಿಳಿಸಿದರು. ಈ ಬಗ್ಗೆ ಗಮನಹರಿಸಲಾಗುವುದು ಎಂದು ಎಸ್‌ಪಿಯವರು ತಿಳಿಸಿದರು.

ಪಾದಚಾರಿಗಳಿಗೆ ಸಮಸ್ಯೆ
ಕಟಪಾಡಿ ಪೇಟೆಯ ಬಳಿ ಸರ್ವಿಸ್‌ ರಸ್ತೆಯ ಮೇಲೆಯೇ ವಾಹನಗಳ ಪಾರ್ಕಿಂಗ್‌ ಮಾಡುತ್ತಿರುವುದರಿಂದ ವಾಹನ ಚಲಾಯಿಸಲು ತೊಂದರೆಯಾಗು ತ್ತಿದೆ. ಒಂದು ನಿರ್ದಿಷ್ಟ ಕಟ್ಟಡದ ಎದುರು ಕಲ್ಲುಗಳನ್ನು ಫ‌ುಟ್ಪಾತ್‌ ಮೇಲೆ ಇರಿಸಿರುವುದರಿಂದ ಪಾದಾಚಾರಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕ ರೊಬ್ಬರು ತಿಳಿಸಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಎಸ್‌ಪಿಯವರು ತಿಳಿಸಿದರು.

ಅಕ್ರಮ ಮರಳುಗಾರಿಕೆ
ಗಂಗೊಳ್ಳಿಯಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ನಾಗರಿಕ‌ರೊಬ್ಬರು ಮನವಿ ಮಾಡಿದರು. ಮರಳುಗಾರಿಕೆಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ 17, ಎಪ್ರಿಲ್ನಲ್ಲಿ 8 ಹಾಗೂ ಮೇ ತಿಂಗಳಲ್ಲಿ 19 ಸಹಿತ ಒಟ್ಟು 44 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಎಸ್‌ಪಿಯವರು ತಿಳಿಸಿದರು.

ಉಡುಪಿ ಡಿವೈಎಸ್‌ಪಿ ಜೈಶಂಕರ್‌, ಉಡುಪಿ ಸರ್ಕಲ್ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಟ್ರಾಫಿಕ್‌ ಎಸ್‌ಐ ನಿತ್ಯಾನಂದ ಗೌಡ, ಕುಂದಾಪುರ ಡಿವೈಎಸ್‌ಪಿ ದಿನೇಶ್‌, ಕಾಪು ಸರ್ಕಲ್ ಇನ್‌ಸ್ಪೆಕ್ಟರ್‌ ಶಾಂತಾರಾಮ್‌ ಉಪಸ್ಥಿತರಿದ್ದರು.

ಕೇಳಿಬಂದ ಇತರ ದೂರುಗಳು
•ಗುಂಡಿಬೈಲು ಜಂಕ್ಷನ್‌ನಲ್ಲಿ ಅನಧಿಕೃತ ಪಾರ್ಕಿಂಗ್‌ ನಡೆಯುತ್ತಿದೆ. •ಬ್ರಹ್ಮಾವರದಲ್ಲಿ ಟ್ರಾಫಿಕ್‌ ಸಮಸ್ಯೆ ಇದ್ದು, ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿದೆ. • ಕುಂಜಾಲು ಪರಿಸರದಲ್ಲಿ ದ್ವಿಚಕ್ರ ಮತ್ತು ಆಟೋರಿಕ್ಷಾಗಳು ಯಾವುದೇ ಸೂಚನೆ ನೀಡದೆ ವಾಹನ ಚಾಲನೆ ಮಾಡುತ್ತಿದ್ದಾರೆ. ••ಮಲ್ಪೆ ಬಸ್‌ ನಿಲ್ದಾಣದ ಬಳಿ ಗೂಡ್ಸ್‌ ವಾಹನಗಳು, ಕಾರು ಇತ್ಯಾದಿ ವಾಹನಗಳು ಪಾರ್ಕಿಂಗ್‌ ಮಾಡುತ್ತಿರುವುದರಿಂದ ಸಂಚಾರ ಸಮಸ್ಯೆಉಂಟಾಗುತ್ತಿದೆ.

ಕಾರ್ಕಳದಿಂದ ಅತ್ಯಧಿಕ ದೂರು
ಎಸ್‌ಪಿ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕಾರ್ಕಳ ಭಾಗದಿಂದ ಅತ್ಯಧಿಕ ದೂರುಗಳು ಬಂದವು. ಟ್ರಾಫಿಕ್‌ ವಿಚಾರಕ್ಕೆ ಸಂಬಂಧಿಸಿದಂತೆ, ಅನಧಿಕೃತ ವಾಹನ ಪಾರ್ಕಿಂಗ್‌ ಬಗ್ಗೆ ಅಧಿಕ ಕರೆಗಳು ದಾಖಲಾದವು.

ದುಬಾರಿ ಆಟೋ ದರ
ಉಡುಪಿ ನಗರ ಪ್ರದೇಶದಲ್ಲಿ ಆಟೋ ಚಾಲಕರು ನಿಗದಿತ ದರಕ್ಕಿಂತ
ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಮೀಟರ್‌ ಕೂಡ ಅಳವಡಿಸುತ್ತಿಲ್ಲ ಎಂದು ನಾಗರಿಕರೊಬ್ಬರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಯವರು ಈ ಬಗ್ಗೆ ಪ್ರಯಾಣಿಕರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಟೋ ಚಾಲಕರ ದರ ಪರಿಶೀಲನೆಯ ಬಗ್ಗೆಯೂ ಗಮನಹರಿಸಲಾಗುವುದು ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next