Advertisement

ವಿಮಾನ ನಿಲ್ದಾಣಕ್ಕೆ ಹೊರಟವರು ನೇರ ವೇದಿಕೆಗೆ ಬಂದರು!

05:51 PM Sep 26, 2020 | Nagendra Trasi |

ಹದಿನಾರು ಭಾಷೆಗಳಲ್ಲಿ ಸುಮಾರು40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದವರು ಎಸ್‌. ಪಿ.ಬಾಲಸುಬ್ರಹ್ಮಣ್ಯಂ. ಇಷ್ಟಾದರೂ ಅವರಿಗೆ ನಾನು ಮಹಾನ್‌ ಗಾಯಕ ಅನ್ನುವ ಅಹಂಕಿಂಚಿತ್ತೂ ಇರಲಿಲ್ಲ. ಬದಲಿಗೆ, ತನ್ನ ಸಮಕಾಲೀನ ಗಾಯಕರಕುರಿತು ಪ್ರೀತಿಯಿತ್ತು. ಗೌರವ ಭಾವವಿತ್ತು. ಅವರಿಂದ ಏನಾದರೂ ಹೊಸತನ್ನುಕಲಿಯಬೇಕೆಂಬ ಹಂಬಲವಿತ್ತು. ಅವರನ್ನು ಗೌರವಿಸಬೇಕೆಂಬ ಆಸೆಯಿತ್ತು.

Advertisement

ಅಂಥದೊಂದು ಸಂದರ್ಭ ಸಿಕ್ಕಾಗ ಎಸ್ಪಿ ಪುಟ್ಟ ಮಗುವಾಗಿ ಬಿಡುತ್ತಿದ್ದರು. ಕಿರಿಯ ವಿದ್ಯಾರ್ಥಿಯಂತೆ ನಡೆದುಕೊಳ್ಳುತ್ತಿದ್ದರು. ಸಂಭ್ರಮಿಸುತ್ತಿದ್ದರು. ಅದಕ್ಕೊಂದು ಸಾಕ್ಷಿ, ಅವರು ಗಾಯಕ ಯೇಸುದಾಸ್‌ ಅವರನ್ನು ಸನ್ಮಾನಿಸಿದ್ದು. ಅವತ್ತು, ಯೇಸುದಾಸ್‌ ಅವರ ಕಾಲಬುಡದಲ್ಲಿ ಕೂತು ಅವರ ಪಾದಪೂಜೆ ಮಾಡುವ ಮೂಲಕ ಧನ್ಯತೆ ಅನುಭವಿಸಿದರು ಎಸ್ಪಿಬಿ. ಆ ಸಂದರ್ಭದಲ್ಲಿ ಅವರಿಗೆ ಆದ ಖುಷಿಗೆ ಪಾರವೇ ಇರಲಿಲ್ಲ. ಎಸ್ಪಿಬಿ ಅವರ ವ್ಯಕ್ತಿತ್ವಕ್ಕೆ ಮೆರುಗು ಕೊಡುವಂಥ ಅಪೂರ್ವ ಗುಣಗಳು ಅವರಿಗಿದ್ದವು. ವಿನಯ ಮತ್ತು ಸಹನೆ ಅವರ ಪ್ಲಸ್‌ ಪಾಯಿಂಟ್‌ ಗಳು. ಎಷ್ಟೇ ಗಡಿಬಿಡಿಯ ಸಂದರ್ಭವಾಗಿದ್ದರೂ ಅದನ್ನು ತೋರಿಸಿಕೊಳ್ಳದೆ ಎದುರಿಗಿದ್ದವರ ಮಾತನ್ನು ಪೂರ್ತಿ ಕೇಳುತ್ತಿದ್ದುದು ಅವರ ದೊಡ್ಡ ಗುಣ. ಉಹೂಂ, ಯಾವುದೇ ಸಂದರ್ಭದಲ್ಲೂ ಅವರು ಬೇಸರವಾಗುವಂತೆ
ಮಾತಾಡುತ್ತಿರಲಿಲ್ಲ.

ಕಾರ್ಯಕ್ರಮಗಳಲ್ಲಿ- “”ಸಾರ್‌, ಇನ್ನೊಂದ್‌ ಹಾಡೂ… ” ಎಂದು ಒಕ್ಕೊರಲಿನ ಬೇಡಿಕೆ ಬಂದಾಗಕೂಡ, ಹಾಡಲು ಆಗಲ್ಲ ಅಂತಕಡ್ಡಿ ತುಂಡು ಮಾಡಿದಂತೆ ಹೇಳುತ್ತಿರಲಿಲ್ಲ. ಬದಲಾಗಿ, ಎರಡೇನು,20 ಹಾಡು ಹಾಡಲಿಕ್ಕೂ ನಾನು ರೆಡಿ. ಆದರೆ ಈ ಗಂಟಲುಕಿರಿಕಿರಿ ಕೊಡ್ತಾ ಇದೆ. ಹಾಗಾಗಿ ಹಾಡಲು ಆಗ್ತಾ ಇಲ್ಲ. ದಯವಿಟ್ಟು ಕ್ಷಮಿಸಿ… ಅನ್ನುತ್ತಾ ಕೈ ಮುಗಿಯುತ್ತಿದ್ದರು. ಎದೆಯಿಂದ ಬಂದ ಅವರ ಮಾತು ಎದೆಗಳನ್ನು ತಾಕುತ್ತಿತ್ತು.

ಬಹುಮಂದಿಗೆ ಗೊತ್ತಿಲ್ಲ; ಚಿತ್ರಗೀತೆಗಳನ್ನು ಹಾಡಿದಷ್ಟೇ ಪ್ರೀತಿ ಮತ್ತು ಹುಮ್ಮಸ್ಸಿನಿಂದ ಎಸ್ಪೀಬಿ ಅವರು ಭಾವಗೀತೆಗಳನ್ನೂ ಹಾಡುತ್ತಿದ್ದರು. ಕನ್ನಡದಲ್ಲಿ ಎಷ್ಟೊಂದು ಜನ ಕವಿಗಳಿದ್ದಾರೆ, ಎಷ್ಟೊಂದು ವೈವಿಧ್ಯಮಯವಾಗಿ ಬರೆಯುತ್ತಾರೆ, ಒಂದೊಂದು ಕವಿಯಲ್ಲೂ ಒಂದೊಂದು ಬಗೆಯ ಶಬ್ಧಭಂಡಾರವಿದೆ. ಅದು ನಿಜವಾಗಿ ಕನ್ನಡದ ಅದೃಷ್ಟ ಎಂದು ಮನದುಂಬಿ ಹೇಳುತ್ತಿದ್ದರು. ಅಷ್ಟೇ ಅಲ್ಲ. ಯಾವುದಾದರೂ ಭಾವಗೀತೆಯಲ್ಲಿ ಬಳಕೆಯಾದ ಪದದ ಅರ್ಥ ಗೊತ್ತಾಗದೇ ಹೋದಾಗ, ಆ ಕವಿಯ ಬಳಿ ಹೋಗಿ- “”ಸಾರ್‌, ಈ ಪದದ ಅರ್ಥ ಏನು? ಇದನ್ನು ಹೇಗೆ ಉಚ್ಚರಿಸಬೇಕು?” ಎಂದು ಕುತೂಹಲದಿಂದಕೇಳುತ್ತಿದ್ದರು. ಆನಂತರದಲ್ಲಿ ಆ ಹಾಡನ್ನುಕವಿಯ ಎದುರೇ ಒಂದೆರಡು ಬಾರಿ ಹಾಡಿ, ಭಾಷೆಯ ಬಳಕೆ ಮತ್ತು ಉಚ್ಚಾರಣೆ ಸರಿಯಾಗಿದೆಯಾ ಸಾರ್‌ ಎಂದು ಸಂಕೋಚದಿಂದಲೇಕೇಳುತ್ತಿದ್ದರು. ಆಗೆಲ್ಲಾ ನಾನೊಬ್ಬ ಯಕಶ್ಚಿತ್‌ ಗಾಯಕ, ಎದುರಿಗೆ ಇರುವಾತ ಶ್ರೇಷ್ಠಕವಿ, ಆತ ಸರಸ್ವತೀ ಪುತ್ರ ಎಂಬ ಭಕ್ತಿಭಾವ ಅವರಿಗೆ ಇರುತ್ತಿತ್ತು.

ಎಸ್ಪಿಬಿ ಅವರಿಂದ ಭಾವಗೀತೆಗಳನ್ನು ಹಾಡಿಸಬೇಕು ಎಂಬ ಆಸೆಕನ್ನಡದ ಹಲವು ಸಂಗೀತ ನಿರ್ದೇಶಕರಿಗೆ ಇತ್ತು. ಹಾಡಬೇಕೆಂಬ ಉತ್ಸಾಹ ಎಸ್ಪಿ ಅವರಿಗೂ ಇತ್ತು. ಆದರೆ ಅವರ ಬ್ಯುಸಿ ಷೆಡ್ನೂಲ್‌ನಕಾರಣಕ್ಕೆ ಎಷ್ಟೋ ಬಾರಿ ಅಂದುಕೊಂಡಂತೆ ಆಗುತ್ತಿರಲಿಲ್ಲ. ಆಗೆಲ್ಲಾ ತಾವೇ ಎಲ್ಲರನ್ನೂ ಸಮಾಧಾನ ಮಾಡುತ್ತಿದ್ದರು. “”ಭಾವಗೀತೆ ಕ್ಯಾಸೆಟ್‌ನ ಎಲ್ಲಾ ಹಾಡುಗಳನ್ನು ಹಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಬೇಸರ ಮಾಡಿಕೊಳ್ಳಬೇಡಿ. ನಾನು ಎರಡು ಹಾಡನ್ನಾದರೂ ಹಾಡುವೆ. ಉಳಿದವನ್ನು ನೀವೂ ಹಾಡಿಬಿಡಿ” ಎನ್ನುತ್ತಿದ್ದರು. ಅಷ್ಟು ಹೇಳಿ ಸುಮ್ಮನಿರುತ್ತಿದ್ದರಾ? ಇಲ್ಲ. ಹಾಡಿಗೆ ರಾಗ ಸಂಯೋಜಿಸಿದ ಸಂಗೀತ ನಿರ್ದೇಶಕರನ್ನು ಕರೆದು, ಅವರಕೆಲಸವನ್ನು ಹಾಡಿ ಹೊಗಳುತ್ತಿದ್ದರು. “”ಎಷ್ಟು ಒಳ್ಳೆಯ ಸಂಯೋಜನೆಯಪ್ಪಾ…ಬಹಳ ಬಹಳ ಇಷ್ಟ ಆಯ್ತು ನನಗೆ” ಎಂದು ಬೆನ್ನು ತಟ್ಟುತ್ತಿದ್ದರು. ಸಿ. ಅಶ್ವಥ್‌ ಅವರ ಸಂಯೋಜನೆಯ ಗೀತೆಗಳು ಅಂದರಂತೂ ಅವರ ಖುಷಿಗೆ ಪಾರವೇ ಇರುತ್ತಿರಲಿಲ್ಲ.

Advertisement

ಅಂಥದೇ ಒಂದು ಸಂದರ್ಭ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ. ಸಿ. ಅಶ್ವಥ್‌ ಅವರದ್ದೇ ನೇತೃತ್ವ. ಅದಕ್ಕೆ, ಎಸ್ಪಿಬಿ ಅವರು ಮುಖ್ಯ ಅತಿಥಿ. “”ನಾಳೆ ಒಂದು ಸಿನೆಮಾದ ರೆಕಾರ್ಡಿಂಗ್‌ ಇದೆ. ಹಾಗಾಗಿ ನಾನು ಈಗ ಚೆನ್ನೆç ಗೆ ಹೋಗಬೇಕು. ತಪ್ಪು ತಿಳಿಯಬೇಡಿ. ನನ್ನ ಪಾಲಿನ ಮೂರು ಹಾಡುಗಳನ್ನು ಹಾಡಿ, ಆ ನಂತರಕೂಡ ಐದು ನಿಮಿಷ ನಿಮ್ಮ ಜೊತೆಗಿದ್ದು ಹೋಗ್ತೀನೆ” ಎಂದರು.

ಹಾಗೆಯೇ ಮಾಡಿದರು.ಕಡೆಗೊಮ್ಮೆ ಅವರು ಪ್ರೇಕ್ಷಕರಿಗೆ ವಿದಾಯ ಹೇಳಿ, ಗ್ರೀನ್‌ ರೂಮಿನಿಂದ ಹೊರಗೆ ಬರಲು ಅಣಿಯಾಗುತ್ತಿದ್ದಂತೆಯೇ, ಅಶ್ವಥ್‌- “”ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವುಬೆಲ್ಲ…” ಗೀತೆಯನ್ನು ಹಾಡಲು ಶುರು ಮಾಡಿಬಿಟ್ಟರು. ಅಷ್ಟೆ: ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಎಸ್ಪಿಬಿ, ಸೀದಾ ವೇದಿಕೆಗೆ ಬಂದರು. ಅಶ್ವಥ್‌, ಬನ್ನಿ ಇಲ್ಲಿ, ಈ ಚೆಂದದ ಹಾಡನ್ನು ಹಾಡದೇ ಹೋಗುವುದುಂಟಾ? ನಿಮ್ಮ ಜೊತೆಗೆ ನಾನೂ ಹಾಡ್ತೇನೆ, ಆಗಬಹುದಾ? ಅಂದರು… ಪೂರ್ತಿ ಹಾಡು ಹಾಡಿ, ಈ ಹಾಡು, ಇದಕ್ಕೆ ಬಳಕೆಯಾಗಿರುವ ಸಾಹಿತ್ಯ ಮತ್ತು ಅಶ್ವಥ್‌ ಅವರ ಸಂಯೋಜನೆಯನ್ನು ಹೊಗಳಿ, ಇವರ ಮುಂದೆ ನಾನೆಷ್ಟರವನು ಅನ್ನುತ್ತಾ ವಿನೀತರಾದರು.ಕನ್ನಡದ ಯಾವುದೇ ಭಾವಗೀತೆಗೆ ದನಿಯಾಗಲು ಹೊರಟಾಗಲೂ ಅವರೊಳಗೆ ಒಂದು ಬೆರಗು ಮತ್ತು ಖುಷಿ ಇದ್ದೇ ಇರುತ್ತಿತ್ತು…

Advertisement

Udayavani is now on Telegram. Click here to join our channel and stay updated with the latest news.

Next