Advertisement

ಸೋಯಾ ಹೊಡೆತಕ್ಕೆ ಮುಗ್ಗರಿಸಿದ ಜೋಳ

07:06 PM Jul 07, 2021 | Team Udayavani |

ಬೀದರ: ಪ್ರಕೃತಿ ವಿಕೋಪ, ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಜಿಲ್ಲೆಯ ಪ್ರಧಾನ ಆಹಾರ ಬೆಳೆ ಜೋಳಕ್ಕೆ ಭಾರಿ ಹೊಡೆತ ಬಿದ್ದಿದ್ದು, ಬಿತ್ತನೆ ಕ್ಷೇತ್ರ ಕ್ಷೀಣಿಸಿದೆ. ಕಳೆದ ಒಂದುವರೆ ದಶಕದಲ್ಲಿ ಶೇ. 80ರಷ್ಟು ಜೋಳದ ಕ್ಷೇತ್ರ ಇಳಿಕೆಯಾಗಿದ್ದು, ಈಗ ಜಾಗವನ್ನು ಸೊಯಾಬಿನ್‌ ಆವರಿಸಿಕೊಂಡಿದೆ. ತೊಗರಿ ಕಣಜ, ಉದ್ದು- ಹೆಸರು, ಜೋಳ ಉತ್ಪಾದನೆ ಪ್ರದೇಶ ಎಂಬೆಲ್ಲ ಖ್ಯಾತಿ ಪಡೆದಿದ್ದ ಗಡಿ ನಾಡು ಬೀದರ ಈಗ ಸೋಯಾಮಯವಾಗಿದೆ.

Advertisement

ಜೋಳ ಬಿತ್ತನೆ ಆಗುತ್ತಿದ್ದ ಪ್ರದೇಶದಲ್ಲಿ ಸೋಯಾಬಿನ್‌ ಆಕ್ರಮಿಸಿಕೊಂಡಿದೆ. ಒಂದೂವರೆ ದಶಕದ ಹಿಂದೆ ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗುತ್ತಿತ್ತು. ಆದರೆ, ಈಗ ಶೇ. 20ರಷ್ಟು ಮಾತ್ರ ಬಿತ್ತನೆ ಆಗುತ್ತಿದೆ. ಒಂದೆಡೆ ಊಟಕ್ಕೆ ಜೋಳದ ರೊಟ್ಟಿ ಬಳಸುವವರ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಜೋಳದ ಪ್ರದೇಶ ಕಡಿಮೆಯಾಗಿ ರೊಟ್ಟಿ ತುಟ್ಟಿಯಾಗುತ್ತಿದೆ.

ಉತ್ತರ ಕರ್ನಾಟಕದ ಆಹಾರ ಬೆಳೆಗಳಲ್ಲಿ ಜೋಳ ಪ್ರಧಾನವಾಗಿದ್ದು, ಜೋಳದ ರೊಟ್ಟಿ ತಿನ್ನದೆ ಊಟ ಇಲ್ಲ ಎನ್ನುವಷ್ಟರ ಮಟ್ಟಿಗೆ ಈ ಬೆಳೆ ಇಲ್ಲಿನ ಜನರನ್ನು ಆವರಿಸಿದೆ. ಆದರೆ, ಈಗ ಅನ್ನದಾತರು ಪ್ರಮುಖ ಆಹಾರ ಬೆಳೆ ಬಿತ್ತನೆಯತ್ತ ನಿರಾಸಕ್ತಿ ತೋರುತ್ತಿದ್ದಾರೆ. ಸೋಯಾಬೀನ್‌ ಕಡಿಮೆ ಬಂಡವಾಳ-ಅಧಿಕ ಲಾಭವನ್ನು ತಂದುಕೊಡಬಲ್ಲ ಬೆಳೆ ಎಂಬುದು ರೈತರ ನಂಬಿಕೆ. ಇದರಿಂದ ಪಾರಂಪರಿಕ ಬೆಳೆಗಳ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಭವಿಷ್ಯದಲ್ಲಿ ಜೋಳ ಉತ್ಪಾದನೆಯ ಗಂಭೀರ ಪರಿಸ್ಥಿತಿ ಎದುರಾದರು ಅಚ್ಚರಿ ಇಲ್ಲ.

ಮಳೆಯಾಶ್ರಿತ ಬೀದರ ಜಿಲ್ಲೆಯಲ್ಲಿ 10-15 ವರ್ಷಗಳ ಹಿಂದೆ ಜೊಳ ಬೆಳೆಯನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆದರೆ, ಅಂತರ ಬೆಳೆಯಾಗಿ ಸೋಯಾಬೀನ್‌ ಬಿತ್ತನೆಯಾಗುತ್ತಿತ್ತು. ಆದರೆ, ಜಿಲ್ಲೆ ಪ್ರತಿ ವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಜೋಳ ತುತ್ತಾಗಿ ಕೃಷಿಕರನ್ನು ಆರ್ಥಿಕ ನಷ್ಟ ತಂದೊಡ್ಡುತ್ತಿತ್ತು. ಈ ನಡುವೆ ಸೋಯಾ ಬೆಳೆಗೆ ಪ್ರಕೃತಿ ವಿಕೋಪವಾದರೂ ಅಷ್ಟಾಗಿ ತೊಂದರೆಯಾಗುವುದಿಲ್ಲ ಎಂದು ಅರಿತಿರುವ ರೈತರು ಸೋಯಾನತ್ತ ಹೆಚ್ಚು ಒಲವು ತೋರುತ್ತಿದ್ದಾರೆ.

ಜಿಲ್ಲೆಯಲ್ಲಿ ಗುಂಡು ಜೋಳ ಮತ್ತು ಎಂ. 35-1 ತಳಿಯನ್ನು ಬಿತ್ತನೆ ಮಾಡಲಾಗುತ್ತದೆ. ಮುಖ್ಯವಾಗಿ ಬೆಳೆಗೆ ದರ, ಕಟಾವಿಗೆ ಕೂಲಿಕಾರರ ಸಮಸ್ಯೆ ಜೋಳ ಬಿತ್ತನೆಯತ್ತ ರೈತರ ಆಸಕ್ತಿ ಕಡಿಮೆಯಾಗಿಸಿದೆ. ಉತ್ಪಾದನೆ ಕಡಿಮೆಯಾದ ಪರಿಣಾಮ ರೊಟ್ಟಿ ಪ್ರಿಯರ ಆಹಾರ ಪದ್ಧತಿಯೂ ಬದಲಾಗುತ್ತಿದ್ದು, ಗೋಧಿ ಮತ್ತು ಅಕ್ಕಿ ಬಳಕೆಯಾಗುತ್ತಿದೆ. ರೈತರು ಹಣ ಗಳಿಸುವ ಬೆಳೆಯನ್ನಾಗಿ ಸ್ವೀಕರಿಸಿರುವುದರಿಂದ ಸೋಯಾ ಪ್ರದೇಶ ಪ್ರತಿ ವರ್ಷ ಹಿಗ್ಗುತ್ತಲೇ ಇದೆ. ಭವಿಷ್ಯದಲ್ಲಿ ಜೋಳಕ್ಕೆ ಗಂಭೀರ ಸ್ಥಿತಿ ಎದುರಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.

Advertisement

ಜಿಲ್ಲೆಯಲ್ಲಿ 2005-06ರಲ್ಲಿ ಸುಮಾರು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಜೋಳ ಕಳೆದ 15 ವರ್ಷಗಳಲ್ಲಿ ಭಾರಿ ಕುಸಿತ ಕಂಡಿದೆ. 2011-12ರಲ್ಲಿ 57 ಸಾವಿರ ಹೆ., 2012-13ರಲ್ಲಿ 55 ಸಾವಿರ ಹೆ., 2013-14ರಲ್ಲಿ 35 ಸಾವಿರ ಹೆ., 2014-15ರಲ್ಲಿ 27 ಸಾವಿರ ಹೆ., 2015-16ರಲ್ಲಿ 22 ಸಾವಿರ ಹೆ., 2016-17ರಲ್ಲಿ 26 ಸಾವಿರ ಹೆ., 2017-18ರಲ್ಲಿ 23 ಸಾವಿರ ಹೆ., 2018-19ರಲ್ಲಿ 21 ಸಾವಿರ ಹೆ., 2019-20ರಲ್ಲಿ 18 ಸಾವಿರ ಹೆ. ಪ್ರದೇಶಕ್ಕೆ ಇಳಿಕೆಯಾಗಿದೆ. ಇನ್ನೂ ಈ ವರ್ಷ 2020-21ರಲ್ಲಿ 13 ಸಾವಿರ ಹೆ. ಗುರಿ ಇದ್ದು, ಈವರೆಗೆ ಕೇವಲ 4745 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇನ್ನೊಂದೆಡೆ 2005-06ರಲ್ಲಿ ಕೇವಲ 32 ಸಾವಿರ ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಸೋಯಾ ಈಗ 15 ವರ್ಷದಲ್ಲಿ ಸುಮಾರು 1.82 ಲಕ್ಷ ಹೆ. ಪ್ರದೇಶವನ್ನು ಆವರಿಸಿಕೊಂಡಿದೆ. ಅಂದಾಜು 20 ವರ್ಷಗಳ ಹಿಂದೆ ಜಿಲ್ಲೆಗೆ ಪರಿಚಯವಾದ ಸೋಯಾ ಸಧ್ಯ ರಾಜ್ಯದಲ್ಲೇ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಆದರೆ, ಈ ಬೆಳೆಯ ಬೆಳವಣಿಗೆ ಜೋಳ ಮುಗ್ಗರಿಸುವಂತೆ ಮಾಡಿದೆ.

ಜೋಳ ಬಿತ್ತನೆಗೆ ಸರಕಾರ ಪ್ರೋತ್ಸಾಹಿಸಲಿ
ಮಾರುಕಟ್ಟೆಯಲ್ಲಿ ದರ ಕಡಿಮೆ ಜತೆಗೆ ಪ್ರಾಕೃತಿಕ ಹೊಡೆತ ಮತ್ತು ಕೂಲಿಕಾರರ ಸಮಸ್ಯೆ ಜೋಳ ಬಿತ್ತನೆ ಕಡಿಮೆಯಾಗಲು ಪ್ರಮುಖ ಕಾರಣ. ಆದರೆ, ಸೋಯಾಬಿನ್‌ ಭರವಸೆಯ ಮತ್ತು ಲಾಭದಾಯಕ ಬೆಳೆ ಎನಿಸಿಕೊಂಡಿರುವುದರಿಂದ ರೈತರನ್ನು ಹೆಚ್ಚು ಆಕರ್ಷಿಸಿದೆ. ಜೋಳ ಬಿತ್ತನೆ ಕುಸಿತ ಭವಿಷ್ಯದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜೋಳ ಬಿತ್ತನೆಗಾಗಿ ಸರ್ಕಾರದ ಪ್ರೋತ್ಸಾಹ ಸಿಗಬೇಕಿದೆ.
ಡಾ| ಎನ್‌.ಎಂ., ಸುನೀಲಕುಮಾರ, ಸಂಯೋಜಕರು ಕೆವಿಕೆ ಬೀದರ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next