Advertisement

ಮುಂಗಾರು ಆರಂಭ; ಬಿತ್ತನೆ ಕಾರ್ಯ ಚುರುಕು

06:20 PM Jun 12, 2021 | Suhan S |

ಶಿವಮೊಗ್ಗ: ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಿ ವಾರ ಕಳೆದಿದ್ದು ಮಳೆ ನಿರೀಕ್ಷೆಯಲ್ಲಿ ರೈತರು ಬಿತ್ತನೆ ಆರಂಭಿಸಿದ್ದಾರೆ. ಇತ್ತ ಜಿಲ್ಲಾಡಳಿತ ಕೂಡ ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisement

ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಶಿವಮೊಗ್ಗ ಕೂಡ ಒಂದಾಗಿದ್ದು ಎರಡ್ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆಗಳು, ಜಲಾಶಯಗಳು ಭರ್ತಿಯಾಗುತ್ತಿವೆ. ಈ ಅವಧಿಯಲ್ಲೂ ಉತ್ತಮ ನೀರಿನ ಮಟ್ಟ ಇದ್ದು ಉತ್ತಮ ಮಳೆಯಾದರೆ ಅವ ಧಿಗೂ ಮುನ್ನ ಜಲಮೂಲಗಳು ಭರ್ತಿಯಾಗುವ ಲಕ್ಷಣಗಳಿವೆ. 2019ರ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆ ಪರಿಣಾಮ ಬಹುತೇಕ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ತುಂಗಾ ನದಿ ಉಕ್ಕಿ ಹರಿದಿತ್ತು. ಕೆಲವು ಕಡೆ ಭೂಕುಸಿತ ಕೂಡ ಸಂಭವಿಸಿತ್ತು. ನೂರಾರು ಮನೆಗಳು ಬಿರುಕು ಬಿಟ್ಟು ನೆಲಸಮಗೊಂಡಿದ್ದವು.2020ರಲ್ಲೂ ಕೆಲ ಭಾಗದಲ್ಲಿ ಪ್ರವಾಹಪರಿಸ್ಥಿತಿ ಕಾಣಿಸಿಕೊಂಡಿತ್ತು. ಇದೆಲ್ಲದರಿಂದ ಪಾಠ ಕಲಿತಿರುವ ಜಿಲ್ಲಾಡಳಿತ ಪೂರ್ವಸಿದ್ಧತೆ ಕೈಗೊಂಡಿದೆ. ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಎರಡು ಬಾರಿ ಸಭೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಿದೆ.

ಬಿತ್ತನೆ ಆರಂಭ: ಜಿಲ್ಲೆಯಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ. ಈ ವರ್ಷ ಕೂಡ 78100 ಹೆಕ್ಟೇರ್‌ನಲ್ಲಿ ಭತ್ತ, 53000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿದೆ. ಮೇ ಕೊನೆ ವಾರದಿಂದ ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಆರಂಭವಾಗಿದ್ದು 966 ಹೆಕ್ಟೇರ್‌ಭತ್ತ, 2420 ಹೆಕ್ಟೇರ್‌ ಮೆಕ್ಕೆಜೋಳ ಬೆಳೆಯಲಾಗಿದೆ. ಅದೇ ರೀತಿ 513 ಹೆಕ್ಟೇರ್‌ನಲ್ಲಿ ರಾಗಿ, 340 ಹೆಕ್ಟೇರ್‌ನಲ್ಲಿ ಹೆಸರು,ತೊಗರಿ, ಅಲಸಂದೆ, 108 ಹೆಕ್ಟೇರ್‌ನಲ್ಲಿ ಶೇಂಗಾ, 1870 ಹೆಕ್ಟೇರ್‌ನಲ್ಲಿ ಹತ್ತಿ, ಕಬ್ಬು ಬಿತ್ತನೆ ಗುರಿ ಹೊಂದಲಾಗಿದೆ.

163 ಹಳ್ಳಿ, 39 ನಗರ ಪ್ರದೇಶ : ಭೂಕುಸಿತ, ಪ್ರವಾಹ ಸಂಭವಿಸಬಹುದಾದ 169 ಹಳ್ಳಿಗಳನ್ನು ಹಾಗೂ ನಗರದ 39 ಪ್ರದೇಶಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಈ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸುವಂತೆ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಬೀಜ -ಗೊಬ್ಬ ರ ಕೊರತೆಯಿಲ್ಲ  :

Advertisement

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 26,459 ಕ್ವಿಂಟಾಲ್‌ ಬಿತ್ತನೆ ಬೀಜದ ಅಗತ್ಯ ಇದ್ದು 31,774 ಕ್ವಿಂಟಾಲ್‌ ದಾಸ್ತಾನು ಇದೆ. ಇದರಲ್ಲಿ 4,394 ಕ್ವಿಂಟಾಲ್‌ ಈಗ ವಿತರಣೆಯಾಗಿದೆ. ಈ ಹಂಗಾಮಿಗೆ 1,07,516 ಮೆಟ್ರಿಕ್‌ ಟನ್‌ ಗೊಬ್ಬರದ ಅಗತ್ಯವಿದ್ದು ಜೂನ್‌ ಅಂತ್ಯದವರೆಗೆ 52,198 ಮೆ. ಟನ್‌ ಬೇಡಿಕೆ ಇದೆ. ಇದರಲ್ಲಿ ಈಗಾಗಲೇ 27,804 ಮೆಟ್ರಿಕ್‌ ಟನ್‌ ವಿತರಣೆಯಾಗಿದೆ. ಇನ್ನೂ 48,403 ಮೆಟ್ರಿಕ್‌ ಟನ್‌ ದಾಸ್ತಾನು ಇದೆ.

5 ಬೋಟ್‌, 35 ಲಕ್ಷ ರೂ. ಬಿಡುಗಡೆ : ಎರಡು ಬಾರಿ ಸಭೆ ನಡೆಸಿರುವ ಜಿಲ್ಲಾಡಳಿತ ನೆರೆ ಎದುರಿಸಲು ತುರ್ತು ಕಾರ್ಯಾಚರಣೆಗೆ 5 ಬೋಟ್‌ ವ್ಯವಸ್ಥೆ ಮಾಡಿದೆ. ಜತೆಗೆ ಪ್ರತಿ ತಾಲೂಕು ಅಧಿಕಾರಿಗಳಿಗೆ 35 ಲಕ್ಷ ರೂ. ಹಣ ಬಿಡುಗಡೆ ಮಾಡಿದೆ. ನೆರೆ ಹಾವಳಿ ಉಂಟಾಗಬಹುದಾದ ಗ್ರಾಮಗಳು, ಭೂಕುಸಿತ ಸಂಭವಿಸಬಹುದಾದ ಸ್ಥಳಗಳು, ನೆರೆಯಿಂದ ಮುಳುಗಬಹುದಾದ ಕಿರು ಸೇತುವೆಗಳು, ನೀರು ನಿಲ್ಲಬಹುದಾದ ತಗ್ಗು ಪ್ರದೇಶಗಳು ಇತ್ಯಾದಿಗಳನ್ನು ಗುರುತಿಸಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು.

ಜಲಾಶಯಗಳು, ಕೆರೆಕಟ್ಟೆಗಳು, ಅಣೆಕಟ್ಟಿನ ನೀರಿನ ಮಟ್ಟದ ಮೇಲೆ ನಿರಂತರ ನಿಗಾ ಇರಿಸಬೇಕು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್‌ ರೂಂ ಆರಂಭಿಸಬೇಕು. ನಗರ ಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತಾಗಲು ಗಿಡಗಂಟಿಗಳು, ಕಸಕಡ್ಡಿಗಳನ್ನು ತೆರವುಗೊಳಿಸಿ ಸ್ವತ್ಛ ಮಾಡುವ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಮೆಕ್ಕೆಜೋಳ ಬಿತ್ತನೆ ಈಗ ಆರಂಭವಾಗಿದೆ. ಕೃಷಿ ಪರಿಕರಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೂ ಅವಕಾಶ ನೀಡಲಾಗಿದೆ. ಕೆಲವು ಕಡೆ ಜನಸಂದಣಿ ಕಂಡುಬರುತ್ತಿದೆ. 14ರ ನಂತರ ಅನ್‌ಲಾಕ್‌ ತೊಂದರೆ ಇರುವುದಿಲ್ಲ. ಮಳೆ ಆಶ್ರಿತ ಭೂಮಿಯಲ್ಲಿ ಕೆಲವು ಕಡೆ ಭತ್ತ ಬಿತ್ತನೆಯಾಗಿದೆ. ನೀರಾವರಿ ಆಶ್ರಿತ ಬಿತ್ತನೆಗೆ ಸಾಕಷ್ಟು ಸಮಯ ಇದೆ. -ಡಾ| ಕಿರಣ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

 

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next