Advertisement

ಲಕ್ಕವಳ್ಳಿ ಜೈನ ಕ್ಷೇತ್ರ ಜಲಾವೃತ

12:16 PM Aug 15, 2019 | Naveen |

ಸೊರಬ: ತಾಲೂಕಿನ ಲಕ್ಕವಳ್ಳಿಯ ಜೈನರ ಪವಿತ್ರ ಕ್ಷೇತ್ರ ನೆರೆಯ ಹಾವಳಿಗೆ ನಲುಗಿ ಹೋಗಿದ್ದು, ಮಠದ ಆವರಣ ಸಂಪೂರ್ಣ ಜಲಾವೃತವಾಗಿದೆ.

Advertisement

ಇಲ್ಲಿನ ಲಕ್ಕವಳ್ಳಿಯ ಶ್ರೀ ಮೋಕ್ಷ ಮಂದಿರ ಸಂಸ್ಥಾನ ಜೈನ ಮಠವು ವರದಾ ನದಿಯ ದಂಡೆಯ ಮೇಲಿದೆ. ಇತ್ತೀಚೆಗೆ ಕಳೆದ ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆಗೆ ಮಠವು ಜಲಾವೃತವಾಗಿದ್ದು, ಮಠದ ಪೀಠಾಧಿಪತಿ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀ ಸಿದ್ಧಾರೂಢ ಪರಂಪರೆಯ ನಾರಾಯಣ ಸ್ವಾಮಿ ಮಂದಿರದಲ್ಲಿ ಆಶ್ರಯ ಪಡೆದಿದ್ದಾರೆ.

ನೆರೆ ಹಾವಳಿಗೆ ನಲುಗಿದ ಮಂದಿರಗಳು: ಶ್ರೀ ಕ್ಷೇತ್ರದಲ್ಲಿ ರಾಜರಾಜೇಶ್ವರಿ ದೇವಸ್ಥಾನ, ಪದ್ಮಾವತಿ ಅಮ್ಮನವರ ದೇವಸ್ಥಾನ, ಸಿದ್ಧಾಯಿನಿ ಮಂದಿರ, ಜಲ್ವಾಮಾಲಿನ, ಮಹಾಕಾಳಿ, ಆನಾಥ ತೀರ್ಥಂಕರ, ಸೇರಿ ನಿರ್ಮಾಣ ಹಂತದ ಎರಡು ಬಸದಿಗಳು, ಮೃತ್ಯುಂಜಯ ದೇವಸ್ಥಾನ, ಕಾಳಸರ್ಪ ಪದ್ಮಾವತಿ ದೇವಸ್ಥಾನಗಳು ಸಂಪೂರ್ಣ ಮುಳುಗಡೆಯಾಗಿವೆ. ಉಳಿದಂತೆ ಮೂಲ ಮಠವು ಸಂಪೂರ್ಣವಾಗಿ ನೆರೆ ಹಾವಳಿಗೆ ತುತ್ತಾಗಿದ್ದು, ಧರೆಗೆ ಉರುಳುವ ಹಂತದಲ್ಲಿದೆ.

ನಿರ್ಮಾಣ ಹಂತದ ಕಟ್ಟಡಗಳಿಗೂ ಹಾನಿ: ಮಠದ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡಗಳಿಗೂ ಅಭದ್ರತೆ ಕಾಡುತ್ತಿದೆ. ಪ್ರಕೃತಿ ವಿಕೋಪದಿಂದ ಇಲ್ಲಿನ ಮಂದಿರದಲ್ಲಿ ನಿರ್ಮಾಣ ಹಂತದಲ್ಲಿರುವ ಕಲ್ಯಾಣ ಮಂದಿರಕ್ಕೂ ತೊಂದರೆ ಎದುರಾಗಿದ್ದು, ಸಂಬಂಧ ಪಟ್ಟ ಇಲಾಖೆಯವರು ಈವರೆಗೂ ಯಾವುದೇ ಪರಿಹಾರ ನೀಡುವಲ್ಲಿ ಮುಂದಾಗಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಸಮುದಾಯದ ಮಠ, ಆಶ್ರಮ ಹಾಗೂ ಮಂದಿರಗಳ ಅಭಿವೃದ್ಧಿಗೆ ಸುಮಾರು 20 ಕೋಟಿ ರೂ. ವರೆಗೆ ಅನುದಾನ ನೀಡುತ್ತಿವೆ. ಆದರೆ, ಈವರೆಗೂ ಶ್ರೀ ಮಠಕ್ಕೆ ಯಾವುದೇ ಅನುದಾನ ದೊರೆಯದೇ ಮಠದ ಅಭಿವೃದ್ಧಿ ಕ್ಷೀಣವಾಗಿದೆ ಎನ್ನುತ್ತಾರೆ ಶ್ರೀ ಮಠದ ಭಕ್ತರೊಬ್ಬರು.

ಮಳೆಯಿಂದಾದ ಅನಾವುತ ಏನು?: ಮಠದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಸಂಗ್ರಹಿಸಿದ್ದ ಸುಮಾರು 500 ಚೀಲ ಸಿಮೆಂಟ್ ಹಾನಿಗೊಳಗಾಗಿದ್ದು, ಮರು ಬಳಕೆಗೆ ಅಯೋಗ್ಯವಾಗಿದೆ. ಉಳಿದಂತೆ ಹಳೆಯ ಮಠದಲ್ಲಿದ್ದ ಪೂಜಾ ಸಾಮಗ್ರಿಗಳು ಹಾಗೂ ಬೆಲೆ ಬಾಳುವ ವಸ್ತುಗಳು ನೆರೆಯ ಹಾವಳಿಗೆ ತುತ್ತಾಗಿ ನೀರು ಪಾಲಾಗಿವೆ. ಉಳಿದಂತೆ ಹಳೆಯ ಮಠದಲ್ಲಿ ಅನೇಕ ಅಮೂಲಾಗ್ರ ದಾಖಲೆಗಳು ಸಹ ನೆರೆಯ ಹಾವಳಿಗೆ ತುತ್ತಾಗಿವೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯ ಆಡಳಿತವೂ ಈವರೆಗೂ ಒತ್ತು ನೀಡಿಲ್ಲ. ಕನಿಷ್ಟ ಕುಡಿಯುವ ನೀರಿನ ಸೌಲಭ, ಶೌಚಗೃಹ ನಿರ್ಮಿಸಲು ಆದ್ಯತೆ ನೀಡಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಇತ್ತೀಚೆಗೆ ಗೋದಿ ಹಾಗೂ ಮೂಗೂರು ಬಳಿ ಚೆಕ್‌ ಡ್ಯಾಂಗಳ ನಿರ್ಮಾಣದಿಂದ ನೀರಿನ ಪ್ರಮಾಣ ಹೆಚ್ಚುತ್ತಿದೆ. ಮಠದ ರಕ್ಷಣೆಗೆ ಶೀಘ್ರವೇ ತಡೆಗೋಡೆ ನಿರ್ಮಾಣ ಮಾಡಬೇಕಾದ ಅತ್ಯಗತ್ಯವಿದೆ.

Advertisement

ಈಗಾಗಲೇ ಸರ್ವ ಧರ್ಮೀಯ ಧಾರ್ಮಿಕ ಕ್ಷೇತ್ರವಾಗಿರುವ ಲಕ್ಕವಳ್ಳಿ ಜೈನಮಠಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಶ್ರೀ ಮಠದ ಜೀರ್ಣೋದ್ಧಾರಕ್ಕೆ ಒತ್ತು ನೀಡಬೇಕಿದೆ.

ಕುಮಾರ್‌ ಬಂಗಾರಪ್ಪ ಭೇಟಿ: ನೆರೆ ಹಾವಳಿಗೆ ತುತ್ತಾದ ಲಕ್ಕವಳ್ಳಿಯ ಜೈನ ಮಠಕ್ಕೆ ಶಾಸಕ ಕುಮಾರ್‌ ಬಂಗಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಠಕ್ಕೆ ಸೂಕ್ತ ನೆರವು ಕಲ್ಪಿಸುವುದಾಗಿ ಶಾಸಕರು ಮಠದ ಶ್ರೀಗಳಿಗೆ ಭರವಸೆ ನೀಡಿದರು. ಪ್ರಮುಖರಾದ ಮಲ್ಲಿಕಾರ್ಜುನ ದ್ವಾರಹಳ್ಳಿ, ಮಂಜುನಾಥ ಲಕ್ಕವಳ್ಳಿ, ಲಿಂಗಪ್ಪ ಬಾಸೂರು, ಮಹಾಬಲೇಶ್ವರಪ್ಪ, ರೇವಣಪ್ಪ ಲಕ್ಕವಳ್ಳಿ, ಚನ್ನಪ್ಪ ನೆಲ್ಲಿಕೊಪ್ಪ, ಬಸವರಾಜಪ್ಪ ಮಲ್ಲಾಪುರ, ಮೈಲಾರಪ್ಪ ಲಕ್ಕವಳ್ಳಿ ಇತರರಿದ್ದರು.‌

ರಾಜ್ಯದಲ್ಲಿನ ಇತರೆ ಪೀಠಗಳಿಗೆ ನಿಗಮದ ವತಿಯಿಂದ ಅಭಿವೃದ್ಧಿಪಡಿಸಿದಂತೆ ಶ್ರೀ ಮೋಕ್ಷ ಮಂದಿರ ಜೈನಪೀಠವನ್ನು ಅಭಿವೃದ್ಧಿಗೊಳಿಸಬೇಕು. ಜೈನಪೀಠ ಸ್ಥಾಪನೆಗೆ ಅಗತ್ಯ ನೆರವನ್ನು ನೀಡಬೇಕು. ಈಗಾಗಲೇ ನೆರೆ ಹಾವಳಿಗೆ ತುತ್ತಾದ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸೂಕ್ತ ನೆರವನ್ನು ಒದಗಿಸಬೇಕೆಂದು ಲಕ್ಕವಳ್ಳಿ ಜೈನ ಮಠದ ಶ್ರೀ ವೃಷಭಸೇಸನ ಭಟ್ಟಾರಕ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next