Advertisement

ಕೆ.ಆರ್‌.ಮಾರುಕಟ್ಟೆ ಬಳಿ ಸೊಪ್ಪಿನ ವ್ಯಾಪಾರಿ ಕೊಲೆ

12:15 PM Dec 11, 2017 | Team Udayavani |

ಬೆಂಗಳೂರು: ಕೆ.ಆರ್‌ ಮಾರುಕಟ್ಟೆ ಫ್ಲೈಓವರ್‌ ಕೆಳಗೆ ವ್ಯಾಪಾರಿಯೊಬ್ಬರನ್ನು ದುಷ್ಕರ್ಮಿಗಳು ಶನಿವಾರ  ರಾತ್ರಿ ಕೊಲೆಗೈದಿದ್ದಾರೆ. ಚಾಮರಾಜಪೇಟೆಯ ಕೊತ್ತಂಬರಿ ಶ್ರೀನಿವಾಸ್‌  (34) ಕೊಲೆಯಾದ ವ್ಯಕ್ತಿ. ಕೆ.ಆರ್‌ ಮಾರ್ಕೆಟ್‌ನ ಮೇಲ್ಸೇತುವೆ ಕೆಳಗೆ ಶ್ರೀನಿವಾಸ್‌ರನ್ನು ಶನಿವಾರ ತಡರಾತ್ರಿ 12ಗಂಟೆ ನಂತರ ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ.

Advertisement

ಮಾರಕಾಸ್ತ್ರಗಳಿಂದ ಆತನ ತಲೆ ಹಾಗೂ ಎದೆಯ ಭಾಗಕ್ಕೆ ಭೀಕರವಾಗಿ ಹೊಡೆದಿರುವುದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೊಲೆಯಾದ ಸ್ಥಳದ ಪಕ್ಕದಲ್ಲಿ ಕಬ್ಬಿನ ಲಾರಿ ನಿಲ್ಲಿಸಿರುವುದರಿಂದ ಈ ಘಟನೆ ಬೇಗ ಬೆಳಕಿಗೆ ಬಂದಿಲ್ಲ. ಈ ಸಂಬಂಧ ಹಲವು ಸ್ಥಳೀಯರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಚಾಮರಾಜಪೇಟೆಯಲ್ಲಿ ಪತ್ನಿ ಹಾಗೂ ಮಕ್ಕಳ  ಜೊತೆ  ವಾಸವಾಗಿರುವ ಶ್ರೀನಿವಾಸ್‌, ಹಲವು ವರ್ಷಗಳಿಂದ  ತರಕಾರಿ ಹಾಗೂ ಕೊತ್ತಂಬರಿ ಮಾರಾಟ ಮಾಡುತ್ತಿದ್ದಾರೆ. ಯಾರೊಂದಿಗೂ ಜಗಳ, ಗಲಾಟೆ ಮಾಡಿಕೊಂಡವರಲ್ಲ ಎಂದು  ಸ್ಥಳೀಯರು ಹೇಳುತ್ತಿದ್ದಾರೆ.ಪೊಲೀಸ್‌ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಕೊಲೆ ಜಾಗದಲ್ಲಿ ಆತನ ಮೊಬೈಲ್‌ ಹಾಗೂ ಹಣ ಕೂಡ ಜೇಬಿನಲ್ಲಿತ್ತು. ಹೀಗಾಗಿ ದುಷ್ಕರ್ಮಿಗಳು ಯಾವ ಕಾರಣಕ್ಕೆ ಕೊಲೆ ಎಸಗಿದ್ದಾರೆ ಎಂಬುದು ಆರೋಪಿಗಳ ಬಂಧನದ ಬಳಿಕ ನಿಖರವಾಗಿ ಗೊತ್ತಾಗಲಿದೆ ಎಂದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಈ ಸಂಬಂಧ ಕೆ.ಆರ್‌ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next