Advertisement

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

04:14 PM Apr 14, 2024 | Team Udayavani |

ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್‌.ಡಿ. ಕುಮಾರ ಸ್ವಾಮಿ ಅವರ ಒತ್ತಾಸೆಯ ಫ‌ಲ ವಾಗಿ ಸ್ವಕ್ಷೇತ್ರ ಚನ್ನಪಟ್ಟಣದ ವಂದಾರಗುಪ್ಪೆ ಬಳಿ ರಾಜ್ಯಮಟ್ಟದ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ.

Advertisement

2018ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿದ್ದ ಎಚ್‌.ಡಿ. ಕುಮಾರ ಸ್ವಾಮಿ ಅವರು ಅಂದು ತಮ್ಮ ಸ್ವಕ್ಷೇತ್ರ ಚನ್ನ ಪಟ್ಟಣ- ರಾಮನಗರ ಮಧ್ಯೆ ಇರುವ ವಂದಾರಗುಪ್ಪೆ ರೇಷ್ಮೆ ಕೃಷಿ ಕೇಂದ್ರದ ಆವರಣದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆಗಾಗಿ ಯೋಜನೆ ರೂಪಿಸಿದ್ದರು.

ಚನ್ನಪಟ್ಟಣ ಹಾಗೂ ರೇಷ್ಮೆನಗರಿ ರಾಮನಗರ ಜನತೆಗೆ  ಸಂತಸ: ಆ ಕನಸು ಈಗ ನನಸಾಗುವ ಕಾಲ ಸನಿಹದಲ್ಲಿ ಇದೆ. ಮೈಸೂರು ಒಡೆಯರು ಹಾಗೂ ಬ್ರಿಟಿಷರ ಕಾಲ ದಲ್ಲಿ ನಿರ್ಮಾಣವಾಗಿದ್ದ ರೇಷ್ಮೆ ಇಲಾ ಖೆಗೆ ಸೇರಿದ್ದ ಹಳೆಯ ಕಟ್ಟಡಗಳನ್ನು ನೆಲಸಮ ಗೊಳಿಸಿ, ಆ ಜಾಗದಲ್ಲಿ ಹೊಸ ಹೈಟೆಕ್‌ ರೇಷ್ಮೆ ಮಾರು ಕಟ್ಟೆಯನ್ನು ನಿರ್ಮಾಣ ಮಾಡುವ ಕಾಮಗಾರಿ ಭರ ದಿಂದ ಸಾಗುತ್ತಿದೆ. ಈ ಯೋಜನೆಗೆ ಬೊಂಬೆನಗರಿ ಚನ್ನಪಟ್ಟಣ ಹಾಗೂ ರೇಷ್ಮೆನಗರಿ ರಾಮನಗರ ಜನತೆ ಸಂತಸ ಗೊಂಡಿದ್ದಾರೆ. ಅವಳಿ ನಗರಗಳಂತಿರುವ ರಾಮನಗರ- ಚನ್ನಪಟ್ಟಣ ಮಧ್ಯಭಾಗದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಸುಮಾರು 20 ಎಕರೆ ಪ್ರದೇಶದಲ್ಲಿ ಹೈಟೆಕ್‌ ರೇಷ್ಮೆಗೂಡು ಮಾರುಕಟ್ಟೆ ನಿರ್ಮಾಣವಾ ಗುತ್ತಿದೆ. ಹೆಚ್‌.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ನೀಡಿದ್ದರು.

ಕನಸು ಕಂಡಿದ್ದ ಎಚ್‌ಡಿಕೆ: ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಅಂದು ಎಚ್‌.ಡಿ.ಕುಮಾರಸ್ವಾಮಿ ಅವರು 50 ಕೋಟಿ ಹಣ ಮೀಸಲಿಟ್ಟು ಘೋಷಣೆ ಯನ್ನೂ ಮಾಡಿದ್ದರು.ರಾಮನಗರ ಜಿಲ್ಲೆಯಿಂದ 2 ಬಾರಿ ರಾಜ್ಯದ ಮುಖ್ಯಮಂತ್ರಿಯಾದ ಎಚ್‌. ಡಿ.ಕುಮಾರಸ್ವಾಮಿ ಯವರು ಜಿಲ್ಲೆಯಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡುವ ಕನಸು ಕಂಡಿದ್ದರು.ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಸುಮಾರು 20 ಎಕರೆ ಜಾಗದ ಅಗತ್ಯ ಇತ್ತು. ರಾಮ ನಗರದಲ್ಲಿ ಪ್ರಸ್ತುತ ಇರುವ ಮಾರುಕಟ್ಟೆ ಹಾಗೂ ಅದರ ಪಕ್ಕದಲ್ಲಿ ಗುರುತಿಸಲಾದ ಖಾಲಿ ಜಾಗ ಸೇರಿ ಕೇವಲ 4 ಎಕರೆ ಭೂಮಿ ಮಾತ್ರ ಲಭ್ಯ ಇತ್ತು. ಹೀಗಾಗಿ ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆ- ಪಿಟಿಎಸ್‌ ಪಕ್ಕ ಖಾಲಿ ಇರುವ ಸರ್ಕಾರಿ ಮಾದರಿ ಬಿತ್ತನೆ ಕೋಟಿ ಮತ್ತು ರೇಷ್ಮೆ ತರಬೇತಿ ಕೇಂದ್ರಗಳಿಗೆ ಸೇರಿದ 38 ಎಕರೆ ಭೂಮಿಯಲ್ಲಿ ಹೊಸ ಮಾರುಕಟ್ಟೆ ನಿರ್ಮಿಸಲು ಕುಮಾರಸ್ವಾಮಿ ಯೋಜನೆ ರೂಪಿಸಿ ದ್ದರು. ಇದಕ್ಕಾಗಿ 70 ಕೋಟಿ ವೆಚ್ಚ ಅಂದಾಜಿ ಸಲಾಗಿತ್ತು.

ಜಿಲ್ಲೆ ಹಾಗೂ ರಾಜ್ಯಕ್ಕೆ ಅನುಕೂಲ:  ರಾಮನಗರ-ಚನ್ನಪಟ್ಟಣ ಭವಿಷ್ಯದಲ್ಲಿ ಮಹಾನಗರ ಪಾಲಿಕೆಯಾಗಿ ಘೋಷಣೆಯಾಗಬಹುದು. ಇದರ ಮಧ್ಯೆ ಮಾರುಕಟ್ಟೆ ನಿರ್ಮಾಣವಾದರೆ ರೈತರಿಗೆ ಅನುಕೂಲ ಆಗಲಿದೆ. ಜೊತೆಗೆ ಈಗ ಇರುವ ಮಾರು ಕಟ್ಟೆಗಳು ಮುಂದುವರಿಯಲಿದ್ದು, ಅವುಗಳನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ರೇಷ್ಮೆ ಇಲಾಖೆಯ ಅಧಿಕಾರಿ ವರ್ಗದವರು ತಿಳಿಸಿದ್ದಾರೆ.

Advertisement

ಈಡೇರುತ್ತಿದೆ ರೈತರ ಕನಸು: ಹೈಟೆಕ್‌ ಮಾರುಕಟ್ಟೆಯ ಜೊತೆಗೆ ಗೂಡು ಮಾರಾ ಟಕ್ಕೆ ಬರುವ ರೈತರಿಗೆ, ಪುರುಷರು ಮತ್ತು ಮಹಿ ಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ವಾಹನ ನಿಲ್ದಾಣ, ರೆಸ್ಟೋರೆಂಟ್‌, ಹೀಗೆ ಮೂಲ ಸೌಕರ್ಯ ಗಳನ್ನು ಕೂಡ ಕಲ್ಪಿಸಲಾಗುತ್ತದೆ. ಹಲವು ವರ್ಷಗಳಿಂದ ರಾಮನಗರ ರೇಷ್ಮೆ ಮಾರು ಕಟ್ಟೆಗೆ ಹೈಟೆಕ್‌ ರೂಪ ಕೊಡ ಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಇದೀಗ ರೈತರ ಕನಸು ಈಡೇರುತ್ತಿದೆ. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಳಾ ವಕಾಶದ ಜತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿ ಸುವುದರಿಂದ ಮಾರುಕಟ್ಟೆ ಧಾರಣೆ ಹೆಚ್ಚಾಗುವ ಸಂಭ ವವಿರುತ್ತದೆ. ಜತೆಗೆ ಏಷ್ಯಾದಲ್ಲೇ ಇದೊಂದು ಮಹ ತ್ವದ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಲಿದೆ.

100-150 ಟನ್‌ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆ: ರಾಮನಗರ ಮಾರುಕಟ್ಟೆಗೆ ಪ್ರತಿದಿನ 40 – 50 ಟನ್‌ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್‌ ಮಾರುಕಟ್ಟೆ ನಿರ್ಮಾಣವಾದ ಬಳಿಕ 100-150 ಟನ್‌ನಷ್ಟು ರೇಷ್ಮೆಗೂಡು ಮಾರು ಕಟ್ಟೆಗೆ ಬರುವ ನಿರೀಕ್ಷೆ ಇದೆ.

ರಾಮನಗರ ಟೌನ್‌ ನಲ್ಲಿ ಹಾಲಿ ಇರುವ ರೇಷ್ಮೆ ಮಾರುಕಟ್ಟೆ 2 ಎಕರೆಯಲ್ಲಿದ್ದು, ಪ್ರತಿನಿತ್ಯ 20?24 ಟನ್‌ ವಹಿವಾಟು ನಡೆಸಲು ಮಾತ್ರ ಸಾಧ್ಯವಿದೆ. ಸ್ಥಳಾವಕಾಶದ ಕೊರತೆಯಿಂದ ಯಾವ ಸೌಕರ್ಯ ಗಳನ್ನೂ ಕಲ್ಪಿಸಲು ಆಗುತ್ತಿರಲಿಲ್ಲ. ಹೀಗಾಗಿ ವಂದಾ ರಗುಪ್ಪೆ ಬಳಿ ವಿಸ್ತಾರವಾದ ಜಾಗದಲ್ಲಿ ಹೈಟೆಕ್‌ ಮಾರು ಕಟ್ಟೆ ನಿರ್ಮಾಣ ವಾಗಲಿದ್ದು, ಆ ಮಾರು ಕಟ್ಟೆಗೂ ರಾಮನಗರದ ಹೆಸರನ್ನೇ ಇಡಲಾಗುತ್ತದೆ. ? 75 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ನಬಾರ್ಡ್‌ ನಿಂದ ? 35 ಕೋಟಿ ಅನುದಾನವೂ ಸಿಕ್ಕಿದೆ. ಬೆಳೆ ಗಾರರು ಹಾಗೂ ರೀಲರ್ಸ್‌ಗಳು ವಹಿವಾಟು ನಡೆಸಬಹುದು. ಚನ್ನಪಟ್ಟಣ-ರಾಮನಗರ ಅವಳಿ ಪಟ್ಟಣಗಳು ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತವೆ ಎಂಬುದು ಪೂರ್ವ ಅಂದಾಜು.

ಮಾರುಕಟ್ಟೆ ನಿರ್ಮಾಣ ವಿವಾದ, ವಿರೋಧವೂ ಇತ್ತು

ರಾಮನಗರ- ಚನ್ನಪಟ್ಟಣ ಮಧ್ಯೆ ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕುರಿತಂತೆ ಅಂದು ಅನೇಕ ವಿವಾದ-ವಿರೋಧ ಹಾಗೂ ರಾಜಕೀಯ ಬಣ್ಣವನ್ನು ಬಳಿಯುವ ಪ್ರಯತ್ನವೂ ನಡೆದಿತ್ತು. ಅದಕ್ಕೆ ಅಂದಿನಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಅವರು, ರಾಮನಗರ ಜಿಲ್ಲಾ ಕೇಂದ್ರ ದಲ್ಲಿದ್ದ ರೇಷ್ಮೆ ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ಸ್ಥಳಾಂತರ ಮಾಡುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಅಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಮಾಡುತ್ತಿರುವುದು ರೈತರಿಗಾಗಿಯೇ ಹೊರತು ದಲ್ಲಾಳಿಗಳಿಗಾಗಿ ಅಲ್ಲ. ರಾಮನಗರದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲು ಕೆಲ ಅಡ್ಡಿಗಳಿದ್ದವು. ಈಗಿನ ಮಾರುಕಟ್ಟೆ ಪಕ್ಕದ ಜಮೀನು ಬಿಕ್ಕಟ್ಟು ನ್ಯಾಯಾಲಯದಲ್ಲಿದೆ. ಎಲ್ಲರಿಗೂ ತಿಳಿದಂತೆ ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಜಗತ್ತಿನಲ್ಲಿಯೇ ಪ್ರಸಿದ್ಧವಾದದ್ದು, ಹೀಗಾಗಿ ಇದನ್ನು ವಿಸ್ತರಿಸಿ ವೈಜಾnನಿಕವಾಗಿ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶ ಸರ್ಕಾರಕ್ಕೆ ಇತ್ತು. ಆದರೆ, ಕೆಲ ಅಡ್ಡಿಗಳು ಎದುರಾದ ಕಾರಣ ಚನ್ನಪಟ್ಟಣ ಬಳಿ ವಿಶಾಲ ಜಾಗದಲ್ಲಿ ಮಾರುಕಟ್ಟೆ ಬರುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಂದು ಕೂಡ ಜೆಡಿಎಸ್‌-ಬಿಜೆಪಿ ಪಕ್ಷಗಳು ಹೈಟೆಕ್‌ ರೇಷ್ಮೆ ಮಾರುಕಟ್ಟೆ ನಿರ್ಮಾಣದ ವಿಚಾರದಲ್ಲಿ ಸಹಮತ ಹೊಂದಿದ್ದವು. ಇಂದು ಮೈತ್ರಿ ಪಕ್ಷಗಳಾಗಿ ಗಳಸ್ಯ- ಕಂಠಸ್ಯ ಹೊಂದಿವೆ. ರಾಜ್ಯದಲ್ಲಿ ಪ್ರಸ್ತುತ ಆಡಳಿತದಲ್ಲಿ ಇರುವ ಕಾಂಗ್ರೆಸ್‌ ಸರ್ಕಾರದಿಂದಲೂ ಯಾವುದೇ ಅಡ್ಡಿ- ಆತಂಕಗಳಿಲ್ಲದೆ, ಹೈಟೆಕ್‌ ರೇಷ್ಮೆ ಮಾರು ಕಟ್ಟೆಯ ಕಾಮಗಾರಿ ನಡೆಯುತ್ತಿರುವುದು ರೇಷ್ಮೆಸೀಮೆ ಎಂದೇ ಖ್ಯಾತಿ ಪಡೆದ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕುಗಳ ರೇಷ್ಮೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.

ವಂದಾರಗುಪ್ಪೆ ಬಳಿ ರೇಷ್ಮೆ ಬಿತ್ತನೆ ಕೋಠಿಯ ವಿಶಾಲವಾದ ಜಾಗದಲ್ಲಿ ಹೈಟೆಕ್‌ ರೇಷ್ಮೆ ಮಾರುಕಟ್ಟೆಯ ಜೊತೆಗೆ ಗೂಡು ಮಾರಾಟಕ್ಕೆ ಬರುವ ರೈತರಿಗೆ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು, ವಾಹನ ನಿಲ್ದಾಣ, ರೆಸ್ಟೋರೆಂಟ್‌, ಹೀಗೆ ಮೂಲ ಸೌಕರ್ಯಗಳನ್ನು ಕೂಡ ಕಲ್ಪಿಸಲಾಗುತ್ತದೆ. ಹಲವು ವರ್ಷಗಳಿಂದ ರಾಮನಗರ ರೇಷ್ಮೆ ಮಾರುಕಟ್ಟೆಗೆ ಹೈಟೆಕ್‌ ರೂಪ ಕೊಡಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಇದೀಗ ರೈತರ ಕನಸು ಈಡೇರುತ್ತಿದೆ.  -ಭೀಮಪ್ಪ, ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ, ಚನ್ನಪಟ್ಟಣ ತಾಲೂಕು

ಹೈಟೆಕ್‌ ರೇಷ್ಮೆ ಮಾರುಕಟ್ಟೆ ಬಗ್ಗೆ ಚಕಾರ ಎತ್ತಿದ್ದವರು. ಈ ಹಿಂದೆ ರಾಮನಗರ ಜಿಲ್ಲೆ ರಚನೆ, ರಾಜೀವ್‌ ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೂ ವಿರೋಧ ಮಾಡಿದ್ದರು. ಜಿಲ್ಲೆಯ ಅಭಿ ವೃದ್ಧಿಯನ್ನು ಬಯಸದ ಇಂತಹ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಬೆಲೆ ಕೊಡದೆ ಅಂದಿನ ಸರ್ಕಾರ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾ ಗಿದ್ದು, ಸ್ವಾಗತಾರ್ಹ ನಿರ್ಧಾರ ಎಂದೇ ಹೇಳಬಹುದು. -ಕೆ.ರವಿ, ರಾಮನಗರ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ 

Advertisement

Udayavani is now on Telegram. Click here to join our channel and stay updated with the latest news.

Next