ಹೊಸದಿಲ್ಲಿ: ಸುಳ್ಳು ಹೇಳುವುದು, ಬೊಬ್ಬೆ ಹೊಡೆಯುವುದು, ಎದುರಾಳಿಗಳನ್ನು ಬೆದರಿಸುವುದೇ ಮೋದಿ ಸರಕಾರದ ತತ್ವಾದರ್ಶಗಳಾಗಿವೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದ್ದಾರೆ. ಇಂಥ ಭಂಡ ಸರಕಾರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದಿಟ್ಟತನದಿಂದ ಎದುರಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದರು.
“ಪ್ರಜಾಸತ್ಮಾತ್ಮಕ ಹಾಗೂ ಜಾತ್ಯತೀತ ತಳಹದಿಯ ನಮ್ಮ ಸಮಾಜದ ಮೇಲೆ ಮೋದಿ ಸರಕಾರ ವ್ಯವಸ್ಥಿತ ರೀತಿಯಲ್ಲಿ ದಾಳಿ ಮಾಡುತ್ತಿದೆ. ಸರಕಾರಿ ಸಂಸ್ಥೆಗಳನ್ನು ಸರಕಾರ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ರಾಜಕೀಯ ವಿರೋಧಿ ಗಳನ್ನು ಹತ್ತಿಕ್ಕಲಾಗಿದೆ. ಅಸಮಾಧಾನ ಹೊಂದಿರುವವರನ್ನು ಮೂಲೆಗುಂಪು ಮಾಡಲಾಗಿದೆ ಎಂದರು.
ರಾಹುಲ್ಗೆ ಶ್ಲಾಘನೆ: ‘ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಕಾಂಗ್ರೆಸ್ನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಮೋದಿ ಸರಕಾರದ ವೈಫಲ್ಯ ವನ್ನು ಜನರಿಗೆ ತಲುಪಿಸುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ. ಇದೇ ಉತ್ಸಾಹ ದಲ್ಲಿಯೇ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ’ ಎಂದರು.
ನಾನು ನನ್ನ ಕೆಲಸ: ತಮ್ಮ ಪತಿ ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “ತನಿಖೆಯಂಥ ವಿಚಾರಗಳು ನಡೆಯುತ್ತಲೇ ಇರುತ್ತವೆ. ನಾನು ನನ್ನ ಕೆಲಸದಲ್ಲಿ ಮಗ್ನಳಾಗಿದ್ದೇನೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ’ ಎಂದಿದ್ದಾರೆ. ಇದೇ ಉ.ಪ್ರದಲ್ಲಿ ಇತರ ಹಿಂದುಳಿದ ವರ್ಗಗಳ ಒಕ್ಕೂಟ ಮಹಾನ್ ದಳ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಪ್ರಿಯಾಂಕಾ ವಾದ್ರಾ ಲಕ್ನೋದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.