Advertisement

ರೈತನ ಕಷ್ಟ ಪರಿಹರಿಸುವುದು ಸರ್ಕಾರದ ಕರ್ತವ್ಯ

05:35 PM Apr 30, 2022 | Team Udayavani |

ಚಿತ್ರದುರ್ಗ: ಪ್ರಾಮಾಣಿಕ, ದಕ್ಷ ಆಡಳಿತ ಮಂಡಳಿ ಇರುವ ಕಡೆಗಳಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರದ ಬಗ್ಗೆ ಸಾಕಷ್ಟು ರೀತಿಯ ಆಪಾದನೆಗಳಿವೆ. ಎಷ್ಟೋ ಸಹಕಾರಿ ಸಂಘಗಳು ಅವನತಿ ಹೊಂದಿವೆ. ಎಲ್ಲಿ ಸಹಕಾರಿ ಸಂಘಗಳು ಉತ್ತಮವಾದ ಕೆಲಸ ಮಾಡಿದೆಯೋ ಅಲ್ಲಿ ಉತ್ತಮ ಆಡಳಿತ ಮಂಡಳಿ ಇದೆ ಎಂದರ್ಥ ಎಂದರು. ಮಂತ್ರಿಗಳ ಗ್ರಾಮ ವಾಸ್ತವ್ಯದಿಂದ ಹಳ್ಳಿಗಳ ಸಮಸ್ಯೆಗಳು ಬಗೆಹರಿಯುವುದಿಲ್ಲ. ಐಎಎಸ್‌ ಅಧಿ ಕಾರಿಗಳು ಗ್ರಾಮ ವಾಸ್ತವ್ಯ ಮಾಡಿದಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ. ಈ ದೇಶದ ಬೆನ್ನೆಲುಬು ರೈತ ಅವನ ಕಷ್ಟಗಳನ್ನು ಪರಿಹರಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.

ಲಕ್ಷಾಂತರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಹಾರಿರುವವರಿಂದ ಸಾಲ ವಸೂಲಿ ಮಾಡುವ ಬದಲು ಬಡ ರೈತರಿಂದ ಸರ್ಕಾರಗಳು ಬಲವಂತವಾಗಿ ಸಾಲ ವಸೂಲಿ ಮಾಡುವುದು ಸರಿಯಾದ ಕ್ರಮವಲ್ಲ. ಕೃಷಿ ಪ್ರಧಾನ ದೇಶ ಭಾರತ ಉಳಿಯಬೇಕಾದರೆ ಮೊದಲು ರೈತ ಉಳಿಯಬೇಕು. ಹಾಗಾಗಿ ಆಳುವ ಸರ್ಕಾರಗಳು ಸಣ್ಣ ರೈತ, ದೊಡ್ಡ ರೈತ ಎಂದು ವರ್ಗಿಕರಿಸದೇ ಎಲ್ಲ ರೈತರನ್ನು ಸಮಾನವಾಗಿ ಕಾಣುವ ಮೂಲಕ ನೆರವು ನೀಡಬೇಕು ಎಂದು ತಿಳಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಯೋಜನೆ (ಎನ್‌ ಎಂಎಸ್‌ಎ-ಆರ್‌ಎಡಿ) ಅಡಿ ಆಕಳುಗಳನ್ನು ನೀಡುವ ಕೆಲಸ ಮಾಡ ಲಾಗುತ್ತಿದೆ. 40 ಸಾವಿರ ರೂ. ಆಕಳ ಖರೀದಿಗೆ ಶೇ.50ರಷ್ಟು ಸಬ್ಸಿಡಿ ಕೊಡುವ ಮೂಲಕ ಹಾಲು ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅಭಿವೃದ್ಧಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿಯೂ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಳ್ಳದ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ರಾಗಿ ಖರೀದಿ ನೋಂದಣಿಯು ಸರ್ವರ್‌ ಸಮಸ್ಯೆಯಿಂದಾಗಿ ತೊಂದರೆಯಾಗಿತ್ತು. ನೋಂದಣಿ ಪ್ರಕ್ರಿಯೆಯನ್ನು ಸರಿಪಡಿಸಲಾಗುವುದು. ರಾಜ್ಯದಲ್ಲಿ 1 ಲಕ್ಷದ 40 ಸಾವಿರ ಕ್ವಿಂಟಾಲ್‌ ಖರೀದಿಗೆ ಮಾತ್ರ ಅವಕಾಶವಿದೆ ಎಂದರು.

Advertisement

ರಾಜ್ಯ ರಸ್ತೆ ಸಾರಿಗೆ ನಿಮಗದ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಚಂದ್ರಪ್ಪ ಮಾತನಾಡಿ, ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಿಂದ ರೈತ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರ ಬದುಕು ಹಸನಾಗಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದರು.

ಈ ಭಾಗದ ರೈತರು 1 ಇಂಚು ನೀರಿಗೂ ಹಾಹಾಕಾರ ಪಡುವ ಸಂದರ್ಭದಲ್ಲಿ ಸಿರಿಗೆರೆ ಗುರುಗಳ ದೂರದೃಷ್ಟಿಯಿಂದ ಈ ಭಾಗದ ಕೆರೆಗಳು ನೀರು ತುಂಬಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಈ ಭಾಗದ ರೈತರ ನೀರಿನ ಬವಣೆಯನ್ನು ತೀರಿಸಿದ್ದಾರೆ ಎಂದು ಸ್ಮರಿಸಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗಿರೀಶ್‌ ಮಾತನಾಡಿ, ಸರ್ಕಾರದ ಯೋಜನೆಗಳು ಮತ್ತು ಪ್ರೋತ್ಸಾಹ ಧನಗಳು ಜನರಿಗೆ ನೇರವಾಗಿ ಸಹಕಾರಿ ಸಂಘಗಳ ಮೂಲಕ ತಲುಪುತ್ತವೆ. ಚಿತ್ರದುರ್ಗ ಡಿಸಿಸಿ ಬ್ಯಾಂಕ್‌ ವತಿಯಿಂದ 440 ಕೋಟಿ ಕೆಸಿಸಿ ಸಾಲವನ್ನು ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿ.ಬಿ. ತೀರ್ಥಪ್ಪ, ಸಹಕಾರ ಸಂಘದ ಅಧಿ ಕಾರಿಗಳಾದ ಜಿ.ಎಸ್. ಪ್ರಶಾಂತ್‌, ಜಿ.ಡಿ. ಅಶ್ವಿ‌ನ್‌ ಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next