Advertisement

ಭಾಷಾ ಸೌಹಾರ್ದ ಸಂಸ್ಕೃತಿ ಬೆಳೆಯಲಿ

01:25 PM Jun 26, 2019 | Naveen |

ಸೊಲ್ಲಾಪುರ: ಕನ್ನಡ ಮತ್ತು ಮರಾಠಿ ಭಾಷೆಗಳು ಪರಸ್ಪರ ಕೊಡುಕೊಳ್ಳುವಿಕೆಯಿಂದ ಭಾಷಾ ಸೌಹಾರ್ದ ಸಂಸ್ಕೃತಿಯನ್ನು ಸಮೃದ್ಧಗೊಳಿಸಿವೆ. ಇಂದು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಬೇರೆ ಬೇರೆಯಾಗಿದ್ದರೂ ನಮ್ಮ ಸಂಸ್ಕೃತಿಗಳು ಒಂದೇ ಆಗಿವೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಅರವಿಂದ ಮಾಲಗತ್ತಿ ಹೇಳಿದರು.

Advertisement

ಅಕ್ಕಲಕೋಟ ನಗರದ ಲೋಕಾಪುರೆ ಸಭಾಗೃಹದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಸಹಯೋಗದಲ್ಲಿ ನಡೆದ ಕನ್ನಡದಿಂದ ಮರಾಠಿಗೆ ಸಣ್ಣ ಕಥೆಗಳ ಅನುವಾದ ಕಮ್ಮಟದ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ನೆರೆ ರಾಜ್ಯಗಳಾಗಿರುವ ಮಹಾರಾಷ್ಟ್ರ ಮತ್ತು ಕರ್ನಾಟಕ ಹಿಂದೆ ರಾಷ್ಟ್ರಕೂಟ, ಚಾಲುಕ್ಯ ಕಾಲದಲ್ಲಿ ಅಖಂಡವಾಗಿದ್ದವು. ಈ ಸಹ ಸಂಬಂಧಕ್ಕೆ ಶತಮಾನಗಳ ಪರಂಪರೆಯಿದೆ. ಮಹಾರಾಷ್ಟ್ರದಲ್ಲಿನ ಅಜಂತಾ ಎಲ್ಲೋರಾದಲ್ಲಿ ಕನ್ನಡ ಶಾಸನಗಳು ದೊರೆತಿವೆ ಮತ್ತು ಕರ್ನಾಟಕದ ಶ್ರವಣಬೆಳಗೊಳದಲ್ಲಿ ಮರಾಠಿ ಶಾಸನಗಳು ದೊರೆತಿವೆ. ನಮ್ಮ ರಾಜ್ಯಗಳು ಇಂದು ಭಾಷಾವಾರು ಪ್ರಾಂತ ರಚನೆಯಿಂದಾಗಿ ಬೇರೆ ಬೇರೆ ಆಗಿದ್ದರೂ ನಮ್ಮ ಸಂಸ್ಕೃತಿಗಳು ಒಂದೆಯಾಗಿವೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ದೊರೆಯಲೆಂದು ಹೋರಾಟ ಮಾಡಿದ ನಾನು ಮರಾಠಿಗೂ ಬೇಗ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಗಲೆಂದು ಹಾರೈಸುತ್ತೇನೆ ಎಂದರು.

ಹಿರಿಯ ಅನುವಾದಕ ಡಾ| ಡಿ.ಎಸ್‌. ಚೌಗಲೆ ಅವರು ಕನ್ನಡ ಮರಾಠಿ ಅನುವಾದ ಪರಂಪರೆ ಕುರಿತು ಮಾತನಾಡಿ, ಕನ್ನಡ ಮತ್ತು ಮರಾಠಿಯ ಸಮೃದ್ಧ ಅನುವಾದ ಪರಂಪರೆಗೆ ತಲೆಮಾರುಗಳ ಇತಿಹಾಸವಿದೆ. ಗಳಗನಾಥರು ಹ.ನಾ. ಆಪ್ಟೆಯವರನ್ನು ಸಮಗ್ರವಾಗಿ ಕನ್ನಡಕ್ಕೆ ತಂದಿರುವಂತೆಯೇ ಉಮಾ ಕುಲಕರ್ಣಿ ಅವರು ಭೈರಪ್ಪ ಅವರನ್ನು ಸಮಗ್ರವಾಗಿ ಮರಾಠಿ ಸಾಹಿತ್ಯಾಸಕ್ತರಿಗೆ ತಲುಪಿಸಿದ್ದಾರೆ.

ಇವರಲ್ಲದೆ ಇವರಿಗಿಂತ ಮೊದಲೂ ಸಾಕಷ್ಟು ಅನುವಾದ ಕಾರ್ಯ ನಡೆದಿದೆ. ಜಯದೇವಿ ತಾಯಿ ಲಿಗಾಡೆ, ಮೀನಾ ವಾಂಗೀಕರ, ವಸಂತ ದೀವಾಣಜಿ, ರಂಶಾ ಲೋಕಾಪುರ, ಕೃಷ್ಣ ಕೋಲಾØರ ಕುಲಕರ್ಣಿ, ಚಂದ್ರಕಾಂತ ಪೋಕಳೆ ಈ ಪರಂಪರೆ ಮುಖ್ಯ ಕೊಂಡಿಗಳು. ಈಗ ಸೊಲ್ಲಾಪುರ ಭಾಗದಲ್ಲಿ ಗಿರೀಶ ಜಕಾಪುರೆಯವರು ಈ ಪರಂಪರೆಗೆ ಹೊಸ ಅಧ್ಯಾಯವೊಂದನ್ನು ಸೇರಿಸಿದ್ದಾರೆ ಎಂದು ಹೇಳಿದರು.

Advertisement

ಹಿರಿಯ ಸಾಹಿತಿ ಡಾ| ಭೈರಮಂಗಲ ರಾಮೇಗೌಡ ಮಾತನಾಡಿ, ಹೊರನಾಡಿನಾಲ್ಲಿ ಆದರ್ಶ ಕನ್ನಡ ಬಳಗ ಸಾಹಿತ್ಯ ಸಂಸ್ಕೃತಿಯ ಸಂವರ್ಧನೆ ಮಾಡುತ್ತಿರುವುದು ಅಭಿನಂದನೀಯ. ಗಿರೀಶ ಜಕಾಪುರೆಯವರ ನೇತೃತ್ವದಲ್ಲಿ ಆದರ್ಶ ಕನ್ನಡ ಬಳಗ ಸುಮಾರು ನಾಲ್ಕು ವರ್ಷಗಳಿಂದ ಈ ರೀತಿ ಅನುವಾದ ಕಮ್ಮಟಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯದ ಕೊಡುಕೊಳ್ಳುವಿಕೆ ನಡೆದಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಕಮ್ಮಟಗಳು ನಡೆಯಬೇಕು ಎಂದರು.

ಕಮ್ಮಟ ನಿರ್ದೇಶಕ ಗಿರೀಶ ಜಕಾಪುರೆ ಕಮ್ಮಟದ ಫಲಶೃತಿ ವಿಷಯ ಕುರಿತು ಮಾತನಾಡಿ, ಅನುವಾದ ಕಮ್ಮಟದಲ್ಲಿ ಕನ್ನಡದಿಂದ ಮರಾಠಿಗೆ ಅನುವಾದಗೊಂಡಿರುವ ಕಥೆಗಳು ಪ್ರಕಟಗೊಂಡು ಮರಾಠಿ ಓದುಗರಿಗೆ ತಲುಪಿಸುವ ಕಾರ್ಯ ಮುಖ್ಯವಾಗಿದೆ. ಮರಾಠಿ ಓದುಗರು ಕನ್ನಡದ ಸಾಹಿತ್ಯವನ್ನು ಓದಿ ಸಂತೋಷಪಟ್ಟಾಗ ಮಾತ್ರ ಈ ಯೋಜನೆಗೆ ಯಶಸ್ಸು ಲಭಿಸುತ್ತದೆ ಎಂದರು.

ಅನುವಾದದ ಪ್ರಕಾರಗಳು, ಸಾಧ್ಯತೆ ಮತ್ತು ಸವಾಲುಗಳು ಕುರಿತು ಖ್ಯಾತ ಅನುವಾದಕರಾದ ಪ್ರಭಾಕರ ಸಾತಖೇಡ, ಅನುವಾದದಲ್ಲಿನ ಸೃಜನಶೀಲತೆ ಮತ್ತು ಸ್ಥಿತ್ಯಂತರಗಳು ಕುರಿತು ರಾಮಕೃಷ್ಣ ಮರಾಠೆ ಉಪನ್ಯಾಸ ನೀಡಿದರು. ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ ಸ್ವೀಟಿ ಪವಾರ ಮತ್ತು ವಿದ್ಯಾಶ್ರೀ ಬಸವನಕೇರಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡ ಶಿವಪುತ್ರ ಜಾಂಬರೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಅರವಿಂದ ಮಾಲಗತ್ತಿ ಸನ್ಮಾನಿಸಿದರು.

ಕನ್ನಡ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಕರಿಯಪ್ಪ ಎನ್‌., ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಸಂಗಮೇಶ ಬಾದವಾಡಗಿ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಾಜಾನ್‌ ಶೇಖ್‌, ಅನುವಾದಕರಾದ ಡಾ| ಸುಜಾತಾ ಶಾಸ್ತ್ರೀ, ಪ್ರಭಾಕರ ಸಾತಖೇಡ, ವಸುಂಧರಾ ಶರ್ಮಾ, ಚನ್ನವೀರ ಭದ್ರೇಶ್ವರಮಠ, ವಿಶ್ವೇಶ್ವರ ಮೇಟಿ, ಪ್ರಕಾಶ ಪ್ರಧಾನ, ಡಾ| ಗುರುಸಿದ್ದಯ್ಯ ಸ್ವಾಮಿ, ಅಶ್ವಿ‌ನಿ ಜಮಶೆಟ್ಟಿ, ಶೀಲಾ ಜಕಾಪುರೆ, ಕಸ್ತೂರಿ ಕರೋಟಿ, ದಿನೇಶ ಚವ್ಹಾಣ, ಚಂದ್ರಕಾಂತ ಕಾರಕಲ್, ಪ್ರಕಾಶ ಅತನೂರೆ, ಎಸ್‌.ಎಂ. ಜಾಧವ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಅನುವಾದಕರು ಪಾಲ್ಗೊಂಡಿದ್ದರು.

ವಿದ್ಯಾಧರ ಗುರವ ನಿರೂಪಿಸಿದರು. ಶರಣಪ್ಪ ಫುಲಾರಿ ವಂದಿಸಿದರು. ಆದರ್ಶ ಕನ್ನಡ ಬಳಗದ ಶರಣಪ್ಪ ಫುಲಾರಿ, ಬಸವರಾಜ ಧನಶೆಟ್ಟಿ, ಶರಣು ಕೋಳಿ, ಶ್ರೀಶೈಲ ಮೇತ್ರೆ, ಗಣೇಶ ಜಕಾಪುರೆ, ಕಲ್ಮೇಶ ಅಡಳಟ್ಟಿ, ಕಾಶೀನಾಥ ಮಣೂರೆ, ಸೇರಿದಂತೆ ಹಲವರು ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next