ನವದೆಹಲಿ:ಭಾರತದ ಇಬ್ಬರು ಯೋಧರ ಶಿರಚ್ಛೇದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಬುಧವಾರವೂ ಕೂಡಾ ಪಾಕ್ ಹೈಕಮೀಷನರ್ ಅಬ್ದುಲ್ ಬಾಸಿತ್ ಗೆ ಸಮಸ್ಸ್ ಕಳುಹಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಗೋಪಾಲ್ ಬಾಗ್ಲೈ ಅವರು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹಾಗೂ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ನಡುವೆ ನಡೆದ ಮಾತುಕತೆ ಹಾಗೂ ಒತ್ತಡದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇಬ್ಬರು ಭಾರತೀಯ ಯೋಧರನ್ನು ಹತ್ಯೆಗೈದು ದೇಹವನ್ನು ವಿರೂಪಗೊಳಿಸಿರುವ ಪಾಕಿಸ್ತಾನಿ ಸೈನಿಕರ ಪಾಶವೀ ಕೃತ್ಯದ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಜೈಶಂಕರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಎಂಇಎ ಹೇಳಿದೆ.
ಪಾಕಿಸ್ತಾನದ ಗಡಿಯಿಂದಲೇ ಗುಂಡಿನ ದಾಳಿ ನಡೆದಿರುವ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಬಾಸಿತ್ ಅವರಿಗೆ ತಿಳಿಸಿದ್ದು, ಈ ಸಂಬಂಧ ಎಲ್ಲಾ ವಿವರಗಳನ್ನು ನೀಡಿರುವುದಾಗಿ ವಿವರಿಸಿದರು.
ಅಷ್ಟೇ ಅಲ್ಲ ಭಾರತದ ಸೈನಿಕರ ಶಿರಚ್ಛೇದ ನಡೆಸಿದ ಪಾಕ್ ಸೈನಿಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಜೈಶಂಕರ್ ಒತ್ತಾಯಿಸಿದ್ದಾರೆ. ಆದರೆ ಬಾಸಿತ್ ಭಾರತದ ಸೈನಿಕರ ಶಿರಚ್ಛೇದ ನಡೆಸಿದ ಕೃತ್ಯದಲ್ಲಿ ಪಾಕ್ ಮಿಲಿಟರಿ ಶಾಮಿಲಾಗಿಲ್ಲ ಎಂದು ಹೇಳಿರುವುದಾಗಿ ಬಾಗ್ಲೈ ಖಚಿತಪಡಿಸಿದ್ದಾರೆ. ಆದರೆ ಭಾರತದ ಮನವಿ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ತಿಳಿಸುವುದಾಗಿ ಬಾಸಿತ್ ಭರವಸೆ ನೀಡಿದ್ದಾರೆ.