Advertisement

ಸೈನಿಕ ಹುಳು ಹುಡುಕಿ ಕೊಲ್ಲುವ ರೋಬೊಟಿಕ್‌

09:22 AM Aug 26, 2019 | Suhan S |

ಹುಬ್ಬಳ್ಳಿ: ರಾಜ್ಯದ ಪ್ರಮುಖ ಬೆಳೆ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ರೈತರನ್ನು ಎಗ್ಗಿಲ್ಲದೆ ಕಾಡುತ್ತಿದ್ದು, ಶೇ.20-30 ಫ‌ಸಲು ಹಾಳು ಮಾಡುತ್ತಿದೆ. ಸೈನಿಕ ಹುಳುಗಳನ್ನು ಹುಡುಕಿ ಕ್ರಿಮಿನಾಶಕ ಸಿಂಪರಣೆಯ ರೋಬೊಟಿಕ್‌ ಯಂತ್ರ ಶೀಘ್ರದಲ್ಲೇ ರೈತರ ಹೊಲಗಳಿಗೆ ಕಾಲಿಡಲಿದೆ.

Advertisement

ಕೃತಕ ಬುದ್ಧಿಮತ್ತೆಯೊಂದಿಗೆ ಈಗಾಗಲೇ ಹಲವು ಉತ್ಪನ್ನಗಳನ್ನು ರೂಪಿಸಿರುವ ನವೋದ್ಯಮಿ ಅಜಯ ಕಬಾಡಿ ನೇತೃತ್ವದ ಯುವ ಉತ್ಸಾಹಿ ನವೋದ್ಯಮಿ ತಂಡ ಇದೀಗ ರೈತರಿಗೆ ಪ್ರಯೋಜನಕಾರಿ, ಮೆಕ್ಕೆಜೋಳ ಬೆಳೆ ರಕ್ಷಣೆಯ ರೋಬೊಟಿಕ್‌ ಯಂತ್ರದ ಅಭಿವೃದ್ಧಿಯಲ್ಲಿ ಯಶಸ್ವಿ ಹೆಜ್ಜೆಗಳನ್ನಿರಿಸಿದೆ.

ದೇಶಪಾಂಡೆ ಪ್ರತಿಷ್ಠಾನದ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ಅಪ್‌ನ ಇನ್‌ಕ್ಯುಬೇಷನ್‌ ಕೇಂದ್ರದಲ್ಲಿ ಡಾಕೇಟರ್‌ ಕಂಪೆನಿ ಹೆಸರಲ್ಲಿ ನವೋದ್ಯಮ ಆರಂಭಿಸಿರುವ ಈ ತಂಡ, ಕರ್ನಾಟಕ ಸರ್ಕಾರ ನವೋದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರಂಭಿಸಿರುವ ಎಲಿವೇಟ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು 2019ನೇ ಸಾಲಿಗೆ ಆಯ್ಕೆಯಾಗಿದೆ. ಕ್ರಿಮಿನಾಶಕ ತಯಾರಿಕೆಯ ಬೃಹತ್‌ ಕಂಪನಿಯೊಂದು ಸೈನಿಕ ಹುಳು ಕಾಟ ತಡೆಗೆ ಅಗತ್ಯ ಪರಿಹಾರ ಕೇಳಿತ್ತು. ಪರಿಹಾರದ ಸವಾಲು ಸ್ವೀಕರಿಸಿರುವ ಹುಬ್ಬಳ್ಳಿಯ ಅಜಯ ಕಬಾಡಿ ನೇತೃತ್ವದ ತಂಡ ರೋಬೊಟಿಕ್‌ ತಯಾರಿಯಲ್ಲಿ ತೊಡಗಿದೆ.

ಸೈನಿಕ ಹುಳು ಬಾಧೆ: ದೇಶದಲ್ಲಿ ಬೆಳೆಯುವ ಒಟ್ಟು ಕೃಷಿ ಉತ್ಪನ್ನದಲ್ಲಿ ಶೇ.30-35 ಫ‌ಸಲು ವಿವಿಧ ಕ್ರಿಮಿ, ರೋಗ ಹಾಗೂ ಕಳೆಯಿಂದಾಗಿ ಹಾಳಾಗುತ್ತಿದೆ. ರಾಜ್ಯದಲ್ಲಿ ಸುಮಾರು 9.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಅಲ್ಲದೆ ಹಾಸನ, ಚಿಕ್ಕಬಳ್ಳಾಪುರ ಇನ್ನಿತರ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಗಳಲ್ಲಿ ಒಂದಾಗಿದೆ.

ಮೆಕ್ಕೆಜೋಳ ಬೆಳೆಗೆ ತಗುಲುವ ಸೈನಿಕ ಹುಳು ಬಾಧೆ ಮೊದಲಿಗೆ ಕಾಣಿಸಿಕೊಂಡಿದ್ದು ಆಫ್ರಿಕಾದಲ್ಲಿ. 2016ರಲ್ಲಿ ಮೊದಲ ಬಾರಿಗೆ ಆಫ್ರಿಕಾದ ವಿವಿಧ ಕಡೆ ಮೆಕ್ಕೆಜೋಳವನ್ನು ವ್ಯಾಪಕವಾಗಿ ಹಾಳು ಮಾಡಿತ್ತು. ಆನಂತರದಲ್ಲಿ ಆಫ್ರಿಕಾದ ಸುಮಾರು 28 ದೇಶಗಳಿಗೆ ಇದು ವ್ಯಾಪಿಸಿತು.

Advertisement

2018ರ ಮೇ ವೇಳೆಗೆ ಭಾರತದಲ್ಲಿ ಸೈನಿಕ ಹುಳುವಿನ ಬಾಧೆ ಬಗ್ಗೆ ವರದಿಯಾಗಿತ್ತು. ತಮಿಳುನಾಡಿನಲ್ಲಿ ದೇಶದ ಮೊದಲ ಬಾರಿಗೆ ಈ ಹುಳು ಬಾಧೆ ಕಂಡು ಬಂದಿತ್ತು. ನಂತರದ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಹರಡಿತು. 2018ರ ಡಿಸೆಂಬರ್‌ ಹಾಗೂ 2019ರ ಜನವರಿಯಲ್ಲಿ ಶ್ರೀಲಂಕಾದಲ್ಲೂ ಕಾರ್ನ್ ಬೆಳೆಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಅಲ್ಲಿನ ಕೃಷಿ ಇಲಾಖೆ ದೇಶದ ಎಲ್ಲ ಕಡೆಗೂ ಸೈನಿಕ ಹುಳಿವಿನ ಬಾಧೆ ಕುರಿತಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ. 2019ರಲ್ಲಿಯೇ ಚೀನಾದಲ್ಲೂ ಸೈನಿಕ ಹುಳುವಿನ ಕಾಟ ಕಂಡು ಬಂದಿದ್ದು, ಅಲ್ಲಿನ ಸುಮಾರು 3.33 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಈ ಬಾಧೆ ತಗುಲಿದೆ ಎಂದು ಹೇಳಲಾಗುತ್ತಿದೆ. ಸೈನಿಕ ಹುಳುವಿನ ಬಾಧೆ ಕೇವಲ ಮೆಕ್ಕೆಜೋಳಕ್ಕೆ ಸೀಮಿತವಾಗಿಲ್ಲ. ಭತ್ತ, ಕಬ್ಬು ಇನ್ನಿತರ ಬೆಳೆಗಳಿಗೂ ವ್ಯಾಪಿಸಿದೆ.

ಹುಡುಕಿ ಕೊಲ್ಲಲಿದೆ ರೋಬೊಟಿಕ್‌: ಸೈನಿಕ ಹುಳುಗಳು ಹೊಲಕ್ಕೆ ದಾಳಿ ಇರಿಸಿದವೆಂದರೆ ಸಾಕು ಇದ್ದ ಬೆಳೆ ಬಹುತೇಕ ನಾಶ ಎನ್ನುವಂತಾಗಿದೆ. ಈ ಹುಳುಗಳು ಮೆಕ್ಕೆಜೋಳದ ಎಲೆ, ಕಾಂಡ ಹಾಗೂ ತೆನೆಯನ್ನು ತಿನ್ನುತ್ತವೆ. ಸೈನಿಕ ಹುಳು ತಡೆಗೆ ರೈತರು ವಿವಿಧ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆಯಾದರು, ನಿಯಂತ್ರಣ ಕಷ್ಟ ಸಾಧ್ಯವಾಗುತ್ತಿದೆ.

ವಿಶೇಷವೆಂದರೆ ಸೈನಿಕ ಹುಳುಗಳು ಕ್ರಿಮಿನಾಶಕ ಸಿಂಪರಣೆ ಮಾಡುವ ಸಂದರ್ಭದಲ್ಲಿ ಮೆಕ್ಕೆಜೋಳದ ರವದೆ(ಎಲೆ)ಕೆಳಗೆ ಇಲ್ಲವೆ ಮಣ್ಣಿನಲ್ಲಿ ಅವಿತುಕೊಳ್ಳುತ್ತದೆ. ಇದರಿಂದ ಕ್ರಿಮಿನಾಶಕ ಸಿಂಪರಣೆಯಾದರೂ ಅದರ ಮೇಲೆ ಪರಿಣಾಮ ಬೀರುವುದಿಲ್ಲ. ಸಂಜೆಯಾಗುತ್ತಿದ್ದಂತೆಯೇ ಹೊರಬಂದು ಬೆಳೆ ತಿನ್ನಲು ಆರಂಭಿಸುತ್ತದೆ.

ಸೈನಿಕ ಹುಳುಗಳ ನಿಯಂತ್ರಣ ರೈತರಿಗಷ್ಟೇ ಅಲ್ಲ, ಕ್ರಿಮಿನಾಶಕ ತಯಾರಿಕೆ ಕಂಪನಿಗಳಿಗೂ ಸವಾಲಾಗಿ ಪರಿಣಮಿಸಿದೆ. ಇದರಿಂದ ಕ್ರಿಮಿನಾಶಕ ತಯಾರಿಕೆಯಲ್ಲಿ ವಿಶ್ವಮಟ್ಟದ ಖ್ಯಾತಿ ಪಡೆದ ಕಂಪನಿಯೊಂದು ಸೈನಿಕ ಹುಳು ನಿಯಂತ್ರಣ ಪರಿಹಾರ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಸ್ಪಂದಿಸಿರುವ ಹುಬ್ಬಳ್ಳಿಯ ನವೋದ್ಯಮಿಗಳಾದ ಅಜಯ ಕಬಾಡಿ, ಚೇತನ ಕುಲಕರ್ಣಿ ಹಾಗೂ ಶ್ವೇತಾ ಶೆಟ್ಟರ ಅವರನ್ನೊಳಗೊಂಡ ತಂಡ ಪರಿಹಾರ ಸಾಧನ ರೂಪಣೆಗೆ ಮಹತ್ವದ ಹೆಜ್ಜೆ ಇರಿಸಿದೆ.

ಸೈನಿಕ ಹುಳುಗಳನ್ನು ಹುಡುಕಿ ಅವುಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಬಳಸಿಕೊಂಡು ರೋಬೊಟಿಕ್‌ ರೂಪಿಸಲಾಗುತ್ತಿದೆ. ಅಂತರ್ಜಾಲ ಸಂಪರ್ಕ ಇಲ್ಲದೆಯೇ ಈ ಯಂತ್ರ ಕೀಟ, ರೋಗ ಹಾಗೂ ನಂಜು ಗುರುತಿಸಲಿದೆ. ರೋಬೊಟಿಕ್‌ಗೆ ಅಳವಡಿಸುವ ಸೂಕ್ಷ್ಮ ಕ್ಯಾಮೆರಾಗಳು ಸಸ್ಯದ ಯಾವುದೇ ಭಾಗದಲ್ಲಿ ಸೈನಿಕ ಹುಳು ಅಡಗಿದ್ದರೂ ಅದನ್ನು ಗುರುತಿಸುತ್ತದೆ. ಹುಳುಗಳು ಕಂಡ ಕೂಡಲೇ ಸ್ವಯಂ ಚಾಲಿತ ನಾಜಲ್ಗಳು ಚಾಲನೆ ಪಡೆದು ಕ್ರಿಮಿನಾಶಕ ಸಿಂಪಡಣೆಯಾಗಲಿದೆ. ಸಂಜೆ ಹಾಗೂ ರಾತ್ರಿ ವೇಳೆಯೂ ಇದು ಕೆಲಸ ನಿರ್ವಹಿಸಬಹುದು.

 

•ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next