ಭಟ್ಕಳ: ಸಂಕ್ರಾಂತಿ ನಂತರ ತಾಲೂಕಿನಲ್ಲಿ ನಡೆಯುವ ಅತಿದೊಡ್ಡ ಸೋಡಿಗದ್ದೆ ಮಹಾಸತಿ ಅಮ್ಮನವರ ಜಾತ್ರೆ ಆರಂಭವಾಗಿದ್ದು ಎರಡನೇ ದಿನ ರವಿವಾರ ಕೆಂಡ ಸೇವೆಯು ನಡೆಯಿತು. ಸೋಡಿಗದ್ದೆ ಜಾತ್ರೆಯಲ್ಲಿ ಕೆಂಡಸೇವೆ ಅತ್ಯಂತ ಮಹತ್ವದ್ದಾಗಿದ್ದು, ಈ ವರ್ಷವೂ ನೂರಾರು ಭಕ್ತರು ಕೆಂಡ ಸೇವೆಯಲ್ಲಿ ಭಾಗವಹಿಸಿದ್ದರು.
ಅಲ್ಲದೇ ಜಾತ್ರೆಯಲ್ಲಿಯೂ ಕೂಡಾ ಜನಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಿದ್ದಾರೆ. ಮೂರನೇ ದಿನ ಹಾಲ ಹಬ್ಬ ಹಾಗೂ ನಂತರದ ದಿನಗಳಲ್ಲಿ ಜಾತ್ರೆ ಮುಂದುವರಿಯುವುದು.
ಸೋಡಿಗದ್ದೆ ಜಾತ್ರೆಯಲ್ಲಿ ಗೊಂಬೆಗಳ ಹರಕೆ ಕೂಡಾ ಮಹತ್ವದ್ದಾಗಿದ್ದು ನೂರಾರು ಭಕ್ತರು ಗೊಂಬೆಗಳನ್ನು ಅರ್ಪಿಸುತ್ತಾರೆ.ಹರಕೆ ಗೊಂಬೆಗಳು ವಿವಿಧ ರೂಪಗಳಲ್ಲಿದ್ದು ಮಹಾಸತಿ, ಜಟ್ಟಿಗರಾಯ, ಹುಲಿರಾಯ, ನಾಗರಕಲ್ಲು, ಹಾಯ್ಗೂಳಿ ಇತ್ಯಾದಿ ದೇವರ ಗೊಂಬೆಗಳನ್ನು ಕೂಡಾ ಅರ್ಪಿಸಲಾಗುತ್ತದೆ.
ಇದನ್ನೂ ಓದಿ:ರೈತ ಸಂಘದಿಂದ ಪೋಸ್ಟರ್ ಪ್ರದರ್ಶನ
ಜಾತ್ರೆ ಸಂದರ್ಭದಲ್ಲಿ ಹೂವಿನ ಪೂಜೆ, ಬಂಗಾರದ ತೊಟ್ಟಿಲು ಸಮರ್ಪಣೆ, ಬೆಳ್ಳಿ, ಬಂಗಾರದ ಕಣ್ಣು, ಬಂಗಾರದ ಆಭರಣ ಇತ್ಯಾದಿಗಳನ್ನು ಭಕ್ತಿ ಪೂರ್ವಕವಾಗಿ ದೇವಿಗೆ ಸಮರ್ಪಿಸುವ ಕಾರ್ಯ ಕೂಡಾ ಭಕ್ತರಿಂದನಡೆಯುತ್ತದೆ. ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿರುವಜಾತ್ರೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ಬಾರಿ ಕೋವಿಡ್-19 ನಿಯಮದಿಂದ ಜನಸಂಖ್ಯೆ ಕಡಿಮೆ ಇರಬಹುದು ಎನ್ನುವ ಅಂದಾಜಿಗೆ ವ್ಯತಿರಿಕ್ತವಾಗಿ ಭಕ್ತರ ಸಂಖ್ಯೆ ಪ್ರತಿ ವರ್ಷಕ್ಕಿಂತ ಹೆಚ್ಚಿಗೆಯೇ ಇದೆ. ಕೆಲವು ವರ್ಷಗಳಿಂದ ಅನ್ನದಾನ ಸೇವೆ ಆರಂಭಿಸಲಾಗಿದ್ದು ಈ ವರ್ಷವೂ ಮುಂದುವರಿದಿದೆ.