Advertisement

ಪೇಜಾವರ ಶ್ರೀಗಳ ಸಮಾಜ ದರ್ಶನ

08:25 PM Dec 29, 2019 | Lakshmi GovindaRaj |

ಸನ್ಯಾಸಿಗಳು, ಮಠಾಧಿಪತಿಗಳ ಹೊಣೆಗಾರಿಕೆಗಳಲ್ಲಿ ಸಮಾಜಕ್ಕೆ ಮಾರ್ಗದರ್ಶನವೂ ಒಂದು ಎಂಬುದರ ಸಾಕಾರರೂಪಿಯಾಗಿದ್ದವರು ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು. ಅವರ ಅಸ್ಪೃಶ್ಯತಾ ನಿವಾರಣೆಯ ಹೆಜ್ಜೆಗಳಿರಲಿ, ಅಯೋಧ್ಯೆ ವಿಚಾರದಲ್ಲಿ ವಹಿಸಿದ ನೇತೃತ್ವವಾಗಲಿ, ರಾಜಕೀಯ ಟೀಕೆ-ಟಿಪ್ಪಣಿಗಳು, ಮಾರ್ಗದರ್ಶನಗಳಿರಲಿ – ಎಲ್ಲವೂ ಗುರುತ್ವಕ್ಕೆ ಮಾದರಿಯೇ ಆಗಿವೆ.

Advertisement

ಪೀಠಾಧಿಪತಿಯ ಸಾಮಾಜಿಕ ಜವಾಬ್ದಾರಿ: 1978. ಆಂಧ್ರದಲ್ಲಿ ಚಂಡಮಾರುತದಿಂದಾಗಿ ಹಂಸಲದೀವಿಯ ಜನ ಮನೆ-ಮಾರು ಕಳೆದುಕೊಂಡು ಬೀದಿಪಾಲಾದರು. ಶ್ರೀಪಾದರ ಹೃದಯ ಕರಗಿತು. ಅವರು ತಮ್ಮ ಮಠದ ಕಡೆಯಿಂದ 150 ಮನೆಗಳನ್ನು ಕಟ್ಟಿಸಿದರು. 26-7-1978ರಂದು ಅವುಗಳ ಉದ್ಘಾಟನೆಯಾಗಿ ಮನೆಯಿಲ್ಲದವರು “ಮನೆವಂತ’ರಾದರು. ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹೀಗೆಯೇ ಸಾವಿರಾರು ಮಂದಿ ಬೀದಿಯಲ್ಲಿ ನಿಂತಾಗಲೂ ಶ್ರೀಪಾದರು ನೆರವಿಗೆ ನಿಂತರು. ಪೀಠಾಧಿಪತಿ ಸಾಮಾಜಿಕವಾಗಿ ಹೇಗೆ ಸ್ಪಂದಿಸಬೇಕು ಎನ್ನುವುದಕ್ಕೆ ಮಾದರಿಯಾದರು.

ಕೈಬಿಡದ ಅನುಷ್ಠಾನ: ಶ್ರೀಪಾದರು ತಮ್ಮನ್ನು ಸಾರ್ವಜನಿಕವಾಗಿ ತೊಡಗಿಸಿಕೊಂಡರೂ ಯತಿಧರ್ಮದ ಯಾವ ನಿಯಮವನ್ನೂ ಕೈಬಿಟ್ಟವರಲ್ಲ. ಅಖಂಡವಾದ ಬ್ರಹ್ಮಚರ್ಯ. ನಿತ್ಯವೂ ಪ್ರಣವ ಜಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದ್ಯಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ-ಇವು ಅವರ ಜೀವನದ ಅವಿಭಾಜ್ಯ ಆಂಗಗಳಾಗಿ ನಿರಂತರ ನಡೆಯುತ್ತಿದ್ದವು. ನಿರಂತರ ಓಡಾಟದ ನಡುವೆ 1978ರಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ರಜತೋತ್ಸವವನ್ನು ತಾವೇ ನಿಂತು ವೈಭವದಿಂದ ನೆರವೇರಿಸಿದ್ದರು.

ದೇಶಕ್ಕೆ ಪ್ರಥಮದ ದಾಖಲೆ: ಗಾಂಧೀಜಿಯವರು ತಲೆ ಮೇಲೆ ಮಲ ಹೊರುವುದನ್ನು “ಅಮಾನವೀಯ’ (ಇನ್‌ಹ್ಯೂಮನ್‌) ಎಂದು ಟೀಕಿಸಿದ್ದರು. ಪೇಜಾವರ ಶ್ರೀಗಳ ಪರ್ಯಾಯದ ವೇಳೆ 1969ರಲ್ಲಿ ಡಾ|ವಿ. ಎಸ್‌.ಆಚಾರ್ಯ ಉಡುಪಿ ಪುರಸಭೆಯ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದ ಅವಧಿಯಲ್ಲಿ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದುಗೊಳಿಸಿದರು. ಇಂತಹ ನಿರ್ಣಯ ತಳೆದ ದೇಶದ ಪ್ರಥಮ ಪುರಸಭೆ ಉಡುಪಿ. ಮಲ ಹೊರುವವರನ್ನು “ಭಂಗಿ’ ಎಂದು ಕರೆಯುತ್ತಿದ್ದರು. ಒಳಚರಂಡಿ ವ್ಯವಸ್ಥೆ ಜಾರಿಯಾದದ್ದು, “ಪೌರಕಾರ್ಮಿಕರು’ ಎಂದು ಹೆಸರಿಸಿದ್ದು ಈಗ ಇತಿಹಾಸ.

ಗೇಣಿದಾರನಿಗೆ ಅಭಯ: ಪೇಜಾವರ ಶ್ರೀಗಳ ಪರ್ಯಾಯ ಕಾಲದ ಅದೊಂದು ದಿನ ಬಡ ರೈತನೊಬ್ಬ ಕಣ್ಣೀರು ಸುರಿಸುತ್ತಾ ತಲೆಬಾಗಿದ. “ಸ್ವಾಮಿ ನಾನು ತಮ್ಮ ಮಠದ ಭೂಮಿಯಲ್ಲಿ ಬಹುಕಾಲದಿಂದಲೂ ಜೀವಿಸುತ್ತಿದ್ದೇನೆ. ಹಿಂದಿನ ಗೇಣಿ ಸಂದಾಯ ಮಾಡಲಾಗಲಿಲ್ಲ. ಮನೆ ಬಿಟ್ಟು ತೆರಳುವಂತೆ ಮಠದ ಆಜ್ಞೆಯಾಗಿದೆ. ಸಂಸಾರವು ಬೀದಿಪಾಲಾಗುತ್ತಿದೆ’ ಎಂದ. ಶ್ರೀಗಳು ಯೋಚನಾಕ್ರಾಂತರಾದರು. “ಬಡ ಗೇಣಿದಾರರಿಗೆ ಭದ್ರತೆ ಇಲ್ಲವೆ? ಇದು ನ್ಯಾಯವಲ್ಲ’ ಎಂದು ಯೋಚಿಸಿ ಅವನಿಗೆ ಅಭಯವನ್ನಿತ್ತರು. ರಾಜಕೀಯ ಧುರೀಣರನ್ನು ಕರೆಸಿ ಭೂಸುಧಾರಣೆಯ ಬಗ್ಗೆ ವಿಚಾರಿಸಿದರು. “”ನೀವು ಬೇಗನೆ ಅದನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ನಾನೇ ಮೊದಲಾಗಿ ಮಠದ ರೈತರಿಗೆ ಮಠದ ಭೂಮಿಯನ್ನು ಮೂಲಗೇಣಿಗೆ ಕೊಡುತ್ತೇನೆ” ಎಂದರು.

Advertisement

ದಲಿತರ ಕೇರಿಗೆ ಭೇಟಿ: ಶ್ರೀ ವಿಶ್ವೇಶತೀರ್ಥರು ದಲಿತರ ಕೇರಿಗೆ ಭೇಟಿ ನೀಡಿದ ಘಟನೆಯ ಪರಿಣಾಮವನ್ನು ಪಾ.ವೆಂ. ಆಚಾರ್ಯರು ಹೀಗೆ ಗುರುತಿಸಿದ್ದಾರೆ- ಶ್ರೀಪಾದರ ಈ ಹರಿಜನ ಸಂಪರ್ಕದ ಕಾರ್ಯ ಎರಡು ರೀತಿಗಳಿಂದ ಪ್ರಭಾವ ಬೀರುತ್ತಿದೆ. 1) ಬಗೆಬಗೆಯ ಸಂಕಟ, ಅವಮಾನಗಳಿಂದ ಪೀಡಿತರಾದ ದಲಿತರಲ್ಲಿ ಹಿಂದೂ ಧರ್ಮದಲ್ಲಿ ತಮಗೆ ಇನ್ನೂ ಗೌರವದ ಸ್ಥಾನ ಸಂಪಾದನೆ ಸಾಧ್ಯವಿದೆ. ಆತ್ಮಗೌರವವನ್ನು ಸಂಪಾದಿಸುವುದಕ್ಕೆ ತಮ್ಮ ಮಾತೃಧರ್ಮದ ಬೇರುಗಳನ್ನು ಕತ್ತರಿಸಿಕೊಳ್ಳಬೇಕಾಗಿಲ್ಲ ಎಂಬ ಆಶೋದಯವನ್ನುಂಟುಮಾಡಿದೆ. ಇನ್ನೊಂದೆಡೆ ಸವರ್ಣೀಯ ಹಿಂದೂಗಳಲ್ಲಿ ಹರಿಜನ ಸಮಸ್ಯೆಯ ತುರ್ತನ್ನು ಅದು ತೀವ್ರವಾಗಿ ಬಿಂಬಿಸುತ್ತಿದೆ. ಈ ದೀನ ದಲಿತರನ್ನು ಅಲಕ್ಷಿಸುತ್ತಲೇ ಇದ್ದರೆ ಇಡೀ ಹಿಂದೂ ಸಮಾಜವೇ ಹೇಗೆ ವಿಸ್ತರಿಸಲಾರದ ಅಪಾಯಕ್ಕೆ ಗುರಿಯಾದೀತೆಂಬುದನ್ನು ಸವರ್ಣೀಯರ ಗಮನಕ್ಕೆ ಅದು ತಂದುಕೊಡುತ್ತಿದೆ.

ಗೋ ಪ್ರೇಮದ ಈ ಪರಿ: 1985ನೇ ಇಸವಿ. ರಾಜ್ಯದಲ್ಲೆಲ್ಲ ಭೀಕರ ಬರ. ಶ್ರೀಪಾದರು ಆಗ ಪರ್ಯಾಯ ಪಟ್ಟದಲ್ಲಿ ಆಸೀನರಾಗಿದ್ದರು. ಪರ್ಯಾಯ ಪೀಠದಲ್ಲಿರುವುದರಿಂದ ಅವರು ಪ್ರವಾಸ, ಪಾದಯಾತ್ರೆ, ನಿಧಿ ಸಂಗ್ರಹ ಮಾಡುವಂತಿರಲಿಲ್ಲ. ಅವರು ತಮ್ಮ ವಿವಶತೆಯನ್ನು ತಿಳಿಸಿ, 10 ಸಾವಿರ ರೂ.ಗಳನ್ನು ನೀಡಿದರು. ಗೋರಕ್ಷಾ ಕೇಂದ್ರ ನಡೆಸಲು ಒಂದು ದಿನಕ್ಕೂ ಸಾಲದ ಮೊತ್ತವಿದು. ಆದರೆ ವಿಹಿಂಪಕ್ಕೆ ಇದು ಮೂಲಧನವಾಯಿತು. ರೋಣ ತಾಲೂಕು ಕುರುವಿನಕೊಪ್ಪದಲ್ಲಿ ಮೊದಲನೆಯ ಗೋರಕ್ಷಾ ಕೇಂದ್ರವನ್ನು ಆರಂಭಿಸಲಾಯಿತು. ಮುಂದೆ ರಾಜ್ಯದಲ್ಲೆಲ್ಲ 13 ಗೋರಕ್ಷಾ ಕೇಂದ್ರಗಳನ್ನೂ 20 ಗಂಜಿಕೇಂದ್ರಗಳನ್ನೂ ಆರಂಭಿಸಲಾಯಿತು. ಅನೇಕ ದಾನಿಗಳು ಮುಂದೆ ಬಂದರು. ಪಾದಯಾತ್ರೆಗಳ ಮೂಲಕ ಲಕ್ಷಾವಧಿ ನಿಧಿ ಸಂಗ್ರಹಿಸಲಾಯಿತು.

ಯಾವ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತೇವೋ ಅವೆಲ್ಲವೂ ಮೋಕ್ಷಕ್ಕೆ ಪೂರಕ.
-ಶ್ರೀ ವಿಶ್ವೇಶ ತೀರ್ಥರು

Advertisement

Udayavani is now on Telegram. Click here to join our channel and stay updated with the latest news.

Next