Advertisement

ಸಾಮಾಜಿಕ ಒಗ್ಗಟ್ಟೇ ನಮ್ಮ ಮೂಲಮಂತ್ರ: ಸಂತೋಷ್‌ ಶೆಟ್ಟಿ ಪುಣೆ

05:40 PM Nov 19, 2019 | Team Udayavani |

ಪುಣೆ, ನ. 18: ಇಂದು ನಮ್ಮ ಸಂಘದ 39ನೇ ವಾರ್ಷಿಕ ಮಹಾಸಭೆಯಲ್ಲಿ ನಾವೆಲ್ಲರೂ ಸೇರಿಕೊಂಡು ಸಂಘದ ಅಭ್ಯುದಯದ ಬಗ್ಗೆ ಚಿಂತಿಸಬೇಕಾಗಿದೆ. ಇಂದಿನ ಸಭೆ ವಿಶೇಷವಾಗಿ ವೈಚಾರಿಕತೆಯ ಮಂಥನದ ಸಭೆಯಾಗಿದೆ. ನಾವು ಹಿಂದೆ ಯಾವ ರೀತಿಯಲ್ಲಿದ್ದೆವು ಇಂದು ನಾವು ಹೇಗಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ಹೇಗಿರಬೇಕಾಗಿದೆ, ನಾವು ನಡೆದ ಹಾದಿಯ ಬಗ್ಗೆ ಸ್ಪಷ್ಟ ಕಲ್ಪನೆ ನಮಗಿರಬೇಕಾಗಿದೆ. ಯಾವ ರೀತಿ ನಮ್ಮ ದೇಗುಲವೆಂಬ ಭವ್ಯ ಭವನ ನಿರ್ಮಾಣಗೊಂಡಿದೆ ಹಾಗೂ ಮುಂದಿನ ದಿನಗಳಲ್ಲಿ ನಾವು ಎದುರಿಸುವ ಸವಾಲುಗಳ ಬಗ್ಗೆಯೂ ನಮಗೆ ಚಿಂತಿಸಬೇಕಾಗಿದೆ.

Advertisement

ಹೃದಯ ವೈಶಾಲ್ಯದ ಸಮಾಜದ ಬಗ್ಗೆ ಅತೀವ ಭಾವೈಕ್ಯತೆ ಹೊಂದಿರುವ ಮಹಾದಾನಿಗಳ ಸಹಕಾರದಿಂದ ಈ ಭವ್ಯ ನಿರ್ಮಾಣಗೊಂಡಿದೆ. ಅದನ್ನು ನಾವು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಸಂಘವನ್ನು ಇನ್ನಷ್ಟು ಬಲಿಷ್ಠವಾಗಿಸಲು, ಸಮಾಜವನ್ನು ಒಗ್ಗಟ್ಟಾಗಿಸಲು ನಾವು ಶ್ರಮಿಸುವ ಅಗತ್ಯತೆಯಿದೆ. ಸಾಮಾಜಿಕ ಏಕತೆಯೇ ನಮ್ಮೆಲ್ಲರ ಮೂಲಮಂತ್ರವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ಅಭಿಪ್ರಾಯಪಟ್ಟರು.

ಅವರು ನ. 17ರಂದು ಪುಣೆ ಬಂಟರ ಭವನದ ಸಭಾಂಗಣದಲ್ಲಿ ನಡೆದ ಪುಣೆ ಬಂಟರ ಸಂಘದ 39ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪುಣೆ ಬಂಟರ ಸಂಘ ಪ್ರತಿಷ್ಠಿತ ಸಂಘವೆಂಬ ನೆಲೆಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವುದು ನಮಗೆಲ್ಲರಿಗೂ ಅಭಿಮಾನದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಂಘವನ್ನು ಬೆಳೆಸುವಲ್ಲಿ ನಮ್ಮ ಹಿರಿಯರೂ ಸೇರಿದಂತೆ ನಾವೆಲ್ಲರೂ ಅಪಾರವಾಗಿ ಶ್ರಮಿಸಿದ್ದೇವೆ. ನಮ್ಮ ಸಂಘ ಭವಿಷ್ಯದಲ್ಲಿ ಸಮಾಜದ ಹಿತವನ್ನು ಬಯಸಿ ಮುನ್ನಡೆಯುವಲ್ಲಿ ಹಲವಾರು ರೂಪು-ರೇಷೆಗಳನ್ನು ಸಿದ್ಧಪಡಿಸಿದ್ದು ಅದರಲ್ಲೊಂದು ಪ್ರಮುಖವಾಗಿ ಬಂಟ ಸೇವಾ ಗ್ರಾಮ ನಿರ್ಮಿಸುವುದಾಗಿದೆ. ಈ ಯೋಜನೆಗೆ ಸುಮಾರು 10 ಎಕರೆ ಸ್ಥಳಾವಕಾಶದ ಆವಶ್ಯಕತೆಯಿದ್ದು ಸಮಾಜದ ಮಹಾದಾನಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವ ಚಿಂತನೆ ನಡೆಯುತ್ತಿದೆ. ನಾವೆಲ್ಲರೂ ನಿಸ್ವಾರ್ಥಭಾವದಿಂದ ಸಂಘದಹಿತದೃಷ್ಟಿಯನ್ನು ಬಯಸಿ ಸಾಮಾಜಿಕ ಬದ್ಧತೆಯನ್ನು ರೂಢಿಸಿಕೊಂಡು ಸಮಾಜವನ್ನು ಸದೃಢವಾಗಿಸುವಲ್ಲಿ ತೊಡಗಿಸಿಕೊಳ್ಳೋಣ. ನಿಮ್ಮೆಲ್ಲರ ಸಹಕಾರ ಸಂಘದೊಂದಿಗೆ ನಿರಂತರವಾಗಿರಲಿ ಎಂದು ನುಡಿದರು.

ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿಯವರು ಮಾತನಾಡಿ, ನಾವೆಲ್ಲರೂ ನಮ್ಮ ಸಮಾಜದ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡು ಏಕತೆಯೊಂದಿಗೆ ಸಂಘದ ಪ್ರತಿಯೊಂದು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿದೆ. ಬಂಟ ಸಮಾಜದ ಉದ್ಧಾರದ ಕಲ್ಪನೆಯನ್ನಿಟ್ಟುಕೊಂಡು ನಮ್ಮ ಸಂಘವನ್ನು ಇನ್ನಷ್ಟು ಪ್ರಗತಿ ಪಥದಲ್ಲಿ ಕೊಂಡೊಯ್ದು ಆದರ್ಶ ಸಂಘವಾಗಿಸುವಲ್ಲಿ ಶ್ರಮಿಸೋಣ ಎಂದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸತೀಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಯುವ ವಿಭಾಗದ ಯಶ್‌ರಾಜ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಉದಯ್‌ ಶೆಟ್ಟಿ, ಉತ್ತರ ಪ್ರಾದೇಶಿಕ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿಯವರು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯಿತ್ತರು. ಕಳೆದ ವರ್ಷಾವಧಿಯಲ್ಲಿ ಅಗಲಿದ ಸಮಾಜ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ವಾರ್ಷಿಕ ವರದಿಯನ್ನು ಮಂಡಿಸಿದರು.

Advertisement

ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ ವಾರ್ಷಿಕ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟು ಅನುಮೋದನೆ ಪಡೆದುಕೊಂಡರು. ಲೆಕ್ಕಪರಿಶೋಧಕರಾದ ಸಿಎ ದಯಾನಂದ್‌ ಶೆಟ್ಟಿಯವರನ್ನು ಮುಂದಿನ ವಾರ್ಷಿಕ ಅವಧಿಗೆ ಲೆಕ್ಕಪರಿಶೋಧಕರನ್ನಾಗಿ ಸರ್ವಾನುಮತದಿಂದ ಮರು ನೇಮಕಗೊಳಿಸಲಾಯಿತು.

ಈ ಸಂದರ್ಭ ಸಂಘದ ತ್ತೈಮಾಸಿಕ ಪತ್ರಿಕೆ ಕಲ್ಪವೃಕ್ಷದ 3ನೇ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು. ಸಭೆಯಲ್ಲಿ ವಿಕ್ರಮ್‌ ಎಸ್‌. ಶೆಟ್ಟಿ ತಮ್ಮ ಸಲಹೆಗಳನ್ನು ಸಭೆಯ ಮುಂದಿಟ್ಟರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು. ಸಂತೋಷ್‌ ಶೆಟ್ಟಿಯವರು ಸ್ವಾಗತಿಸಿ, ಅಜಿತ್‌ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next