Advertisement

ಜಿಲ್ಲೆಯಲ್ಲಿ ಹಳ್ಳಹಿಡಿತೇ ಸಾಮಾಜಿಕ ಭದ್ರತಾ ಯೋಜನೆಗಳು?

06:25 AM Jul 02, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಮಳೆ, ಬೆಳೆ ಕೊರತೆಯಿಂದ ರೈತಾಪಿ ಜನ ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಸಾಮಾಜಿಕ ಭದ್ರತಾ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳದೇ ಫ‌ಲಾನುಭವಿಗಳು ಪರಿಹಾರಕ್ಕಾಗಿ ತಿಂಗಳಾನುಗಟ್ಟಲೇ ಚಾತಕಪಕ್ಷಿಗಳಂತೆ ಸರ್ಕಾರಿ ಕಚೇರಿಗಳನ್ನು ಅಲೆದಾಡುವ ದುಸ್ಥಿತಿ ಎದುರಾಗಿರುವುದು ಜಿಲ್ಲಾಡಳಿತದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

Advertisement

ಸಮರ್ಪಕ ಅನುಷ್ಠಾನ ಇಲ್ಲ: ರಾಜ್ಯದಲ್ಲಿ ಒಂದೆಡೆ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸಿ ಅರ್ಹರಿಗೆ ಸ್ಥಳದಲ್ಲಿಯೇ ತಲುಪಿಸುವ ಕಾರ್ಯ ನಡೆಸುತ್ತಿದ್ದರೂ ಜಿಲ್ಲೆಯಲ್ಲಿ ಮಾತ್ರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದು ಎದ್ದು ಕಾಣುತ್ತಿದೆ.

ಅಂಕಿ ಅಂಶದಿಂದ ಬಯಲು: ಜೀವನದ ಸಂಧ್ಯಾಕಾಲದಲ್ಲಿ ವಯೋ ವೃದ್ಧರ ಕೈ ಹಿಡಿಯುವ ವೃದ್ಧಾಪ್ಯ ವೇತನ ಸಮರ್ಪಕವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಸಾರ್ವಜನಿಕರ ಆರೋಪವು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಇದೀಗ ಬಡವರ ಪಾಲಿಗೆ ಸಂಕಷ್ಟದಲ್ಲಿ ಕೈ ಹಿಡಿಯುವ ಅಂತ್ಯ ಸಂಸ್ಕಾರ ಯೋಜನೆ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳು ಜಿಲ್ಲೆಯಲ್ಲಿ ಅಧಿಕಾರಶಾಹಿಯ ನಿರ್ಲಕ್ಷ್ಯಕ್ಕೆ ಒಳಗಾಗಿ ಹಳ್ಳ ಹಿಡಿದಿರುವುದು ಜಿಲ್ಲಾಡಳಿತದ ಅಂಕಿ, ಅಂಶಗಳಿಂದಲೇ ಬಯಲಾಗಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ: ಬಡವರ ಕುಟುಂಬದಲ್ಲಿ ಯಾರದಾರೂ ಆಕಸ್ಮಿಕವಾಗಿ ನಿಧನ ಹೊಂದಿದರೆ ಆ ಕುಟುಂಬಕ್ಕೆ ಅಂತ್ಯಸಂಸ್ಕಾರ ನಡೆಸಲು ಸರ್ಕಾರ 1 ಸಾವಿರ ರೂ. ನೀಡುತ್ತದೆ. ಜೊತೆಗೆ ಮನೆಯ ಯಜಮಾನ ನಿಧನ ಹೊಂದಿದರೆ ಆ ಕುಟುಂಬಕ್ಕೆ ರಾಷ್ಟ್ರೀಯ ಕುಟುಂಬ ಯೋಜನೆಯಡಿ 25 ಸಾವಿರದಿಂದ 50 ಸಾವಿರ ರೂ.ವರೆಗೂ ಪರಿಹಾರ ನೀಡಲಾಗುತ್ತದೆ.

ಆದರೆ ಜಿಲ್ಲೆಯಲ್ಲಿ ಈ ಎರಡು ಯೋಜನೆಗಳು ಮಂದಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವುದು ಫ‌ಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪರಿಹಾರ ಕೋರಿ ಅರ್ಜಿ ಹಾಕಿದರೂ ತಕ್ಷಣಕ್ಕೆ ಪರಿಹಾರ ಸಿಗದೇ ತಿಂಗಳುಗಳು ಕಳೆಯುತ್ತಿರುವುದು ಮಾತ್ರ ಫ‌ಲಾನುಭವಿಗಳ ಪಾಲಿಗೆ ಯೋಜನೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

Advertisement

231 ಅರ್ಜಿ ಬಾಕಿ: ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಯೋಜನೆಯಡಿ ಜಿಲ್ಲಾಡಳಿತಕ್ಕೆ 335 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಆದರೆ ಆ ಪೈಕಿ ಕೇವಲ 101 ಮಂದಿಗೆ ಮಾತ್ರ ಯೋಜನೆಯ ಲಾಭ ಸಿಕ್ಕಿರುವುದು ಬಿಟ್ಟರೆ ಉಳಿದ 231 ಮಂದಿಗೆ ಯೋಜನೆಯ ಲಾಭ ಸಿಗದೇ ನಿತ್ಯ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಇನ್ನೂ ಜೂನ್‌ ತಿಂಗಳಲ್ಲಿಯೇ ಅಂತ್ಯಸಂಸ್ಕಾರ ಯೋಜನೆಗೆ 123 ಅರ್ಜಿಗಳು ಸಲ್ಲಿಕೆಯಾಗಿವೆ. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಒಟ್ಟು 183 ಅರ್ಜಿ ಸಲ್ಲಿಕೆಯಾಗಿದ್ದರೂ ಇದುವರೆಗೂ ಕೇವಲ 32 ಮಂದಿಗೆ ಮಾತ್ರ ಪರಿಹಾರ ಸಿಕ್ಕಿದ್ದು, ಇನ್ನೂ 149 ಅರ್ಜಿಗಳು ಹಾಗೆ ದೂಳು ತಿನ್ನುತ್ತಿವೆ.

ಜಿಲ್ಲೆಯಲ್ಲಿ ವೃದ್ಧಾಪ್ಯ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೊಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಇನ್ನೂ 531 ಅರ್ಜಿಗಳು ವಿಲೇವಾರಿಯಾಗದೇ ಉಳಿದುಕೊಂಡಿವೆ.

ಜನಸ್ಪಂದನಾ ಸಭೆ ಮರೆತ ಶಾಸಕರು: ಜಿಲ್ಲೆಯ ಶಾಸಕರು ತಿಂಗಳಿಗೊಮ್ಮೆ ಶನಿವಾರದಂದು ಹೋಬಳಿ ಮಟ್ಟದಲ್ಲಿ ಜನ ಸ್ಪಂದನಾ ಸಭೆಗಳನ್ನು ಆಯೋಜಿಸಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಸೂಚಿಸುತ್ತಿದ್ದರು.

ಸ್ಪಂದನಾ ಸಭೆಗೆ ಪದೇ ಪದೆ ಫ‌ಲಾನುಭವಿಗಳು ಬಂದು ಶಾಸಕರ ಮುಂದೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ದೂರು ಹೇಳುತ್ತಿದ್ದರಿಂದ ಅಧಿಕಾರಿಗಳು ಜನಸ್ಪಂದನಾ ಸಭೆಗಳಿಗೆ ಭಯ ಬಿದ್ದು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ಸಮರ್ಪಕವಾಗ ಅನುಷ್ಠಾನಗೊಳಿಸುತ್ತಿದ್ದರು.

ಆದರೆ ಜಿಲ್ಲೆಯ ಶಾಸಕರು ಜನಸ್ಪಂದನಾ ಸಭೆಗಳನ್ನು ಸಂಪೂರ್ಣ ಮರೆತಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ ಆರಂಭದಲ್ಲಿ 2-3 ಸಭೆಗಳನ್ನು ನಡೆಸಿದ್ದು ಬಿಟ್ಟರೆ ಮತ್ತೆ ಮರೆತೇ ಹೋಗಿದ್ದಾರೆ. ಜಿಲ್ಲೆಯ ಯಾವ ಶಾಸಕರು ಕೂಡ ಹೋಬಳಿ ಮಟ್ಟದ ಜನಸ್ಪಂದನಾ ಸಭೆಗಳನ್ನು ಆಯೋಜಿಸುತ್ತಿಲ್ಲ.

ಜುಲೈ 5 ರಿಂದ ಸಚಿವರ ಜನಸ್ಪಂದನಾ ಸಭೆ: ಸದ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಹೆಚ್‌.ಶಿವಶಂಕರರೆಡ್ಡಿ ಜುಲೈ 5 ರಿಂದ ಜಿಲ್ಲೆಯಲ್ಲಿ ಜನಸ್ಪಂದನಾ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಮೊದಲ ಬಾರಿಗೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದಾರೆ.

ಸಚಿವರು ಜಿಲ್ಲೆಯ ಜನಸಾಮಾನ್ಯರು ಅದರಲ್ಲೂ ಬಡವರಿಗೆ ಕೈಗೆಟುಕದೇ ದೂರು ಉಳಿದಿರುವ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಅನುಷ್ಠಾನದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ ದೊರಕಿಸಬೇಕಿದೆ. ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳಿಂದ ವಂಚಿತರಾಗಿರುವರನ್ನು ಗುರುತಿಸಿ ಅವರಿಗೂ ಸರ್ಕಾರ ಸೌಲಭ್ಯಗಳನ್ನು ದೊರೆಯುವ ದಿಸೆಯಲ್ಲಿ ಅರಿವು ಮೂಡಿಸುವ ಕೆಲಸವನ್ನು ಜಿಲ್ಲಾಡಳಿತದಿಂದ ಮಾಡಬೇಕಿದೆ.

ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಮತ್ತಿತರ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಯಾವುದೇ ವ್ಯಕ್ತಿ ಈ ಯೋಜನೆಗಳಲ್ಲಿ ಪರಿಹಾರಕ್ಕೆ ಅರ್ಜಿ ಹಾಕಿದ ಕೂಡಲೇ ಪರಿಹಾರ ದೊರಕಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳಿಗೆ ಒತ್ತು ಕೊಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುತೇವೆ.
-ಡಾ.ಎನ್‌.ನಾಗಾಂಬಿಕಾದೇವಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next