Advertisement

ಶಿಕ್ಷಣ ದಿಂದ ಸಮಾಜ ಪ್ರಗತಿ ಸಾಧ್ಯ

04:01 PM Mar 05, 2018 | |

ಮಸ್ಕಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಂಜಾರ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಬಂಜಾರ ಸಮಾಜದವರು
ಮಕ್ಕಳನ್ನು ಕೂಲಿಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು. ಮಕ್ಕಳ ಭವಿಷ್ಯದ ಏಳಿಗೆಗೆ ಮಹತ್ವ ಕೊಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಮಾಜಿ ಸಚಿವ ರೇವು ನಾಯ್ಕ ಬೆಳಮಗಿ ಹೇಳಿದರು.

Advertisement

ಆಲ್‌ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದಿಂದ ಸಂತ ಶ್ರೀ ಸೇವಾಲಾಲ್‌ ಮಹಾರಾಜರ 279ನೇ
ಜಯಂತ್ಯುತ್ಸವ ಪ್ರಯುಕ್ತ ರವಿವಾರ ಇಲ್ಲಿನ ಪೊಲೀಸ್‌ ಠಾಣೆ ಪಕ್ಕದಲ್ಲಿನ ಬಯಲಿನಲ್ಲಿ ನಡೆದ ಬಂಜಾರ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂತ ಸೇವಾಲಾಲ್‌ರು ಬಂಜಾರ ಸಮಾಜದ ವಿಶ್ವಗುರು. ಅವರು ಶ್ರಮಜೀವಿಗಳಾಗಿದ್ದರು. ಬಡ ಸಮಾಜವಾದ ಬಂಜಾರರ ಏಳಿಗೆಗೆ ಹಗಲಿರುಳು ಶ್ರಮಿಸಿದವರು. ಅವರ ಪವಾಡ ಅಪಾರ. ಬಂಜಾರ ಸಮಾಜ ಶೈಕ್ಷಣಿಕ ಪ್ರಗತಿ ಸಾಧಿಸಿದಲ್ಲಿ ಸಮಾಜದ ಅಭಿವೃದ್ಧಿ ಹೊಂದಲು ಸಹಕಾರಿ ಆಗುತ್ತದೆ ಎಂಬುದು ಅವರ ಉದ್ದೇಶವಾಗಿತ್ತು. ಆದ್ದರಿಂದ ಬಂಜಾರ ಸಮಾಜದವರು ಗುರುಗಳ ಆಶಯದಂತೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿ, ರಾಜ್ಯ ಸರಕಾರ ಸಂತ ಸೇವಾಲಾಲ್‌ರ ಜಯಂತಿ ಆಚರಣೆಗೆ ತಂದಿದ್ದು ಸಂತಸದ ಸಂಗತಿ. ಸಂತ ಸೇವಾಲಾಲ್‌ರ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಲು ಅವರ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನ ಕೊಪ್ಪವನ್ನು ಒಂದು ಯಾತ್ರಾ ಸ್ಥಳವನ್ನಾಗಿಸಿದೆ. ಸೇವಾಲಾಲ್‌ರ ಕೊಡುಗೆ ಬಂಜಾರ ಸಮಾಜಕ್ಕೆ ಅಪಾರವಾಗಿದ್ದು, ಅವರ ತತ್ವ, ಸಿದ್ಧಾಂತಗಳನ್ನು ಎಲ್ಲ ಸಮಾಜದವರು ಪಾಲಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಬಂಜಾರ ಸಮಾಜದವರು ಸರಕಾರದಿಂದ ದೂರಕುವ ಎಲ್ಲ ರೀತಿಯ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಬೇಕು. ಭಟ್ಟಿ ಸಾರಾಯಿ ಪಿಡುಗು ಬಂಜಾರ ಸಮಾಜಕ್ಕೆ ಅಂಟಿಕೊಂಡ ಕಳಂಕವಾಗಿದೆ. ಇದರಿಂದ ತಾಂಡಾಗಳಲ್ಲಿನ ಶಾಂತಿ,ನೆಮ್ಮದಿ ಹಾಳಾಗಿ ಹೋಗುತ್ತದೆ. ರಾಜ್ಯದಲ್ಲಿನ ಎಲ್ಲ ತಾಂಡಾಗಳು ಸಾರಾಯಿ ಮುಕ್ತವಾಗಬೇಕು ಎಂದರು.

Advertisement

ಮಸ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ 30 ತಾಂಡಾಗಳು ಬರುತ್ತಿದ್ದು, ಈಗಾಗಲೇ 15 ತಾಂಡಾಗಳಲ್ಲಿ ಸಂತ ಸೇವಾಲಾಲ್‌ರ ಭವನ ನಿರ್ಮಿಸಲಾಗಿದೆ. ತಾಂಡಾಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿದೆ. ಉಳಿದ ತಾಂಡಾಗಳಲ್ಲಿಯೂ ಬಂಜಾರ ಸಮಾಜದ ಸೇವಲಾಲ್‌ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂಜಾರ ಸಮಾಜ ಜಿಲ್ಲಾಧ್ಯಕ್ಷ ಹರೀಶಚಂದ್ರ ವಕೀಲ ಪ್ರಾಸ್ತಾವಿಕ ಮಾತನಾಡಿ, ಸಮಾಜ ಬಾಂಧವರು ದುಶ್ಚಟದಿಂದ ದೂರವಿರಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ತನ್ಮೂಲಕ ದೇಶ ಕಟ್ಟುವಲ್ಲಿ ಕೊಡುಗೆ ನೀಡಬೇಕು ಎಂದರು. ಬಿಜಿಪಿ ಮುಖಂಡ ಆರ್‌. ಬಸನಗೌಡ ತುರುವಿಹಾಳ, ಜೆಡಿಎಸ್‌ ಮುಖಂಡ ರಾಜಾ ಸೋಮನಾಥ ನಾಯ್ಕ, ರಾಜ್ಯ ಬಂಜಾರ ಸಮಾಜದ ಕಾರ್ಯದರ್ಶಿ ಪಾಂಡುರಂಗ ಪಮ್ಮಾರ ಮಾತನಾಡಿದರು.

ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಗೈರಾಗಿದ್ದರೂ ಅವರು ಕಳುಹಿಸಿದ್ದ ಅಭಿನಂದನಾ ಸಂದೇಶವನ್ನು ಓದಿ ಸಭೆಗೆ ತಿಳಿಸಲಾಯಿತು. ಲಿಂಗಸುಗೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗಬ್ಬೂರಪಾಡಿಯ ಬಳಿರಾಮ್‌ ಮಹಾರಾಜ, ನೀಲಾ ನಗರದ ಕುಮಾರ ಮಹಾರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಐಬಿಎಸ್‌ಎಸ್‌ ರಾಜ್ಯಾಧ್ಯಕ್ಷ ಸುಭಾಷ ರಾಥೋಡ್‌, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ್‌, ಅಂದಾನೆಪ್ಪ ಗುಂಡಳ್ಳಿ, ಬಸವಂತರಾಯ ಕುರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಹಾಗೂ ಗಣ್ಯರು, ಬಂಜಾರ ಸಮಾಜದ ಸಾವಿರಾರು ಜನ ಭಾಗವಹಿಸಿದ್ದರು.

ವೈಭವದ ಮೆರವಣಿಗೆ
ಮಸ್ಕಿ: ಆಲ್‌ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದಿಂದ ಸಂತ ಶ್ರೀ ಸೇವಾಲಾಲ್‌ ಮಹಾರಾಜರ 279ನೇ ಜಯಂತ್ಯುತ್ಸವ ಪ್ರಯುಕ್ತ ರವಿವಾರ ಹಮ್ಮಿಕೊಂಡ ಬಂಜಾರ ಉತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂತ ಸೇವಾಲಾಲ್‌ರ ಭಾವಚಿತ್ರ ಮೆರವಣಿಗೆಯನ್ನು ವೈಭವದಿಂದ ನಡೆಸಲಾಯಿತು.

ಪೊಲೀಸ್‌ ಠಾಣೆ ಪಕ್ಕದಲ್ಲಿನ ಸಮಾವೇಶದ ಸ್ಥಳದಿಂದ ಆರಂಭವಾದ ಸಂತ ಸೇವಾಲಾಲ್‌ರ ಭಾವಚಿತ್ರ ಮೆರವಣಿಗೆಯಲ್ಲಿ ಬಂಜಾರ ಸಮಾಜದ ನೂರಾರು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಕುಂಭಗಳನ್ನು ಹೊತ್ತು, ಕಳಶಗಳನ್ನು ಹಿಡಿದುಕೊಂಡು ಸಾಗಿದರು. ತೀಜ್‌, ಡೊಳ್ಳು, ಭಜನೆ, ವೀರಗಾಸೆ ನೃತ್ಯ ಮುಂತಾದ ವಾದ್ಯ ವೈಭವದೊಂದಿಗೆ ನಡೆದ ಮೆರವಣಿಗೆ ಕನಕ ವೃತ್ತ, ತೇರ ಬಜಾರ, ದೈವದಕಟ್ಟೆ, ಡಾ| ಖಲೀಲ್‌ ವೃತ್ತ, ಅಗಸಿ, ಅಶೋಕ ವೃತ್ತ, ಹಳೆ ಬಸ್‌ ನಿಲ್ದಾಣ ಮಾರ್ಗವಾಗಿ ಮರಳಿ ಸಮಾವೇಶದ ಸ್ಥಳಕ್ಕೆ ಆಗಮಿಸಿತು.

ಇದೇ ವೇಳೆ ಬಂಜಾರ ಸಮಾಜದ ಧರ್ಮಗುರುಗಳನ್ನು ಸಾರೋಟದಲ್ಲಿ ಸಮಾವೇಶದ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಬಂಜಾರ ಸಮಾಜದ ಯುವಕರು, ಯುವತಿಯರು, ಮಹಿಳೆಯರು ಲಂಬಾಣಿ ಪದಗಳನ್ನು ಹಾಡುತ್ತ, ಸಾಂಪ್ರದಾಯಿಕ ನೃತ್ಯ ಮಾಡುತ್ತ ಮೆರವಣಿಗೆಯ ಮೆರಗು ಹೆಚ್ಚಿಸಿದ್ದರು. ಹೈದ್ರಾಬಾದನ ಬಂಜಾರ ಕಲಾ ತಂಡ ಬಂಜಾರ ಸಮಾಜದ
ಸಂಪ್ರಾದಾಯಿಕ ಹಾಡುಗಳನ್ನು ಹಾಡುತ್ತಾ, ನೃತ್ಯ ಪ್ರದರ್ಶಿಸಿದರು.

ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಹರೀಶಚಂದ್ರ ಬಿ.ರಾಠೊಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ ಅಂತರಗಂಗಿ, ಅಮರೇಶ ಅಡವಿಬಾವಿ ತಾಂಡಾ, ಭೀಮೇಶಪ್ಪ ಪೂಜಾರಿ ಹಡಗಲಿ ತಾಂಡಾ, ಹನುಮಂತ ರಾಠೊಡ, ಶಿವಾನಂದ, ದೇವಣ್ಣ ಮಸ್ಕಿ, ತಿಪ್ಪಣ್ಣ ರಾಠೊಡ, ಕೃಷ್ಣಪ್ಪ ಮಸ್ಕಿತಾಂಡಾ, ಉಮಾಪತಿ ಮಾರಲದಿನ್ನಿ ತಾಂಡಾ, ವಿಠಲ್‌ ಡಿಸಿ, ಶ್ರೀನಿವಾಸ ಚೌಹಾಣ, ಲಕ್ಷ್ಮಣ ರಾಠೊಡ ಟೇಲರ್‌, ಲೋಕೇಶ ರಾಠೊಡ, ಚಂದ್ರು ಕಲಕ ಬೆಂಚಮರಡಿ ತಾಂಡಾ ಸೇರಿದಂತೆ ಯುವಕರು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next