Advertisement

Health: ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌

02:04 PM Oct 01, 2023 | Team Udayavani |

ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ ಎಂದರೇನು?

Advertisement

ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ ಅಥವಾ ಸೋಶಿಯಲ್‌ ಫೋಬಿಯಾ ಎಂದರೆ ಸಾಮಾಜಿಕ ಅಥವಾ ಪ್ರದರ್ಶನಕ್ಕೆ ಸಂಬಂಧಿಸಿದ ಸನ್ನಿವೇಶಗಳ ಬಗ್ಗೆ ಗಮನಾರ್ಹ ಮತ್ತು ಸತತವಾದ ಭಯ. ಸಾಮಾನ್ಯವಾಗಿ ಇದರ ಜತೆಗೆ ಬೆವರುವುದು, ಎದೆಬಡಿತ ಹೆಚ್ಚುವುದು, ಉಸಿರಾಟದ ಸಮಸ್ಯೆ ಮತ್ತು ನಡುಕಗಳಂತಹ ಲಕ್ಷಣಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಇದು ಶೇ. 2ರಿಂದ 3 ಜನರಲ್ಲಿ ಕಂಡುಬರುತ್ತದೆ. ಪ್ಯಾನಿಕ್‌ ಡಿಸಾರ್ಡರ್‌, ಖನ್ನತೆ, ಆ್ಯಂಕ್ಸಿಯಸ್‌ ಪರ್ಸನಾಲಿಟಿ ಎಂದು ತಪ್ಪಾಗಿ ರೋಗ ವಿಶ್ಲೇಷಣಗೊಳ್ಳುತ್ತದೆ. ಜತೆಗೆ ನಾಚಿಕೆ ಸ್ವಭಾವದ ಒಂದು ವಿಧ (ವಿಶೇಷವಾಗಿ ಮಹಿಳೆಯರಲ್ಲಿ) ಎಂದು ಭಾವಿಸಲ್ಪಡುತ್ತದೆ. ಕೆಲವೊಮ್ಮೆ ಈ ತೊಂದರೆ ಹೊಂದಿರುವ ಪುರುಷರು ಇದರಿಂದ ಪಾರಾಗಲು ಮದ್ಯಪಾನವನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ; ಮದ್ಯಪಾನ ಸಂಬಂಧಿ ತೊಂದರೆಗೆ ಸಹಾಯ ಪಡೆಯಲು ವೈದ್ಯರನ್ನು ಸಂಪರ್ಕಿಸಿದಾಗ ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ ಪತ್ತೆಯಾಗುತ್ತದೆ.

ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ ಉಂಟಾಗಲು ಕಾರಣಗಳೇನು?

ಸಾಮಾನ್ಯವಾಗಿ ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳು ಇರುವುದಿಲ್ಲ ಮತ್ತು ಇದು ಸಣ್ಣ ವಯಸ್ಸಿನಿಂದಲೇ ಆರಂಭವಾಗಿರುತ್ತದೆ. ಕೆಲವು ರೋಗಿಗಳು ಈ ತೊಂದರೆಯ ಆರಂಭದಲ್ಲಿ ಅನುಭವಿಸಿದ ಅವಮಾನಕರವಾದ/ ಮುಜುಗರಕಾರಿಯಾದ ಯಾವುದೋ ಒಂದು ನಿರ್ದಿಷ್ಟ ಸಾಮಾಜಿಕ ಘಟನೆಯನ್ನು ಸ್ಮರಿಸಿಕೊಳ್ಳುತ್ತಾರೆ.

ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ನ ಲಕ್ಷಣಗಳೇನು?

Advertisement

ಸಾಮಾಜಿಕ ಸನ್ನಿವೇಶಗಳಲ್ಲಿ ಆತಂಕ/ತೊಂದರೆ ­

ಜನರು ಗಮನಿಸುತ್ತಾರೆ/ ಅಭಿಪ್ರಾಯಕ್ಕೆ ಬರುತ್ತಾರೆ ಎಂಬ ಭಯ

ಏನೋ ತಪ್ಪಾದುದನ್ನು ಅಥವಾ ಅಸಂಬದ್ಧ ಮಾತನಾಡಿಬಿಡುವ ಭಯ ­

ಸಾಮಾಜಿಕ ಸಂದರ್ಭಗಳಲ್ಲಿ ಗಾಬರಿಗೊಳ್ಳುವುದು (10-20 ನಿಮಿಷಗಳ ಕಾಲ ಹೃದಯ ಬಡಿತ ವೇಗವಾಗುವುದು, ಬೆವರುವುದು, ಹಸ್ತಗಳು ತಣ್ಣಗಾಗುವುದು, ನಡುಕ, ಬಾಯಿ ಒಣಗುವುದು, ತಲೆ ತಿರುಗುವುದು, ತೀವ್ರವಾದ ಭಯ ಇತ್ಯಾದಿ) ­

ಚಡಪಡಿಕೆ, ಕಡಿಮೆ ಮಾತನಾಡುವುದು ಅಥವಾ ನಿಧಾನವಾಗಿ ಮಾತನಾಡುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡಲು ಕಷ್ಟಪಡುವುದು, ಮಾತುಕತೆಗಳನ್ನು ತಪ್ಪಿಸಿಕೊಳ್ಳುವುದು, ತರಗತಿ/ ಸಮಾರಂಭಗಳನ್ನು ತಪ್ಪಿಸಿಕೊಳ್ಳುವುದು, ಪಾರ್ಟಿ/ಸಮಾರಂಭಗಳಿಂದ ಬೇಗನೆ ಹೊರಟುಬಿಡುವುದು, ಏಕಾಂತದ ಹವ್ಯಾಸಗಳನ್ನು ಆರಿಸಿಕೊಳ್ಳುವುದು, ಆತಂಕದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಇದ್ದುಬಿಡುವುದನ್ನು ಬಯಸುವುದು ­

ಆತ್ಮವಿಶ್ವಾಸದ ಕೊರತೆ, ಋಣಾತ್ಮಕ ಯೋಚನೆಗಳು, ಸಾಮಾಜಿಕ ಕೌಶಲಗಳ ಕೊರತೆ

ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ಗೆ ಚಿಕಿತ್ಸೆ

ಥೆರಪಿ/ ಆಪ್ತ ಸಮಾಲೋಚನೆಯು ಪರಿಣಾಮಕಾರಿ ಚಿಕಿತ್ಸೆ. ಕಾಗ್ನಿಟಿವ್‌ ಥೆರಪಿಯಲ್ಲಿ ಸಾಮಾಜಿಕ ಕೌಶಲಗಳನ್ನು ಕಲಿಯುವುದು, ಯೋಚನಾ ಶೈಲಿಯನ್ನು ಮತ್ತು ಸಂದರ್ಭಗಳಿಗೆ ಪ್ರತಿಸ್ಪಂದಿಸುವ ಶೈಲಿಯನ್ನು ಬದಲಾಯಿಸುವುದು, ನಿಧಾನವಾಗಿ ಸಾಮಾಜಿಕ ಸಂದರ್ಭಗಳಿಗೆ ತೆರೆದುಕೊಳ್ಳುವಂತಹ ಚಟುವಟಿಕೆಗಳು ಸೇರಿರುತ್ತವೆ.

ಮಧ್ಯಮ ಪ್ರಮಾಣದಿಂದ ತೀವ್ರ ಪ್ರಮಾಣದ ವರೆಗಿನ ಆತಂಕ ಅಥವಾ ಖನ್ನತೆಯೂ ಜೊತೆಗಿದ್ದರೆ ಅಥವಾ ಥೆರಪಿಗಳು ಲಭ್ಯವಿಲ್ಲದೆ ಇದ್ದರೆ ಎಸ್‌ಎಸ್‌ ಆರ್‌ಐ (ಪರೋಕ್ಸೆಟಿನ್‌, ಎಸಿಟಲೊಪ್ರಾಮ್‌ ಇತ್ಯಾದಿ), ಪ್ರೊಪ್ರನೊಲೋಲ್‌ (ಪ್ರದರ್ಶನ, ಭಾಷಣ ಇತ್ಯಾದಿಗೆ ಮುಂಚಿತವಾಗಿ ತೆಗೆದುಕೊಳ್ಳುವುದು) ಮತ್ತು ಸ್ವಲ್ಪ ಅವಧಿಗೆ ಬೆಂಝೊಡಯಾಜೆಪೀನ್‌ ಗಳು (ಕ್ಲೊನಜೆಪಾಮ್‌, ಲೊರಜೆಪಾಮ್‌ ಇತ್ಯಾದಿ) ಔಷಧಗಳು ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ಗೆ ಚಿಕಿತ್ಸೆ ನೀಡಲು ನೆರವಾಗಬಲ್ಲವು.

ಸೂಕ್ತ ಚಿಕಿತ್ಸೆಯ ಮೂಲಕ ಈ ತೊಂದರೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು.

ಸೋಶಿಯಲ್‌ ಆ್ಯಂಕ್ಸೈಟಿ ಡಿಸಾರ್ಡರ್‌ ಹೊಂದಿರುವವರಿಗೆ ಅತೀ ಕಷ್ಟಕರ ಸನ್ನಿವೇಶಗಳು

1. ತುಂಬಾ ಜನರಿರುವ ಒಂದು ಕೊಠಡಿಯನ್ನು ಪ್ರವೇಶಿಸುವುದು

2. ಹೊಸಬರ ಜತೆಗೆ ಮಾತುಕತೆ ಆರಂಭಿಸುವುದು

3. ತರಗತಿ/ಸಮಾರಂಭ/ಪಾರ್ಟಿ/ ಸೌಹಾರ್ದ ಕೂಟ/ಸಭೆಗಳಲ್ಲಿ ಪಾಲ್ಗೊಳ್ಳುವುದು

4. ಇತರರ ಮುಂದೆ ಕೆಲಸ/ ಪ್ರಸೆಂಟೇಶನ್‌ ಪ್ರಸ್ತುತಪಡಿಸುವುದು

5. ಸಂಭಾಷಣೆ ನಡೆಸುವಾಗ ಎದುರಿಗಿರುವವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದು

6. ಗುಂಪು/ಗುಂಪು ಚರ್ಚೆ/ ಸಂದರ್ಶನಗಳಲ್ಲಿ ಮಾತನಾಡುವುದು

ಪ್ರಕರಣ ಉದಾಹರಣೆ

ಶಿಲ್ಪಾ ಅವರಿಗೆ ಈಗ 33 ವರ್ಷ ವಯಸ್ಸು. ತಾನು ಬಾಲ್ಯಕಾಲದಿಂದಲೂ “ನಾಚಿಕೆ’ ಸ್ವಭಾವದವಳಾಗಿದ್ದು, ಪ್ರೌಢಶಾಲಾ ದಿನಗಳಿಂದ ಸಾಮಾಜಿಕ ಸನ್ನಿವೇಶಗಳಲ್ಲಿ ಹೆದರಿಕೆ ಅನುಭವಿಸುತ್ತಿರುವುದಾಗಿ ಆಕೆ ಹೇಳುತ್ತಾರೆ. ಹೊಸಬರನ್ನು ಭೇಟಿಯಾಗುವ ಸಂದರ್ಭದಲ್ಲಿ ತಾನು ಒತ್ತಡ ಅನುಭವಿಸುತ್ತೇನೆ, ಅವರ ಜೊತೆಗೆ ಮಾತನಾಡುವಾಗ ಏನೋ ತಪ್ಪುತಪ್ಪು ಅಥವಾ ಅಸಂಬದ್ಧ ಮಾತು ಆಡಿ ಮುಜುಗರ ಅನುಭವಿಸುತ್ತೇನೆ ಎಂಬ ಭಾವನೆ ಅವರಿಗೆ.

ಇಂತಹ ಸನ್ನಿವೇಶಗಳಲ್ಲಿ ತನ್ನ ಧ್ವನಿ ನಡುಗು ವುದು ಅವರಿಗೆ ಅನುಭವಕ್ಕೆ ಬರುತ್ತದೆ, ಬೆವರುತ್ತದೆ ಮತ್ತು ತುಂಬಾ ತೊಂದರೆಯಾಗುತ್ತದೆ. ಕಳೆದ ಇಷ್ಟು ವರ್ಷಗಳಲ್ಲಿ ಇದೇ ಕಾರಣದಿಂದ ಅವರು ಹೊಸಬರ ಭೇಟಿಯನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಬಂದಿದ್ದಾರೆ.

ಮಕ್ಕಳ ಶಾಲೆಯಲ್ಲಿ ಶಿಕ್ಷಕ -ರಕ್ಷಕ ಸಭೆಗೆ ತನ್ನ ಬದಲಾಗಿ ಹಾಜರಾಗುವಂತೆ ಅಥವಾ ಮನೆಗೆ ಬರುವ ಅತಿಥಿಗಳ ಜೊತೆಗೆ ಮಾತನಾಡುವಂತೆ ಆಕೆ ತನ್ನ ಪತಿಯನ್ನೇ ಕೇಳಿಕೊಳ್ಳುತ್ತಾರೆ. ಆಕೆಗೆ ಕೆಲವು ಆಪ್ತ ಗೆಳತಿಯರಿದ್ದು, ಅವರ ಜತೆಗೆ ಮಾತುಕತೆ ನಡೆಸಲು ಶಿಲ್ಪಾ ಅವರಿಗೆ ಯಾವುದೇ ಸಮಸ್ಯೆಯಿಲ್ಲ.

ಆದರೆ ಪತಿಯ ನೌಕರಿ ಸಂಬಂಧಿ ಪಾರ್ಟಿಗಳು ಅಥವಾ ಮಕ್ಕಳ ಜನ್ಮದಿನದ ಪಾರ್ಟಿಗಳಲ್ಲಿ ಹೊಸಬರ ಜೊತೆಗೆ ಮಾತುಕತೆ ನಡೆಸಬೇಕಾದರೆ ಆಕೆಗೆ ತುಂಬಾ ತೊಂದರೆ ಮತ್ತು ಒತ್ತಡವಾಗುತ್ತದೆ ಮತ್ತು ಇದೇ ಕಾರಣದಿಂದ ಆಕೆ ಇಂಥ ಪಾರ್ಟಿಗಳಿಗೆ ಹಾಜರಾಗುವುದಕ್ಕೆ ಭಯಪಡುತ್ತಾರೆ. ಎಲ್ಲರ ಹಾಗೆ “ಸೋಶಿಯಲ್‌’ ಆಗಿ ಇರುವುದಕ್ಕೆ ತನಗೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಶಿಲ್ಪಾ ಅವರಿಗೆ ಬೇಜಾರಿದೆ, ಅಂಥ ಸಂದರ್ಭಗಳಲ್ಲಿ ತನಗೆ ಉಸಿರುಗಟ್ಟಿದ ಹಾಗಾಗುತ್ತದೆ ಎನ್ನುತ್ತಾರೆ.

ಇಂತಹ ಭಯದಿಂದಾಗಿಯೇ ಉದ್ಯೋಗ ಅವಕಾಶಗಳನ್ನು ಕಳೆದುಕೊಂಡದ್ದರ ಬಗ್ಗೆ ಆಕೆಗೆ ಬೇಜಾರಿದೆ; ತಾನು ಹೀಗೆ ಇಲ್ಲವಾಗಿ ದ್ದರೆ ತನ್ನ ಜೀವನ ಎಷ್ಟೋ ಉತ್ತಮ, ಸುಂದರ ವಾಗಿರುತ್ತಿತ್ತು ಎಂದು ಆಕೆ ಭಾವಿಸುತ್ತಾರೆ.

-ಡಾ| ಸೋನಿಯಾ ಶೆಣೈ,

ಅಸೋಸಿಯೇಟ್‌ ಪ್ರೊಫೆಸರ್‌ ಸೈಕಿಯಾಟ್ರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next