Advertisement

ಸ್ಲಂಗಳು ಜಾತಿ ವ್ಯವಸ್ಥೆಯ ಪ್ರತೀಕ; ರಂಗಕರ್ಮಿ ಪ್ರಸನ್ನ

04:38 PM Jan 11, 2021 | Nagendra Trasi |

ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ಬಲಪಂಥೀಯ ರಾಜಕಾರಣವನ್ನು ಪ್ರತಿರೋಧಿಸಲು ನಾವು ಆಕ್ರೋಶ ಗೊಳ್ಳದೇ ತ್ಯಾಗ ಮತ್ತು ಧೈರ್ಯದಿಂದ ಜನಾಭಿಪ್ರಾಯ ಮೂಡಿಸಬೇಕಿದೆ. ಇದಕ್ಕಾಗಿ ಭವಿಷ್ಯದಲ್ಲಿ ಸಾಮಾಜಿಕ ಚಳವಳಿಗಾಗಿ ನಗರ ಪ್ರದೇಶಗಳ ಸ್ಲಂ ನಾಯಕರೇ ನಾಯಕತ್ವ ಹಿಸಿಕೊಳ್ಳಲಿ ಎಂದು ಹಿರಿಯ ರಂಗಕರ್ಮಿ, ಹೋರಾಟಗಾರ ಪ್ರಸನ್ನ ಕರೆ ನೀಡಿದರು.

Advertisement

ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದ್ದ 11ನೇ ಜನಾಂದೋಲನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸ್ಲಂ ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಗಳ ಕುರಿತು ನಡೆದ ರಾಜ್ಯಮಟ್ಟದ ಪ್ರತಿನಿಧಿಗಳ ಸಭೆಯ ದಿಕ್ಸೂಚಿ ಮಾತುಗಳನಾಡಿದ ಅವರು, ಸ್ಲಂಗಳು ಭಾರತದ ಜಾತಿ ವ್ಯವಸ್ಥೆಯ ಪ್ರತೀಕವಾಗಿದ್ದು, ಹಳ್ಳಿಗಳಲ್ಲಿ ದುಡಿಮೆ ಇದ್ದರೂ ಜಾತೀಯತೆ ಕಾರಣಕ್ಕೆ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಬರಲು ಮುಖ್ಯ ಕಾರಣವಾಗಿದೆ
ಎಂದರು.

ದೆಹಲಿಯಲ್ಲಿ ಮೂರು ದಶಕಗಳ ಹಿಂದೆಯೇ ನನಗೆ ಇದು ಅನುಭವಕ್ಕೆ ಬಂದಿದೆ. ಭವಿಷ್ಯದಲ್ಲಿ ನಗರ ಕೇಂದ್ರಿತ ಅಭಿವೃದ್ಧಿಯಿಂದ ಅಸಮಾನತೆ ಹೆಚ್ಚಾಗಿ ಈ ಸಂಘರ್ಷವೇ ಸಾಮಾಜಿಕ ಚಳವಳಿಗೆ ಕಾರಣವಾಗುವ ಸಾಧ್ಯತೆ ಇದೆ. ಇಂತ ಸಂದರ್ಭದಲ್ಲಿ ಸ್ಲಂ ನಾಯಕರೇ ಈ ಚಳವಳಿ ನಾಯಕತ್ವದ ಹೊಣೆ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಸ್ಲಂ ಜನರ ಬದುಕಿನಲ್ಲಿ ಶಿಕ್ಷಣ ಒಂದು ಮಹತ್ತರವಾದದ್ದು. ತಮ್ಮ ಮೇಲಿನ ಎಲ್ಲ ರೀತಿಯ ಶೋಷಣೆಯನ್ನು ಶಿಕ್ಷಣದ ಅರಿವಿನ ಮೂಲಕ ಪಡೆದುಕೊಂಡು ಸಮಾನತೆ ಸಾಧಿಸಲು ಮುಂದಾಗಬೇಕು. ಅಂಬೇಡ್ಕರ್‌ ಅವರ ಹೋರಾಟದ ಎರಡು ಪ್ರಮುಖ ಘಟ್ಟಗಳನ್ನು ಸ್ಲಂ ಜನರು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಶಿಕ್ಷಣ ಮತ್ತು ಆರ್ಥಿಕತೆ ಬೆಂಬಲದ ಅಂಶವನ್ನು ಮಾತ್ರ ನಾವು ಹೆಚ್ಚು ಪಡೆದುಕೊಂಡಿದ್ದು ಜಾತಿ ವಿನಾಶದ ಹಾದಿಯಲ್ಲಿ ಸಾಗುವುದನ್ನು ಮರೆತಿದ್ದೇವೆ. ಸರ್ಕಾರದ ಶಿಕ್ಷಣವನ್ನೇ ರೂಢೀಕರಿಸಿಕೊಂಡಿರುವ ನಾವು ಶ್ರಮ ಶಿಕ್ಷಣವನ್ನು ಗೌಣವಾಗಿಸಿದ್ದೇವೆ.

ಆದ್ದರಿಂದ ನಾವು ಶ್ರಮ ಸಂಸ್ಕೃತಿಯ ಶಿಕ್ಷಣವನ್ನು ಅರ್ಥೈಸಿಕೊಂಡು ತಳ ಸಮುದಾಯಗಳ ಅನುಭವವನ್ನು ಗೌರವಿಸಬೇಕಿದೆ ಎಂದರು. ನಗರ ಪ್ರದೇಶಗಳ ಕೊಳಗೇರಿಗಳಲ್ಲಿನ ಮಾನವ ಶ್ರಮವನ್ನು ಸಾಮಾಜಿಕ ತಾರತಾಮ್ಯದ ವಿರುದ್ಧ ಕ್ರೋಢಿಕರಿಸುವ ಹೋರಾಟ ರೂಪಿಸಬೇಕಿದೆ. ನಗರಗಳಲ್ಲಿ ಸ್ಲಂ ಜನರ ಹಕ್ಕನ್ನು ಪ್ರತಿಪಾದಿಸಲು ಸಂಘಟನೆ ಸಿದ್ಧವಾಗಬೇಕು. ನಮ್ಮ ಹೋರಾಟ ಸೈದ್ಧಾತಿಕ ತಳಹದಿ ಮೇಲೆ ಪ್ರತಿರೋಧ ವ್ಯಕ್ತಪಡಿಸುವ ನಗರ ಕೇಂದ್ರಿತ ಚಳವಳಿಯಾಗಿ ರೂಪುಗೊಳ್ಳಬೇಕು. ಈ ಹೆಜ್ಜೆಗಳಲ್ಲಿ ನಡೆದರೆ ಖಂಡಿತವಾಗಿಯೂ ಪರ್ಯಾಯ ರಾಜಕಾರಣ ಮಾಡಲು ಸಾಧ್ಯವಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಕಾನೂನು ಶಾಲಾ ಪ್ರಾಧ್ಯಾಪಕ ಬಾಬಾ ಮ್ಯಾಥ್ಯೂ ಮಾತನಾಡಿ, ನಗರೀಕರಣದ ಈ ಸಂದರ್ಭದಲ್ಲಿ ನಗರದಲ್ಲಿ ಬದುಕುವ
ಹಕ್ಕನ್ನು ಗುರಿಯಾಗಿಸಿಕೊಂಡ ಸ್ಲಂ ಜನರ ಸಂಘಟನೆ ಬಲಿಷ್ಠಗೊಳಿಸಬೇಕಿದೆ. ಇದಕ್ಕಾಗಿ ಪ್ರಜಾಪ್ರಭುತ್ವವಾದಿ ಸಂಘಗಳನ್ನು ಸ್ಲಂಗಳಲ್ಲಿ ರಚಿಸಿ ಭೂ ಮಾಲೀಕತ್ವ ಮತ್ತು ವಸತಿ ಹಕ್ಕಿಗಾಗಿ ಸ್ಲಂ ಜನಾಂದೋಲನ ಕರ್ನಾಟಕ ಮುಂದಾಗಬೇಕು. ಈ ಪ್ರಶ್ನೆಗಳು ನಮ್ಮ ಸಂಘಟನೆಯ ನೀತಿಯಾದಾಗ ಮಾತ್ರ ಸರ್ಕಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಸ್ಲಂ ಸಂಘಟನೆಗಳು ಐಕ್ಯವಾದ ಹೋರಾಟ ರೂಪಿಸಲು ಒಂದು ವೇದಿಕೆ ಅವಶ್ಯವಾಗಿದೆ ಎಂದರು.

ಸರಕಾರದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪರವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಶಿವಪ್ರಸಾದ್‌ ಮನವಿ ಸ್ವೀಕರಿಸಿ, ಸಂಘಟನೆಯ ನಿರಂತರ ಹೋರಾಟದಿಂದ ರಾಜ್ಯ ಸರ್ಕಾರ ಇತ್ತೀಚೆಗೆ ಹಕ್ಕುಪತ್ರ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಹಂತ ಹಂತವಾಗಿ ಕ್ರಯಪತ್ರ ನೀಡಲಾಗುವುದು.

ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಅಗತ್ಯವಿರುವ ಲ್ಯಾಂಡ್‌ ಬ್ಯಾಂಕ್‌ ನೀತಿ ಜಾರಿಗಾಗಿ ಸರ್ಕಾರದ ಉನ್ನತ ಮಟ್ಟದ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ
ಭರವಸೆ ನೀಡಿದರು. ಪಿಯುಸಿಎಲ್‌ ರಾಜ್ಯಾಧ್ಯಕ್ಷ ವೈ. ಜೆ. ರಾಜೆಂದ್ರ ಮತ್ತು ಪತ್ರಕರ್ತ ಐಸಾಕ್‌ ಅರುಳ್‌ ಸೆಲ್ವಾ, ಗಜಲ್‌ ಕವಿ ಅಲ್ಲಗಿರಿರಾಜು, ರಾಜ್ಯ ಸಮಿತಿ ಪದಾಧಿಕಾರಿ ಚಂದ್ರಮ್ಮ, ಗೀತಾ, ದೀಪಿಕಾ, ಜನಾರ್ಧನ್‌, ಬಿಜಾಪುರ ಸ್ಲಂ ಸಮಿತಿ ಒಕ್ಕೂಟದ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಇದ್ದರು. ಎ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ತೇಜಸ್‌ಕುಮಾರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next