Advertisement

ಸ್ಲಂ-ಗುಡಿಸಲು ಮುಕ್ತ ರಾಜ್ಯದ ಗುರಿ: ಅಭಯ

05:58 PM Jun 28, 2022 | Team Udayavani |

ಬೆಳಗಾವಿ: ಸ್ಲಂ ಮತ್ತು ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಸರ್ಕಾರದ ಮೂಲ ಗುರಿಯಾಗಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.

Advertisement

ನಗರದ ಉದ್ಯಮಬಾಗದಲ್ಲಿ ಸೋಮವಾರ ವಾಜಪೇಯಿ ನಗರ ವಸತಿ ಆವಾಸ್‌ ಯೋಜನೆಯಡಿ ಮನೆಗಳ ನಿರ್ಮಾಣದ ಅಡಿಗಲ್ಲು ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊಳಗೇರಿ ಮತ್ತು ಗುಡಿಸಲುಗಳಲ್ಲಿ ವಾಸಿಸುವ ಬಡಜನರ ಜೀವನ ಮತ್ತು ಆರೋಗ್ಯ ಸ್ಥಿತಿ ಹದಗೆಟ್ಟದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಧಾನಮಂತ್ರಿ ವಾಜಪೇಯಿ ಆವಾಸ್‌ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

ಕೊರೊನಾ ಸಮಯದಲ್ಲಿ ಕೊಳಚೆ ಪ್ರದೇಶದ ಜನರ ಪರಿಸ್ಥಿತಿಯನ್ನು ನೋಡಲಾರದೆ ಅವರಿಗೆ ಗುಣಮಟ್ಟದ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಮೂರು ಮಜಲುಗಳಲ್ಲಿ ಒಟ್ಟು 250 ಮನೆಗಳನ್ನು ಆವಾಸ್‌ ಯೋಜನೆಯಡಿ ನಿರ್ಮಿಸಲಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ವಸತಿ ಯೋಜನೆ ಕಾರ್ಯ ಕಾರ್ಯರೂಪಕ್ಕೆ ಬಂದಿದೆ. ರಾಜ್ಯ ಸರಕಾರದ ವಸತಿ ಸಚಿವರಾದ ವಿ.ಸೋಮಣ್ಣ ಅವರು ನಾನು ಮಾಡಿದ ಮನವಿಗೆ ಸ್ಪಂದಿಸಿ ಆವಾಸ್‌ ಯೋಜನೆಗೆ ಸಹಕರಿಸಿದ್ದಾರೆ ಎಂದು ಹೇಳಿದರು.

ಉದ್ಯಮಬಾಗದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಪಿ.ಕೆ ಕ್ವಾರ್ಟರ್ಸ್‌ ನಲ್ಲಿ ಇರುವ ಮನೆಗಳ ಸ್ವರೂಪವನ್ನು ಹೊಂದಿರುತ್ತವೆ. ಅಪಾರ್ಟಮೆಟ್‌ ದಲ್ಲಿ ನಾವೆಲ್ಲ ಒಂದೇ ಕುಟುಂಬದ ಸದಸ್ಯರು ಎಂದು ಬಾಳಿದರೆ ಸಾಕು, ಆವಾಸ್‌ ಯೋಜನೆ ಸಾರ್ಥಕವಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

Advertisement

ಆವಾಸ್‌ ಯೋಜನೆಯಲ್ಲಿ ಯಾವುದೇ ಅದಿಕಾರಿ ಹಾಗೂ ಫಲಾನುಭವಿಯು ಆಮಿಷಕ್ಕೆ ಒಳಗಾಗಬಾರದು. ಆಮಿಷವನ್ನು ಒಡ್ಡಬಾರದು. ಅಂಥವರು ಕಂಡಬಂದರೆ ಅವರ ವಿರುದ್ದ ನಾನೇ ದೂರು ನೀಡುತ್ತೇನೆ ಎಂದರು.

ಆವಾಸ್‌ ಯೋಜನೆಯಲ್ಲಿ ಸ್ವಂತ ಮನೆಗಳನ್ನು ಹೊಂದುವುದು ಬಡಜನರ ಕನಸು. ಈ ಕನಸನ್ನು ಪ್ರಾಮಾಣಿಕತೆಯಿಂದ ನನಸು ಮಾಡುವುದು ಜನ ಪ್ರತಿನಿಧಿಗಳ ಮತ್ತು ಸಾರ್ವಜನಿಕ ಅಧಿಕಾರಿಗಳ ಕರ್ತವ್ಯ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದಲ್ಲಿ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಕಾಮಗಾರಿಗಳು ಮುಕ್ತಾಯದ ಹಂತವನ್ನು ತಲುಪಿದ್ದು ಸಾರ್ವಜನಿಕರು ಇನ್ನೂ ಸ್ವಲ್ಪ ದಿನ ಸಹಕರಿಸಬೇಕು. ಉದ್ಯಮಬಾಗದಲ್ಲಿ ಎರಡು ಮೂರು ವರ್ಷಗಳಿಂದ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಮುಂದಿನ ವಾರದಲ್ಲಿ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ ಗಾಳಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪಾಲಿಕೆಯ ಉಪ ಆಯುಕ್ತೆ(ಆಡಳಿತ) ಭಾಗ್ಯಶ್ರೀ ಹುಗ್ಗಿ ಸ್ವಾಗತಿಸಿದರು. ದಕ್ಷಿಣ ಕ್ಷೇತ್ರದ ಎಲ್ಲ ನಗರಸೇವಕರು, ಆವಾಸ್‌ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next