Advertisement

ಸೋಮಾರಿತನ ಮನುಷ್ಯನ ದೊಡ್ಡ  ಶತ್ರು 

03:53 PM May 28, 2018 | |

‘ಸೋಮಾರಿತನ’ವೇ ಮೈಗಳ್ಳತನ. ಸೋಮಾರಿಗಳು ಮೈಮುರಿದು ದುಡಿಯಲು ಹಿಂಜರಿಯುತ್ತಾರೆ. ಅದಕ್ಕಾಗಿ ಅವರನ್ನು ಮೈಗಳ್ಳರು ಎನ್ನುತ್ತಾರೆ.ಜೀವನದ ಪ್ರತಿಯೊಂದು ಕ್ಷಣವೂ ನಮಗೆ ಅಮೂಲ್ಯವಾದದ್ದು. ಆದ್ದರಿಂದ ಅದನ್ನು ಹಾಳು ಮಾಡುವುದು ಸರಿಯಲ್ಲ. ಸೋಮಾರಿತನವೆಂಬುದು ಮನುಷ್ಯನ ದೊಡ್ಡ ಶತ್ರು. ಮಾನವನಿಗೆ ಜೀವನದಲ್ಲಿ ಗುರಿ, ಉದ್ದೇಶಗಳು ಮುಖ್ಯ. ಸೋಮಾರಿತನ ನಮ್ಮ ಸಾಧನೆಗೆ ಅಡ್ಡಿಯಾಗಬಲ್ಲದು.

Advertisement

ದುಶ್ಚಟಗಳ ದಾಸ
ಸೋಮಾರಿಗಳು ಈಗ ಮಾಡಬೇಕಾದ ಕೆಲಸವನ್ನು ಮತ್ತೆಗೆ ಅಥವಾ ನಾಳೆಗೆ ಮುಂದೂಡುತ್ತಾರೆ. ಮೋಜು – ಮಸ್ತಿಗಳಲ್ಲಿ ಕಾಲ ಕಳೆಯುತ್ತಾರೆ. ಅಲ್ಲದೆ ಅಮಲು ಪದಾರ್ಥ, ಮಾದಕ ವಸ್ತುಗಳ ದಾಸರಾಗುತ್ತಾರೆ. ಇದರಿಂದ ಅವರು ಭವಿಷ್ಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೇಗೆಂದರೆ, ಕೆಲವೊಂದು ಕೆಲಸಗಳು ಸಮಯ ಕಳೆದಂತೆ ತನ್ನ ಪ್ರಾಮುಖ್ಯ ಅಥವಾ ಬೆಲೆಯನ್ನು ಕಳೆದುಕೊಳ್ಳುತ್ತವೆ. ಇದರಿಂದ ತಡವಾಗಿ ಮಾಡಿದ ಕೆಲಸ, ಶ್ರಮ ಎಲ್ಲವೂ ವ್ಯರ್ಥವಾಗುತ್ತದೆ. ಇನ್ನೊಂದೆಡೆ ವಿಪರೀತ ಮೋಜು – ಮಸ್ತಿ ಮಾಡುವುದರಿಂದ ಹಣ, ಸಮಯ, ಆರೋಗ್ಯವೂ ಹಾಳಾಗುತ್ತದೆ. ಮೈಗಳ್ಳತನದಿಂದ ವ್ಯಕ್ತಿಯಲ್ಲಿರುವ ಪ್ರತಿಭೆ ನಾಶವಾಗುತ್ತದೆ. ಅವುಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆತನ ವ್ಯಕ್ತಿತ್ವಕ್ಕೆ ಕುಂದುಂಟಾಗುತ್ತದೆ.

ಕಾಲವನ್ನು ಚೆನ್ನಾಗಿ ಬಳಸುವವನು ಬಡವನಾಗಿರುವುದಿಲ್ಲ
ಸಮಯ ಎಂಬುದು ಎಲ್ಲಕ್ಕಿಂತಲೂ ಹೆಚ್ಚು ಬೆಲೆ ಬಾಳುವಂತದ್ದು. ಕಳೆದು ಹೋದ ಅಮೂಲ್ಯ ಸಮಯವನ್ನು ಮರಳಿ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲವನ್ನು ಚೆನ್ನಾಗಿ ಬಳಸುವವನು ಎಂದಿಗೂ ಬಡವನಾಗಿರುವುದಿಲ್ಲ ಎಂಬ ಮಾತಿದೆ. ಆಯಾ ಸಮಯದಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಮಾಡದೆ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುವವರು ಸಮಯಗಳ್ಳರೂ ಹೌದು, ಮೈಗಳ್ಳರೂ ಹೌದು.ಇದರಿಂದಾಗಿಯೇ ಕೆಲವರು ಜೀವನೋಪಾಯಕ್ಕಾಗಿ ಅಡ್ಡ ದಾರಿ ಹಿಡಿಯುವುದುಂಟು.

ಮೈಗಳ್ಳರನ್ನು ಸಮಾಜವು ಕೂಡ ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಸಮಾಜದಲ್ಲಿ ಅವರು ಪುಂಡು – ಪೋಕ್ರಿ,
ದಂಡ – ಪಿಂಡಗಳು ಎಂದೆಲ್ಲ ಗುರುತಿಸಿಕೊಂಡಿರುತ್ತಾರೆ. ಈ ರೀತಿಯ ಹಣೆಪಟ್ಟಿಗಳನ್ನು ಧರಿಸಿಕೊಂಡು ಮಾನಸಿಕವಾಗಿ ಖನ್ನರಾಗುವ ಬದಲು, ಆಯಾ ಕೆಲಸಗಳನ್ನು ಅದೇ ಸಮಯದಲ್ಲಿ ನಿರ್ವಹಿಸಬೇಕು. ಪ್ರತಿಯೊಬ್ಬರು ತಮ್ಮದೇ ಆದ ಗುರಿ, ಉದ್ದೇಶಗಳನ್ನು ಇಟ್ಟುಕೊಂಡು ಅವುಗಳ ಪೂರೈಕೆಗೆ ಶ್ರಮಿಸಬೇಕು. 

ಸುಭಾಷಿತವೊಂದರ ಪ್ರಕಾರ ಮನುಷ್ಯನಿಗೆ ‘ಆಲಸ್ಯಕ್ಕಿಂತ ದೊಡ್ಡ ಶತ್ರುವಿಲ್ಲ, ಉದ್ಯೋಗಕ್ಕಿಂತ ದೊಡ್ಡ ಬಂಧುವಿಲ್ಲ’. ಆಲಸ್ಯವನ್ನು ದೂರವಿಟ್ಟು, ಮೈಗಳ್ಳತನವನ್ನು ಬಿಟ್ಟು, ಸಕಾಲಿಕ ಕರ್ತವ್ಯಗಳ ಕಡೆ ಗಮನ ನೀಡುವಂತೆ ಅದು ನಮ್ಮನ್ನು ಪ್ರೇರೇಪಿಸುತ್ತದೆ. 

Advertisement

ಒಂದು ರೋಗ
ಸೋಮಾರಿತನ ಎಂಬುದು ಒಂದು ಕೆಟ್ಟ ಅಭ್ಯಾಸ ಅಥವಾ ಚಾಳಿ ಮಾತ್ರ ಅಲ್ಲ, ಅದು ಒಂದು ದೊಡ್ಡ ರೋಗ ಕೂಡ
ಹೌದು. ಸೋಮಾರಿತನದಿಂದ ನಾವು ಚಟುವಟಿಕೆ ರಹಿತರಾಗುತ್ತೇವೆ. ಇದು ದೈಹಿಕ ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ದೈಹಿಕ ನಿಷ್ಕ್ರಿಯತೆಗೂ ಅನಾರೋಗ್ಯಕ್ಕೂ ತೀರ ಹತ್ತಿರದ ಸಂಬಂಧವಿದೆ. ಯಾವುದೇ ಒಂದು ಕಬ್ಬಿಣದ ವಸ್ತುವು ಉಪಯೋಗಿಸಲ್ಪಡದೇ ಇದ್ದಾಗ ಅದಕ್ಕೆ ತುಕ್ಕು ಹಿಡಿಯುತ್ತದೆ. ಹಾಗೆಯೇ ನಮ್ಮ ದೇಹದ ಅಂಗಗಳು ಜಡವಾಗಿ ಇರುವುದರಿಂದ ಅವುಗಳಿಗೆ ಅನಾರೋಗ್ಯ ತಗುಲುವುದು. ಮುಖ್ಯವಾಗಿ ದೈಹಿಕ ನಿಷ್ಕ್ರಿಯತೆಯಿಂದ ಉಂಟಾಗುವ ರೋಗಗಳೆಂದರೆ ಸ್ಥೂಲಕಾಯ, ಡಯಾಬಿಟಿಸ್‌, ರಕ್ತದ ಒತ್ತಡ, ಹೃದ್ರೋಗ ಮುಂತಾದವುಗಳು.

ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next