ಬೆಂಗಳೂರು: ಅಕ್ರಮ ಕಸಾಯಿಖಾನೆ ಮುಚ್ಚಲು ಹೈಕೋರ್ಟ್ ನೇಮಿಸಿದ ಕೋರ್ಟ್ ಕಮಿಷನರ್ ತಂಡದ ಸದಸ್ಯರು ಹಾಗೂ ಪೊಲೀಸರ ಮೇಲೆ ಕಸಾಯಿಖಾನೆ ಮಾಲಕರು ಹಲ್ಲೆ ನಡೆಸಿದ್ದು, ಪೊಲೀಸರ ವಾಹನ ಜಖಂಗೊಳಿಸಿರುವ ಘಟನೆ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿ ಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ವಕೀಲರಾದ ಹರೀಶ್, ಪ್ರಸನ್ನ, ಪವನ್, ಸರಕಾರಿ ಅಭಿಯೋಜಕ ರಾಚಯ್ಯ, ದೂರುದಾರರಾದ ಕವಿತಾ ಜೈನ್, ಜೋಶಿನ್ ಆಂಥೋಣಿ ಹಾಗೂ ವಿದ್ಯಾರಣ್ಯಪುರ ಠಾಣೆ ಪೊಲೀಸರ ಮೇಲೆ ಹಲ್ಲೆ ನಡೆದಿದೆ.
ನಗರದಲ್ಲಿ ಅಕ್ರಮವಾಗಿ ಕಸಾಯಿ ಖಾನೆ ಪತ್ತೆ ಹಚ್ಚಿ ಕ್ರಮಕೈಗೊಳ್ಳಲು ಹೈಕೋರ್ಟ್, ಕೋರ್ಟ್ ಕಮಿಷನರ್ಗಳನ್ನು ನೇಮಿಸಿತ್ತು. ಬೆಟ್ಟಹಳ್ಳಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಅಕ್ರಮ ವಾಗಿ ನಡೆಸುತ್ತಿದ್ದ ಕಸಾಯಿ ಖಾನೆಗಳನ್ನು ಪತ್ತೆಹಚ್ಚಿ ನೋಟಿಸ್ ಕೊಟ್ಟು ಮುಚ್ಚಿಸಲು ಪೊಲೀಸರೊಂದಿಗೆ ಕಮಿಷನರ್ಗಳು ಹೋಗಿದ್ದರು. ಸ್ಥಳೀಯರು ಪೊಲೀಸರು ಸೇರಿದಂತೆ ಎಲ್ಲರ ಮೇಲೆ ಹಲ್ಲೆ ಚಾಡಿ, ವಾಹನಗಳನ್ನು ಜಖಂಗೊಳಿಸಿದರು. ಕೆಎಸ್ಆರ್ಪಿ ತುಕಡಿ ನೆರವು ಪಡೆದು ಪರಿಸ್ಥಿತಿ ನಿಯಂತ್ರಿಸಲಾಯಿತು.
23 ಆರೋಪಿಗಳ ಸೆರೆ
ಕಸಾಯಿಖಾನೆಗಳಿಗೆ ಭೇಟಿ ನೀಡಿದವರ ಮೇಲೆ ಹಲ್ಲೆನಡೆಸಿದ ಎರಡು ಘಟನೆಗಳ ಸಂಬಂಧ 23 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕ ಬೆಟ್ಟಹಳ್ಳಿಯ ಕಸಾಯಿಖಾನೆಯಲ್ಲಿ ಕೋರ್ಟ್ ತಂಡದ ಮೇಲೆ ದಾಳಿ ನಡೆಸಿದ 10 ಮಂದಿ ಸೆರೆಯಾಗಿದ್ದಾರೆ. ಅ. 14ರ ಘಟನೆ ಸಂಬಂಧ 13 ಜನರನ್ನು ಬಂಧಿಸಲಾಗಿದೆ. ದೂರು ನೀಡಿದ ನಂದಿನಿಯ ಕಾರು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಕಾರಣ ಗಲಭೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.