Advertisement

ಇನ್ನೂ ನಿರ್ಮಾಣಗೊಳ್ಳದ ಸ್ಲಂ ಬೋರ್ಡ್ ಮನೆಗಳು : ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

05:10 PM Jun 09, 2022 | Team Udayavani |

ಸಾಗರ: ನಗರವ್ಯಾಪ್ತಿಯಲ್ಲಿ ನೆನಗುದಿಗೆ ಬಿದ್ದಿರುವ ಸ್ಲಂ ಬೋರ್ಡ್ ಮನೆಗಳನ್ನು ತಕ್ಷಣ ನಿರ್ಮಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಗುರುವಾರ ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಗರಸಭೆ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ತಾಲೂಕು ಸಂಚಾಲಕ ಲಕ್ಷ್ಮಣ ಸಾಗರ್, ನಗರವ್ಯಾಪ್ತಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ಸ್ಲಂಬೋರ್ಡ್ ಮೂಲಕ ಬಡವರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಹಿಂದುಳಿದವರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಯೋಜನೆ ಜಾರಿಗೆ ಬಂದು ಇಷ್ಟು ವರ್ಷಗಳಾದರೂ ಈತನಕ ಮನೆ ಕೆಲಸ ಪೂರ್ಣಗೊಂಡಿಲ್ಲ. ಫಲಾನುಭವಿಗಳಿಗೆ ಸ್ಲಂ ಬೋರ್ಡ್‌ಗೆ ಸಾಲಸೋಲ ಮಾಡಿ ಮುಂಗಡ ಹಣ ಪಾವತಿ ಮಾಡಿದ್ದಾರೆ. ಇರುವ ಮನೆಯನ್ನು ಬೀಳಿಸಿ ಮನೆ ನಿರ್ಮಿಸಲು ಅವಕಾಶ ಕಲ್ಪಿಸಿದ್ದಾರೆ. ಈತನಕ ಮನೆ ನಿರ್ಮಿಸಿಕೊಡದೆ ಇರುವುದರಿಂದ ಜೋಪಡಿಯಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಶಾಸಕರು, ನಗರಸಭೆ ಆಡಳಿತ ಬಡಜನರ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಇದರ ಜೊತೆಗೆ ಹಿಂದೆ ಮನೆ ನಿರ್ಮಾಣಕ್ಕೆ 4.30 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಅದನ್ನು ಈಗ ಏಕಾಏಕಿ 2.70 ಲಕ್ಷಕ್ಕೆ ಇಳಿಸಲಾಗಿದೆ. ಇದರಿಂದ ಬಡಜನರಿಗೆ ತೀವ್ರ ಅನ್ಯಾಯವಾಗುತ್ತದೆ. ಸರ್ಕಾರ ಹಣವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು. ನಗರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಆಶ್ರಯ ನಿವೇಶನ ಹಗರಣವನ್ನು ತನಿಖೆ ನಡೆಸಿ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರ ವ್ಯಾಪ್ತಿಯಲ್ಲಿರುವ ರಸ್ತೆಗಳ ಹೊಂಡಗುಂಡಿ ಮುಚ್ಚುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಗರ್ಭೀಣಿಯರಿಗೆ ಆಹಾರ ಪೂರೈಕೆ ಮಾಡುವಲ್ಲಿ ನಡೆದಿರುವ ಅಕ್ರಮದ ವಿರುದ್ಧ ತನಿಖೆ ನಡೆಸಬೇಕು. ಹೊರಗಿನಿಂದ ಊಟ ತರುವುದನ್ನು ನಿಲ್ಲಿಸಿ ಆಸ್ಪತ್ರೆಯಲ್ಲೇ ಅಡುಗೆ ತಯಾರಿಸಿ ರೋಗಿಗಳಿಗೆ ನೀಡಬೇಕು. ಮುಂದಿನ 15 ದಿನಗಳಲ್ಲಿ ಬೇಡಿಕೆ ಈಡೇರಿಸದೆ ಹೋದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಚಿಕನ್ ಊಟದ ವಿಚಾರ ತಾರಕಕ್ಕೇರಿ ಪತ್ನಿಯನ್ನು ಇರಿದು ಕೊಂದ ಪತಿ

ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ ಮಾತನಾಡಿ, ಆಡಳಿತ ಮಾಡುವವರಿಗೆ ಕಣ್ಣು ಕಿವಿ ಎರಡೂ ಇಲ್ಲವಾಗಿದೆ. ಬಡಜನರ ಸಮಸ್ಯೆಗೆ ನಗರಸಭೆ ಸ್ಪಂದಿಸುತ್ತಿಲ್ಲ. ಸ್ಲಂ ಬೋರ್ಡ್‌ಗೆ ಹಣದ ಜೊತೆಗೆ ಜಾಗ ಕೊಟ್ಟವರು ಮಳೆ, ಚಳಿ ಗಾಳಿಯಲ್ಲಿ ಒದ್ದಾಡುತ್ತಿದ್ದಾರೆ. ಅವರಿಗೆ ಈತನಕ ಮನೆ ಕಟ್ಟಿಕೊಟ್ಟಿಲ್ಲ. ಫಾರಂ ನಂ. ೩ ಬೇಕಾದರೆ ನಗರಸಭೆಗೆ ಅಲೆಯುವ ಸ್ಥಿತಿ ಇದೆ. ಚುನಾಯಿತ ಪ್ರತಿನಿಧಿಗಳಿಗೆ ನಗರಸಭೆಯಲ್ಲಿ ಕವಡೆಕಾಸಿನ ಕಿಮ್ಮತ್ತು ಇಲ್ಲದ ಸ್ಥಿತಿ ಇದೆ. ನಗರಸಭೆ ದುರಾಡಳಿತದ ವಿರುದ್ದ ಜನರು ದಂಗೆ ಏಳುವ ದಿನ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಸದಸ್ಯ ರವಿ ಜಂಬಗಾರು ಮಾತನಾಡಿ, ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಹೋದಲ್ಲಿ ಚುನಾಯಿತ ಪ್ರತಿನಿಧಿಗಳು ರಾಜಿನಾಮೆ ನೀಡಿ ಮನೆಗೆ ಹೋಗುವುದು ಒಳ್ಳೆಯದು. ಜನರು ಸಮಸ್ಯೆ ಹೇಳಲು ಬಂದರೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ತಮ್ಮ ಕೊಠಡಿ ಬಿಟ್ಟು ಹೊರಗೆ ಬರುವುದಿಲ್ಲ. ಶಾಸಕರು ಮೌನವಾಗಿರುವುದೇ ಅಧಿಕಾರಿಶಾಹಿಗಳ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸತ್ಯ, ಸುರೇಶ್ ಮಂಡ್ಯ, ಭಾಸ್ಕರ ಜನ್ನೆಹಕ್ಲು, ವಿಶ್ವನಾಥ್, ಗುತ್ಯಪ್ಪ ಕಾನ್ಲೆ, ಮಂಜಪ್ಪ ತ್ಯಾಗರ್ತಿ, ಮಹಾದೇವಪ್ಪ, ಗಂಗಾಧರ್ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next