Advertisement

ಸ್ವರ್ಗದಲ್ಲಿ ಅಸ್ಥಿಪಂಜರಗಳು!

11:24 AM Oct 11, 2019 | sudhir |

ಹಿಮಾಲಯ ತಪ್ಪಲಿನಲ್ಲಿರುವ ರೂಪಕುಂಡ ಕೆರೆಯನ್ನು ಭೂಲೋಕದ ಸ್ವರ್ಗ ಎನ್ನುತ್ತಾರೆ. ಸದಾ ಹಿಮವನ್ನು ಹೊದ್ದು ಮಲಗಿರುವ ಈ ಪ್ರದೇಶದ ಅಸಲಿಯತ್ತು ತಿಳಿಯಬೇಕಾದರೆ ಬೇಸಿಗೆಯಲ್ಲಿ ಹೋಗಬೇಕು. ಏಕೆಂದರೆ ಆ ಸಮಯದಲ್ಲಿ ಕೆರೆಯ ಸುತ್ತಮುತ್ತ ಸಾವಿರಾರು ಅಸ್ತಿಪಂಜರಗಳು ಕಾಣುತ್ತವೆ. ಇವೆಲ್ಲಾ ಯಾರದು? ಅವುಗಳ ಕತೆಯೇನು?

Advertisement

ಹಿಮಾಲಯದ ಪಾದದಲ್ಲಿ ತ್ರಿಶೂಲ್‌ ಮತ್ತು ನಂದಾ ಘುಂಟಿ ಪರ್ವತಗಳ ತಪ್ಪಲಿನಲ್ಲಿ ರೂಪಕುಂಡ ಕೆರೆ ಇದೆ. ಇದು ಜಗತ್ತಿನ ಪ್ರಾಕೃತಿಕ ಸೌಂದರ್ಯದ ಗಣಿ ಅಂತಲೇ ಹೇಳುತ್ತಾರೆ. ಬೇಸಿಗೆಯಲ್ಲಿ ನೀವು ಈ ಪ್ರದೇಶಕ್ಕೆ ಭೇಟಿ ಕೊಟ್ಟರೆ, ನಿಮಗೆ ಅಲ್ಲಿ ಕಾಣಸಿಗುವುದು ಸಾಲು ಸಾಲು ಅಸ್ಥಿಪಂಜರಗಳು. ಆದರೆ, ಇದು ಭಯ ಪಡುವ ವಿಷಯವಲ್ಲ! ಅವು ನೂರಾರು ವರ್ಷಗಳಿಂದ ಕೆರೆ, ಅದರ ಆಸುಪಾಸಲ್ಲೇ ಬಿದ್ದಿವೆ. ಹಿಮ ಹೆಚ್ಚಾದಾಗ ಇವು ಕಾಣುವುದಿಲ್ಲ. ಯಾವುದೋ ಸಾಮೂಹಿಕ ನರಮೇಧದ ಕುರುಹಿನಂತಿವೆ. ಈ ಕಾರಣಕ್ಕೆ ರೂಪಕುಂಡಕ್ಕೆ ಅಸ್ಥಿಪಂಜರಗಳ ಕೆರೆ ಎಂಬ ಕುಖ್ಯಾತಿಯೂ ಪ್ರಾಪ್ತವಾಗಿದೆ.

ಹೊರಜಗತ್ತಿಗೆ ತೆರೆದುಕೊಂಡಿದ್ದು
ರೂಪಕುಂಡದ ಈ ಅಸಲಿ ರೂಪ ಹೊರಗಿನ ಜಗತ್ತಿಗೆ ಗೊತ್ತಾಗಿದ್ದು 1942ರಲ್ಲಿ. ಆಗ ಆ ಭಾಗದ ರೇಂಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಿಕಿಶನ್‌ ಮಧ್ವಾಲ್‌ ಈ ರೂಪಕುಂಡದ ಇನ್ನೊಂದು ಮುಖವನ್ನು ಜಗತ್ತಿಗೆ ತೆರೆದಿಟ್ಟರು. ಇದನ್ನು ಬ್ರಿಟಿಷ್‌ ಅಧಿಕಾರಿಗಳ ಗಮನಕ್ಕೆ ತಂದಾಗ, ಅವರು ಈ ಭೀಭತ್ಸ್ಯದೃಶ್ಯವನ್ನು ಕಂಡು ಗಾಬರಿ ಬಿದ್ದರು. ಇಲ್ಲಿರುವ ಅಸ್ತಿಪಂಜರಗಳೆಲ್ಲ ಎರಡನೇ ಮಹಾಯುದ್ಧದ ಸಮಯದಲ್ಲಿ ಮಡಿದ ಜಪಾನಿನ ಯೋಧರ ಶವಗಳೆಂದು ಊಹಿಸಿದರು. ನಂತರದ ದಿನಗಳಲ್ಲಿ ಹಲವು ಪರಿಣಿತ ತಂಡಗಳು ರೂಪಕುಂಡಕ್ಕೆ ಭೇಟಿ, ನಡೆಸಿದ ಸಂಶೋಧನೆಗಳು ಹಲವು ಕುತೂಹಲಕಾರಿ ಮಾಹಿತಿಗಳನ್ನು ಹೊರಹಾಕಿದವು.

ಇನ್ನೊಂದು ವಾದ
ಭಾರತ ಸಂಶೋಧಕರ ಒಂದು ತಂಡ ಡಿಎನ್‌ಎ ಪರೀಕ್ಷೆ ಮಾಡಿ, ಆ ಮೂಲಕ ಪತ್ತೆ ಹಚ್ಚಿದ ವರದಿಯಂತೆ- ಇಲ್ಲಿನ ಅಸ್ತಿಪಂಜರಗಳಲ್ಲಿ ಪೈಕಿ ಶೇಕಡಾ ಎಪ್ಪತ್ತರಷ್ಟು ಇರಾನ್‌ ಮೂಲದ್ದು. ಇನ್ನುಳಿದ ಶೇ.ಮೂವತ್ತರಷ್ಟು ಭಾರತೀಯರದ್ದಾಗಿದೆ. ಇದರಿಂದ ಆವರೆಗೆ ನಂಬಿದ್ದಂತೆ ಇವುಗಳು ಜಪಾನ್‌ ಸೈನಿಕರರ ದೇಹವಲ್ಲ. ಸ್ಥಳೀಯರ ಸಹಾಯದಿಂದ ಹೊಸ ನೆಲೆಯನ್ನು ಹುಡುಕಲು ಬಂದಿದ್ದ ಇರಾನ್‌ ಮೂಲದ ವ್ಯಾಪಾರಸ್ಥರ ಪಳಯುಳಿಕೆಗಳು ಎಂದು ಹೊಸ ವಾದ ಹುಟ್ಟಿಕೊಂಡಿತು.

ಈ ನಿಟ್ಟಿನಲ್ಲಿ ಶೋಧ ಕಾರ್ಯ ಮುಂದುವರಿಯಿತು. ಇದರ ಪ್ರಕಾರ, ಒಂಭತ್ತನೆ ಶತಮಾನದಲ್ಲಿ ನಡೆದ ದುರಂತದ ಪರಿಣಾಮ ಇದು. ಆದರೆ ಇದನ್ನೊಪ್ಪದ ಸ್ಥಳೀಯರಲ್ಲಿ ಈ ಕುರಿತು ಇನ್ನೊಂದು ವಾದ ಮುಂದಿಡುತ್ತಾರೆ. ಅದನ್ನೇ ನಿಜ ಎಂದು ನಂಬಿದ್ದಾರೆ. ಕನೌಜನ ರಾಜ ತನ್ನ ಹೆಂಡತಿ ಹಾಗೂ ಆಸ್ಥಾನದ ತಂಡ, ಸೈನಿಕರ ಜೊತೆ ಮಾತೆ ನಂದಾದೇವಿಯ ದರ್ಶನಕ್ಕೆಂದು ಹೋಗುತ್ತಿರುವಾಗ ಹಿಮಪಾತಕ್ಕೆ ಸಿಲುಕಿ, ಇಡೀ ತಂಡವೇ ದುರ್ಮರಣ ಹೊಂದಿತಂತೆ. ಈ ಕಳೇಬರಗಳು ಆ ರಾಜ ಹಾಗೂ ಸೇನೆಯದ್ದೇ ಎಂದು ಅವರು ನಂಬಿದ್ದಾರೆ.

Advertisement

ಹೊಸ ಸಂಶೋಧನೆ
ರೂಪಕುಂಡ ಇದೀಗ ಮತ್ತೆ ಸುದ್ದಿಯಲ್ಲಿದೆ. ಭಾರತವೂ ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಜ್ಞರನ್ನು ಒಳಗೊಂಡ ತಂಡ ಹಲವು ವರ್ಷಗಳ ಕಾಲ ಸಂಶೋಧನೆ ನಡೆಸಿ ವರದಿ ಕೊಟ್ಟಿದೆ. ಅದು ಈವರೆಗಿನ ನಂಬಿಕೆಗಳನ್ನೆಲ್ಲಾ ತಲೆಕೆಳಗಾಗಿಸಿದೆ. ಇವರ ಪ್ರಕಾರ, ರೂಪಕುಂಡದಲ್ಲಿ ಸತ್ತಿರುವವರಲ್ಲಿ ಹೆಚ್ಚು ಭಾರತೀಯರೇ ಆಗಿದ್ದಾರೆ. ಇದಕ್ಕೆ ಕಾರಣ ಹಿಮಪಾತ. ಸುಮಾರು 10ನೇ ಶತಮಾನದ ಆಸುಪಾಸಲ್ಲಿ ಈ ದುರ್ಘ‌ಟನೆ ಸಂಭವಿಸಿದೆ ಎಂದು ಹೇಳಿದ್ದಾರೆ. ಹೀಗಾಗಿ, ಪದೇ ಪದೆ ಹಿಮಪಾತಕ್ಕೆ ಸಿಲುಕುವ ಈ ಪ್ರದೇಶಕ್ಕೆ ಜಾಗತೀಕವಾಗಿ ಖ್ಯಾತಿ ಇದೆ ಅಂದಾಯಿತು. ಹಿಂದಿನ ಕಾಲದಿಂದಲೂ ಚಾರಣಿಗರು, ಪ್ರವಾಸಿಗರು ಬರುತ್ತಿದ್ದ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.

– ಸುನೀಲ್‌ ಬಾಕೂìರ್‌

Advertisement

Udayavani is now on Telegram. Click here to join our channel and stay updated with the latest news.

Next