Advertisement

ಬ್ಯಾನರ್‌ ಹರಿದ ಆರು ಮಂದಿ ಬಂಧನ

01:01 AM Aug 19, 2019 | Lakshmi GovindaRaj |

ಬೆಂಗಳೂರು: ಕಾರ್ಯಕ್ರಮ ಒಂದಕ್ಕೆ ಸಂಬಂಧಿಸಿದಂತೆ ಹಿಂದಿ ಭಾಷೆಯಲ್ಲಿದ್ದ ಬ್ಯಾನರ್‌ ಹರಿದು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಮುಖಂಡರನ್ನು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರೋ ರಾತ್ರಿ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಕ್ರಮಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮತ್ತೂಂದೆಡೆ “ಕನ್ನಡ ಪರ ಸಂಘಟನೆ ಕಾರ್ಯಕರ್ತರು ನಮ್ಮ ಮೇಲೆ ದಬ್ಟಾಳಿಕೆ ನಡೆಸಿದ್ದಾರೆ. ಹೀಗಾಗಿ ಬೆಂಗಳೂರು ಬಂದ್‌ ಮಾಡಬೇಕು ಎಂಬ’ ಆಡಿಯೋ ವೈರಲ್‌ ಆಗಿದ್ದು ವಿವಾದದ ಸ್ವರೂಪ ಪಡೆದುಕೊಂಡಿದೆ.

ಬೆಂಗಳೂರು ಬಂದ್‌ ಮಾಡುವ ವಿಚಾರ ಹಾಗೂ ಪೊಲೀಸರ ನಡುರಾತ್ರಿ ದಾಳಿ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಆನಂದ ರಾವ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಹಿಂದಿ ಭಾಷೆಯ ಬ್ಯಾನರ್‌ ಹರಿದ ವಿಚಾರವನ್ನು ಮುಂದಿಟ್ಟುಕೊಂಡು ರಾತ್ರೋ ರಾತ್ರಿ ಮನೆಗಳ ಮೇಲೆ ದಿಢೀರ್‌ ದಾಳಿ ನಡೆಸಿದ ಪೊಲೀಸರ ಕಾರ್ಯ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾನರ್‌ ಹರಿದ ತಪ್ಪಿಗೆ ಠಾಣೆಗೆ ಕರೆಯಿಸಿದರೆ ಬರುತ್ತಿದ್ದೆವು. ಆದರೆ, ಪೊಲೀಸರು ಮಧ್ಯರಾತ್ರಿ ಮೂರು ಗಂಟೆಯಲ್ಲಿ ಮನೆ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದರು. ಕನ್ನಡಪರ ಹೋರಾಟಗಾರರನ್ನು ಭಯೋತ್ಪಾದಕರಂತೆ ಬಿಂಬಿಸಿದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಮುಖಂಡ ಪ್ರವೀಣ್‌ ಕುಮಾರ್‌ ಶೆಟ್ಟಿ ಮಾತನಾಡಿ, “ಹಿಂದಿ ಭಾಷೆಯ ಬ್ಯಾನರ್‌ ಹರಿದ ಆರೋಪಕ್ಕೆ ಹೋರಾಟಗಾರರ ಬಂಧನ ಖಂಡನೀಯ ಕ್ರಮವಾಗಿದೆ.

ಬ್ಯಾನರ್‌ ಮಾತ್ರ ಹರಿದಿದ್ದಾರೆ. ಹಿಂದಿ ಭಾಷೆ ಬಳಸಿ ಬ್ಯಾನರ್‌ ಕಟ್ಟಿದ್ದಕ್ಕೆ ಕನ್ನಡಿಗರ ಭೇಷರತ್‌ ಕ್ಷಮೆ ಕೇಳಬೇಕು. ಯಾರ ಮೇಲೂ ಹಲ್ಲೆ ಕೂಡ ನಡೆಸಿಲ್ಲ. ಬೆಂಗಳೂರು ಬಂದ್‌ ಮಾಡುವ ಆಡಿಯೋ ಕೇಳಿದ್ದೇನೆ. ಕನ್ನಡಿಗರು ಶಾಂತಿಪ್ರಿಯರು ಸುಖಾಸುಮ್ಮನೆ ಕೆಣಕಬೇಡಿ. ಬಂದ್‌ ಕರೆ ಕೊಟ್ಟರೆ ಅದರ ಪರಿಣಾಮ ನೀವೆ ಅನುಭವಿಸಬೇಕಾಗುತ್ತದೆ,’ಎಂದು ಎಚ್ಚರಿಕೆ ನೀಡಿದರು.

Advertisement

ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ ಹರೀಶ್‌ಕುಮಾರ್‌ ಮಾತನಾಡಿ, ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ತೆರವು ಮಾಡುವುದು ಬಿಬಿಎಂಪಿ ಕೆಲಸ. ಆದರೆ ಹಿಂದಿ ಭಾಷೆಯಲ್ಲಿದ್ದ ಕಾರಣಕ್ಕೆ ಕಾರ್ಯಕರ್ತರು ಹರಿದು ಹಾಕಿದ್ದಾರೆ. ಇದು ಮಹಾ ಅಪರಾಧವೇ ಎಂದು ಪ್ರಶ್ನಿಸಿದರು. ಈ ಆರೋಪದ ಕೇಸಿಗೆ ಮುಖಂಡರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದರು.

ಹಿಂದಿ ಭಾಷಿಕರು ಕನ್ನಡವನ್ನು ಗೌರವಿಸಿಲ್ಲ.ನಾವು ನಿಮ್ಮ ಸೌಹಾರ್ಧಯುತವಾಗಿಯೇ ಇರುತ್ತೇವೆ. ಕನ್ನಡಿಗರು ಹೃದಯ ವೈಶಾಲ್ಯ ಉಳ್ಳವರು ನೀವು ಕನ್ನಡಿಗರ ಕ್ಷಮೆ ಕೇಳಬೇಕು. ಹಿಂದಿ ಭಾಷೆಯಲ್ಲಿ ಬ್ಯಾನರ್‌ ಹಾಕಿದ ಸಂಬಂಧ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ವಕೀಲರಾದ ಸೂರ್ಯ ಮುಕುಂದರಾಜ್‌, ಕನ್ನಡ ಪರ ಸಂಘಟನೆಗಳ ಮುಖಂಡ ಬಸರಾಜು, ಗೋವಿಂದರಾಜು, ರೂಪೇಶ್‌ ರಾಜಣ್ಣ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಘಟನೆ ಏನು?: ಇನ್‌ಫೆಂಟ್ರಿ ರಸ್ತೆಯಲ್ಲಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಆ.16ರಂದು ಹಿಂದಿ ಭಾಷೆಯಲ್ಲಿ ಬರೆದಿದ್ದ ಬ್ಯಾನರ್‌ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿದ ಕೆಲವು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಬ್ಯಾನರ್‌ ಹರಿದು ಹಾಕಿದರು ಎಂಬ ಆರೋಪ ಸಂಬಂಧ ರಮೇಶ್‌ಗೌಡ, ಟಿ.ಅಂಜನಪ್ಪ, ಹರೀಶ್‌ ಕುಮಾರ್‌, ಬಿ.ಮಂಜುನಾಥ್‌, ಎಂ.ಚಂದ್ರಶೇಖರ್‌, ಮಾದೇಶ್‌ ಗೌಡ ಎಂಬವರನ್ನು ಬಂಧಿಸಿರುವ ಕಮರ್ಷಿಯಲ್‌ ಸ್ಟೀಟ್‌ ಪೊಲೀಸರು, ಆರೂ ಮಂದಿ ವಿರುದ್ಧ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next