Advertisement

ಸೀತಾರಾಮ ಕೆದಿಲಾಯರ ಗ್ರಾಮ-ಭಾರತ ಪಾದಯಾತ್ರೆ ಇಂದು ಸಮಾಪ್ತಿ

01:45 AM Jul 09, 2017 | Harsha Rao |

ಸೀತಾರಾಮ ಕೆದಿಲಾಯರು 2012ರ ಆಗಸ್ಟ್‌ 9ರಂದು ಕನ್ಯಾಕುಮಾರಿಯಿಂದ ಪಾದಯಾತ್ರೆಯಲ್ಲಿ ಹೊರಟು, ಸಮಗ್ರ ಗ್ರಾಮ ಭಾರತದಲ್ಲಿ ಅಲೆದಾಡುತ್ತ, ಕೃಷಿ- ಪಶುಪಾಲನೆ-ನಾಟಿವೈದ್ಯಗಳಂಥ ಜನಪದ ಜ್ಞಾನಪರಂಪರೆಯ ಕುರಿತ ಜಾಗೃತಿ ಮೂಡಿಸುತ್ತ, ಭಾರತೀಯ ದೇಶಿ ಸಂಸ್ಕೃತಿಯ ಮೌಲ್ಯಗಳನ್ನು ಜನಸಮುದಾಯಕ್ಕೆ ಜ್ಞಾnಪಿಸುತ್ತ… ಐದು ವರ್ಷಗಳ ಬಳಿಕ ಇದೀಗ ಮರಳಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ 69ರ ಹರೆಯದ ಈ ಮಾಜಿ ಹಿರಿಯ ಪ್ರಚಾರಕ ಇಂದು ಕನ್ಯಾಕುಮಾರಿ ತಲುಪುತ್ತಿದ್ದಾರೆ. ಭಾರತವೆಂಬುದೊಂದು ವಟವೃಕ್ಷವಾದರೆ, ಮೂಲದಿಂದ ಹೊರಟು, ಕೊಂಬೆಕೊಂಬೆಗಳಲ್ಲಿ ವಿಸ್ತರಿಸಿ, ರೆಂಬೆಗಳಲ್ಲಿ ಸಾಗಿ, ಎಲೆಯ ತುದಿಯನ್ನು ತಲುಪಿ ಮತ್ತೆ ಮೂಲಕ್ಕೇ ಮರಳಿದ ಹಾಗೆ ಈ ಯಾತ್ರೆ !

Advertisement

ಸೀತಾರಾಮ ಕೆದಿಲಾಯರು 2012 ಆಗಸ್ಟ್‌  9ರಂದು ಕನ್ಯಾಕುಮಾರಿಯಿಂದ ಹೊರಡುವಾಗ, ನಡೆಯುತ್ತ ನಡೆಯುತ್ತ ಭಾರತಕ್ಕೆ ಪ್ರದಕ್ಷಿಣೆಗಾಗಿ ಮುಂದಡಿ ಇಡುವಾಗ “ಇದೆಲ್ಲಾದರೂ ಸಾಧ್ಯವೆ?’ ಎಂದು ಹುಬ್ಬೇರಿಸಿದವರೇ ಹೆಚ್ಚು. ಕಣ್ಮರೆಯಾದ ಗ್ರಾಮೀಣ ಜೀವನ ಮೌಲ್ಯಗಳನ್ನು ಮತ್ತೆ ಜನರಿಗೆ ನೆನಪಿಸಿ ಅದರ ಅಗತ್ಯವನ್ನು ನೆನಪು ಮಾಡಿಕೊಡಲು ಕೆದಿಲಾಯ ಹೊರಟರು, ಅಂದಿನಿಂದ ಇಂದಿನವರೆಗೂ ಅವರು ನಡೆಯುತ್ತಲೇ ಇದ್ದಾರೆ.  

ನಿರಂತರ ಪಾದಯಾತ್ರೆ
ಇದುವರೆಗೆ 4 ವರ್ಷ 11 ತಿಂಗಳಲ್ಲಿ  1,797 ದಿನಗಳಾಗಿವೆ. ದಿನಕ್ಕೊಂದು ಗ್ರಾಮಗಳಲ್ಲಿ ತಂಗಿದರು. ಇದರ ನಾಲ್ಕೈದು ಪಟ್ಟು ಹೆಚ್ಚು ಗ್ರಾಮಗಳನ್ನು ಹಾದು 23,100 ಕಿ.ಮೀ. ಕ್ರಮಿಸಿದರು. ಇವರು ಹೋದ ಊರುಗಳನ್ನು ರಸ್ತೆ ಮಾರ್ಗದಲ್ಲಿ ಕ್ರಮಿಸುವುದಾದರೆ ಸುಮಾರು 27,000 ಕಿ.ಮೀ. ಆಗುತ್ತದೆ. ರಾತ್ರಿ ತಂಗುವಾಗ, ಪ್ರಮುಖ ತಾಣಗಳಿಗೆ ಭೇಟಿ ಕೊಡುವಾಗ ಎರಡು ಮೂರು ಕಿ.ಮೀ. ಹೆಚ್ಚುವರಿಯಾಗಿ ಕ್ರಮಿಸಿದ್ದು ಇದೆ. ಪ್ರತಿ ಊರಿನಲ್ಲಿ ಶಾಲೆ, ಮನೆಗಳ ಭೇಟಿ, ದೇವಸ್ಥಾನಗಳಿಗೆ ಪ್ರದಕ್ಷಿಣೆ ಬಂದದ್ದನ್ನು ಗಣಿಸಿದರೆ ಇವರ ನಡಿಗೆ ಸುಮಾರು 35,000 ಕಿ.ಮೀ. ಆಗಬಹುದು ಎಂದು ಅಂದಾಜಿಸಲಾಗಿದೆ.

ಸಂಚರಿಸಿದ-ಸಂಚರಿಸದ ರಾಜ್ಯಗಳು
ದಕ್ಷಿಣದ ತುತ್ತತುದಿ ಕನ್ಯಾಕುಮಾರಿಯಿಂದ ಹೊರಟ ಅವರು ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ, ಪಂಜಾಬ್‌, ಹರ್ಯಾಣ, ಜಮ್ಮು ಕಾಶ್ಮೀರ, ಹಿಮಾಚಲಪ್ರದೇಶ, ಉತ್ತರಪ್ರದೇಶ, ಉತ್ತರಾಂಚಲ, ಬಿಹಾರ, ಪ. ಬಂಗಾಳ, ಅಸ್ಸಾಂ, ಮೇಘಾಲಯ, ಅರುಣಾ ಚಲಪ್ರದೇಶ, ಛತ್ತೀಸ್‌ಗಢ, ಝಾರ್ಖಂಡ್‌, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ ದಾಟಿ ಈಗ ತಮಿಳುನಾಡಿನಲ್ಲಿದ್ದಾರೆ. ಒಟ್ಟು 25 ರಾಜ್ಯಗಳಲ್ಲಿ ಅವರು ನಡೆದರೆ, ನೇಪಾಳ, ಭೂತಾನ್‌ ರಾಷ್ಟ್ರಗಳ ಒಂದೆರಡು ಗ್ರಾಮಗಳಿಗೂ ಹೋದರು. ಪಶ್ಚಿಮಬಂಗಾಲದಲ್ಲಿರುವಾಗ ಬಾಂಗ್ಲಾದೇಶದ ನೆಲವನ್ನೂ ಸ್ಪರ್ಶಿಸಿದರು. ಒಂದೇ ರಾಜ್ಯವನ್ನು ಎರಡು-ಮೂರು ಬಾರಿ ದಾಟಿದ್ದೂ ಇದೆ.

ಉದಾಹರಣೆಗೆ 2012ರಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಮೂಲಕ ದಾಟಿದ್ದ ಅವರು ಆಂಧ್ರಪ್ರದೇಶದ ಮೂಲಕ ತಮಿಳುನಾಡಿಗೆ ಹೋಗುವಾಗ 2016ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಮೂಲಕ ಮತ್ತೆ ಕರ್ನಾಟಕವನ್ನು ಸ್ಪರ್ಶಿಸಿದರು. ಅವರು ಹೋಗದ ರಾಜ್ಯಗಳೆಂದರೆ ದಿಲ್ಲಿ, ಮಿಜೋರಾಂ, ನಾಗಾಲ್ಯಾಂಡ್‌, ತ್ರಿಪುರ, ಮಣಿಪುರ.  

Advertisement

ಮಿನಿಭಾರತದ ವ್ಯಕ್ತಿತ್ವ
ಸಾಮಾನ್ಯರು ಪವಿತ್ರ ತಾಣಗಳಿಗೆ ಪ್ರದಕ್ಷಿಣೆ ಬರುವುದನ್ನು ಕಂಡಿದ್ದರೆ ಇವರು ದೇಶದ “ಪರಿಕ್ರಮ’ಕ್ಕೆ ಕೈ ಹಾಕಿದರು. ಇಲ್ಲಿ ದೇಶವೇ ದೊಡ್ಡ ಪವಿತ್ರ ತಾಣ. ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕುವ ಪರಮೋಚ್ಚ ಉದ್ದೇಶ ದೇವರನ್ನು ಅರಿಯಲು. ಇವರು ಭಾರತವನ್ನು ಅರಿಯಲು, ಭಾರತವೇ ಆಗಲು ದೇಶಕ್ಕೇ ಪ್ರದಕ್ಷಿಣೆ ಹಾಕಿದರು. ಒಂದರ್ಥದಲ್ಲಿ ಬಹುರಾಜ್ಯಗಳ ಜನರನ್ನು ಹತ್ತಿರದಿಂದ ಕಂಡ “ಮಿನಿಭಾರತ’, “ನಿಜ ಭಾರತೀಯ’.

ಇವರು ಹೊರಟ ದಿನ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ಕ್ವಿಟ್‌ ಇಂಡಿಯಾ ಚಳವಳಿ ದಿನ. ಕೊನೆಗೊಳ್ಳುವ ಇಂದು ಗುರುಪೂರ್ಣಿಮೆ, ವ್ಯಾಸಪೂರ್ಣಿಮೆ.  

ಮತ್ತೆ ಕನ್ಯಾಕುಮಾರಿಯಲ್ಲಿ
ನಿನ್ನೆ ಕನ್ಯಾಕುಮಾರಿಗೆ ತಲುಪಿದ ಕೆದಿಲಾಯರು ವಿವೇಕಾನಂದ ಶಿಲಾಸ್ಮಾರಕದ ದರ್ಶನ ಮಾಡಿ ಇಂದು ಮುಂಜಾವ 4 ಗಂಟೆಗೆ ಕನ್ಯಾಕುಮಾರಿ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡು 108 ಪ್ರದಕ್ಷಿಣೆ ಹಾಕುತ್ತಾರೆ. ಅಲ್ಲಿಂದ 2.5 ಕಿ.ಮೀ. ದೂರದಲ್ಲಿರುವ ಮೂರು ಸಾಗರಗಳ ಸಂಗಮ ಸ್ಥಳಕ್ಕೆ ತಲುಪುತ್ತಾರೆ. ಅಲ್ಲಿಂದಲೇ ಕೆದಿಲಾಯರು ಹೊರಟದ್ದು. ಅಲ್ಲಿ ಅಂದು ಏರಿದ ಧ್ವಜ ಈಗ ಇಳಿಯುತ್ತದೆ. ಅಲ್ಲೊಂದು ಸಣ್ಣ ಕಾರ್ಯಕ್ರಮದಲ್ಲಿ ಇದುವರೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಇಂದು ಸಂಜೆ ನಾಗರಕೋಯಿಲ್‌ನಲ್ಲಿ ಸುಮಾರು 5,000 ಜನರು ಸೇರುವ ಗ್ರಾಮಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 

ವಯಸ್ಸೇರಿದರೂ ಉತ್ಸಾಹವೂ ಏರಿತು!
ಪಾದಯಾತ್ರೆ ಹೊರಡುವಾಗ ಕೆದಿಲಾಯರ ವಯಸ್ಸು 64. ನಡೆಯುತ್ತ ನಡೆಯುತ್ತ ಒಂದೊಂದು ದಿನ ಉರುಳಿದಂತೆ ಅವರ ವಯಸ್ಸು 69ಕ್ಕೆ ಏರಿದೆ. ವಯಸ್ಸು ಹೆಚ್ಚಾದಂತೆ ಉತ್ಸಾಹ ತಗ್ಗುವುದು ಲೋಕಾನುಭವವಾದರೆ ಇವರದು ಮಾತ್ರ ಈ ಮಾತಿಗೆ ಅಪವಾದ. “ಹೇಗಿದ್ದೀರಿ?’ ಎಂದು ಕೇಳಿದರೆ “ಆನಂದವಾಗಿದ್ದೇನೆ’, “ಹಿಂದೆ ಹೇಗಿದ್ದೇನೋ ಹಾಗೆಯೇ ಆನಂದವಾಗಿದ್ದೇನೆ’ ಎನ್ನುತ್ತಾರೆ. 

ಗಡಿಗಡಿಗೆ ನಡಿಗೆ
ದಿನವೂ 10ರಿಂದ 15 ಕಿ.ಮೀ. ಪ್ರಯಾಣ, ಒಂದು ಗ್ರಾಮದಲ್ಲಿ ವಾಸ್ತವ್ಯ, ಗ್ರಾಮಪ್ರವೇಶವಾದಾಗ ಶಾಲೆಗಳಲ್ಲಿ ಒಂದು ಸಸಿ ನೆಡುವುದು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು, ಆ ಊರಿನ ಕರಕುಶಲ ಕಲಾವಿದರು, ನಾಟಿವೈದ್ಯರು, ಜನಪದ ಕಲಾವಿದರು ಹೀಗೆ ಪರಂಪರೆಯನ್ನು ಉಳಿಸಿಕೊಂಡು ಬಂದ ಹಿರಿಯ ವ್ಯಕ್ತಿಗಳೊಂದಿಗೆ ವಿಚಾರವಿನಿಮಯ, ದೇವಸ್ಥಾನ, ಚರ್ಚ್‌, ಮಸೀದಿ, ಬೌದ್ಧಾಲಯ, ಜಿನಾಲಯಗಳಿಗೆ ಭೇಟಿ, ವಿವಿಧ ಚಿಂತಕರು, ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ, ದುಃಖೀತ ಕುಟುಂಬಗಳ ಭೇಟಿ-ಸಾಂತ್ವನ, ಶಾಲಾಕಾಲೇಜುಗಳಿಗೆ ಭೇಟಿ, ಯುವಕರೊಂದಿಗೆ ಚರ್ಚೆ, ಮಧ್ಯಾಹ್ನ ಭಿûಾನ್ನ, ಬೆಳಗ್ಗೆ ಮತ್ತು ರಾತ್ರಿ ದ್ರವಾಹಾರ, ಸಂಜೆ ಸತ್ಸಂಗದಲ್ಲಿ ಗ್ರಾಮೀಣ ಬದುಕಿನ ಅಗತ್ಯದ ವಿವರಣೆ, ರಾತ್ರಿ ವಿಶ್ರಾಂತಿ, ಬೆಳಗ್ಗೆ ಗೋಪೂಜೆ ನಡೆಸಿ ನಡಿಗೆಯ ಮುಂದುವರಿಕೆ. ಇದು ಐದೂ ವರ್ಷ ಪಾಲಿಸಿಕೊಂಡು ಬಂದ ಜೀವನಕ್ರಮ. 

ಬಹುಮುಖೀ ಸಂದೇಶ 
ನೆಲ-ಜಲ-ವನ ಸಹಿತ ಪರಿಸರ ಸಂರಕ್ಷಣೆ, ಗ್ರಾಮೀಣ ಜೀವನದ ಮೌಲ್ಯ, ಪರಂಪರಾಗತ ಜನಪದ ಜ್ಞಾನ, ಕೌಟುಂಬಿಕ ಜೀವನ ಪದ್ಧತಿ, ಸಾವಯವ ಕೃಷಿ, ದೇಸೀ ಗೋ ಸಾಕಣೆ ಮಹತ್ವಗಳನ್ನು ಅವರು ಇಷ್ಟು ದಿನಗಳಲ್ಲಿ ಸಾರಿದರು. ನೀವು ನಿಮ್ಮ ಗ್ರಾಮಗಳನ್ನು ಪ್ರೀತಿಸಿ, ನಿಮ್ಮ ಪರಂಪರಾಗತ ನಾಟಿ, ಜನಪದ ವಿದ್ಯೆಯನ್ನು ಕಲಿಯಿರಿ, ಪ್ರೋತ್ಸಾಹಿಸಿ, ನಿಮ್ಮ ಗ್ರಾಮಗಳನ್ನು ದೇಸೀಯವಾಗಿ ಅಭಿವೃದ್ಧಿಪಡಿಸಿ, ಹಿರಿಯರು, ದುಃಖೀತರಿಗೆ ನೆರವಾಗಿ ಈ ಸಂದೇಶಗಳನ್ನೂ ನೀಡಿದರು. ಹೀಗೆ ಎಲ್ಲಾ ಗ್ರಾಮಗಳೂ ಸ್ವತಂತ್ರವಾಗಿ ವಿಕಾಸವಾದಾಗ ಇಡೀ ಭಾರತವೇ ವಿಕಾಸವಾಗುತ್ತದೆ ಎಂಬ ಪರಿಕಲ್ಪನೆ ಅವರದು. ಇದಕ್ಕಾಗಿ ಅಲ್ಲಲ್ಲಿ ಸ್ಥಾನೀಯ ಸಮಿತಿಗಳನ್ನು ರಚಿಸಿದರು. 

ನೆಟ್ಟ ಗಿಡ-ಬಿಟ್ಟ ಫ‌ಲ: ಕರ್ಮ ಸಿದ್ಧಾಂತ
ಸೀತಾರಾಮ ಕೆದಿಲಾಯರು 2012 ನ. 1ರಂದು ಕನ್ನಡ ರಾಜ್ಯೋತ್ಸವದ ದಿನ ಉಡುಪಿ ಬಳಿಯ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವ ಸಂದೇಶ ನೀಡಿ ನೆಟ್ಟ ತೆಂಗಿನ ಸಸಿ ಈಗ ಫ‌ಲಬಿಡಲು ಅಣಿಯಾಗಿದೆ. ಇವರು ಹೋದ ಊರುಗಳಲ್ಲಿ ಸಾಂಕೇತಿಕವಾಗಿ ಒಂದೊಂದು ಗಿಡಗಳನ್ನು ನೆಟ್ಟಿದ್ದರು. 2012, 2013ರಲ್ಲಿ ನೆಟ್ಟ ಗಿಡಗಳು ಈಗ ಫ‌ಲ ಬಿಡತೊಡಗಿವೆ. ಇದೂ ಒಂದು ರೀತಿಯಲ್ಲಿ ಕರ್ಮ ಸಿದ್ಧಾಂತಕ್ಕೆ ಸಂವಾದಿಯಾಗಿ ಕಾಣುತ್ತದೆ. ನಮಗೆ ಗೊತ್ತಿಧ್ದೋ ಗೊತ್ತಿಲ್ಲದೆಯೋ ಬೀಜ ಬಿತ್ತುತ್ತಲೇ (ಕೆಲಸದಲ್ಲಿ) ಇರುತ್ತೇವೆ. ಈ ಬೀಜ ಮೊಳಕೆಯೊಡೆದು ಫ‌ಲ ಬಿಡುತ್ತಲೇ ಇರುತ್ತದೆ. 

ಕಾಲ ಗತಿಸುತ್ತ ಹೋಗುವುದರೊಂದಿಗೆ ವ್ಯಕ್ತಿಗಳು, ಪ್ರಾಣಿಪಕ್ಷಿಗಳು, ಗಿಡಮರಗಳೂ ನಶಿಸುತ್ತ ಹೋಗುತ್ತವೆ. ಖಾಲಿಯಾದ ಅದೇ ಸ್ಥಾನವನ್ನು ಅದೇ ಮೂಲದಿಂದ ಬಂದ ಇನ್ನೊಂದು ಕುಡಿ ಭರ್ತಿಗೊಳಿಸುತ್ತದೆ. ಇಡೀ ಜಗತ್ತು ಇದೇ ಸೂತ್ರದಲ್ಲಿ ನಡೆಯುವುದು ಒಂದು ಸಾಮಾನ್ಯ ಗಿಡವನ್ನು ನೋಡಿದಾಗಲೂ ಅನುಭವಕ್ಕೆ ಬರುತ್ತದೆ.  

– ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next