Advertisement

ಸರ್ಕಾರಿ ಪಪೂ ಕಾಲೇಜಿಗಿಲ್ಲ ಮೂಲ ಸೌಕರ್ಯ

12:28 PM Jan 24, 2020 | Naveen |

ಸಿರುಗುಪ್ಪ: ತಾಲೂಕಿನ ಸಿರಿಗೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸಾಕಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ನುರಿತ ಮತ್ತು ತಜ್ಞ ಉಪನ್ಯಾಸಕರ ಕೊರತೆಯಿಂದ ಇಲ್ಲಿನ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅತಿಥಿ ಉಪನ್ಯಾಸಕರೇ ಇಲ್ಲಿನ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ!

Advertisement

2017-18ನೇ ಸಾಲಿನಲ್ಲಿ ಸರ್ಕಾರ ಸಿರಿಗೇರಿ ಗ್ರಾಮದ ಪ್ರೌಢಶಾಲೆಯಲ್ಲಿ ಸ.ಪ. ಪೂರ್ವ
ಕಾಲೇಜು ಪ್ರಾರಂಭಿಸಿ, ನಂತರ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಜಮೀನಿನಲ್ಲಿ 2019ನೇ ಸಾಲಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ, ಕಾಲೇಜನ್ನು ಆರಂಭಿಸಿ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ಅನುಮತಿ ನೀಡಿದ್ದು, ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗಕ್ಕಾಗಿ ಬಳ್ಳಾರಿ, ಸಿರುಗುಪ್ಪ, ತೆಕ್ಕಲಕೋಟೆಗೆ ಹೋಗುವುದು ತಪ್ಪುತ್ತದೆ ಎಂದು ಪಾಲಕರು ಸಂತಸದಲ್ಲಿದ್ದರು. ಆದರೆ ಈ ಸಂತಸ ಹುಸಿಯಾಗಿದೆ.

ಅತಿಥಿಗಳದ್ದೇ ಆಸರೆ: ಈ ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ
ಒಟ್ಟು 12 ಹುದ್ದೆಗಳು ಮಂಜೂರಾಗಿದ್ದು, ಒಂದೂ ಹುದ್ದೆಯನ್ನು ತುಂಬದೆ ಪ್ರಸ್ತುತ
ಪ್ರಭಾರಿ ಪ್ರಾಂಶುಪಾಲರು ಮತ್ತು 8 ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಪ್ರಥಮ ಪಿಯುಸಿಯಲ್ಲಿ 81, ದ್ವಿತಿಯ ಪಿಯುಸಿಯಲ್ಲಿ 39 ಒಟ್ಟು 120 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ನೆಲದ ಮೇಲೆಯೇ ಕುಳಿತು ಪಾಠ ಕೇಳುವ ಸ್ಥಿತಿ: ರೂ. 1 ಕೋಟಿ 26ಲಕ್ಷ ವೆಚ್ಚದಲ್ಲಿ ಉತ್ತಮವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೇಕಾದ ಡೆಸ್ಕ್ ಗಳನ್ನು ಪೂರೈಕೆ ಮಾಡದ ಕಾರಣ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಪ್ರವಚನ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೀಠೊಪಕರಣಗಳ ಪೂರೈಕೆ ಇಲ್ಲ: ಪ್ರಾಂಶುಪಾಲರ ಕಚೇರಿಯಲ್ಲಿ ಕುಳಿತುಕೊಳ್ಳಲು ಬೇಕಾದ
ಪೀಠೊಪಕರಣ ಮತ್ತು ಕ್ಲಾಸ್‌ರೂಂಗಳಲ್ಲಿ ಟೇಬಲ್‌, ಚೇರ್‌ಗಳ ವ್ಯವಸ್ಥೆ ಇಲ್ಲದೆ ಇರುವುದರಿಂದ ಅತಿಥಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಗ್ರಾಮಸ್ಥರ ಮನೆಗಳಿಂದ ಪೀಠೊಪಕರಣಗಳನ್ನು ತಂದು ಪಾಠಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಕೊರತೆ: ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 9-30ರಿಂದ ಮಧ್ಯಾಹ್ನ 3.30ರವರೆಗೆ ಪಾಠ ಪ್ರವಚನಗಳು ನಡೆಯುತ್ತವೆ. ಐದುವರೆ ಗಂಟೆಗಳ ಕಾಲ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಾಲ ಕಳೆಯಬೇಕಾಗಿದೆ. ಆದರೆ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ವಿದ್ಯಾರ್ಥಿಗಳು ಕಾಲೇಜು ಪಕ್ಕದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿರುವ ನಲ್ಲಿಯಲ್ಲಿ ನೀರು ಕುಡಿದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಶೌಚಾಲಯವಿದ್ದರೂ ನೀರಿಲ್ಲ: ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಉತ್ತಮವಾದ ಕೊಠಡಿಗಳ ನಿರ್ಮಾಣದ ಜೊತೆಗೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನೀರಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಯಾವುದೇ ವಿದ್ಯಾರ್ಥಿಗಳು ಶೌಚಾಲಯಗಳ ಬಳಕೆ ಮಾಡದೆ ಬಯಲು
ಶೌಚಾಲಯವೇ ಆಸರೆಯಾಗಿದೆ.

ಕಾಂಪೌಂಡ್‌ ನಿರ್ಮಾಣ: ಕಾಲೇಜಿನ ಕಟ್ಟಡದ ಸುರಕ್ಷತೆ ಮತ್ತು ಕಿಡಿಗೇಡಿಗಳಿಂದ ಆಗುವ ಹಾನಿ ತಪ್ಪಿಸಲು ಕಾಂಪೌಂಡ್‌ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಕಾಂಪೌಂಡ್‌ ಇಲ್ಲದೆ ಇರುವುದರಿಂದ ಕಿಡಿಗೇಡಿಗಳು ಕಾಲೇಜು ಬಿಟ್ಟ ನಂತರ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ.

ಕುಡಿಯುವ ನೀರು, ಶೌಚಾಲಯದ ಬಳಕೆಗೆ ಬೇಕಾದ ನೀರಿನ ವ್ಯವಸ್ಥೆ ಕಾಲೇಜಿನಲ್ಲಿ ಇಲ್ಲದಿರುವುದರಿಂದ ಹೊರಗಿನಿಂದಲೇ ಕುಡಿಯುವ ನೀರು ತಂದು ಕುಡಿಯುತ್ತೇವೆ. ಶೌಚ ಕಾರ್ಯವನ್ನು ಬಯಲಿನಲ್ಲಿಯೇ ಮಾಡುತ್ತಿದ್ದೇವೆ.
ವಿದ್ಯಾರ್ಥಿಗಳು

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ಕುಡಿಯುವ ನೀರು ಮತ್ತು
ಬಳಕೆ ನೀರಿನ ಸೌಲಭ್ಯವಿಲ್ಲ. ಕಾಯಂ ಉಪನ್ಯಾಸಕರ ನೇಮಕವಾಗಿಲ್ಲ. 8 ಜನ ಅತಿಥಿ ಉಪನ್ಯಾಸಕರು ಸದ್ಯ ಈ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮೇಲಧಿ ಕಾರಿಗಳ ಗಮನಕ್ಕೆ ತರಲಾಗಿದೆ.
ವಿಶ್ವನಾಥಗೌಡ,
ಪ್ರಭಾರಿ ಪ್ರಾಂಶುಪಾಲ

„ಆರ್‌.ಬಸವರೆಡ್ಡಿ, ಕರೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next