Advertisement

ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ ವಾಲಿಬಾಲ್‌ ಟ್ರೋಫಿ

05:07 PM Mar 22, 2017 | |

ಮುಂಬಯಿ: ಸಿರಿನಾಡ ವೆಲ್ಫೇರ್‌ ಅಸೋಸಿಯೇಶನ್‌ ಡೊಂಬಿವಲಿ ವತಿಯಿಂದ ತುಳು-ಕನ್ನಡಿಗರಿಗಾಗಿ ವಾಲಿಬಾಲ್‌ ಪಂದ್ಯಾಟವು ಮಾ. 5ರಂದು ಡೊಂಬಿವಲಿ ಪಶ್ಚಿಮದ ಓಲ್ಡ್‌ ಡೊಂಬಿವಲಿಯ ಖಾಡಿ ಕ್ರೀಡಾಂಗಣದಲ್ಲಿ ಜರಗಿತು.

Advertisement

ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿ ದಿ| ಎಸ್‌. ಎಂ. ಪಾಲನ್‌ ಹಾಗೂ ಕ್ರೀಡಾಕೂಟದ ಸಕ್ರಿಯ ಕಾರ್ಯಕರ್ತ ದಿ| ಸೂರಜ್‌ ಪೂಜಾರಿ ಅವರ ಸ್ಮರಣಾರ್ಥವಾಗಿ ಸಿರಿನಾಡ ಟ್ರೋಫಿ-2017ನ್ನು ಆಯೋಜಿಸಲಾಗಿತ್ತು.

ಯುವ ವಿಭಾಗದ ವತಿಯಿಂದ ಬೆಳಗ್ಗೆ ಆಯೋಜಿಸಲಾಗಿದ್ದ ಪಂದ್ಯಾಟದ ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘ ಡೊಂಬಿವಲಿ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ವಹಿಸಿದ್ದರು. ಡೊಂಬಿವಲಿ ಕರ್ನಾಟಕ ಸಂಘದ ಉಪ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ,  ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಡಾ| ವಿ. ಎಂ. ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ, ಬಂಟರ ಸಂಘ ಡೊಂಬಿವಲಿ ಇದರ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಕಲ್ಲಡ್ಕ, ಯುವ ವಿಭಾಗದ ಕಾರ್ಯಾಧ್ಯಕ್ಷ ಮಹೇಶ್‌ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡಾಪಟು ತೇಜಸ್‌ ಸಾಲ್ಯಾನ್‌, ಸ್ಥಳೀಯ ಸಮಾಜ ಸೇವಕ ಜೈ ಸಿಂಗ್‌ ಪಾಟೀಲ್‌, ಸತ್ಯವಾನ್‌ ಮ್ಹಾತ್ರೆ, ಕ್ರೀಡಾಪಟು ತುಷಾರ್‌, ಸಿರಿನಾಡ ಸಂಸ್ಥೆಯ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಿವಾಕರ ಶೆಟ್ಟಿ ಇಂದ್ರಾಳಿ ಅವರು, ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ನ ಯಾವುದೇ ಕಾರ್ಯಕ್ರಮದಲ್ಲಿಯೂ ಸಿರಿಯು ತುಂಬಿದ್ದು, ಮೇಲ್ಪಂಕ್ತಿಯಾಗಿರುತ್ತದೆ. ಸಂಸ್ಥೆಯ ಕಾರ್ಯಕರ್ತರ ಒಗ್ಗಟ್ಟು, ಅಭಿಮಾನ, ಸ್ತುತ್ಯರ್ಹ. ಕಣ್ಮರೆಯಾದ ಕಣ್ಮಣಿಗಳ ಸ್ಮರಣಾರ್ಥ ಇಂದು ಜರಗಿದ ಸ್ಪರ್ಧೆಯು ಯಾವುದೇ ವಾದ, ವಿವಾದಗಳಿಗೆ ಎಡೆಮಾಡಿಕೊಡದೆ ಸುಸೂತ್ರವಾಗಿ ನಡೆದಿ ರುವುದು ಅಭಿನಂದನೀಯ. ಅಗಲಿದ ದೇಹಕ್ಕೆ ನಿಜಾರ್ಥದಲ್ಲಿ ಶ್ರದ್ಧೆಯಿಂದ ಅರ್ಪಿಸಿದ ಶ್ರದ್ಧಾಂಜಲಿ ಇದಾಗಿದೆ ಎಂದರು.

ಗಣ್ಯರು ರಿಬ್ಬರ್‌ ಕತ್ತರಿಸಿ, ತೆಂಗಿನಕಾಯಿ ಒಡೆದು  ಪಂದ್ಯಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶೋಭಾ ಟಿ. ಪೂಜಾರಿ, ದಿವ್ಯಾ ಎಸ್‌. ಶೆಟ್ಟಿ, ಶಕುಂತಳಾ ಕೆ. ಸಾಲ್ಯಾನ್‌ ಅವರು ಪ್ರಾರ್ಥನೆಗೈದರು. ವಸಂತ ಎನ್‌. ಸುವರ್ಣ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯದರ್ಶಿ ದಾಮೋದರ ಸುವರ್ಣ ವಿಜೇತರ ಯಾದಿಯನ್ನು ಓದಿದರು.

Advertisement

ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಗೌರವ ಕೋಶಾಧಿಕಾರಿ ಸದಾಶಿವ ಸಾಲ್ಯಾನ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್‌ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಶೆಟ್ಟಿ ಉಪಸ್ಥಿತರಿದ್ದರು. ವಿನೋದ್‌ ಕರ್ಕೇರ, ಗುರುರಾಜ ಸುವರ್ಣ, ಸಚಿನ್‌ ಕೋಟ್ಯಾನ್‌ ಹಾಗೂ ಪದಾಧಿಕಾರಿಗಳು ಗಣ್ಯರನ್ನು ಗೌರವಿಸಿದರು. 

ಜತೆ ಕೋಶಾಧಿಕಾರಿ ವಿಠಲ ಅಮೀನ್‌, ಜತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಅವರು ಸಹಕರಿಸಿದರು.  ಸಹಕರಿಸಿದ ಸುಧೀರ್‌ ಮೆಂಡನ್‌, ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದ ವಿಕ್ಕಿ, ತೀರ್ಪುಗಾರರಾದ ಪ್ರೇಮ್‌ ಮಾಸ್ಟರ್‌, ವೀಕ್ಷಕ ವಿವರಣೆಕಾರ ಸಂತೋಷ್‌ ಸಾಲ್ಯಾನ್‌ ಅವರನ್ನು ಗೌರವಿಸಲಾಯಿತು.

ಯುವ ಪೀಳಿಗೆಯನ್ನು ಪ್ರೇರೇಪಿಸುವ ಈ ಪಂದ್ಯಾಟ ಕ್ರೀಡಾಸ್ಪೂರ್ತಿ, ಶಿಸ್ತು, ಸಾಂಘಿಕ ಜೀವನದ ಮಹತ್ವವನ್ನು ತಿಳಿಸುವುದರೊಂದಿಗೆ ಯಶಸ್ಸಿನ ಜೀವನಕ್ಕೆ ದಾರಿದೀಪವಾಗಿದೆ  – ಡಾ| ವಿ. ಎಂ. ಶೆಟ್ಟಿ 
   (ಕಾರ್ಯಾಧ್ಯಕ್ಷರು: ಕ್ರೀಡಾ ವಿಭಾಗ ಕರ್ನಾಟಕ ಸಂಘ ಡೊಂಬಿವಲಿ).

ಹಿರಿಯರು, ಯುವಕರು, ಮಹಿಳೆಯರು ಕೂಡಿ ತ್ರಿವೇಣಿ ಸಂಗಮವಾಗಿರುವ ಈ ಸಂಸ್ಥೆ ಸಂಘಟನೆಗೆ ಹೆಸರಾಗಿದೆ. ಇಹಲೋಕವನ್ನು ತ್ಯಜಿಸಿದ ಜೀವಿಗಳ ನೆನಪಿನಲ್ಲಿಟ್ಟ ಈ ಪಂದ್ಯಾಟದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ   ತುಳು-ಕನ್ನಡಿಗರು ಭಾಗವಹಿಸಿರುವುದು ಅಭಿನಂದನೀಯ. ಕ್ರೀಡೆಯು ಮಾನಸಿಕ ಸಮಾತೋಲನವನ್ನು ಕಾಪಾಡಿ, ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗುತ್ತದೆ 
 – ಹೇಮಂತ್‌ ಶೆಟ್ಟಿ (ಅಧ್ಯಕ್ಷರು: ತುಳುಕೂಟ ಡೊಂಬಿವಲಿ).

ಚಿಕ್ಕ-ಚೊಕ್ಕ ಸಂಸ್ಥೆಯಾಗಿರುವ ಇಲ್ಲಿ ಶಿಸ್ತು, ಏಕತೆ ಎದ್ದು ಕಾಣುತ್ತಿದೆ. ಮುಂದಿನ ಪಂದ್ಯಾಟದಲ್ಲಿ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ತಂಡಗಳನ್ನು ಭಾವಗಹಿಸುವಂತೆ ಸಂಸ್ಥೆಯು ಮುಂದಾಗಬೇಕು. ಆಗ  ಸಂಸ್ಥೆಯ ಕಾರ್ಯ ಶ್ರಮ ಫಲದಾಯಕವಾಗಿರುತ್ತದೆ
– ಸುಕುಮಾರ್‌ ಎನ್‌. ಶೆಟ್ಟಿ (ಕಾರ್ಯಾಧ್ಯಕ್ಷರು: ಸುವರ್ಣ ಮಹೋತ್ಸವ ಸಮಿತಿ  ಡೊಂಬಿವಲಿ ಕರ್ನಾಟಕ ಸಂಘ).

ಮುಂದಿನ ದಿನಗಳಲ್ಲಿ ಈ ಪಂದ್ಯಾಟವು ಅದ್ದೂರಿಯಾಗಿ ಜರಗಿ ತಮ್ಮ ಸೇವಾ ಕಾರ್ಯಗಳು ಜನಮನ ಮುಟ್ಟುವಂತಾಗಲಿ. ಸಂಸ್ಥೆಯ ಈ ಕಾರ್ಯದಿಂದ ಕ್ರೀಡಾ ಪ್ರತಿಭೆಗಳು ಬೆಳಗಲಿ 
  – ಪ್ರಭಾಕರ ಶೆಟ್ಟಿ  ಕಲ್ಲಡ್ಕ (ಕಾರ್ಯಾಧ್ಯಕ್ಷರು: ಬಂಟರ ಸಂಘ ಡೊಂಬಿವಲಿ   ಪ್ರಾದೇಶಿಕ ಸಮಿತಿ ಕ್ರೀಡಾ ವಿಭಾಗ).

ಪ್ರಥಮ ಬಾರಿ ಆಯೋಜಿಸಿದ ಈ ಪಂದ್ಯಾಟದಲ್ಲಿ ಭೇದಭಾವವಿಲ್ಲದೆ ಎಲ್ಲರ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಂಸ್ಥೆಯ ಸಮಾಜಪರ ಕಾರ್ಯಗಳಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಭವಿಷ್ಯದಲ್ಲಿ ಸಂಸ್ಥೆಯು ಕನ್ನಡ ಮನಸ್ಸುಗಳನ್ನು ಒಂದಾಗಿಸುವ ಕಾರ್ಯದಲ್ಲಿ ಮುನ್ನಡೆಯಲಿದೆ. ಈ ಕಾರ್ಯಕ್ರಮದಿಂದ ಸಂಸ್ಥೆಗೆ ಆನೆ ಬಲ ಬಂದಂತಾಗಿದೆ 
    – ಆರ್‌. ಕೆ. ಸುವರ್ಣ (ಅಧ್ಯಕ್ಷರು: ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌)

Advertisement

Udayavani is now on Telegram. Click here to join our channel and stay updated with the latest news.

Next