Advertisement

ಸಿರಿಗೆರೆಗೆ ಪೇಜಾವರ ಶ್ರೀ ಕರೆಸಲು ಆಗಲೇ ಇಲ್ಲ

12:31 PM Dec 30, 2019 | Naveen |

ಸಿರಿಗೆರೆ: ಧಾರ್ಮಿಕ ಕ್ಷೇತ್ರದ ದಿಗ್ಗಜ ಪೇಜಾವರ ಶ್ರೀಗಳು ಹರಿಪಾದ ಸೇರಿರುವುದಕ್ಕೆ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ತರಳಬಾಳು ಜಗದ್ಗುರು ಮಠದೊಂದಿಗೆ ಪೇಜಾವರ ಶ್ರೀಗಳ ನಿಕಟ ಸಂಪರ್ಕವನ್ನು ಸ್ಮರಿಸಿರುವ ಅವರು, ತರಳಬಾಳು ಹುಣ್ಣಿಮೆಯಲ್ಲಿ ಬಹಳ ಪ್ರೀತಿಯಿಂದ ಭಾಗವಹಿಸುತ್ತಿದ್ದರು. ನಮ್ಮನ್ನು ಉಡುಪಿಯ ಕಾರ್ಯಕ್ರಮಗಳಿಗೆ ಅಭಿಮಾನದಿಂದ ಬರಮಾಡಿಕೊಳ್ಳುತ್ತಿದ್ದರು ಎಂದು ಸ್ಮರಿಸಿಕೊಂಡರು. ಇತ್ತೀಚೆಗೆ ಪೇಜಾವರ ಶ್ರೀಗಳು ಚಿತ್ರದುರ್ಗಕ್ಕೆ ಆಗಮಿಸಿದಾಗ ಸಿರಿಗೆರೆಗೆ ಬರಲು ಬಯಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಬರಮಾಡಿಕೊಳ್ಳಲು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ತಿಂಗಳ 7ರಂದು ಚಿತ್ರದುರ್ಗದಲ್ಲಿ ಭಗವದ್ಗೀತಾ ಅಭಿಯಾನ ಕಾರ್ಯಕ್ರಮಕ್ಕೆ ಸಂಘಟಕರು ನಮ್ಮನ್ನು ಆಹ್ವಾನಿಸಿದ್ದರು. ಆ ದಿನ ಪೇಜಾವರ ಶ್ರೀಗಳು ಸಹ ಅದೇ ಕಾರ್ಯಕ್ರಮಕ್ಕೆ ದಯಮಾಡಿಸುತ್ತಾರೆಂದು ತಿಳಿದು ತುಂಬಾ ಸಂತೋಷವಾಗಿತ್ತು. ಅವರನ್ನು ನೋಡದೆ ಬಹಳ ವರ್ಷಗಳೇ ಆಗಿದ್ದವು. ಪರ್ಯಾಯ ಪೀಠದಲ್ಲಿದ್ದ ಅವರು ನಮ್ಮನ್ನು ಉಡುಪಿಗೆ ಆಹ್ವಾನಿಸಿದ್ದರು. ಆದರೆ ಕಾರ್ಯ ಗೌರವದ ನಿಮಿತ್ತ ಒಪ್ಪಿಕೊಳ್ಳಲು ಆಗಿರಲಿಲ್ಲ.
ಒಂದೆರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದರೂ ಅವರೊಂದಿಗೆ ಮುಖತಃ ಮಾತನಾಡಬೇಕೆಂಬ ಹಂಬಲ ಬಹಳವಾಗಿತ್ತು ಎಂದರು.

ಚಿತ್ರದುರ್ಗದ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ಅನಿವಾರ್ಯ ಕಾರಣಗಳಿಂದ ಬಾರದೇ ಇದ್ದ ಕಾರಣ ನಿರಾಶೆ ಉಂಟಾಗಿತ್ತು. ಮರುದಿನ ಆಗಮಿಸಿದ್ದ ಅವರು ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ ಸಿರಿಗೆರೆಗೆ ಬಂದು ನಮ್ಮೊಂದಿಗೆ ಮಾತನಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದರು. ಆದರೆ ಆ ದಿನ ಬೇರೊಂದು ಕಾರ್ಯಕ್ರಮದ
ನಿಮಿತ್ತ ಸಿರಿಗೆರೆಯಲ್ಲಿ ಇಲ್ಲದ ಕಾರಣ ಅವರನ್ನು ಮಠಕ್ಕೆ ಬರ ಮಾಡಿಕೊಳ್ಳಲು ಆಗಲಿಲ್ಲ. ಸನಿಹದಲ್ಲಿ ಅವರನ್ನು ಕಾಣುವ ಸಲುವಾಗಿಯೇ ಉಡುಪಿಗೆ ಬರುವುದಾಗಿ ಹೇಳಿದ್ದೆವು ಎಂದು ನೆನಪಿಸಿಕೊಂಡರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಎನ್ನುವಂತೆ ಕಳೆದ ಶುಕ್ರವಾರ ಹಳೇಬೀಡಿಗೆ ಹೋದಾಗ ಪೇಜಾವರ ಶ್ರೀಗಳ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿದು ಘಾಸಿಗೊಂಡೆವು. ಅದೇ ದಿನ ಸಂಜೆ ಸಿರಿಗೆರೆಯಲ್ಲಿ ನಮ್ಮ ಮಠದ ಕಾರ್ಯಕ್ರಮವಿದ್ದರೂ ಲೆಕ್ಕಿಸದೆ ಉಡುಪಿಗೆ ಧಾವಿಸಿದೆವು. ಉಡುಪಿ ತಲುಪಿದಾಗ ರಾತ್ರಿ 8 ಗಂಟೆ. ಸೀದಾ ಆಸ್ಪತ್ರೆಗೆ ಹೋದಾಗ ವೈದ್ಯರು ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಹೋದರು. “ಶರಣ ನಿದ್ರೆಗೈದರೆ ಜಪ ಕಾಣಿರೋ’
ಎನ್ನುವಂತೆ ಶ್ರೀಗಳು ಸುತ್ತಣ ಪರಿವೆಯಿಲ್ಲದೆ ಸ್ಥಿತಪ್ರಜ್ಞರಂತೆ ಪವಡಿಸಿದ್ದರು.

ಮುಖತಃ ಭೇಟಿಯಾದರೂ ಮಾತನಾಡಲು ಆಗಲಿಲ್ಲವಲ್ಲಾ ಎಂಬ ವಿಷಾದ ನಮ್ಮನ್ನು ಆವರಿಸಿತು. ಅವರ ಆರೋಗ್ಯದ ಬಗ್ಗೆ ವೈದ್ಯರನ್ನು ವಿಚಾರಿಸಿ ಕೆಲ ಹೊತ್ತು ಇದ್ದು ನಮ್ಮ ಗೌರವವನ್ನು ಸಲ್ಲಿಸಿ ಆಸ್ಪತ್ರೆಯಿಂದ ನಿರ್ಗಮಿಸುವಾಗ ಗತಕಾಲದ ನೆನಪುಗಳ ಸುರುಳಿ ಉರುಳತೊಡಗಿತು ಎಂದರು.

Advertisement

ಶ್ರೀಗಳು ನಮ್ಮ ಲಿಂಗೈಕ್ಯ ಗುರುವರ್ಯರ ಕಾಲದಿಂದಲೂ ನಮ್ಮ
ಮಠದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಪಾಣಿನಿಯ ಸೂತ್ರಗಳನ್ನು ಗಣಕಯಂತ್ರಕ್ಕೆ ಅಳವಡಿಸಿ ನಾವು ಸಿದ್ಧಪಡಿಸಿದ “ಗಣಕಾಷ್ಟಾಧ್ಯಾಯೀ’ ಎಂಬ ತಂತ್ರಾಂಶವನ್ನು ಒಮ್ಮೆ ಅವರಿಗೆ ತೋರಿಸಿದಾಗ ಶ್ರೀಕೃಷ್ಣನ ಬಾಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದಂತಾಯಿತು ಎಂದು ಹೃದಯತುಂಬಿ ಕೊಂಡಾಡಿದ್ದರು ಎಂದು ಹೇಳಿದರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಅಂತಿಮ ಗೌರವ ಸಲ್ಲಿಸಲು ತರಳಬಾಳು ಜಗದ್ಗುರುಗಳು ಬೆಂಗಳೂರಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next