Advertisement

ಮುದ್ದೇನಹಳ್ಳಿಯಲ್ಲಿ ಸರ್‌ ಎಂವಿ ಹುಟ್ಟುಹಬ್ಬದ ಸಂಭ್ರಮ

09:37 PM Sep 15, 2019 | Lakshmi GovindaRaju |

ಭಾರತ ರತ್ನ ಮೋಕ್ಷಗುಂಡಂ ಸರ್‌ ಎಂ.ವಿಶ್ವೇಶ್ವರಯ್ಯನವರ 159ನೇ ಜನ್ಮ ಜಯಂತಿ ಪ್ರಯುಕ್ತ ಭಾನುವಾರ ಅವರ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸರ್‌ಎಂವಿ ಸಮಾಧಿ ಸ್ಥಳ ಹಾಗೂ ಪುತ್ಥಳಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಸರ್‌ಎಂವಿ ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸಿದರು. ಮುದ್ದೇನಹಳ್ಳಿ ವಿಟಿಯು ಸ್ನಾತಕ ವಿದ್ಯಾರ್ಥಿಗಳು ಹಾಗೂ ಸತ್ಯಸಾಯಿ ಗ್ರಾಮದ ಸಹಸ್ರಾರು ವಿದ್ಯಾರ್ಥಿಗಳು ಸಮಾಧಿ ಸ್ಥಳದಲ್ಲಿ ನಡೆಸಿದ ಸರ್ವಧ‌ರ್ಮಗಳ ಪ್ರಾರ್ಥನೆ ಗಮನ ಸೆಳೆಳೆಯಿತು.

Advertisement

ಚಿಕ್ಕಬಳ್ಳಾಪುರ: ತಮ್ಮ ಕಾಯಕ ನಿಷ್ಠೆ ಜತೆಗೆ ಪ್ರಾಮಾಣಿಕತೆಗೆ ಹೆಸರಾಗಿ ದೇಶ, ವಿದೇಶಗಳಲ್ಲಿ ಸರ್ವಶ್ರೇಷ್ಠ ಇಂಜಿನಿಯರ್‌ ಎಂಬ ಖ್ಯಾತಿಗೆ ಪಾತ್ರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ದಶಕಗಳ ಹಿಂದೆಯೇ ವಿಶ್ವದ ಗಮನ ಸೆಳೆಯುವಂತೆ ಮಾಡಿದ ಭಾರತ ರತ್ನ ಮೋಕ್ಷಗುಂಡಂ ಸರ್‌.ಎಂ.ವಿಶ್ವೇಶ್ವರಯ್ಯನವರ 159ನೇ ಜನ್ಮ ಜಯಂತಿ ಭಾನುವಾರ ಸ್ವಗ್ರಾಮ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿತು.

ಸಮಾಧಿ ಸ್ಥಳ ದರ್ಶನ: ಮುದ್ದೇನಹಳ್ಳಿಯಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಜನ್ಮ ಜಯಂತಿ ಪ್ರಯುಕ್ತ ಜಿಲ್ಲೆಯ ವಿವಿಧ ಭಾಗಗಳಿಂದ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಶಾಲಾ, ಕಾಲೇಜು ಶಿಕ್ಷಕ- ಉಪನ್ಯಾಸಕರು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಅಧಿಕಾರಿಗಳು, ಇಂಜಿಯನಿಯರ್‌ಗಳು, ತಾಂತ್ರಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು, ವಿದ್ಯಾರ್ಥಿಗಳು, ಚುನಾಯಿತಿ ಜನಪ್ರತಿನಿಧಿಗಳು ತಂಡೋಪ ತಂಡಗಳಾಗಿ ಆಗಮಿಸಿ ಸರ್‌ಎಂವಿ ಸಮಾಧಿ ಸ್ಥಳ ದರ್ಶನ ಮಾಡುವ ಮೂಲಕ ಕಾಯಕ ಯೋಗಿಯ ಸೇವೆಯನ್ನು ಗುಣಗಾನ ಮಾಡಿದರು. ಸರ್‌ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.

ಪುತ್ಥಳಿಗೆ ಮಾಲಾರ್ಪಣೆ: ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ, ಅಪರ ಜಿಲ್ಲಾಧಿಕಾರಿ ಆರತಿ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ತಾಪಂ ಇಒ ಹರ್ಷವರ್ಧನ್‌, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ಸೇರಿದಂತೆ ಮತ್ತಿತರರು ಸರ್‌ಎಂವಿ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಪುತ್ಥಳಿಗೆ ಮಾರ್ಲಾಪಣೆ ಮಾಡುವ ಮೂಲಕ ಜಿಲ್ಲೆಯ ಜನತೆ ಪರವಾಗಿ ಗೌರವ ಸೂಚಿಸಿದರು. ಉಳಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು, ಸ್ಥಳೀಯ ಮುದ್ದೇನಹಳ್ಳಿ ಗ್ರಾಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು ಸರ್‌ಎಂವಿ ಸಮಾಧಿ ಸ್ಥಳಕ್ಕೆ ಆಗಮಿಸಿ ಪುಪ್ಪನಮನ ಸಲ್ಲಿಸಿದ ದೃಶ್ಯಗಳು ಸಾಮಾನ್ಯವಾಗಿತ್ತು.

ಸರ್‌ಎಂವಿ ಭಾವಚಿತ್ರ ಮೆರವಣಿಗೆ: ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ವಿಶ್ವೇಶ್ವರಯ್ಯನವರ ಭಾವಚಿತ್ರ ಇರುವ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಸಿ ಜಯಂತಿಗೆ ಕಳೆ ತಂದುಕೊಟ್ಟಿತು. ಜಿಲ್ಲಾ ಪ್ರಧಾನ ಹಾಗೂ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಶಾಲೆಯಿಂದ ಆರಂಭಗೊಂಡ ಮೆರವಣಿಗೆ ನಗರದ ಬಿಬಿ ರಸ್ತೆಯ ಮುಖಾಂತರ ಕಂದವಾರ ಅಲ್ಲಿಂದ ಮುದ್ದೇನಹಳ್ಳಿ ಸರ್‌ಎಂವಿ ಸಮಾಧಿ ಸ್ಥಳದವರೆಗೂ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸಮಾಧಿ ಸ್ಥಳ ತೋರಿಸಿ ಅವರ ಸಾಧನೆಗಳನ್ನು ಬಿಂಬಿಸುವ ವಸ್ತು ಸಂಗ್ರಹಾಲಯವನ್ನು ತೋರಿಸಲಾಯಿತು. ಈ ಸಂದರ್ಭದಲ್ಲಿ ಸರ್‌ ಎಂ.ವಿ ಸ್ಮಾರಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಪ್ರಕಾಶ್‌, ಸದಸ್ಯರಾದ ನಾರಾಯಣಸ್ವಾಮಿ, ಎ.ವಿ.ಭೈರೇಗೌಡ, ಶ್ರೀನಿವಾಸ್‌ ಉಪಸ್ಥಿತರಿದ್ದರು.

ಸಮಾಧಿ ಸ್ಥಳಕ್ಕೆ ಆಕರ್ಷಕ ಪುಪ್ಪಾಲಂಕಾರ: ಸರ್‌ ಎಂ.ವಿ ಸಮಾಧಿ ಸ್ಥಳವನ್ನು ಹಾಗೂ ಸುತ್ತಮುತ್ತಲಿನ ಉದ್ಯಾನವನ್ನು ತೋಟಗಾರಿಕೆ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಸ್ವತ್ಛಗೊಳಿಸಿ ಬಗೆಬಗೆಯ ಆಕರ್ಷಕ ಪುಷ್ಪಗಳನ್ನು ಬಳಸಿ ಮಾಡಲಾಗಿದ್ದ ವಿಶೇಷ ಹೂವಿನ ಅಲಂಕಾರ ಸರ್‌ಎಂವಿ ಅಭಿಮಾನಿಗಳ ಹಾಗೂ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಜನರನ್ನು ಆಕರ್ಷಿಸಿತು. ಸಮಾಧಿ ಸ್ಥಳದ ಸುತ್ತಲೂ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ವಿಟಿಯು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಳಜಿ ವಹಿಸಿ ಸಮಾಧಿಯನ್ನು ಅಲಕೃಂತಗೊಳಿಸಿದ್ದರು. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.

ಗಮನ ಸೆಳೆದ ಸರ್ವಧ‌ರ್ಮದ ಪ್ರಾರ್ಥನೆ: ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಸರ್‌ಎಂವಿ ರವರ ಸಮಾಧಿ ಸ್ಥಳಕ್ಕೆ ಆಗಮಿಸಿ ದರ್ಶನ ಪಡೆದರು. ಈ ವೇಳೆ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ನಡೆಸಿಕೊಟ್ಟ ಸರ್ವಧ‌ರ್ಮಗಳ ಸಾಮೂಹಿಕ ಪ್ರಾರ್ಥನೆ ಎಲ್ಲರ ಗಮನ ಸೆಳೆಯಿತು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಸರ್‌ಎಂವಿಗೆ ರಾಷ್ಟ್ರದ ಗೌರವ ಸಲ್ಲಿಸಲಾಯಿತು. ಈ ವೇಳೆ ಸತ್ಯಸಾಯಿ ಗ್ರಾಮದ ಲೋಕ ಸೇವಾ ಶಿಕ್ಷಣ ಸಂಸ್ಥೆಯ ಆಧ್ಯಾಪಕರು ಹಾಗೂ ವಿಟಿಯು ವಿದ್ಯಾರ್ಥಿಗಳು ಸಹ ಆಗಮಿಸಿ ಸರ್‌ ಎಂ.ವಿಶ್ವೇಶ್ವರಯ್ಯ ಜನ್ಮ ಸ್ಥಳ ಹಾಗೂ ಸಮಾಧಿಯನ್ನು ವೀಕ್ಷಿಸಿದರು.

ಸರ್‌ ಎಂವಿ ಮ್ಯೂಸಿಯಂ ವೀಕ್ಷಣೆ: ಮುದ್ದೇನಹಳ್ಳಿಯಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ವಾಸ ಇದ್ದ ಮನೆಯನ್ನು ಮ್ಯೂಸಿಯಂ ಮಾಡಲಾಗಿದ್ದು, ಸರ್‌ಎಂವಿ ಬಳಸುತ್ತಿದ್ದ ಮೈಸೂರು ಪೇಟೆ, ಸೂಟುಬೂಟು, ಅವರಿಗೆ ಲಭಿಸಿದ್ದ ಭಾರತ ರತ್ನ ಪ್ರಶಸ್ತಿ ಫ‌‌ಲಕ, ಅವರು ಮೊದಲಿಗೆ ಬಿಡುಗಡೆಗೊಳಿಸಿದ್ದ ಸ್ಟೇಟ್‌ ಬ್ಯಾಂಕ್‌ ಮೈಸೂರು ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಲಾಂಛನ, ಸರ್‌ಎಂವಿ ಹೆಸರಿನಲ್ಲಿ ಅಂಚೆ ಇಲಾಖೆ ಬಿಡುಗಡೆಗೊಳಿಸಿರುವ ಅಂಚೆ ಚೀಟಿಗಳನ್ನು ಮತ್ತು ಅವರ ಬಾಲ್ಯದ ನೆನೆಪಿನ ಬುತ್ತಿಯನ್ನು ಬಿಚ್ಚಿಡುವ ಅನೇಕ ಛಾಯಾಚಿತ್ರಗಳು, ಪತ್ರಿಕಾ ತುಣಕುಗಳನ್ನು ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next