ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಸಿಂಗಲೀಕ ಕುರಿತು ಸಂರಕ್ಷಣಾ ನುಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೃಗಾಲಯದ ಸಭಾಂಗಣದಲ್ಲಿ ನಡೆದ 18ನೇ ಸಂರಕ್ಷಣಾ ನುಡಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಾಣಿ ವಿಜ್ಞಾನದ ರಾಷ್ಟ್ರೀಯ ಕೇಂದ್ರದ ವನ್ಯಪ್ರಾಣಿ,
ಪ್ರಾಣಿಶಾಸ್ತ್ರ ಹಾಗೂ ಸಂರಕ್ಷಣಾ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪದವಿ ವಿಭಾಗದ ನಿರ್ದೇಶಕ ಡಾ.ಅಜಿತ್ ಕುಮಾರ್ ಸಿಂಗಲೀಕಗಳ ನಿರ್ವಹಣೆ, ಅವಶ್ಯಕ ಪೌಷ್ಟಿಕಾಂಶ ಆಹಾರ ಹಾಗೂ ಸಿಂಗಲೀಕಗಳನ್ನು ಸಂರಕ್ಷಿಸುವ ಪ್ರಯತ್ನಗಳ ಬಗ್ಗೆ ಚಿತ್ರ ಪ್ರದರ್ಶನದ ಮೂಲಕ ಉಪನ್ಯಾಸ ನೀಡಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಡಾ.ಮೇವಾಸಿಂಗ್, ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಸಿದ್ರಾಮಪ್ಪ ಸೇರಿದಂತೆ ಮೃಗಾಲಯದ ಅಧಿಕಾರಿ,ಸಿಬ್ಬಂದಿಗಳು, ಮೃಗಾಲಯದ ಸ್ವಯಂಸೇವಕರು, ವನ್ಯಜೀವಿ ಆಸಕ್ತರು, ಸ್ವಯಂಸೇವಾ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಂರಕ್ಷಣಾ ನುಡಿ ಕಾರ್ಯಕ್ರಮ ಮೃಗಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಿದ್ದು, ಪ್ರತಿ ತಿಂಗಳಲ್ಲಿ ಒಂದು ಮಂಗಳವಾರ ಇದನ್ನು ನಡೆಸಿಕೊಂಡು ಬರಲಾಗುತ್ತದೆ. ಆಹ್ವಾನಿತ ತಜ್ಞರೊಂದಿಗೆ ಸಂವಾದ /ಚರ್ಚೆ ನಡೆಸುವ ತನ್ಮೂಲಕ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವನ್ಯಜೀವಿ ಹಾಗೂ ಪರಿಸರ ಆಸಕ್ತರಿಗೆ ಮೈಸೂರು ಮೃಗಾಲಯವು ವೇದಿಕೆಯನ್ನು ಕಲ್ಪಿಸಲಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಸಿದ್ರಾಮಪ್ಪ ತಿಳಿಸಿದ್ದಾರೆ.
ಶ್ರೀ ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಸಿಂಗಲೀಕ ಕುರಿತು ಸಂರಕ್ಷಣಾ ನುಡಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ.ಅಜಿತ್ ಕುಮಾರ್ ಅವರನ್ನು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅಭಿನಂದಿಸಿದರು.