Advertisement

ಡೆತ್‌ ಮೆಸೇಜ್‌ ಕಳಿಸಿ ಗಾಯಕಿ ಆತ್ಮಹತ್ಯೆ

12:09 AM Feb 18, 2020 | Lakshmi GovindaRaj |

ಬೆಂಗಳೂರು: “ನನ್ನ ಸಾವಿಗೆ ಪತಿ ಹಾಗೂ ಆತನ ದೊಡ್ಡಮ್ಮ ಕಾರಣ’ ಕಾರಣ ಎಂದು ಸಹೋದರನ ಮೊಬೈಲ್‌ಗೆ ಸಂದೇಶ ಕಳುಹಿಸಿ ಹಿನ್ನೆಲೆ ಗಾಯಕಿ ಸುಶ್ಮಿತಾ (26) ಭಾನುವಾರ ತಡರಾತ್ರಿ ನಾಗರ ಭಾವಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಚಿತ್ರರಂಗದಲ್ಲಿ ಪ್ರತಿಭಾನ್ವಿತ ಗಾಯಕಿ ಆಗಿ ಗುರ್ತಿಸಿಕೊಂಡಿದ್ದ ಮೃತ ಸುಶ್ಮಿತಾ “ಹಾಲು ತುಪ್ಪ’, ಶ್ರೀ ಸಾಮಾನ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಾರ್ಯ ನಿರ್ವಹಿಸಿದ್ದರು.

Advertisement

ಸುಶ್ಮಿತಾ ಸಾವಿಗೆ ಆಕೆಯ ಪತಿ ಶರತ್‌ಕುಮಾರ್‌ ಹಾಗೂ ಕುಟುಂಬದವರೇ ಕಾರಣ ಎಂದು ಸುಶ್ಮಿತಾ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಸುಶ್ಮಿತಾ ತಾಯಿ ಮೀನಾಕ್ಷಿ ಅವರು ನೀಡಿರುವ ದೂರಿನ ಅನ್ವಯ, ಶರತ್‌ಕುಮಾರ್‌, ಆತನ ಸಹೋದರಿ ಗೀತಾ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಕಿ ಸುಶ್ಮಿತಾ ಹಾಗೂ ಟೆಕ್ಕಿ ಶರತ್‌ಕುಮಾರ್‌ ನಡುವೆ 2018ರ ಜುಲೈನಲ್ಲಿ ವಿವಾಹ ನಡೆದಿತ್ತು. ದಂಪತಿ ಕುಮಾರಸ್ವಾಮಿ ಲೇಔಟ್‌ನಲ್ಲಿ ವಾಸಿಸುತ್ತಿದ್ದರು. ಮದುವೆ ಆದ ಕೆಲವೇ ದಿನಗಳಲ್ಲಿ ಶರತ್‌ ಹಾಗೂ ಆತನ ಸಹೋದರಿ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕೆಲ ದಿನಗಳ ಹಿಂದೆ ನಾಗರಭಾವಿ ಮಾಳಗಾಳ ಮುಖ್ಯರಸ್ತೆಯಲ್ಲಿರುವ ತಾಯಿ ಮೀನಾಕ್ಷಿ ಅವರ ಮನೆಗೆ ಸುಶ್ಮಿತಾ ಬಂದಿದ್ದರು.

ಭಾನುವಾರ ರಾತ್ರಿ ಊಟ ಮುಗಿದ ಬಳಿಕ ತನ್ನ ಕೊಠಡಿಯಲ್ಲಿ ಸುಶ್ಮಿತಾ ಮಲಗಿದ್ದರು. ಸೋಮವಾರ ಮುಂಜಾನೆ ಆಕೆಯ ಸಹೋದರ ಯಶವಂತ್‌, ಮೊಬೈಲ್‌ ನೋಡಿದಾಗ ಸರಿ ರಾತ್ರಿ ಸುಶ್ಮಿತಾ ಸಂದೇಶ ಕಳುಹಿಸಿರುವುದು ಗೊತ್ತಾಗಿ ಆತಂಕದಿಂದ ಹೋಗಿ ನೋಡಿದಾಗ ಸುಶ್ಮಿತಾ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಶ್ಮಿತಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾದಲ್ಲಿ ನಡೆಯಿತು. ಆಸ್ಪತ್ರೆ ಬಳಿ ಬಂದ ಶರತ್‌ ಹಾಗೂ ಸುಶ್ಮಿತಾ ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಅವರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸಪಟ್ಟರು. ಮಾಧ್ಯಮಗಳ ಜತೆ ಮಾತನಾಡಿದ ಸುಶ್ಮಿತಾ ತಾಯಿ ಮೀನಾಕ್ಷಿ, 150 ಗ್ರಾಂ ಚಿನ್ನ ನೀಡಿ ವಿವಾಹ ಮಾಡಿಕೊಟ್ಟಿದ್ದೆ. ಆದರೆ ಶರತ್‌ ಹಾಗೂ ಆತನ ಕುಟುಂಬದವರು ಮಗಳನ್ನು ಕೊಂದು ಬಿಟ್ಟರು. ಹಣದ ಹಿಂದೆ ಬಿದ್ದಿದ್ದ ಶರತ್‌ ಮಗಳಿಗೆ ಪ್ರೀತಿ ನೀಡಿರಲಿಲ್ಲ.

Advertisement

ಮನೆಯಿಂದ ಹೊರ ಹೋಗು ಎಂದು ಬಲವಂತ ಮಾಡುತ್ತಿದ್ದ. ಮಗಳು ಬೇರೆ ಬೇರೆ ಮ್ಯೂಸಿಕ್‌ ಶಾಲೆಗಳಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡಿಕೊಡುತ್ತಿದ್ದಳು ಎಂದು ಕಣ್ಣೀರಿಟ್ಟರು. ಸುಶ್ಮಿತಾ ಸಹೋದರ ಯಶವಂತ್‌ ಮಾತನಾಡಿ ರಾತ್ರಿ ಮಲಗುವಾಗ ಬೆಳಗ್ಗೆ 4 ಗಂಟೆಗೆ ಎಬ್ಬಿಸು ಎಂದು ಅಕ್ಕನಿಗೆ ಹೇಳಿ ಹಾಲ್‌ನಲ್ಲಿ ಮಲಗಿದ್ದೆ. ಮಧ್ಯರಾತ್ರಿ 1.30ಕ್ಕೆ ನನ್ನ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದು ಬೆಳಗ್ಗೆ ನೋಡಿಕೊಂಡಿದ್ದೇನೆ. ಬೆಳಗ್ಗೆ ಅಲಾರಂ ಸದ್ದು ಕೇಳಿ ಎದ್ದು ಆಕೆಯ ರೂಂ ಬಳಿ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರ ನಮ್ಮ ಭಾವನಿಗೆ ಹೇಳಿದರೂ ಬಂದಿಲ್ಲ, ಆತ ಓಡಿಹೋಗಿರಬಹುದು ಎಂದರು.

ಸುಶ್ಮಿತಾ ಕಳುಹಿಸಿದ ಸಂದೇಶದಲ್ಲಿ ಏನಿತ್ತು?: ಅಮ್ಮ ನನ್ನನ್ನು ಕ್ಷಮಿಸು ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು ನನಗೆ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದರು. ಮಾತೆತ್ತಿದರೆ ಮನೆಬಿಟ್ಟು ಹೋಗೆನ್ನುತ್ತಿದ್ದರು. ಮಾನಸಿಕವಾಗಿ ಹಿಂಸೆ ಆಗುತ್ತಿತ್ತು, ಅವರನ್ನು ಮಾತ್ರ ಸುಮ್ಮನೆ ಬಿಡಬೇಡ. ನನ್ನ ಸಾವಿಗೆ ಶರತ್‌, ವೈದೇಹಿ, ಗೀತಾ ನೇರ ಕಾರಣ. ಎಷ್ಟು ಬೇಡಿಕೊಂಡರು ಕಾಲು ಹಿಡಿದರು ಅವನ ಮನಸು ಕರಗಲಿಲ್ಲ.

ಅವರ ಮನೆಯಲ್ಲಿ ಸಾಯಲು ನನಗೆ ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದ ಇದೇ ರೀತಿ ಹಿಂಸೆ ಅಮ್ಮಾ.. ಯಾರ ಹತ್ರಾನೂ ಹೇಳಿಕೊಂಡಿರಲಿಲ್ಲ..ನನ್ನನ್ನು ನಮ್ಮ ಊರಿನಲ್ಲಿ ಮಣ್ಣುಮಾಡು ಅಥವಾ ಸುಡು ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನು ಮಾತ್ರ ಸುಮ್ಮನೇ ಬಿಡಬೇಡ ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮಾ..ಮಿಸ್‌ ಯೂ.. ನಿನಗೋಸ್ಕರ ನನ್ನ ತಮ್ಮ ಸಚಿನ್‌ ಇದಾನೆ ಅವನನ್ನು ಚೆನ್ನಾಗಿ ನೋಡಿಕೋ ಮತ್ತೂಮ್ಮೆ ಕ್ಷಮೆಯಾಚಿಸುತ್ತಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next