Advertisement

ಹಸೆಮಣೆಯಿಂದ ಬಣ್ಣದ ಮನೆಗೆ ಕೊಡಗಿನ ಬೆಡಗಿ

07:00 PM May 11, 2019 | Team Udayavani |

ಕನ್ನಡ ಚಿತ್ರರಂಗದಲ್ಲಿ ಮದುವೆಯ ಬಳಿಕ ಮತ್ತೆ ಚಿತ್ರ ರಂಗದಲ್ಲೇ ಸಕ್ರಿಯವಾಗುತ್ತಿರುವ ನಟಿಯರ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಇತ್ತೀಚೆ ಗಷ್ಟೇ ಪ್ರಿಯಾಮಣಿ, ಮೇಘನಾ ರಾಜ್‌, ಐಂದ್ರಿತಾ ರೇ- ಹೀಗೆ ಹಲವು ನಟಿಯರು ಚಿತ್ರರಂಗದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿರುವಾಗಲೇ ಈಗ ಕನ್ನಡದ ಮತ್ತೂಬ್ಬ ನಟಿ ಮದುವೆಯ ಬಳಿಕ ಮತ್ತೆ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡುತ್ತಿದ್ದಾರೆ. ಅಂದ ಹಾಗೆ, ಆ ನಟಿಯ ಹೆಸರು ಸಿಂಧೂ ಲೋಕನಾಥ್‌.

Advertisement

2009ರಲ್ಲಿ ತೆರೆಕಂಡ ಪರಿಚಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಕಾಲಿಟ್ಟ ಸಿಂಧೂ ಲೋಕನಾಥ್‌ಗೆ, ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು 2011ರಲ್ಲಿ ತೆರೆಗೆ ಬಂದ ಲೈಫ‌ು ಇಷ್ಟೇನೆ ಚಿತ್ರ. ಪವನ್‌ ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ನಟ ದಿಗಂತ್‌ ಜೊತೆ ತೆರೆಹಂಚಿಕೊಂಡ ಸಿಂಧೂ ಲೋಕನಾಥ್‌, ನಂದಿನಿ ಎಂಬ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿ, ಸಿನಿಪ್ರಿಯರ ಮತ್ತು ಚಿತ್ರರಂಗದ ಮಂದಿಯ ಗಮನ ಸೆಳೆದಿದ್ದರು.

ಅದಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಬೇಡಿಕೆ ಪಡೆದುಕೊಂಡ ಸಿಂಧೂ ಲೋಕನಾಥ್‌, ಡ್ರಾಮಾ, ಯಾರೇ ಕೂಗಾಡಲೀ…, ಕೇಸ್‌ ನಂ 18/9, ಕಾಫಿ ವಿತ್‌ ಮೈ ವೈಫ್, ನನ್‌ ಲೈಫ‌ಲ್ಲಿ…, ಲವ್‌ ಇನ್‌ ಮಂಡ್ಯ, ಜೈ ಭಜರಂಗಬಲಿ, ರಾಕ್ಷಸಿ, ಹೀಗೊಂದು ದಿನ, ಎಂದೆಂದು ನಿನಗಾಗಿ – ಹೀಗೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇದರ ನಡುವೆಯೇ ತಮಿಳು ಚಿತ್ರರಂಗದತ್ತಲೂ ಮುಖಮಾಡಿದ್ದ ಸಿಂಧೂ ಅಲ್ಲಿಯೂ ವಾದಪೋದ ನನಾºರ್ಗಲ್‌, ಮುಪ್ಪಸೋದುಂ ಅನ್ಕಾರ್ಪ ನೈಂಗಲ್‌ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದರೂ, ಯಾವ ಚಿತ್ರಗಳೂ ಸಿಂಧೂಗೆ ಅಷ್ಟಾಗಿ ಕೈ ಹಿಡಿಯಲಿಲ್ಲ.

ಕನ್ನಡದಲ್ಲಿ ಕೆಲ ಕಂಪೆನಿಗಳ ಪ್ರಚಾರ ರಾಯಭಾರಿ ಯಾಗಿಯೂ ಗುರುತಿಸಿಕೊಂಡಿದ್ದ ಸಿಂಧೂ ಲೋಕನಾಥ್‌, ಬಳಿಕ ವೆಬ್‌ ಸೀರಿಸ್‌ನಲ್ಲೂ ಕಾಣಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಲ್ಲಿ ಅಲ್ಲಲ್ಲಿ ಒಂದಷ್ಟು ಚಿತ್ರಗಳ ಅವಕಾಶಗಳು ಕೈಯಲ್ಲಿರುವಾಗಲೇ ಸಿಂಧೂ, ಶ್ರೇಯಸ್‌ ಕೊಡಿಯಾಲ್‌ ಎಂಬುವವರನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಮದುವೆಯ ಬಳಿಕ, ಸಿಂಧೂ ಕೂಡ ಕೆಲ ಕಾಲ ಚಿತ್ರರಂಗದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇನ್ನು ಚಿತ್ರರಂಗ ಕೂಡ ಮದುವೆಯ ಬಳಿಕ ಚಿತ್ರರಂಗಕ್ಕೆ ಗುಡ್‌ ಬೈ ಹೇಳುವ ನಾಯಕ ನಟಿಯರ ಸಾಲಿನಲ್ಲಿ ಸಿಂಧೂ ಕೂಡ ಸೇರ್ಪಡೆಯಾಗುತ್ತಾರೆ ಅಂದುಕೊಂಡಿರುವಾಗಲೇ, ಸಿಂಧೂ ಲೋಕನಾಥ್‌ ಮತ್ತೆ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡಲು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಸಿಂಧು ಲೋಕನಾಥ್‌ ಕೃಷ್ಣ ಟಾಕೀಸ್‌ ಚಿತ್ರದಲ್ಲಿ ನಾಯಕ ಅಜೇಯ್‌ ರಾವ್‌ ಜೊತೆ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷಾಂತ್ಯಕ್ಕೆ ಸಿಂಧೂ ಕಂ ಬ್ಯಾಕ್‌ ಚಿತ್ರ ಕೃಷ್ಣ ಟಾಕೀಸ್‌ ತೆರೆಗೆ ಬರಲಿದೆ. ಒಟ್ಟಾರೆ ಸ್ಯಾಂಡಲ್‌ವುಡ್‌ ಕೃಷ್ಣನ ಜೊತೆ ಮತ್ತೆ ಬರುತ್ತಿರುವ ಸಿಂಧೂ ಲೋಕನಾಥ್‌ ಎಂಬ ಕೊಡಗಿನ ಬೆಡಗಿಯನ್ನು ಪ್ರೇಕ್ಷಕರು ಹೇಗೆ ಸ್ವಾಗತಿಸುತ್ತಾರೆ ಅನ್ನೋದಕ್ಕೆ ಕೃಷ್ಣ ಟಾಕೀಸ್‌ ತೆರೆಗೆ ಬಂದ ಮೇಲಷ್ಟೇ ಉತ್ತರ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next