Advertisement

ಜನನ ಪ್ರಮಾಣ ಪತ್ರ ಅಗತ್ಯ

05:18 PM Feb 21, 2020 | Naveen |

ಸಿಂಧನೂರು: ಮನುಷ್ಯನ ಜನನದಿಂದ ಸಾವಿನವರೆಗೂ ಪ್ರತಿ ಕೆಲಸಕ್ಕೂ ಜನನ ಪ್ರಮಾಣ ಪತ್ರ ಅವಶ್ಯಕವಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಅಧಿಕಾರಿಗಳ ಬಳಿ ನೋಂದಣಿ ಮಾಡಿಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಸಿ.ವಿ. ಸನತ ಹೇಳಿದರು.

Advertisement

ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಸುಕಾಲಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಜನನ ಪ್ರಮಾಣ ಪತ್ರ ವಿತರಣೆ, ಸಾಮಾಜಿಕ ನ್ಯಾಯದ ವಿಶ್ವ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.

ನ್ಯಾಯಾಂಗ ಇಲಾಖೆ ಆದೇಶದನ್ವಯ ಜನನ ಪ್ರಮಾಣ ಪತ್ರಗಳ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ವಿವಿಧ ಶಾಲೆ ಕಾಲೇಜುಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರ ಭಾಗವಾಗಿ ಸುಕಾಲಪೇಟೆ ಶಾಲೆಯಲ್ಲೂ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನನ ಪ್ರಮಾಣ ಪತ್ರಗಳ ಮಹತ್ವ ಅರಿತು ಪ್ರತಿಯೊಬ್ಬರು ನೋಂದಣಿ ಮಾಡಿಸಬೇಕು. ಶಿಕ್ಷಕರು ಸಹ ಅನಕ್ಷರಸ್ಥ ಪಾಲಕರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಶಾಲೆಗೆ ದಾಖಲಾತಿ, ಬ್ಯಾಂಕ್‌ ಪಾಸ್‌ ಬುಕ್‌, ಎಲ್‌ಐಸಿ, ಆಧಾರ್‌ ಕಾರ್ಡ್‌, ವಿದೇಶಿ ಪ್ರಯಾಣ ಹೀಗೆ ಹಲವಾರು ಸಂದರ್ಭಗಳಲ್ಲಿ ಜನನ ಪ್ರಮಾಣ ಪತ್ರ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿರುತ್ತದೆ. ನಿರ್ಲಕ್ಷ್ಯ ವಹಿಸಿ ಜನನ ಪ್ರಮಾಣ ಪತ್ರ ಕಳೆದುಕೊಂಡರೆ ಸಂಬಂಧಪಟ್ಟ ಇಲಾಖೆಗೆ ಅಲೆದಾಡುವ ಪ್ರಸಂಗಗಳು ಬರುತ್ತವೆ. ಹಣ ಮತ್ತು ಸಮಯ ವ್ಯಯವಾಗುತ್ತದೆ. ಆದ್ದರಿಂದ ಪ್ರಮಾಣ ಪತ್ರಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕು. ಒಂದು ವೇಳೆ ನೋಂದಣಿ ಮಾಡಿಸದೆ ಹೋದರೆ ಶಾಲೆ ಮುಖ್ಯಶಿಕ್ಷಕರನ್ನು ಸಂಪರ್ಕಿಸಿ ತಾಲೂಕು ಕಾನೂನು ಸೇವಾ ಸಮಿತಿ ನೆರವಿನಲ್ಲಿ ಜನನ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಹಿಂದೆ ತಾಲೂಕಿನ ಹಂಚಿನಾಳಕ್ಯಾಂಪ್‌ ಶಾಲೆಯಲ್ಲಿ 106 , ಪ್ರಸ್ತುತ ಸುಕಾಲಪೇಟೆ ಶಾಲೆಯಲ್ಲಿ 137 ಮಕ್ಕಳಿಗೆ ಜನನ ಪ್ರಮಾಣ ಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾವಿರಕ್ಕೂ ಮೇಲ್ಪಟ್ಟು ಜನನ ಪ್ರಮಾಣ ಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಶಿಕ್ಷಣ ಇಲಾಖೆ, ಕಂದಾಯ, ನಗರಸಭೆ, ನ್ಯಾಯಾಂಗ ಸಿಬ್ಬಂದಿ ನಿರಂತರ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.

Advertisement

ಪ್ರಧಾನ ಸಿವಿಲ್‌ ನ್ಯಾಯಾಧೀಶೆ ರಿಹಾನ್‌ ಡಿ ಸುಲ್ತಾನ, ಅಪರ ಸಿವಿಲ್‌ ನ್ಯಾಯಾಧೀಶ ರವಿಕುಮಾರ ಕೆ., ವಕೀಲರ ಸಂಘದ ಅಧ್ಯಕ್ಷ ಎನ್‌. ರಾಮನಗೌಡ, ಮಾಜಿ ಅಧ್ಯಕ್ಷ ಜೆ. ರಾಯಪ್ಪ, ಖಜಾಂಚಿ ಕರುಣಾಕರ ಭಂಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ, ತಾಲೂಕು ಸಹಾಯಕ ಅಕ್ಷರ ದಾಸೋಹಿ ಅಧಿಕಾರಿ ಶರಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಅಜಮೀರ್‌, ಮುಖ್ಯ ಶಿಕ್ಷಕರಾದ ಅನಂತರಾವ ಕುಲಕರ್ಣಿ, ವಿ. ಬಸವರಾಜ, ಶಿಕ್ಷಕಿ ಮಂಜುಳಾ ಹುಲಿಗೆಮ್ಮ ಮಲ್ಲಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next