Advertisement

ಸಿಂಧನೂರು ಜನರ ನರಕಯಾತನೆಗೆ ಮುಕ್ತಿ ಎಂದು?

11:48 AM May 17, 2019 | Naveen |

ಸಿಂಧನೂರು: ನಗರದಲ್ಲಿ ಕಳೆದ 5 ವರ್ಷದಿಂದ ನಡೆಯುತ್ತಿರುವ ಒಳಚರಂಡಿ, ನಗರೋತ್ಥಾನ ಮತ್ತು 24×7 ಕುಡಿಯುವ ನೀರಿನ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ನಗರದ ಜನತೆ ಹಲವು ಸಂಕಷ್ಟಗಳ ಮಧ್ಯೆಯೇ ಜೀವನ ನಡೆಸುವಂತಾಗಿದೆ.

Advertisement

2014-15ನೇ ಸಾಲಿನಲ್ಲಿ ಏಕಕಾಲಕ್ಕೆ ಒಳಚರಂಡಿ, 24×7 ಕುಡಿಯುವ ನೀರು ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಳಚರಂಡಿ ಕಾಮಗಾರಿಯನ್ನು ಯುಪಿಎಲ್ ಗುಜರಾತ್‌ನ ಎನ್ವಿರಾನ್‌ಮೆಂಟಲ್ ಇಂಜಿನೀಯರಿಂಗ್‌ ವಡೋದರಾ ಕಂಪನಿ ಗುತ್ತಿಗೆ ಪಡೆದಿದೆ. 24×7 ಕುಡಿಯುವ ನೀರಿನ ಕಾಮಗಾರಿಯನ್ನು ಹೊಸದೆಹಲಿಯ ಎಸ್‌.ಪಿ.ಎಂ. ಕಂಪನಿ ಪಡೆದಿದೆ. ಇನ್ನು ನಗರೋತ್ಥಾನ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಯನ್ನು ಕಲಬುರಗಿಯ ಗುತ್ತಿಗೆದಾರ ವಿನೋದ ಪಾಟೀಲ ನಿರ್ವಹಿಸುತ್ತಿದ್ದಾರೆ.

ಒಳಚರಂಡಿ ಕಾಮಗಾರಿ 60.44 ಕೋಟಿ ವೆಚ್ಚದಲ್ಲಿ ನಡೆದಿದೆ. ಪ್ರಾರಂಭದಲ್ಲಿ ಗುತ್ತಿಗೆ ಕಂಪನಿಯವರು 55.75 ಕೋಟಿಗೆ ಗುತ್ತಿಗೆ ಪಡೆದಿದ್ದರು. ನಂತರ ನಾನಾ ಕಾರಣಗಳಿಗೆ ಅನುದಾನ ಹೆಚ್ಚಿಸಲಾಗಿದೆ. ಇಷ್ಟಾದ ಬಳಿಕವೂ ನಿಗದಿತ ಅವಧಿಯಲ್ಲಿ ಕೆಲಸ ಮುಗಿಯದಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಸಂಪೂರ್ಣ ಹಳ್ಳ ಹಿಡಿದಿದೆ. ನಗರದ ನಾನಾ ವಾರ್ಡ್‌ಗಳಲ್ಲಿ ನಿರ್ಮಾಣ ಮಾಡಿರುವ ಒಳಚರಂಡಿ ಛೇಂಬರ್‌ಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಇದುವರೆಗು ಅವುಗಳ ಬಳಕೆ ಸಾಧ್ಯವಾಗಿಲ್ಲ. ಅರೆಬರೆ ಕೆಲಸದಿಂದ ನಗರ ಜನತೆಗೆ ಸಮಸ್ಯೆಯಾಗಿದೆ.

2017ರಲ್ಲೇ ಮುಗಿಯಬೇಕಿತ್ತು: ಒಳಚರಂಡಿ ಕಾಮಗಾರಿ 2015ರ ಮಾರ್ಚ್‌ನಲ್ಲಿ ಆರಂಭವಾಗಿದ್ದು, ಗುತ್ತಿಗೆ ನಿಯಮಾವಳಿಯಂತೆ 2017ರಲ್ಲಿ ಪೂರ್ಣ ಗೊಳಿಸಬೇಕಿತ್ತು. ಗುತ್ತಿಗೆದಾರು ಹಲವಾರು ನೆಪ ಹೇಳಿ ಗುತ್ತಿಗೆದಾರರು ಹೆಚ್ಚುವರಿ ಕಾಲಾವಕಾಶ ಪಡೆದು 2018ರ ಜೂನ್‌ ಅಂತ್ಯಕ್ಕೆ ಮುಗಿಸುವುದಾಗಿ ಹೇಳಿದ್ದರು. ಆದರೆ ಮುಗಿಸಲು ಸಾಧ್ಯವಾಗಿಲ್ಲ. ಈಗ ಮತ್ತೆ ಗುತ್ತಿಗೆದಾರರು ಹಳೇ ರಾಗ ಹಾಡುತ್ತಿದ್ದಾರೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಯದ್ದರಿಂದ ಪಟ್ಟಣದ ಪ್ರಮುಖ ರಸ್ತೆ ಸೇರಿ ಬಡಾವಣೆ, ಓಣಿ, ಚಿಕ್ಕ-ಚಿಕ್ಕ ಗಲ್ಲಿಗಳಲ್ಲಿ ಜನತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಪಾದಚಾರಿಗಳು, ವಾಹನ ಸವಾರರು ಸಂಚರಿಸುವುದೇ ದುಸ್ತರವಾಗಿದೆ.

ಕಳಪೆ ಕಾಮಗಾರಿ ಆರೋಪ: ಇನ್ನು ಒಳಚರಂಡಿ ಕಾಮಗಾರಿ ಕಳಪೆ ಆಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಕೆಲವೆಡೆ ಛೇಂಬರ್‌ಗಳನ್ನು ಒಡೆದುಹಾಕಿ ಮರು ನಿರ್ಮಾಣ ಮಾಡಿದ ಉದಾಹರಣೆಗಳು ಉಂಟು.

Advertisement

ಸಚಿವರ ಮೌನ: ಹಿಂದೆ ಹಂಪನಗೌಡ ಬಾದರ್ಲಿಯವರು ಶಾಸಕರಾಗಿದ್ದಾಗ ಸಚಿವ ವೆಂಕಟರಾವ್‌ ನಾಡಗೌಡರು ಯುಜಿಡಿ ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ನೆಪದಲ್ಲಿ ಹಂಪನಗೌಡ ಬಾದರ್ಲಿಯವರ ಬೆಂಬಲಿಗರು ಹಣ ಲೂಟಿ ಮಾಡುತ್ತಿದ್ದಾರೆ. ಹಾಗೂ ಈ ಕಾಮಗಾರಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಈಗ ಅವರೇ ಸಚಿವರಾಗಿದ್ದರೂ ಈ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಜನ ಪ್ರಶ್ನಿಸುವಂತಾಗಿದೆ.

ನಗರೋತ್ಥಾನ ಯೋಜನೆ: 2012-13ನೇ ಸಾಲಿನಲ್ಲಿ ಶಾಸಕರಾಗಿದ್ದ ವೆಂಕಟರಾವ್‌ ನಾಡಗೌಡರು ನಗರೋತ್ಥಾನ ಯೋಜನೆಗೆ ಚಾಲನೆ ನೀಡಿದ್ದರು. ನಗರೋತ್ಥಾನ 2ನೇ ಹಂತದ ಕಾಮಗಾರಿಗೆ 13.18 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಬಳಿಕ ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಅವಧಿಯಲ್ಲಿ 5 ವರ್ಷವಾದರೂ ಕೆಲಸ ಮುಗಿದಿಲ್ಲ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡಿ ಕೈತೊಳೆದುಕೊಂಡಿದ್ದಾರೆ. ಈಗ 3ನೇ ಹಂತದ ಕಾಮಗಾರಿ 2018ಕ್ಕೆ ಪ್ರಾರಂಭವಾಗಿದ್ದು 10.40 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇನ್ನೂ ಅನೇಕ ವಾರ್ಡ್‌ಗಳಲ್ಲಿ ಕಚ್ಚಾ ರಸ್ತೆಗಳೇ ಇವೆ. ಕೆಲವೆಡೆ ನಿರ್ಮಿಸಿದ ರಸ್ತೆಗಳ ಡಾಂಬರ್‌ ಕಿತ್ತಿಹೋಗಿದೆ. ಇದು ನಗರೋತ್ಥಾನ ಕಾಮಗಾರಿ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

24×7 ಕುಡಿಯುವ ನೀರಿನ ಕಾಮಗಾರಿ: ಸಿಂಧನೂರು ನಗರದ ಜನತೆಗೆ 24×7 ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಿದೆ. 99 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕೆರೆ ನಿರ್ಮಾಣ ಸಹ ಸೇರಿದೆ. ತುಂಗಭದ್ರ ಎಡದಂಡೆ ನಾಲೆಯಿಂದ ಕೆರೆಗೆ ನೀರು ಡಂಪ್‌ ಮಾಡಿ ಅಲ್ಲಿಂದ ನಗರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದೆ. ಪ್ರಾರಂಭದಿಂದಲೂ ಈ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಯೋಜನೆ ಆರಂಭಕ್ಕೂ ಮುನ್ನವೇ ಕೆರೆ ಕುಸಿದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಹುಕೋಟಿ ಹಣ ದುರ್ಬಳಕೆಯಾಗಿರುವುದು ಸಹ ಕಂಡುಬರುತ್ತಿದೆ.

7 ವಾಟರ್‌ ಟ್ಯಾಂಕ್‌: ಕುಡಿಯುವ ನೀರು ಸರಬರಾಜು ಮಾಡಲು ನಗರದಲ್ಲಿ 7 ಟ್ಯಾಂಕ್‌ಗಳು ಇದ್ದು, ಇದರಲ್ಲಿ 5 ಹೊಸ ಟ್ಯಾಂಕ್‌, 2 ಹಳೆ ಟ್ಯಾಂಕ್‌ ಇವೆ. ಹೊಸ ಟ್ಯಾಂಕ್‌ ಪೈಕಿ 3ರಲ್ಲಿ ತಲಾ 10 ಲಕ್ಷ ಲೀಟರ್‌, ಉಳಿದ ಎರಡರಲ್ಲಿ ತಲಾ 5 ಲಕ್ಷ ಲೀಟರ್‌ ನೀರು ಸಂಗ್ರಹಿಸಬಹುದಾಗಿದೆ. ಎರಡು ಹಳೆ ಟ್ಯಾಂಕ್‌ಗಳಲ್ಲಿ 10.37 ಲಕ್ಷ ನೀರು ಸಂಗ್ರಹಿಸಬಹುದಾಗಿದೆ.

ಒಟ್ಟಾರೆ ನಗರೋತ್ಥಾನ, ಒಳಚರಂಡಿ, 24×7 ಕುಡಿಯುವ ನೀರು ಕಾಮಗಾರಿ ಮುಗಿಯದ್ದರಿಂದ ನಗರದ ಜನತೆ ಹತ್ತು ಹಲವು ಸಮಸ್ಯೆ ಎದುರಿಸುವಂತಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಪ್ರಮುಖ ರಸ್ತೆ ಸೇರಿ, ಓಣಿಗಳ ರಸ್ತೆಗಳಲ್ಲೂ ಸಂಚರಿಸದಂತಾಗಿದೆ. ಧೂಳಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಕಾಮಗಾರಿ ಮುಗಿಸಿ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next