Advertisement

ಬೆಳೆಹಾನಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

05:28 PM Oct 02, 2021 | Team Udayavani |

ಬೀದರ: ವರುಣನ ಆರ್ಭಟದಿಂದ ಬೆಳೆಹಾನಿಯಾಗಿರುವ ಬೀದರ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಭೇಟಿ ನೀಡಿದರು. ನಂತರ ಮಳೆಯಿಂದಾದ ಹಾನಿ ಬಗ್ಗೆ ಪರಿಶೀಲಿಸಿದರು.

Advertisement

ತಾಲೂಕಿನ ಅಲ್ಲಾಪುರ ಮತ್ತು ನೇಮತಾಬಾದ್‌ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ ಸಚಿವರು, ಮಳೆಯಿಂದಾಗಿ ಸೋಯಾಬಿನ್‌ ಮತ್ತು ತೊಗರಿ ಬೆಳೆಗಳು ತೀವ್ರ ನಲುಗಿರುವುದನ್ನು ಖುದ್ದು ನೋಡಿ, ಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಳೆಹಾನಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರೈತರಿಗೆ ಧೈರ್ಯ ತುಂಬಿದರು.

ತಮ್ಮ ಒಟ್ಟು 10 ಎಕರೆ ಹೊಲದಲ್ಲಿನ ಸೋಯಾಬಿನ್‌ ಮತ್ತು ತೊಗರಿ ಬೆಳೆ ಹಾನಿಯಾಗಿದೆ. ಈ ವರ್ಷ ನಾವು ಬೆಳೆ ವಿಮೆ ಮಾಡಿಸಿಲ್ಲ ಎಂದು ಅಲ್ಲಾಪುರ ರೈತ ಬಸಪ್ಪ ಅವರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ಸಚಿವರು, ಹತ್ತಿರದ ನೇಮತಾಬಾದ್‌ ಗ್ರಾಮಕ್ಕೆ ತೆರಳಿ ರೈತ ಶ್ರೀಕಾಂತ ಅವರ ಜಮೀನಿನಲ್ಲಿ ಉಂಟಾದ ಬೆಳೆಹಾನಿ ವೀಕ್ಷಣೆ ನಡೆಸಿದರು. ಮಳೆ ನೀರಿನಿಂದಾಗಿ ತಮ್ಮ ಜಮೀನಿನಲ್ಲಿ ಸೋಯಾಬಿನ್‌ ಮತ್ತು ತೊಗರಿ ಬೆಳೆಗಳು ಹಾಳಾಗಿವೆ
ಎಂದು ರೈತರು ತಿಳಿಸಿದರು.

ಪ್ರಾಥಮಿಕ ವರದಿ ಪ್ರಕಾರ ಅಲ್ಲಾಪುರ ಗ್ರಾಮದಲ್ಲಿ 225 ಹೆಕ್ಟೇರ್‌ ವಿಸ್ತೀರ್ಣ ಪ್ರದೇಶದಲ್ಲಿ ಮತ್ತು ನೇಮತಾಬಾದ್‌ ಗ್ರಾಮದಲ್ಲಿ ಒಟ್ಟು 340 ಹೆಕ್ಟೇರ್‌ ವಿಸ್ತೀರ್ಣ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಇದೇ ವೇಳೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಅವರು ಸಚಿವರಿಗೆ ಮಾಹಿತಿ ನೀಡಿದರು. ಹಿಂದಿನ ವರ್ಷದ ಬೆಳೆ ವಿಮೆ ಪರಿಹಾರ ಹಣ ಸಿಕ್ಕಿರುವುದಿಲ್ಲ ಎಂದು ರೈತರು ತಿಳಿಸಿದರು.

ಸಂಬಂಧಿಸಿದ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಪರಿಶೀಲನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು. ತಮಗೆ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ ಎಂದು ಲಿಂಕ್‌ ಬಳಸಿ ಆನ್‌ಲೈನ್‌ದಲ್ಲಿ ದೂರು ಸಲ್ಲಿಸುವ ವ್ಯವಸ್ಥೆ ಮಾಡಲು ರೈತರಿಗೆ ಅಧಿಕಾರಿಗಳಿಂದ ತಿಳಿವಳಿಕೆ ಕೊಡಿಸಿ ಪರಿಹಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ತಿಳಿಸಿದರು.

Advertisement

ಕೌಠಾ ಸೇತುವೆಗೂ ಭೇಟಿ: ನಂತರ ಔರಾದ ತಾಲೂಕಿನ ಕೌಠಾ (ಬಿ) ಸೇತುವೆಗೆ ಭೇಟಿ ನೀಡಿ, ವಿಪರೀತ ಮಳೆಯಿಂದಾಗಿ ನೀರು ಸೇತುವೆ ಮೇಲಿನ ರಸ್ತೆ ಅಂಚಿನವರೆಗೆ ತಲುಪಿ ಹರಿಯುತ್ತಿದ್ದ ನೀರಿನ ಸೆಳವನ್ನು ವೀಕ್ಷಣೆ ನಡೆಸಿದರು. ಮೇಲಿನ ನದಿಗಳಿಂದ ನೀರು ಹರಿ ಬಿಟ್ಟಿರುವುದರಿಂದ ನದಿ ಆಸುಪಾಸಿನ ಜಮೀನಿಗೆ ನೀರು ನುಗ್ಗಿ ಕೌಠಾ ವ್ಯಾಪ್ತಿಯಲ್ಲಿ ಅಂದಾಜು 1500 ಹೆಕ್ಟೇರ್‌ನಲ್ಲಿ ಇದ್ದ ಬೆಳೆ ಸಂಪೂರ್ಣ ನೀರು ಪಾಲಾಗಿದೆ ಎಂದು ಸಚಿವರಿಗೆ ಸ್ಥಳೀಯ ಅಧಿ ಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಭು ಚವ್ಹಾಣ, ಮಹಾರಾಷ್ಟ್ರದ ಧನೇಗಾಂವ್‌ ಡ್ಯಾಮನಿಂದ ಮತ್ತು ಮಾಂಜ್ರಾ ನದಿಯಿಂದ ನೀರು ಬಿಟ್ಟಿರುವುದರಿಂದ ಸಂಗಮದಿಂದ ಕಂದಗೂಳ ತನಕ ಪೂರ್ಣ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಬೀದರ ಜಿಲ್ಲೆಯಲ್ಲಿ ಇದುವರೆಗೆ ಅಂದಾಜು 54,000 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿರುವ ಬಗ್ಗೆ ಅಂದಾಜಿಸಿ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಕೃಷಿ, ತೋಟಗಾರಿಕಾ ಇಲಾಖೆಯಿಂದ ಬೆಳೆಹಾನಿ ಸಮೀಕ್ಷೆ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರೆದಿದೆ ಎಂದರು. ಈ ವೇಳೆ ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ತಹಶೀಲ್ದಾರ ಶಕೀಲ್‌, ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್‌., ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕ ರವಿಕುಮಾರ ಬೂರೆ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next