Advertisement

ಆವತ್ತು ಆ ಕೆಲಸ ಬಿಟ್ಟಿದ್ದರಿಂದಲೇ…

09:54 AM Feb 05, 2020 | mahesh |

ಒನ್‌ ಫೈನ್‌ ಡೇ; ಹೋಟೆಲ್‌ ಮುಚ್ಚಿ ಮನೆಯಲ್ಲಿ ಕೂತೆ. ಈಗ ಸಣ್ಣಪುಟ್ಟ ಕೌಟುಂಬಿಕ ಕಿರಿಕಿಯ ಹೊರತಾಗಿ ನೆಮ್ಮದಿಯಾಗಿದ್ದೇನೆ. ಇವೆಲ್ಲ ಸಾಧ್ಯವಾಗಿದ್ದು, ಐಟಿಐ ಬಿಟ್ಟು, ಹೋಟೆಲ್ಲೇ ನನ್ನ ಪರ್‌ಫೆಕ್ಟ್ ಪ್ರೊಫೆಷನ್‌ ಅಂತ ಶುರುಮಾಡಿದ ಮೇಲೆ.

Advertisement

ಎಂಟನೇ ತರಗತಿ ಕಷ್ಟ ಅನಿಸಲಿಲ್ಲ. ಎಸ್‌ಎಸ್‌ಎಲ್‌ಸಿಯನ್ನು ಹೇಗೋ ಒಂದು ಪಾಸ್‌ ಮಾಡಿದ್ದಾಯಿತು. ಆಮೇಲೇ ನನಗೆ ನಿಜವಾದ ಅಗ್ನಿ ಪರೀಕ್ಷೆ ಶುರುವಾಗಿದ್ದು. ಎಸ್‌ಎಸ್‌ಎಲ್‌ಸಿ ಆದ ಮೇಲೆ ಏನು ಮಾಡಬೇಕು, ಏನು ಓದಿದರೆ ಉದ್ಯೋಗ ಸಿಗುತ್ತದೆ? ಆ ಉದ್ಯೋಗ ಹಿಡಿಯೋಕೆ ಎಂಥ ಓದು ಬೇಕು? ಅನ್ನೋ ದಾರಿ ತೋರಿಸೋರು ಯಾರೂ ಇರಲಿಲ್ಲ. ಅಪ್ಪನದ್ದು ಹೋಟೆಲ್‌ ಇತ್ತು. ಒಳ್ಳೆ ವ್ಯಾಪಾರ ಆಗೋದು. ಹೆಸರೂ ಇತ್ತು.

ಬದುಕಿಗೆ ಏನೂ ಸಮಸ್ಯೆ ಇರಲಿಲ್ಲ. ಅಪ್ಪನ ಹೆಸರು ಹೇಳಿದರೂ ಪೊಲೀಸ್‌ನವರು, ಹೋಟೆಲ್‌ ನೆನಪಿಸಿಕೊಂಡು, ಬಾಯಿ ಚಪ್ಪರಿಸುತ್ತಾ “ಸರಿ ಹೋಗಪ್ಪ’ ಅನ್ನೋರು. ಅಂಥ ಪ್ರಭಾವಿ. ಹೋಟೆಲ್‌ ಮಾತ್ರವಲ್ಲ. ಜಮೀನು ಎಕರೆಗಟ್ಟಲೆ ಇತ್ತು. ಅದರಲ್ಲಿ ನೀರೂ ಇತ್ತು.

ನಾನು ಏಕೆ ಅಪ್ಪನ ರೀತಿ ಹೋಟೆಲ್‌ ತೆರೆಯಬಾರದು ಅಥವಾ ಜಮೀನಿನ ಒಡೆಯನಾಗಬಾರದು? ಈ ಓದು, ಗೀದು ಏಕೆ ಬೇಕು? ಅಂಥ ಯಾವತ್ತೂ ಅನಿಸಿರಲಿಲ್ಲ. ಅಪ್ಪನ ನೆರಳಲ್ಲಿ ಬದುಕುವುದು ಬೇಡ ಅಂತಲೇ ಐಟಿಐ ಸೇರಿಬಿಟ್ಟೆ. ಹೇಗೋ ಅದನ್ನೂ ಪಾಸು ಮಾಡಿದೆ. ಇವಿಷ್ಟಾದರೂ ಮತ್ತೆ ಮುಂದೇನು ಮಾಡಬೇಕು ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ಸಿಗಲಿಲ್ಲ. ಆಗ ಪುಣ್ಯಾತ್ಮರು ಯಾರೋ, ಐಟಿಐ ಕಂಪನಿಯಲ್ಲಿ ಕೆಲಸ ಕೊಡಿಸಿದರು. ಅಲ್ಲಿ ಹೋದರೆ ಫಿಟ್ಟರ್‌. ದೊಡ್ಡ ಯಂತ್ರಗಳ ನಡುವೆ ಕೆಲಸ. ತಿಂಗಳಿಗೆ 5 ಸಾವಿರ ಸಂಬಳ. 6 ತಿಂಗಳು ಕೆಲಸ ಮಾಡಿದೆ. ಸ್ವತಂತ್ರವಾಗಿದ್ದ ಪಕ್ಷಿಯನ್ನು ಬೋನ್‌ನಲ್ಲಿ ತಂದು ಕೂಡಿ ಹಾಕಿದ ಭಾವ.

ಸಹಿಸಿಕೊಂಡೆ. ಐಟಿಐ ಕಾಲೋನಿಯಲ್ಲೇ ವಾಸ್ತವ್ಯ. ರೂಮು ಇತ್ತು. ಕ್ಯಾಂಟೀನ್‌ ಊಟ. ಏಕೋ ಹಿಡಿಸುತ್ತಿರಲಿಲ್ಲ. ಕೆಲಸ ಬಿಟ್ಟರೆ ಹೇಗೆ? ಅಂತ ಯೋಚನೆ ಮಾಡಿದೆ. ಸರಿ, ಬಿಟ್ಟ ಮೇಲೆ ಮುಂದೇನು? ಈ ಪ್ರಶ್ನೆಗೆ ನನ್ನಲ್ಲಿ ಉತ್ತರವೇ ಇರಲಿಲ್ಲ. ಫ್ಯಾಕ್ಟರಿ ಪೂರ್ತಿ ಹುಡುಕಾಡಲು ಶುರುಮಾಡಿದೆ. ಅಲ್ಲೇ ಎಲ್ಲಾದರೂ ಹೋಟೆಲ್‌ ಇಟ್ಟು ಬಿಡ್ಲಾ ಅಂತ ಒಂದು ಮನಸ್ಸು, ಬೇಡ ಬೇಡ ಅಪ್ಪನ ಕೆಲಸ ನನಗೆ ಬೇಡ ಅಂತ ಇನ್ನೊಂದು ಮನಸ್ಸು. ಅಪ್ಪನ ಪ್ರೊಫೆಷನ್‌ ಬೇಡ ಅನಿಸಿದ್ದು ಏಕೆಂದರೆ, ಹೋಟೆಲ್‌ ನಂಬಿಕೊಂಡಿದ್ದ ಅವರ ಅಣ್ಣ, ತಮ್ಮಂದಿರಲ್ಲಿ ಯಾರ ಬದುಕೂ ಕೂಡ ಸರಿಯಾಗಿರಲಿಲ್ಲ.

Advertisement

ಮಕ್ಕಳ ಮದುವೆಗೆ ಸಾಲ, ನಾಮಕರಣಕ್ಕೆ ಸಾಲ. ಹೀಗೆ, ತಮ್ಮ ಪಾಲಿನ ಆಸ್ತಿಗಳನ್ನೆಲ್ಲಾ ಮಾರಿಕೊಂಡಿದ್ದರು. ಇದ್ದುದ್ದರಲ್ಲಿ ನಮ್ಮ ಅಪ್ಪನೇ ಜುಮ್‌ ಅಂತ ಬದುಕುತ್ತಿದ್ದದ್ದು. ಅವರನ್ನೆಲ್ಲಾ ನೋಡಿದ ಮೇಲೆ, ಅಂಥ ಬದುಕು ನನ್ನದಾಗಬಾರದು ಅಂತ ತೀರ್ಮಾನ ಮಾಡಿದ್ದೆ.

ಒನ್‌ ಫೈನ್‌ ಡೇ
ಐಟಿಐ ಕೆಲಸ ಬಿಟ್ಟು ಮನೆಗೆ ಬಂದು ಬಿಟ್ಟೆ. ಕೆಲಸ ಕೊಡಿಸಿದ ಮಹಾನುಭಾವರಿಗೂ ಏನೂ ಹೇಳದೆ. ಊರಲ್ಲಿ ಎಲ್ಲರೂ ರಜೆಗೆ ಬಂದಿದ್ದಾನೆ ಅಂದುಕೊಂಡಿದ್ದರು. ಆಮೇಲೆ ನಿಜವಾದ ಬಣ್ಣ ತಿಳಿಯಿತು. ಎಲ್ಲರೂ ಒಂಥರಾ ನೋಡಲು ಶುರುಮಾಡಿದರು. ಅಷ್ಟು ಹೊತ್ತಿಗೆ ಅಪ್ಪನನ್ನು ಊಟಕ್ಕೆ, ವಾಕಿಂಗ್‌ಗೆ ಕಳುಹಿಸಲು ಹೋಟೆಲ್‌ ಗಲ್ಲದ ಮೇಲೆ ಕುಳಿತುಕೊಳ್ಳುತ್ತಿದ್ದೆ. ಯಾರಾದರೂ ರಜೆ ಹಾಕಿದರೆ, ಆ ಕೆಲಸವನ್ನು ನಾನೇ ಮಾಡುತ್ತಿದ್ದೆ. ಕೈಗೊಂದಷ್ಟು ಹಣ ಸಿಗೋದು. ಒಂದು ವರ್ಷ ಇದೇ ರೂಢಿಯಾಯಿತು. ಬೆಂಗಳೂರಲ್ಲಿ ಕೆಲಸ ಹುಡುಕುವ ಉಮೇದು ಆರಂಭದಲ್ಲಿ ಇತ್ತಾದರೂ, ದಿನೇ ದಿನೆ ಕಡಿಮೆಯಾಗಿ ಕೊನೆಗೆ ಇಂಗಿ ಹೋಯಿತು. ಅಪ್ಪ ಹಾಸಿಗೆ ಹಿಡಿದರು. ಇಡೀ ಹೋಟೆಲ್‌ನ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿತ್ತು. ಎಲ್ಲ ವಿಭಾಗಗಳನ್ನು ನಾನೇ ನೋಡ ತೊಡಗಿದೆ. ಸಂಜೆ ಹೊತ್ತು ಹೋಟೆಲ್‌ ಮುಂದೆ ಬೋಂಡ ಹಾಕಿದೆ. ಆದಾಯ ಜಾಸ್ತಿಯಾಯಿತು. ನನ್ನ ಜೊತೆಗೆ ಚಿಕ್ಕಪ್ಪ, ದೊಡ್ಡಪ್ಪಂದಿರು ಸೇರಿದರು. ನೆರವಾದರು. ಆದರೆ, ಮತ್ತೆ ಅವರ ಜೀವನ ನೋಡಿ ಹೋಟೆಲ್‌ ಬಿಟ್ಟು ಬಿಡೋಣ ಅನಿಸತೊಡಗಿತು. ಅಷ್ಟರಲ್ಲಿ, ಒಂದು ಐಡಿಯಾ ಮಾಡಿದೆ. 40ನೇ ವಯಸ್ಸಿಗೇ ನಿವೃತ್ತಿ ಅಂತ. ಇದಕ್ಕಾಗಿ ಇವತ್ತಿಂದಲೇ ದುಡಿಯೋಣ ಅಂತ ಮನಸ್ಸಿಗೆ ಸಮಾಧಾನ ಹೇಳಿಕೊಂಡು ಕೆಲಸ ಮಾಡ ತೊಡಗಿದೆ. ನೋಡ್ತಾ ನೋಡ್ತಾ ಶಂಕರವಿಹಾರ ಅನ್ನೋ ಹೊಸ ಹೋಟೆಲ್‌ ಶುರು ಮಾಡಿದೆ. ಆದಾಯ ಹತ್ತು ಪಟ್ಟು ಹೆಚ್ಚಾಯಿತು.

ಮುಂದೆ, ಇಡೀ ಊರಿಗೆ ಹೋಟೆಲ್‌ ಹೆಸರಾಯಿತು. ಆವತ್ತು ಯೋಚಿಸಿದಂತೆ, ಕೈಯಲ್ಲಿ ಹಣ ಇದ್ದಾಗಲೇ ಐದಾರು ಸೈಟು, 10 ಎಕರೆ ಜಮೀನು. ಒಂದಷ್ಟು ಮನೆ ಕಟ್ಟಿಸಿಬಿಟ್ಟೆ. ತಿಂಗಳಿಗೆ ಒಂದೂವರೆ ಲಕ್ಷ ಬಾಡಿಗೆ ಬರುವಹಾಗೆ ಮಾಡಿಕೊಂಡೆ.

ಒನ್‌ ಫೈನ್‌ ಡೇ ಹೋಟೆಲ್‌ ಮುಚ್ಚಿ ಮನೆಯಲ್ಲಿ ಕೂತೆ. ಈಗ ಸಣ್ಣಪುಟ್ಟ ಕೌಟುಂಬಿಕ ಕಿರಿಕಿರಿ ಹೊರತಾಗಿ ನೆಮ್ಮದಿಯಾಗಿದ್ದೇನೆ. ಇವೆಲ್ಲ ಸಾಧ್ಯವಾಗಿದ್ದು, ಐಟಿಐ ಬಿಟ್ಟು, ಹೋಟೆಲ್ಲೇ ನನ್ನ ಪರ್‌ಫೆಕ್ಟ್ ಪ್ರೊಫೆಷನ್‌ ಅಂತ ಶುರುಮಾಡಿದ ಮೇಲೆ.

ಈಶ್ವರ್‌ರಾವ್‌, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next