Advertisement

ನಾಳೆ ದಸರಾ ಜಂಬೂ ಸವಾರಿ: ವರನಟ ರಾಜ್ ಅಪಹರಣ ಸಂದರ್ಭದಲ್ಲೂ ನಡೆದಿತ್ತು ಸರಳ ದಸರಾ

11:34 AM Oct 25, 2020 | keerthan |

ಮೈಸೂರು: ಜಗತ್ತಿನಾದ್ಯಂತ ಕೋವಿಡ್-19 ತನ್ನ ಕಬಂಧಬಾಹು ವಿಸ್ತರಿಸಿರುವ ಹಿನ್ನೆಲೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸರಳವಾಗಿ ನಡೆಯುತ್ತಿದ್ದು, ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ.

Advertisement

ಕೋವಿಡ್-19 ಸೋಂಕು ಸಂಕಷ್ಟ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯ ಸರ್ಕಾರ ಈ ಬಾರಿಯ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದು, ಸಾಂಪ್ರದಾಯಿಕ ಆಚರಣೆ ಕೈಬಿಡದೆ, ವೈಭವಕ್ಕೆ ಕಡಿವಾಣ ಹಾಕುವ ಮೂಲಕ ಜನಸಂದಣಿ ಉಂಟಾಗದಂತೆ ಸರಳ ಹಾಗೂ ಸಂಕೇತಿಕವಾಗಿ ಆಚರಿಸಲಾಗುತ್ತಿದೆ.

ಪ್ರತಿವರ್ಷ ಲಕ್ಷಾಂತರ ಮಂದಿ ಪ್ರವಾಸಿಗರ ದೇಶ, ವಿದೇಶದಿಂದ ಆಗಮಿಸಿ ದಸರಾ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೋವಿಡ್‌-19 ದಸರಾ ಉತ್ಸವಕ್ಕೆ ಅಡ್ಡಿಯಾದ ಹಿನ್ನೆಲೆ ಅರಮನೆಗೆ ಸೀಮಿತವಾಗುವಂತೆ ಸರಳವಾಗಿ ಆಚರಿಸಲಾಗುತ್ತಿದ್ದು, ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಐದು ಆನೆಗಳೊಂದಿಗೆ ಜಂಬೂ ಸವಾರಿ ಅರಮನೆ ಆವರಣದಲ್ಲಿ ನಡೆಯಲಿದೆ.

ನಾಳೆ ವಿಜಯ ದಶಮಿ ಮೆರವಣಿಗೆ: ಅ.26 ಸೋಮವಾರ ಮಧ್ಯಾಹ್ನ 2.59ರಿಂದ 3.20ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ 3.40ರಿಂದ 4.15ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ವಿಜಯದಶಮಿ (ಜಂಬೂ ಸವಾರಿ)ಮೆರವಣಿಗೆ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ 300 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು, ಎಲ್ಲರಿಗೂ ಕೋವಿಡ್‌-19 ಟೆಸ್ಟ್‌ ಕಡ್ಡಾಯವಾಗಿದೆ.

Advertisement

1893ರಲ್ಲೂ ಅರಮನೆಯ ಕೋಟೆಯೊಳಗೆ ನಡೆದಿತ್ತು: 410 ವರ್ಷಗಳಿಗೂ ಸುದೀರ್ಘ‌ ಇತಿಹಾಸ ಹೊಂದಿರುವ ಮೈಸೂರು ದಸರಾ ಮಹೋತ್ಸವ ಈವರೆಗೂ 13 ಬಾರಿ ಸರಳವಾಗಿ ನಡೆದಿದೆ. 1893ರಲ್ಲಿ ಭೀಕರ ಬರಗಾಲ ಎದುರಾಗಿ ಪ್ರಜೆಗಳು ತೀರ ಸಂಕಷ್ಟದಲ್ಲಿದ್ದ ಸಂದರ್ಭ ಅಂದಿನ ರಾಜರಾಗಿದ್ದ 10ನೇ ಚಾಮರಾಜೇಂದ್ರ ಒಡೆಯರ್‌ ಅವರು ಅರಮನೆ ಕೋಟೆ ಆವರಣಕ್ಕೆ ಸೀಮಿತವಾಗುವಂತೆ ದಸರಾ ಮಹೋತ್ಸವ ಮತ್ತು ಜಂಬೂ ಸವಾರಿ ನಡೆಸಿದ್ದರು. ಕೋಟೆಯೊಳಗಿದ್ದ 6 ಬೀದಿಗಳಲ್ಲಿ ಜಂಬೂ ಸವಾರಿ ಜೊತೆಗೆ ವಿವಿಧ ಕಲಾ ತಂಡಗಳ ಮೆರವಣಿಗೆ, ಜಾನಪದ ಕಾರ್ಯಕ್ರಮಗಳು ಜರುಗಿದ್ದವು. ಬಳಿಕ ಅರಮನೆ ಆವರಣದಲ್ಲಿನ ಭೈರವೇಶ್ವರ ದೇವಾಲಯದ ಬಳಿಯ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಣೆಯಾಗಿತ್ತು.

ಸರಳವಾಗಿ ನಡೆದ ವರ್ಷಗಳಿವು: 1893ರ ಬಳಿಕ ನಾಡ ಹಬ್ಬ ಮೈಸೂರು ದಸರಾ ಹಲವು ಕಾರಣಗಳಿಂದಾಗಿ 1970ರಿಂದ ಈವರೆಗೆ 12 ಬಾರಿ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. 1970ರಲ್ಲಿ ರಾಜ ವಂಶಸ್ಥರ ಸ್ವಂತ ವೆಚ್ಚಕ್ಕೆ ನೀಡುತ್ತಿದ್ದ ಹಣ ಸ್ಥಗಿತಗೊಳಿಸಿದ ಕಾರಣಕ್ಕೆ ದಸರಾ ಬಂದ್‌ ಮಾಡಲಾಗಿತ್ತು. ಆದರೂ ಇರಾನಿ, ಜಯದೇವರಾಜ ಅರಸ್‌ ಹಾಗೂ ಮುಂತಾದವರಿಂದ ಹಣ ಸಂಗ್ರಹಿಸಿ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಬಳಿಕ 1972, 73 ಎರಡು ವರ್ಷಗಳ ಕಾಲ ಬರ ಇದ್ದ ಕಾರಣ ದಸರಾ ಜಂಬೂ ಸವಾರಿ ರದ್ದಾಗಿತ್ತು. 1974ರಲ್ಲಿ ಜಯಚಾಮರಾಜ ಒಡೆಯರ್‌ ನಿಧನದಿಂದ ದಸರಾ ಆಚರಣೆ ಮಾಡಿರಲಿಲ್ಲ. 1977ರಲ್ಲಿ ಮೈಸೂರಿನಲ್ಲಿ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಕಾರಣಕ್ಕೆ ಈ ವರ್ಷವೂ ದಸರಾ ನಡೆಸಿರಲಿಲ್ಲ.

1983, 1992, 1997ರಲ್ಲಿ ರಾಜ್ಯಾದ್ಯಂತ ತೀವ್ರ ಬರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ದಸರಾ ನಡೆದಿರಲಿಲ್ಲ. ಬಳಿಕ 2000ರಲ್ಲಿ ವರನಟ ಡಾ.ರಾಜ್‌ ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಣ ಮಾಡಿದ್ದರಿಂದ ಆ ವರ್ಷವೂ ಸರಳವಾಗಿ ದಸರಾ ಆಚರಿಸಲಾಗಿತ್ತು. 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ಕಾರಣಕ್ಕೆ, 2002ರಲ್ಲಿ ಬರ ಎದುರಾದ ಹಿನ್ನೆಲೆ, 2015 ಬರದಿಂದ ಕಂಗೆಟ್ಟು ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು.

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next