Advertisement

ಡೇರಿ ಬೆಳ್ಳಿ ಹಬ್ಬಕ್ಕೆ ಬೆಳ್ಳಿಲೋಟ ಉಡುಗೊರೆ

02:46 PM Jan 25, 2018 | |

ಚಾಮರಾಜನಗರ: ತಾಲೂಕಿನ ಕೋಡಿ ಮೋಳೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಈಗ ಬೆಳ್ಳಹಬ್ಬದ ಸಂಭ್ರಮ. ಡೇರಿಯು ಯಶಸ್ವಿಯಾಗಿ 25 ವರ್ಷ ಪೂರೈಸಿದ್ದು, ಇದರ ನೆನಪಿಗಾಗಿ ಸದಸ್ಯರಿಗೆ ಬೋನಸ್‌ ಜೊತೆಗೆ ತಲಾ ಎರಡು ಬೆಳ್ಳಿಲೋಟ, ಸೀರೆ, ಶರ್ಟ್‌, ಪಂಚೆ, ಟ್ರಾವೆಲ್‌ ಬ್ಯಾಗ್‌, ಸ್ಟೀಲ್‌ ಬಕೆಟ್‌ ಹಾಗೂ ಪಶು ಪೋಷಕ ಆಹಾರ ಹೀಗೆ ಭರಪೂರ ಉಡುಗೊರೆ ನೀಡುವುದರ ಮೂಲಕ ಮಾದರಿಯಾಗಿದೆ.

Advertisement

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಂದ ಲಾಭವನ್ನು ಉತ್ಪಾದಕರಿಗೆ ಬೋನಸ್‌ ಆಗಿ ಪ್ರತಿ ವರ್ಷ ಹಂಚಿಕೆ ಮಾಡಲಾಗುತ್ತದೆ. ಅದೇ ರೀತಿಯಲ್ಲೇ ಕೋಡಿಮೋಳೆ ಹಾಲು ಸಂಘದಲ್ಲೂ ಪ್ರತಿ ವರ್ಷ ಬೋನಸ್‌ ನೀಡಲಾಗಿದೆ. ಅದರ ಜೊತೆಗೆ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ತನ್ನ ಹಾಲು ಉತ್ಪಾದಕರಿಗೆ ಉಡುಗೊರೆಗಳ ಸರಮಾಲೆಯನ್ನೇ ನೀಡಿದೆ. ಕೋಡಿಮೋಳೆ ಡೇರಿಯು ಸ್ಥಾಪನೆ ಆದದ್ದು 1992ರ ಆ.22 ರಂದು. ಇದರ ಸ್ಥಾಪಕ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್‌. ಡೇರಿ 25 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲೂ ಅದೇ ರಾಜಶೇಖರ್‌ ಅಧ್ಯಕ್ಷರಾಗಿದ್ದಾರೆ. ಅವರ ಪರಿಶ್ರಮ, ಪ್ರಾಮಾಣಿಕತೆಯಿಂದ ಡೇರಿ ಅಭಿವೃದ್ಧಿ ಹೊಂದಿದೆ. 

ಇದಕ್ಕೆ ಕಾರಣರಾದ ಹಾಲು ಉತ್ಪಾದಕರಿಗೆ ಕೃತಜ್ಞತಾ ಪೂರ್ವಕವಾಗಿ ಈ ಬಗೆಯ ಕೊಡುಗೆಗಳನ್ನು ನೀಡುವುದು ಅವರದೇ ಯೋಜನೆ. 1992ರಲ್ಲಿ ಡೇರಿ ಸ್ಥಾಪನೆಯಾದಾಗ ನಿತ್ಯ 30 ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಈಗ ಪ್ರತಿನಿತ್ಯ 900 ಲೀಟರ್‌ ಸಂಗ್ರಹವಾಗುತ್ತಿದೆ. 110 ಮಂದಿ ಹಾಲು ಉತ್ಪಾದಕ ಸದಸ್ಯರಿದ್ದರು. ಪ್ರಸ್ತುತ 220 ಮಂದಿ ಹಾಲು ಉತ್ಪಾದಕರು ಉಡುಗೊರೆಗಳನ್ನು ಪಡೆಯುತ್ತಿದ್ದಾರೆ. ಒಟ್ಟು ಡೇರಿ ಸದಸ್ಯರು 300ಕ್ಕಿಂತಲೂ ಹೆಚ್ಚಾಗಿದ್ದಾರೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ಒಂದು ವರ್ಷವಾದರೂ ಡೇರಿಗೆ ಹಾಲು ಪೂರೈಸಿರುವ 220 ಮಂದಿಯನ್ನು ಉಡುಗೊರೆಗೆ ಪರಿಗಣಿಸಲಾಗಿದೆ. ಇಷ್ಟೇ ಅಲ್ಲ, ಡೇರಿಯಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ವಾರ ನೀಡುವ ಹಾಲಿನ ಹಣವನ್ನು ಸದಸ್ಯರ ಬ್ಯಾಂಕ್‌ ಖಾತೆಗೆ ಹಾಕುವ ಮೂಲಕ ಪಾರದರ್ಶಕತೆ ಹೊಂದಲಾಗಿದೆ.

ಧ್ರುವನಾರಾಯಣರಿಂದ ಉಡುಗೊರೆಗಳ ವಿತರಣೆ 
ಬೆಳ್ಳಿ ಹಬ್ಬದ ಅಂಗವಾಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಆರ್‌. ಧ್ರುವನಾರಾಯಣ ಹಾಲು ಉತ್ಪಾದಕ ಸದಸ್ಯರಿಗೆ ಬೆಳ್ಳಿ ಲೋಟ, ಸೀರೆ, ಪಂಚೆ ಏರ್‌ ಬ್ಯಾಗ್‌, ಸ್ಟಿಲ್‌ ಬಕೆಟ್‌, ಪಶು ಆಹಾರ, ಖನಿಜ ಮಿಶ್ರಣ,
ನೆಕ್ಕು ಬಿಲ್ಲೆ ಹಾಗೂ ನೂತನ ಕ್ಯಾಲೆಂಡರನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಬಲ್ಕ್ ಮಿಲ್ಕ್ ಸೆಂಟರ್‌ ಕಟ್ಟಡ ನಿರ್ಮಾಣಕ್ಕೂ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಂಸದರು, ಕೋಡಿಮೋಳೆ ಗ್ರಾಮದ ಈ ಡೇರಿ ಮಾದರಿ ಯಾಗಿದೆ. ಗ್ರಾಮಸ್ಥರು ಹೈನುಗಾರಿಕೆಗೆ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಿದ್ದಾರೆ ಎಂದು ಶ್ಲಾ ಸಿದರು. 

Advertisement

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕೋಡಿ ಮೋಳೆ ಸಂಘದ ಸಾಧನೆ ನಿಜಕ್ಕೂ ಶ್ಲಾಘನೀಯ. ಇದಕ್ಕೆ ಪೂರಕವೆಂಬಂತೆ ತಮ್ಮ ಸರ್ಕಾರ ಮೈಸೂರು ಹಾಲು ಒಕ್ಕೂಟದಲ್ಲಿದ್ದ ಚಾ.ನಗರ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸಿ, ಕುದೇರಿನಲ್ಲಿ ನೂತನ ಒಕ್ಕೂಟ ಸ್ಥಾಪಿಸಿದೆ. ಇದು ಜಿಲ್ಲೆಯ ಹಾಲು ಉತ್ಪಾದಕರಿಗೆ ಸಹಾಯಕವಾಗಿದೆ ಎಂದರು. 

ಹಾಲು ಒಕ್ಕೂಟದ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್‌ ಮಾತನಾಡಿ, ಬೆಳ್ಳಿ ಹಬ್ಬದ ಸಂಭ್ರಮವನ್ನು ಅರ್ಥಪೂರ್ಣಗೊಳಿಸಲು ಉತ್ಪಾದಕರಿಗೆ ವಿವಿಧ ಉಡುಗೊರೆಗಳನ್ನು ನೀಡಲಾಗುತ್ತಿದೆ. ಇದು ಎಲ್ಲಾ ಆಡಳಿತ ಮಂಡಳಿ ಸದಸ್ಯರ ಶ್ರಮದಿಂದ ಸಾಧ್ಯವಾಗಿದೆ. ಸಂಘದ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ ಉತ್ಪಾದಕರನ್ನು ಪ್ರೋತ್ಸಾಹಿಸುವುದು ತಮ್ಮ ಕರ್ತವ್ಯ ಎಂದರು.
 
ಮುಂದಿನ ದಿನಗಳಲ್ಲಿ ಗ್ರಾಮಗಳಿಗೆ ಸಾಮೂಹಿಕ ಶೌಚಾಲಯ ನಿರ್ಮಾಣ, ಸದಸ್ಯರಿಗೆ ಆರೋಗ್ಯ ತಪಾಸಣಾ ಶಿಬಿರಗಳು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು, ರಾಸುಗಳನ್ನು ವಿಮಾ ಯೋಜನೆಗೆ ಒಳಪಡಿಸಿ ಸಂಘದಿಂದ ಪೋ›ತ್ಸಾಹ ಧನ ನೀಡುವುದು ಸೇರಿದಂತೆ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
 
ಈ ಕಾರ್ಯಕ್ರಮದಲ್ಲಿ ಚಾಮುಲ್‌ ಅಧ್ಯಕ್ಷ ಗುರುಮಲ್ಲಪ್ಪ, ವ್ಯವಸ್ಥಾಪಕ ನಿದೇರ್ಶಕ ಜಯಕುಮಾರ್‌, ತಾಪಂ ಸದಸ್ಯ ಮಹದೇವಶೆಟ್ಟಿ, ಗ್ರಾಪಂ ಅದ್ಯಕ್ಷ ಸಿದ್ದಪ್ಪಾಜಿ, ಉಪಾದ್ಯಕ್ಷ ನಾಗನಾಯ್ಕ, ಸಂಘದ ನಿರ್ದೇಶಕರಾದ ಎಂ.ಎಸ್‌.ರವಿಶಂಕರ್‌, ಕೆ.ಆರ್‌.ಬಸವರಾಜು, ಪ್ರಮೋದಾ ಶಂಕರಮೂರ್ತಿ, ಮುಖಂಡರಾದ  ಗೋವಿಂದಶೆಟ್ಟಿ ಹಾಗೂ ಸದಸ್ಯರು ಭಾಗವಹಿಸಿದ್ದರು.

ರಾಜ್ಯದಲ್ಲೇ ಮೊದಲು ಇಡೀ ರಾಜ್ಯದಲ್ಲಿ 12 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದ ಕೊಡುಗೆ ನೀಡುತ್ತಿರುವುದು ತಮ್ಮ ಸಂಘ ಮಾತ್ರ ಎಂದು ಡೇರಿ ರಾಜಶೇಖರ್‌ ಹೇಳಿದರು. ಸದಸ್ಯರಿಗೆ ಈಗ ಎರಡು ಬೆಳ್ಳಿ ಲೋಟ, ಒಂದು ಸೀರೆ ಮತ್ತು ಕಣ, ಪಂಚೆ ಶರ್ಟು ಟವೆಲ್‌, ಸ್ಟೀಲ್‌ ಬಕೆಟ್‌, ಟ್ರಾವೆಲ್‌ ಬ್ಯಾಗ್‌, 50 ಕೆಜಿ ಪಶು ಆಹಾರ, ನೆಕ್ಕು ಬಿಲ್ಲೆ, ಖನಿಜ ಮಿಶ್ರಣ, ಈ ವರ್ಷದ ಕ್ಯಾಲೆಂಡರ್‌ ಅನ್ನು ಕೊಡುಗೆಯಾಗಿ ನೀಡುತ್ತಿದ್ದು, ಇದಕ್ಕೆ ತಲಾ 9 ಸಾವಿರ ರೂ. ವೆಚ್ಚವಾಗಿದೆ. ಒಟ್ಟು 220 ಸದಸ್ಯರಿಗೆ ನೀಡಲಾಗುತ್ತಿದೆ ಎಂದು ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next