Advertisement

ಮೌನವೇ ಎಲ್ಲವನ್ನೂ ಹೇಳಬಲ್ಲದು

01:58 AM Jun 17, 2019 | sudhir |

ಪ್ರತಿದಿನ ನೀವು ಅಂದುಕೊಂಡ ಹಾಗೇ ಇರಬೇಕು ಎಂದೇನಿಲ್ಲ. ಒಂದು ದಿನ ಬೇಸರ ಅತಿಯಾಗಿ ಕಾಡಬಹುದು, ಕೆಲವೊಮ್ಮೆ ಕಾರಣವಿಲ್ಲದೆ ಮನಸ್ಸು ಚಂಚಲವಾಗಬಹುದು, ಖುಷಿ, ಸಂತೊಷಗಳಿರಬಹುದು. ಕಾರಣವನ್ನು ಹುಡುಕಿದರೂ ಅಲ್ಲೆಲ್ಲಾ ಕೇವಲ ನಮಗೇ ಅರ್ಥವಾಗದ ಶೂನ್ಯಗಳು, ಮೌನವಾದ ಕೆಲವು ದನಿಗಳೇ ಗೋಚರವಾಗಬಹುದು. ಇನ್ನೂ ತಾರ್ಕಿಕವಾಗಿ ಕೆದಕುತ್ತಾ ಹೋದರೆ ದಿವ್ಯ ಮೌನದೊಳಗಿನ ನೀರವತೆ ನಮ್ಮ ಈ ಭಾವನೆೆಗೆ ಕಾರಣವನ್ನು, ಸುಪ್ತ ಮನಸ್ಸಿನ ಪ್ರಶಾಂತತೆ ಮತ್ತು ಅಶಾಂತಿಯನ್ನು ನಮ್ಮ ಎದುರು ತೆರೆದಿಡುವ ಕೆಲಸವನ್ನು ಮಾಡುತ್ತದೆ.

Advertisement

ಒಂದೊಮ್ಮೆ ಕೋಪ ಬರಬಹುದು. ಆತುರದ ನಿರ್ಧಾರಗಳ ಮೂಲಕ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿಕೊಳ್ಳುವ ಸಂದರ್ಭಗಳೂ ನಮ್ಮೆದುರು ತಲೆದೋರಬಹುದು. ಕೋಪ ಕರಗಿದ ಮೇಲೆ ನಮ್ಮ ತಪ್ಪು ಒಪ್ಪುಗಳ ಸಣ್ಣ ಚಿತ್ರಣವೊಂದು ನಮ್ಮ ಕಣ್ಣ ಮುಂದೆ ಹಾಗೇ ಸುಳಿದು ಹೋಗುತ್ತದೆ. ಆಗ ನಮಗೆ ಅರಿವಾಗುತ್ತದೆ ನಮ್ಮ ಆತುರದ ಬುದ್ಧಿಯಿಂದ ನಾವು ಕಳೆದುಕೊಂಡದ್ದೆಷ್ಟು, ನಮ್ಮಲ್ಲಿ ಉಳಿಸಿಕೊಂಡದ್ದು ಎಷ್ಟು ಎಂದು. ಹೀಗೆ ಆತುರದ ಆಂತರ್ಯವನ್ನು ಬಗೆಯುವುದಕ್ಕಿಂತ, ನಮ್ಮ ಸುಪ್ತ ಮನಸ್ಸಿನ ಆಂತರ್ಯವನ್ನು ಅರಿಯುವುದನ್ನು ಆ ಕ್ಷಣಕ್ಕಾದರೂ ರೂಢಿಸಿಕೊಂಡಲ್ಲಿ ನಾವು ಉಳಿಸಿಕೊಳ್ಳುವುದರ ಮೌಲ್ಯ ಹೆಚ್ಚಾಗಬಹುದಲ್ಲವೇ ಎಂದು.

ಇದಕ್ಕೆ ಬೇಕಿರುವುದು ತಾಳ್ಮೆ. ಒಂದು ಸಮಸ್ಯೆಯಿಂದ ಹೊಸ ಹೊಸ ಸಮಸ್ಯೆಗಳನ್ನು ಸೃಷ್ಟಿಸುವ ಬದಲು ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಬಗ್ಗೆ ಒಂದಷ್ಟು ತಾಳ್ಮೆಯನ್ನು ಹೊಂದಿ ಯೋಚಿಸಿದಲ್ಲಿ ಅದೆಷ್ಟು ಬಾಂಧವ್ಯಗಳು ಗಟ್ಟಿಗೊಳ್ಳುವುದು ಸಾಧ್ಯ ಅಲ್ಲವೆ. ಸಮಯ ಎಲ್ಲವನ್ನೂ ಸರಿ ಪಡಿಸುತ್ತದೆ ಎನ್ನುವ ಕಾಯುವಿಕೆಯ ಗುಣವೇ ಗೌಣವಾದಲ್ಲಿ ಮಾತ್ರ ಬದುಕು ಬಲು ಕಷ್ಟ. ಹಾಗಾಗಿ ಮೌನ ಎಂಬ ನಿರಾಭರಣ ಸೌಂದರ್ಯವನ್ನು ತೊಟ್ಟುಕೊಂಡು ಜೀವಿಸುವುದನ್ನು ಕಲಿತಲ್ಲಿ ಸಾವೇ ನಮ್ಮ ಮುಂದೆ ಬಂದರೂ ಅದನ್ನು ನಗುತ್ತಲೆ ಸ್ವೀಕರಿಸುವ ಧೈರ್ಯ ನಮ್ಮದಾಗುತ್ತದೆ. ಮಾತು ಬೆಳ್ಳಿ ಮೌನ ಬಂಗಾರ. ಇದನ್ನು ಅರಿತು ನಡೆದಲ್ಲಿ ಬದುಕೇ ಶೃಂಗಾರ.

-  ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next