Advertisement

ಪುರಾತನ ನಗರ…ಸಿಗಿರಿಯಾ ಎಂಬ ವಿಶ್ವದ ಎಂಟನೇ ಅದ್ಭುತ

06:35 PM Jan 23, 2021 | Team Udayavani |

ಶ್ರೀಲಂಕಾಕ್ಕೆ ಹೋದ ಮೇಲೆ ಸಿಗಿರಿಯಾ ನೋಡಲೇಬೇಕು ಎಂದು ಗೆಳೆಯರು ಕಟ್ಟುನಿಟ್ಟಾಗಿ ಹೇಳಿದ್ದರು. ಮಕ್ಕಳು, ಯಜಮಾನರು ಎಷ್ಟೇ ಕಷ್ಟವಾದರೂ ಹತ್ತಿಯೇ ಸಿದ್ಧ ಎಂದು ನಿರ್ಧರಿಸಿದ್ದರು. ಹಿಂಜರಿದವಳು ನಾನೊಬ್ಬಳೇ! ಕಡಿದಾದ ಬೆಟ್ಟದ ಸಾವಿರಾರು ಮೆಟ್ಟಿಲು ಹತ್ತಿ ಮಕ್ಕಳು ಮರಿ ಕಟ್ಟಿಕೊಂಡು ಮೇಲೆ ಹೋಗುವುದೇನೋ ಸರಿ, ಆದರೆ, ನೋಡುವಂಥದ್ದು ಏನಿದೆ? ಎಂಬುದು ನನ್ನ ಅನುಮಾನ. ಅಂತೂ ದೂರದಿಂದಲೇ ನೋಡಿ ಬೆಟ್ಟ ಏರುವ ಬಗ್ಗೆ ಯೋಚಿಸೋಣ ಎಂದು ಕಾರಿನಲ್ಲಿ ಕುಳಿತಿದ್ದೆ. ರಾಜಧಾನಿ ಕ್ಯಾಂಡಿಯಿಂದ ಕಾರು ಹಾವಿನಂಥ ಸುತ್ತು ಬಳಸು ದಾರಿಯಲ್ಲಿ ಸಿಗಿರಿಯಾಕ್ಕೆ ನೂರು ಕಿಲೋಮೀಟರ್‌ ದೂರ, ಮೂರು
ತಾಸಿನ ಪಯಣ.ದಟ್ಟ ಹಸಿರು ಕಾನನದ ನಡುವೆ ಇದ್ದಕ್ಕಿದ್ದಂತೆ ಕಣ್ಣಿಗೆ ಬಿದ್ದದ್ದು ಯಾರೋ ತಂದು ಬಿಸಾಡಿದಂತಿದ್ದ ಬೃಹತ್‌ ಏಕಶಿಲಾ ಪರ್ವತ. ದೂರದಿಂದ
ಇರುವೆಯ ಸಾಲಿನಂತೆ ಕಾಣುತ್ತಿದ್ದ ಜನರು,ಕೊರೆದಂತಿದ್ದ ಮೆಟ್ಟಿಲುಗಳು, ಅಟ್ಟಣಿಗೆಗಳು, ಕೋಟೆಯ ಗೋಡೆ, ಎಲ್ಲವೂ ಯಾವುದೋ ಬೇರೆಯೇ ಲೋಕದ ಭಾಗವೆನ್ನಿಸಿದವು, ಮಾತ್ರವಲ್ಲ ಕೈ ಬೀಸಿ ಕರೆದವು ! ಹೀಗಾಗಿ ಕಾರು ನಿಂತೊಡನೆ ಮೊದಲು ಹಾರಿದ್ದು ನಾನೇ. ಅಷ್ಟರಲ್ಲಾಗಲೇ ನಮ್ಮ ಗೈಡ್‌ ನೀವೀಗ ನೋಡುತ್ತಿರುವುದು ಜಗತ್ತಿನ ಎಂಟನೆಯ ಅದ್ಭುತ ಎಂದು ವಿವರಣೆ ನೀಡಲಾರಂಭಿಸಿದ.

Advertisement

ಸಿಗಿರಿಯಾದ ಕೋಟೆ ಮತ್ತು ಅರಮನೆ, ದಂಬುಲ್ಲಾ ಮತ್ತು ಹಬರನೆ ಪಟ್ಟಣಗಳ ನಡುವೆ ಅಂದರೆ ಶ್ರೀಲಂಕಾದ ಹೃದಯಭಾಗದಲ್ಲಿ, ಸಮುದ್ರ ಮಟ್ಟದಿಂದ 370 ಮೀಟರ್‌ ಎತ್ತರದಲ್ಲಿದೆ. ಸಿಗಿರಿಯಾದ ಶಿಲಾ ಪರ್ವತ ಜ್ವಾಲಾಮುಖಿಯಿಂದ ಸಿಡಿದ ಲಾವಾದಿಂದ ಉಂಟಾಗಿದೆ. ಸುತ್ತಲಿನ ಅರಣ್ಯಗಳಿಗಿಂತ ಇನ್ನೂರು ಮೀಟರ್‌ ಎತ್ತರದಲ್ಲಿರುವ ಈ ಶಿಲೆಯ ಅಗಾಧತೆ ಬೆರಗು ಮೂಡಿಸುತ್ತದೆ. ಇದು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಬೌದ್ಧಭಿಕ್ಕುಗಳ ಚೈತ್ಯಾಲಯವಾಗಿತ್ತು. ನಂತರ ಐದನೆಯ ಶತಮಾನದ ಉತ್ತರಾರ್ಧದಲ್ಲಿ ರಾಜಾ ಕಸ್ಯಪ ಇಲ್ಲಿ ಅರಮನೆ ಕಟ್ಟಿಸಲು ನಿರ್ಧರಿಸಿದ.ಆತನ ಮರಣಾನಂತರ ಮತ್ತೆ ಬೌದ್ಧಭಿಕ್ಕುಗಳ ನೆಲೆಯಾಗಿದ್ದು ಹದಿನಾಲ್ಕನೇ ಶತಮಾನದಲ್ಲಿ ನಿರ್ಜನವಾಯಿತು.

ಚಾರಿತ್ರಿಕ, ಐತಿಹಾಸಿಕ ಮತ್ತು ವಾಸ್ತುಶೈಲಿಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಸಿಗಿರಿಯಾವನ್ನು 1982ರಲ್ಲಿ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿಸಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ನಗರ ನಿರ್ಮಾಣ, ಕ್ಲಿಷ್ಟ ನೀರಾವರಿ ವ್ಯವಸ್ಥೆ ಮತ್ತು ಅಪರೂಪದ ತಾಂತ್ರಿಕತೆ  ಸಿಗಿರಿಯಾದ ವೈಶಿಷ್ಟ್ಯ. ಪ್ರವೇಶ ಧನ ಸ್ವಲ್ಪ ದುಬಾರಿ ಎನಿಸಿದರೂ (ಸಾರ್ಕ್‌ ದೇಶದವರಿಗೆ ಹದಿನೈದು ಡಾಲರ್‌ಗಳು) ಸ್ವಚ್ಛವಾದ ಪರಿಸರ ಖುಷಿ ನೀಡುತ್ತದೆ.

ಬೆಟ್ಟದ ಪ್ರವೇಶ ದ್ವಾರದ ಹತ್ತಿರ ಸಿಗಿರಿಯಾ ಸಂಗ್ರಹಾಲಯವಿದೆ. ಇಲ್ಲಿ ಹಲವಾರು ಪಳೆಯುಳಿಕೆಗಳನ್ನು ಸಂರಕ್ಷಿಸಿ ಇಡಲಾಗಿದೆ. ಚಾರಣಕ್ಕೆ ಮೊದಲು ಭೇಟಿ ನೀಡಿದಲ್ಲಿ ಅನೇಕ ಮಾಹಿತಿ ಪಡೆದು ಮುನ್ನಡೆಯಬಹುದು. ಬೆಟ್ಟದ ಅರಮನೆಗೆ ಹೋಗುವ ಮುನ್ನ ಕಾಣುವ ವಿಶಾಲ ಉದ್ಯಾನವನ,ಕಾರಂಜಿ, ಈಜುಕೊಳ, ನೀರಿನ ತೊಟ್ಟಿ ಎಲ್ಲವೂ ಸಾವಿರದೈನೂರು ವರ್ಷಗಳಷ್ಟು ಹಳೆಯವು. ಮಳೆಗಾಲದಲ್ಲಿ ನೀರು ಇದ್ದಾಗ ಸುಸ್ಥಿತಿಯಲ್ಲಿರುವ ಇವೆಲ್ಲಾ ಈಗಲೂ ಅಂದಿನಂತೆಯೇ ಕೆಲಸ ಮಾಡುತ್ತವೆ ಎಂದು ಚಾಲಕ ವಿವರಿಸಿದ. ಬೆಟ್ಟವನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು. ಮೊದಲ ಹಂತದಲ್ಲಿ ಮೆಟ್ಟಿಲು ಏರಿದರೆ ಬೆಟ್ಟದ ಮಧ್ಯಕ್ಕೆ ಕನ್ನಡಿ ಗೋಡೆ, ಕಡಿದಾದ ಎರಡನೇ ಹಂತದಲ್ಲಿ ಸಿಂಹಪಾದ ಮತ್ತು ಮೂರನೇ ಹಂತ, ಬೆಟ್ಟದ ತುತ್ತತುದಿಯಲ್ಲಿ ಕಸ್ಯಪನ ಅರಮನೆ. ಅಂದಿನ ಮೆಟ್ಟಿಲುಗಳ ಜತೆ ಈಗ ಸರ್ಕಾರ ಉಕ್ಕಿನ ಏಣಿಗಳನ್ನು ನಿರ್ಮಿಸಿದೆ.

Advertisement

ಕಡಿದಾದ ಎರಡನೇ ಹಂತದಲ್ಲಿ ಒಬ್ಬೊಬ್ಬರೇ ಸಾಗುವಷ್ಟು ದಾರಿ ಕಿರಿದು. ಮೂರು ಹಂತಗಳನ್ನು ಮೇಲೆ ಹತ್ತಿ ಕೆಳಗಿಳಿಯಲು ಕನಿಷ್ಠ ನಾಲ್ಕು ತಾಸು ಬೇಕು.ಹೀಗಿರುವಾಗ ಈ ಸೌಲಭ್ಯಗಳಿಲ್ಲದೇ ರಾಜ ಮತ್ತು ಆತನ ಪರಿವಾರ ಹೇಗೆ ಹತ್ತಿಳಿಯುತ್ತಿದ್ದರು ಎಂಬ ಪ್ರಶ್ನೆ ನನ್ನ ತರಲೆ ತಲೆಗಂತೂ ಬಂತು. ಆತ ಕೆಳಗೆ ಬರುತ್ತಿರಲಿಲ್ಲ. ತಾನು ಮೇಲೆ ಸುರಕ್ಷಿತವಾಗಿದ್ದು ವೈರಿಗಳಿಗೆ ಕಷ್ಟ ಆಗಬೇಕು ಎಂಬುದೇ ಆತನ ಉದ್ದೇಶವಾಗಿತ್ತು. ರಕ್ಷಣೆಗಾಗಿಯೇ ಕಟ್ಟಿದ ಕೋಟೆ- ಅರಮನೆ ಇದು ಎಂದು ಕೂಡಲೇ ಅದರ ವಿವರಣೆ ಬಂತು.

ಲಂಕೆಯ ಧಾತುಸೇನ ಮಹಾರಾಜನಿಗೆ ಪಟ್ಟದರಸಿಯಿಂದ ಮೊಗಲ್ಲಾ ಎಂಬ ಮಗನಾದರೆ ಪ್ರೇಯಸಿಯಿಂದ ಕಸ್ಯಪ. ಸಿಂಹಾಸನಕ್ಕಾಗಿ ಅಣ್ಣ ಕಸ್ಯಪ ತಮ್ಮ ಮೊಗಲ್ಲಾರ ನಡುವೆ ಪೈಪೋಟಿ . ಕಸ್ಯಪ, ತಮ್ಮನ ಪಕ್ಷಪಾತಿಯಾದ ತಂದೆಯನ್ನು ಕೊಂದು ರಾಜನಾಗುತ್ತಾನೆ. ಮೊಗಲ್ಲಾ, ಭಾರತಕ್ಕೆ ಬಂದು ಇತರರ ಸಹಾಯದಿಂದ ರಾಜ್ಯ ಪಡೆಯುವ ಪ್ರಯತ್ನ ಮಾಡುತ್ತಾನೆ.ತಮ್ಮನಿಂದ ತಪ್ಪಿಸಿಕೊಳ್ಳಲು ಕಸ್ಯಪ ತನ್ನ ಅರಮನೆಯನ್ನು ಈ ದುರ್ಗಮ ಶಿಲಾ ಪರ್ವತದಲ್ಲಿ ಕಟ್ಟುತ್ತಾನೆ. ನಂತರ ನಡೆದ ಯುದ್ಧದಲ್ಲಿ ಮೊಗಲ್ಲಾ ವಿಜಯಿಯಾಗಿ ರಾಜಧಾನಿಯನ್ನು ಅನುರಾಧಾಪುರಕ್ಕೆ ಸ್ಥಳಾಂತರಿಸುತ್ತಾನೆ.ಇದು ಸಿಗಿರಿಯಾದ ಕೋಟೆ ಅರಮನೆಯ ನಿರ್ಮಾಣಕ್ಕೆ ಕಾರಣವಾದ ಐತಿಹಾಸಿಕ ಘಟನೆ.

ಅಂತೂ ಕತೆ ಕೇಳುತ್ತಾ ಉಸಿರು ಬಿಡುತ್ತ ಸಾಗಿದವರಿಗೆ  ಕಂಡಿದ್ದು ಕನ್ನಡಿ ಗೋಡೆ. ಕಲ್ಲಿನಿಂದಲೇ ಮಾಡಿದ ಗೋಡೆಯಾದರೂ ಅದನ್ನು ಉಜ್ಜಿ ಉಜ್ಜಿ ಕನ್ನಡಿಯಂತೆ ಹೊಳೆಯುವಷ್ಟು ನುಣುಪುಗೊಳಿಸಲಾಗಿತ್ತು.ಇಲ್ಲಿ ನಡೆಯುವಾಗ ರಾಜ ತನ್ನ ಪ್ರತಿಬಿಂಬವನ್ನು ಗೋಡೆಯಲ್ಲಿ ಕಾಣುತ್ತಿದ್ದನಂತೆ. ಈ ಗೋಡೆಯ ಹೊಳಪು ಈಗ ಕಡಿಮೆಯಾಗಿದ್ದರೂ ಅದರಲ್ಲಿ ಕೆತ್ತಿರುವ ಗೋಡೆ ಬರಹಗಳು 8 ನೇ ಶತಮಾನದ್ದೆಂದು ಊಹಿಸಲಾಗಿದೆ. ಇದರಿಂದ ಸಿಗಿರಿಯಾ ಸಾವಿರ ವರ್ಷಗಳ ಹಿಂದಿನಿಂದಲೂ ಜನಪ್ರಿಯ ಪ್ರವಾಸಿ ತಾಣವಾಗಿತ್ತು ಎಂಬುದು ಸಾಬೀತಾಗಿದೆ.ಹಾಗೆಯೇ ಗೋಡೆ ಮೇಲೆ ಗೀಚುವುದು ನಮಗೆ ಶತಶತಮಾನಗಳ ಹಿಂದಿನ ಪೂರ್ವಜರಿಂದ ಬಂದ ಕೊಡುಗೆ ಎಂಬುದನ್ನೂ ನಿರೂಪಿಸುತ್ತದೆ ! (ಈಗ ಗೋಡೆಯ ಮೇಲೆ ಬರೆಯುವುದು,ಮುಟ್ಟುವುದು ನಿಷಿದ್ಧ). ಈ ಕನ್ನಡಿ ಗೋಡೆಯ ಹತ್ತಿರವೇ ಸಹಜ ಬಣ್ಣ ಬಳಸಿ ಬಿಡಿಸಲಾದ ತೆರೆದೆದೆಯ ಹದಿನೆಂಟು ಸುಂದರಿಯರ ಚಿತ್ರಗಳಿವೆ. ಇವರು ರಾಜಾ ಕಸ್ಯಪನ ಹೆಂಡತಿಯರು ಅಥವಾ
ಗಣಿಕೆಯರು ಎಂದು ಊಹಿಸಲಾಗಿದೆ. ಕಲೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಅಮೂಲ್ಯ ಚಿತ್ರಗಳಿವು.

ಇಲ್ಲಿಂದ ಮುಂದೆ ಉತ್ತರದಿಕ್ಕಿನಲ್ಲಿರುವ ಸಿಂಹಪಾದಕ್ಕೆ ನಮ್ಮ ಚಾರಣ. ದೊಡ್ಡ ಕಲ್ಲಿನ ಸಿಂಹದ ಆಕಾರದಲ್ಲಿರುವ ಕೋಟೆಯ ಮುಖ್ಯ ದ್ವಾರದಲ್ಲಿ ಇಂದು ಕಾಲನ ಹೊಡೆತಕ್ಕೆ ಸಿಕ್ಕು ಉಳಿದಿರುವುದು ಕೇವಲ ಕಾಲುಗಳು ಮಾತ್ರ. ಈ ಕಲ್ಲಿನ ಸಿಂಹದಿಂದಾಗಿಯೇ ಅರಮನೆಗೆ ಸಿಂಹಗಿರಿ, ಸಿಗಿರಿ ಎಂಬ ಹೆಸರು ಬಂದಿದೆ. ಇಲ್ಲಿಂದ ಕೆಳಗೆ ನೋಡಿದರೆ ತಲೆ ತಿರುಗುವುದು ಖಂಡಿತವಾದರೂ ಸುತ್ತಲಿನ ಪ್ರಕೃತಿ ರುದ್ರ ರಮಣೀಯ. ಎಲ್ಲಿ ಕಾಲು ಜಾರುತ್ತದೋ ಎಂದು ಹೆದರುತ್ತಾ ಕೆಳಗೆ ದಿಟ್ಟಿ ಹಾಯಿಸದೇ ಅಂತೂ ಬೆಟ್ಟದ ತುದಿಗೆ ಏರಿದಾಗ ಕಾಣುವುದು ವಿಸ್ತಾರವಾದ ಅರಮನೆಯ ಗತವೈಭವದ ಕುರುಹುಗಳು. ವೀಕ್ಷಣಾ ಗೋಪುರ, ಕಲ್ಲಿನ ಈಜುಕೊಳ, ನೃತ್ಯಶಾಲೆ, ಪಾಳು ಬಿದ್ದ ಗೋಡೆ, ಕಲ್ಲಿನ ಸಿಂಹಾಸನ-ಪ್ರತೀ ಕಲ್ಲೂ ಯಾವುದೋ ಕತೆ ಹೇಳಲು ಹಾತೊರೆಯುತ್ತವೆ. ಸಂಜೆಯ ತಂಪು ಹೊತ್ತಿನಲ್ಲಿ ಬೆಟ್ಟ ಏರಿ, ತಂಗಾಳಿಗೆ ಮೈಯೊಡ್ಡಿ ಇಲ್ಲಿಂದ ಸೂರ್ಯಾಸ್ತ ವೀಕ್ಷಿಸುವುದು ಮರೆಯಲಾಗದ ಅನುಭವ. ಸಿಗಿರಿಯಾದ ಹತ್ತಿರ ಊಟ ಉಪಚಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ, ಅಗತ್ಯವಿರುವ ನೀರು, ಹಣ್ಣು, ತಿಂಡಿ ಒಯ್ಯುವುದು ಉತ್ತಮ. ಕಸ್ಯಪನ್ನು ನೆನೆದುಕೊಂಡು ಬೆಟ್ಟವಿಳಿದು ಬರುವಾಗ ನಮಗೆ ಹೊಟ್ಟೆ, ಕಣ್ಣು, ಹೃದಯ ಎಲ್ಲವೂ ತುಂಬಿತ್ತು.ಕಾಲು ಪದ ಹೇಳುತ್ತಿದ್ದರೂ ಮನಸ್ಸು ಸಿಗಿರಿಯಾ ನಿಜಕ್ಕೂ ವಿಸ್ಮಯ ಎಂದು ಧನ್ಯತಾ ಭಾವ ತಾಳಿತ್ತು.

*ಡಾ. ಕೆ. ಎಸ್‌. ಚೈತ್ರಾ

(2016ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ ಲೇಖನ)

Advertisement

Udayavani is now on Telegram. Click here to join our channel and stay updated with the latest news.

Next