ರಬಕವಿ-ಬನಹಟ್ಟಿ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದ್ದರಿಂದ ನಾವೆಲ್ಲರೂ ಅವರ ಹಿತಕ್ಕಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಪತ್ರಕರ್ತರು ರಾಷ್ಟ್ರದ ಹಿತಕ್ಕಾಗಿ ಮತ್ತು ಬಡ ಜನರ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪತ್ರಿಕೆಗಳು ಸತ್ಯದ ಮಾರ್ಗವನ್ನು ತೋರಿಸುವಂತಾಗಬೇಕು ಎಂದು ಕನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ತಿಳಿಸಿದರು.
ಸೋಮವಾರ ಅವರು ರಬಕವಿ ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಹಮ್ಮಿಕೊಳ್ಳಾದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಂಗ ಮತ್ತು ಶಾಸಕಾಂಗಗಳಿಗೆ ಕನ್ನಡಿಯಾಗಿರುವ ಪತ್ರಿಕೆಗಳು ಇಂದಿನ ದಿನಗಳಲ್ಲಿ ಬಹಳಷ್ಟು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುತ್ತಿದೆ. ದೇಶವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪತ್ರಿಕೆಗಳ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯುವಲ್ಲಿ ಪತ್ರಿಕೆಗಳು ಉತ್ತಮ ಕಾರ್ಯ ಮಾಡುತ್ತಿವೆ. ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳಿಗೆ ಮತ್ತು ಪತ್ರಕರ್ತರಿಗೆ ಬಹಳಷ್ಟು ಸಮಸ್ಯೆಯಾಗಿದೆ. ವಾಸ್ತವ ಸಂಗತಿಯನ್ನು ನಿರ್ಭಿಡೆಯಿಂದ ಜನರಿಗೆ ಮುಟ್ಟಿಸುವ ಕಾರ್ಯವನ್ನು ಪತ್ರಿಕೆಗಳು ಮಾಡಬೇಕು ಎಂದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಧಲಬಂಜನ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಇದರಿಂದ ಬಹಳಷ್ಟು ಜನರಿಗೆ ತೊಂದರೆಯಾಗುತ್ತಿದೆ. ಇಂಥವರ ಕುರಿತು ಜಿಲ್ಲಾ ಘಟಕದ ಗಮನಕ್ಕೆ ತಂದರೆ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಿರಣ ಆಳಗಿ, ಶಿವಾನಂದ ಮಹಾಬಳಶೆಟ್ಟಿ ಮಾತನಾಡಿದರು.
ಕಾನಿಪ ಅಧ್ಯಕ್ಷ ವಿಶ್ವಜ ಕಾಡದೇವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ರಾಜ್ಯ ಕಾನಿಪ ಕಾರ್ಯಕಾರಣಿ ಮಂಡಳಿಯ ಸದಸ್ಯ ಮಹೇಶ ಅಂಗಡಿ, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ ಇದ್ದರು.
ಸಮಾರಂಭದಲ್ಲಿ ನೀಲಕಂಠ ದಾತಾರ, ಜಯವಂತ ಕಾಡದೇವರ, ಬಸಯ್ಯ ವಸ್ತ್ರದ, ಚಂದ್ರಶೇಖರ ಮೋರೆ, ಅರುಣ ಯಾದವಾಡ, ಮಹೇಶ ಆರಿ, ಧರೆಪ್ಪ ಉಳ್ಳಾಗಡ್ಡಿ, ನೀಲಕಂಠ ಮುತ್ತೂರ, ಸಂಗಪ್ಪ ಕುಂದಗೋಳ, ಪ್ರಕಾಶ ಕುಂಬಾರ ಸೇರಿದಂತೆ ಅನೇಕರು ಇದ್ದರು.
ವೀರೂಪಾಕ್ಷಯ್ಯ ಮಠಪತಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ತುಂಗಳ ಸ್ವಾಗತಿಸಿದರು. ಕನ್ಯಾಕುಮಾರಿ ಹೂಗಾರ ನಿರೂಪಿಸಿದರು. ರವೀಂದ್ರ ಅಷ್ಟಗಿ ವಂದಿಸಿದರು.