Advertisement

ಆ.31ರಂದು ಪ್ರವಾಹ ಪೀಡಿತ ಸ್ಥಳ ವೀಕ್ಷಣೆಗೆ ಸಿದ್ದರಾಮಯ್ಯ

10:10 AM Aug 27, 2019 | sudhir |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಹದಿಂದ ಎದುರಾದ ಸಮಸ್ಯೆಗಳನ್ನು ವೀಕ್ಷಿಸುವ ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆ.31ಕ್ಕೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

Advertisement

ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಅವರು, ಸಿದ್ಧರಾಮಯ್ಯ ಅವರು ಅಂದು ಬೆಳಗ್ಗೆ ಪಚ್ಚನಾಡಿ ತ್ಯಾಜ್ಯರಾಶಿ ಕುಸಿದು ಮಂದಾರಕ್ಕೆ ಹರಡಿರುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಆಗಿರುವ ಮಳೆಹಾನಿ ಪ್ರದೇಶವಾದ ಚಾರ್ಮಾಡಿ ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದು, ಸಂಜೆ 3 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯುವ ಪಕ್ಷದ ಬೂತ್‌ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಪ್ರವಾಹಪೀಡಿತ ಪ್ರದೇಶಕ್ಕೆ ಕೇಂದ್ರದ ಅಧ್ಯಯನ ತಂಡ ಭೇಟಿ ನೀಡುತ್ತಿದೆಯಾದರೂ, ಅವರು ದ.ಕ. ಜಿಲ್ಲೆಗೆ ಬರುವುದಿಲ್ಲ ಎಂಬ ಮಾಹಿತಿ ಪತ್ರಿಕೆಯ ಮೂಲಕ ಗಮನಕ್ಕೆ ಬಂದಿದೆ. ದ.ಕ. ಜಿಲ್ಲೆಯಲ್ಲಿಯೂ ಪ್ರವಾಹಪೀಡಿತ ಪ್ರದೇಶವನ್ನು ವೀಕ್ಷಣೆ ಮಾಡುವ ಜವಾಬ್ದಾರಿ ಆ ತಂಡಕ್ಕಿದೆ. ಆದರೆ, ಕೇಂದ್ರ ಸರಕಾರ ಇಲ್ಲಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ. ಜಿಲ್ಲಾ ಕಾಂಗ್ರೆಸ್‌ ನಿಯೋಗ ಎರಡೂ ಜಿಲ್ಲೆಯಲ್ಲಿ ಮಾಡಿರುವ ಪ್ರವಾಹ ಸಂಬಂಧಿತ ನಷ್ಟದ ವರದಿಯನ್ನು ಒಂದೆರಡು ದಿನದೊಳಗೆ ಕೆಪಿಸಿಸಿಗೆ ನೀಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೊದಿನ್‌ ಬಾವ, ಕೋಡಿಜಾಲ್‌ ಇಬ್ರಾಹಿಂ, ಎಂ.ಶಶಿಧರ ಹೆಗ್ಡೆ, ಮಿಥುನ್‌ ರೈ, ನವೀನ್‌ ಡಿಸೋಜ, ವಿಶ್ವಾಸ್‌ಕುಮಾರ್‌ದಾಸ್‌ ಮುಂತಾದವರು ಉಪಸ್ಥಿತರಿದ್ದರು.

ನಳಿನ್‌; ಬಿಜೆಪಿಗೇ ಹೊಡೆತ!
ನಳಿನ್‌ ಕುಮಾರ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದರಿಂದ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹೊಡೆತ ಆಗಲಿದೆಯೇ?ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, “ಬಿಜೆಪಿಗೆ ಹೊಡೆತ ಆಗಲಿದೆಯೋ ಎಂಬ ಪ್ರಶ್ನೆ ಈಗ ಎದುರಾಗಿದೆ’ ಎಂದು ಲೇವಡಿ ಮಾಡಿದರು. ಮಿಥುನ್‌ ರೈ ಮಾತನಾಡಿ, “ಜಿಲ್ಲೆಗೆ ಬೆಂಕಿ ಕೊಟ್ಟದ್ದು ಸಾಕು; ಇನ್ನು ರಾಜ್ಯಕ್ಕೆ ಬೆಂಕಿ ಕೊಡದಿರಲಿ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next