Advertisement

Siddaramaiah ಎಲ್ಲ ಜಾತಿಯವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ

07:42 PM Jun 16, 2024 | Shreeram Nayak |

ವಿಜಯಪುರ : ಸಮಾಜದಲ್ಲಿ ಮನೆ ಮಾಡಿರುವ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದ ಇಂಚಗೇರಿಯ ಸ್ವಾತಂತ್ರ್ಯವೀರ ಮಾಧವಾನಂದ ಪ್ರಭುಗಳ ಆಶಯದಂತೆ ಅಂತರ್ಜಾತಿ ಅಂತ ಧರ್ಮೀಯರ ವಿವಾಹಕ್ಕೆ ಆದ್ಯತೆ ನೀಡಿ, ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

Advertisement

ಭಾನುವಾರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಇಂಚಗೇರಿ ಮಠದ ಮಾಧವಾನಂದ ಪರಭುಗಳ ದೇವಾಲಯ, ಕಳಸಾರೋಹಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನಾವು ಯಾವುದೇ ಜಾತಿ ಧರ್ಮಗಳಿಗೆ ಸೀಮಿತಗೊಳಿಸಿಲ್ಲ. ಚುನಾವಣೆಯಲ್ಲಿ ನೀವು ಮತ ಹಾಕದಿದ್ದರೂ ಎಲ್ಲ ಸಮುದಾಯಗಳ ಜನರಿಗೆ ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ ಎಂದರು.

ಸಮಾಜದ ಅಭ್ಯುದಯಕ್ಕೆ ತೊಡಕಾಗಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಶ್ರಮಿಸಿದ ಬಸವಣ್ಣ ಅವರ ಪೂಜೆ ಮಾಡುತ್ತೇವೆ. ಇಂಥ ಮಹಾತ್ಮರು ಸಮಾಜಕ್ಕೆ ನೀಡಿದ ಕೊಡುಗೆಯ ಸ್ಮರಣೆಯ ಬದಲು ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಕೆಲಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂಚಗೇರಿ ಮಾಧವಾನಂದ ಶ್ರೀಗಳು ಕೂಡ ಬಸವೇಶ್ವರರು ಕಂಡ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾನ್ ಚೇತನ. 12ನೇ ಶತಮಾನದಲ್ಲಿ ಬಸವಾದಿ ಶರಣರು ಸಾರಿದ್ದನ್ನು 21ನೇ ಶತಮಾನದಲ್ಲಿ ಮಾಧವಾನಂದ ಶ್ರೀಗಳು ಅಂತರ್ಜಾತಿ ವಿವಾಹದ ಮೂಲಕ ವಾಸ್ತವಿಕವಾಗಿ ಅನುಷ್ಠಾನಕ್ಕೆ ತಂದ ಸಂತರು ಎಂದು ಬಣ್ಣಿಸಿದರು.

ಹುಟ್ಟುವಾಗ ಯಾರು ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿರುವುದಿಲ್ಲ. ಆಪರೇಷನ್ ಮಾಡುವ ಡಾಕ್ಟರ್, ರಕ್ತ ಪಡೆದುಕೊಳ್ಳುವ ವ್ಯಕ್ತಿಯ ಜಾತಿ ಕೇಳುವುದಿಲ್ಲ. ಕುರುಬರಿಗೆ ಕುರುಬರ ರಕ್ತ, ಬ್ರಾಹ್ಮಣರಿಗೆ ಬ್ರಾಹ್ಮಣರ ರಕ್ತ ಕೊಡು ಎನ್ನುವುದಿಲ್ಲ. ಆದರೆ ಸಮಾಜದಲ್ಲಿ ಮಾತ್ರ ಲಿಂಗಾಯತ, ದಲಿತ ಅಂತೆಲ್ಲ ಹೇಳುವ ಜಾತಿ ಪದ್ಧತಿ ಅನುಸರಿಸುತ್ತೇವೆ ಎಂದರು.

Advertisement

ಇನ್ನಾದರೂ ಪರಸ್ಪರ ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಕಂಡು, ಗೌರವಿಸಿ, ಮನುಷ್ಯರಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು. ಬಹುತ್ವದ ಆಚರಣೆ ಹಾಗೂ ಅನುಕರಣೆಯಿಂದ ಮಾತ್ರ ಬಸವಾದಿ ಶರಣರು, ಮಾಧವಾನಂದ ಪ್ರಭುಗಳ ಕಂಡ ಜಾತಿ ರಹಿತ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ರಾಜ ಪ್ರಭುತ್ವಗಳ ಆಡಳಿತದಲ್ಲಿ ಭಾರತದಲ್ಲಿನ ಜಾತಿ ವ್ಯವಸ್ಥೆಯಂಥ ವರ್ಗ ವರ್ಣ ವ್ಯವಸ್ಥೆಯೇ ವ್ಯಾಪಾರಕ್ಕೆ ಬಂದ ಬ್ರಿಟೀಷರು ನಮ್ಮನ್ನು ನೂರಾರು ವರ್ಷ ಆಳುವಂತ ದುಸ್ಥಿತಿಗೆ ಕಾರಣವಾಗಿತ್ತು. ಆದರೆ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಂಥ ಅಪ್ರತಿಮ ಪರಾಕ್ರಮಿ ಸ್ವಾತಂತ್ರ್ಯ ಪ್ರೇಮಿಗಳು ಹೋರಾಟದ ಮೂಲಕ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು ಎಂದು ವಿಶ್ಲೇಷಿಸಿದರು.

ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂಧ ಪಾಟೀಲ, ಅಬಕಾರಿ ಸಚಿವ ಆರ್.ಬಿ.ತಮ್ಮಾಪುರ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಶೋಕ ಮನಗೂಳಿ, ಜೆ.ಟಿ.ಪಾಟೀಲ, ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next