Advertisement

Hijab ಆದೇಶವನ್ನು ಹಿಂಪಡೆಯಲು ಅಧಿಕಾರಿಗಳಿಗೆ ಆದೇಶ ನೀಡಿದ್ದೇನೆ: ಸಿಎಂ ಸಿದ್ದರಾಮಯ್ಯ

08:58 PM Dec 22, 2023 | Team Udayavani |

ನಂಜನಗೂಡು: ಹಿಜಾಬ್ ಹಿಂಪಡೆಯುತ್ತೇವೆ ಈಗ ಹಿಜಾಬ್ ಹಾಕಿಕೊಂಡು ಶಾಲಾ ಕಾಲೇಜ್ ಗಳಿಗೆ ಹೋಗಬಹುದು ಆದೇಶವನ್ನು ಹಿಂಪಡೆಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಊಟ ಮಾಡುವುದು ಬಟ್ಟೆ ಧರಿಸುವುದು ಅದು ನಿಮ್ಮ ಪದ್ಧತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ದೊಡ್ಡ ಕವಲಂದೆ, ಜೈಪುರ ಹಾಗೂ ಅಂತರಸಂತೆ ಠಾಣೆಗಳ ಸಮಾರಂಭವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಮಾತನಾಡಿದ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಬುರುಡೆ ಬಿಡುವ ಬಿಜೆಪಿಗರು ಗಡ್ಡ ಟೋಪಿ ಬುರ್ಖಾ ಹಾಕಿಕೊಂಡರೆ ಅವರನ್ನು ಹತ್ತಿರದಲ್ಲಿ ಸೇರಿಸುವುದಿಲ್ಲ ಆದರೆ ನಾವು ಹಾಗೆ ಇಲ್ಲ ಎಲ್ಲಾ ಜಾತಿ ಮತ ಪಂಥದವರಿಗೆ ನಮ್ಮ ಗ್ಯಾರಂಟಿಗಳನ್ನು ನೀಡಿದ್ದೇವೆ ಬಿಜೆಪಿ ಯವರು ಸಹ ಫ್ರೀ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ, ಮಾಸಿಕ ಎರಡು ಸಾವಿರ ರೂಗಳನ್ನು ಪಡೆಯುತ್ತಿದ್ದಾರೆ ಯಾರಿಗೂ ಭೇದಭಾವ ಮಾಡುವುದಿಲ್ಲ ಎಂದು ಟೀಕಿಸಿದರು.

ಅಧಿಕಾರಿಗಳು ಯಾರಿಂದ ನಾವು ಸಂಬಳವನ್ನು ಪಡೆಯುತ್ತಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಜನರು ನೀಡುವ ತೆರಿಗೆಯಿಂದ ನಮಗೆ ವಸತಿ ಹಾಗೂ ಮಾಸಿಕ ಸಂಬಳ ದೊರೆಯುತ್ತಿದೆ ನಾವು ಅವರಿಗೆ ಕೃತಜ್ಞತರಾಗಿರಬೇಕು ಯಾವಾಗಲೂ ಪೊಲೀಸ್ ಠಾಣೆಯು ಜನಸ್ನೇಹಿ ಪೊಲೀಸ್ ಠಾಣೆ ಆಗಿರಬೇಕು ಅವರ ಮುಂದೆ ದರ್ಪವಾಗಲಿ ಅಧಿಕಾರಿತನವಾಗಲಿ ತೋರಿಸಬಾರದು ಅವರೊಂದಿಗೆ ಗೌರವಿತವಾಗಿ ನಡೆದುಕೊಳ್ಳಬೇಕು ನಾವು ಸಮಾಜ ಒಳಿತಿಗಾಗಿ ಸೇವೆ ಸಲಿಸುವವರು ಅದರ ಜ್ಞಾನ ಪೋಲೀಸಿನವರಿಗೆ ಇರಬೇಕು, ಹಣ ಬಲ ತೋಳ್ಬಲ ಇರುವವರಿಗೆ ಮಾತ್ರ ನ್ಯಾಯ ಸಿಗುವ ಹಾಗೆ ನೋಡಿಕೊಳ್ಳಬಾರದು ಸಾಮಾನ್ಯ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವ ಹಾಗೆ ನಾವು ನಡೆದುಕೊಳ್ಳಬೇಕು ಇನ್ನು ಸಮಾಜದಲ್ಲಿ ದೌರ್ಜನ್ಯಗಳು ನಡೆಯುತ್ತಿದೆ ಅದು ನಡೆಯದಂತೆ ಪೊಲೀಸ್ ನವರು ನೋಡಿಕೊಳ್ಳಬೇಕು, ಪೊಲೀಸ್ ಅವರ ಗಮನಕ್ಕೆ ಬಾರದೆ ಯಾವ ಕೆಲಸವು ನಡೆಯುವುದಿಲ್ಲ ಯಾವ ಗ್ರಾಮದಲ್ಲಿ ಯಾವ ಕೆಲಸ ನಡೆಯುತ್ತದೆ ಎಂದು ಪೊಲೀಸರಿಗೆ ಚೆನ್ನಾಗಿ ಗೊತ್ತಿರುತ್ತದೆ ಆದರೂ ಅಪರಾಧಗಳು ನಡೆಯುವುದು ಹೇಗೆ ಎಂಬುದು ನನಗೆ ತಿಳಿಯುತ್ತಿಲ್ಲ ಗುಪ್ತಚರ ಇಲಾಖೆ ಚುರುಕಾಗಿ ತನ್ನ ಕೆಲಸವನ್ನು ನಿರ್ವಹಿಸಬೇಕು ಕೆಲವೊಬ್ಬ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಕೂತು ಎಫ್ಐಆರ್ ಅನ್ನು ಬರೆಯುತ್ತಾರೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ವಿದ್ಯಮಾನಗಳನ್ನು ಪರಿಶೀಲಿಸಿ ಆನಂತರ ಎಫ್ ಐ ಅರ್ ರನ್ನು ಬರೆಯಬೇಕು ಎಂದು ಪೊಲೀಸರಿಗೆ ಚಾಟಿ ಏಟು ಬೀಸಿದರು.

ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ. ಜನರೇ ನಮ್ಮ ಮಾಲೀಕರು ಎನ್ನುವ ಭಾವನೆ ಎಲ್ಲಾ ಅಧಿಕಾರಿಗಳಲ್ಲೂ ಇರಬೇಕು ಎಂದು ಕಿವಿಮಾತು ಹೇಳಿದರು.

Advertisement

ನಾಗರಿಕ ಹಕ್ಕುಗಳ ರಕ್ಷಣೆ ಪೊಲೀಸ್ ಇಲಾಖೆಯ ಕರ್ತವ್ಯ. ಕಾನೂನು ಉಲ್ಲಂಘಿಸಲು ಕೆಲವರು ಚಾಪೆ ಕೆಳಗೆ ನುಸುಳುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದರು.

ಗುಪ್ತಚರ ಇಲಾಖೆ ಹೆಚ್ಚು ಕ್ರಿಯಾಶೀಲವಾಗಿದ್ದರೆ ಅಪರಾಧ ಘಟಿಸುವುದಕ್ಕಿಂತ ಮೊದಲೇ ತಡೆಯುವುದು ಸಾಧ್ಯ. ಠಾಣೆಯ ಅಧಿಕಾರಿಗಳಿಗೆ ಗೊತ್ತಿಲ್ಲದೆ ಯಾವ ಕಾನೂನು ಬಾಹಿರ ಚಟುವಟಿಕೆಗಳೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಠಾಣೆಯಲ್ಲೇ ಕುಳಿತು ಮಹಜರ್ ಬರೆಯಬಾರದು. ಸ್ಥಳಕ್ಕೆ ಹೋಗಿ ಮಹಜರ್ ಮಾಡಬೇಕು ಎಂದರು.

ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಮಾತನಾಡಿ ಇಂದು ಕವಲಂದೆ,ಅಂತರಸಂತೆ ಹಾಗೂ ಜಯಪುರ ಠಾಣೆಗಳನ್ನು 4 ಕೋಟಿ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು,ಆಧುನಿಕತೆಗೆ ತಕ್ಕಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದೆ. ನಮ್ಮ ಸರ್ಕಾರ ಬಂದ ನಂತರ ಇಲಾಖೆಯಲ್ಲಿ ಹಲವಾರು ಬದಲಾವಣೆ ಆಗಿದ್ದು ಶೇ.40ರಷ್ಟು ಸಿಬ್ಬಂದಿಗಳಿಗೆ ಪೊಲೀಸ್ ಗೃಹ ಹೆಸರಿನಲ್ಲಿ ವಸತಿ ಗೃಹಗಳನ್ನು ನೀಡಲಾಗಿದ್ದು ಹಂತ ಹಂತವಾಗಿ ಉಳಿದ ಸಿಬ್ಬಂದಿಗಳಿಗೂ ವಸತಿ ಸೌಕರ್ಯ ಕಲ್ಪಿಸಲಾಗುವುದು ಎಂದರು.

ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಇಲಾಖೆಯ ಸಿಬ್ಬಂದಿಗಳು ಎಲ್ಲರಂತೆ ಜೀವಿಸಬೇಕು ಹಾಗಾಗಿ ಸಿಬ್ಬಂದಿಗೆ ಯೋಗಕ್ಷೇಮವೂ ಮುಖ್ಯ

ಇಲಾಖೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೊಂಡು ಅಪರಾಧ ಪತ್ತೆಹಚ್ಚುವಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಕರಣಗಳನ್ನು ಸಂಭವಿಸಿದ 24ಗಂಟೆಯೊಳಗೆ ಭೇದಿಸಲಾಗಿದೆ. ಹಾಗಾಗಿ ನಮ್ಮ ಪೊಲೀಸರು ಹೆಚ್ಚು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮಾನ್ಯ ಮುಖ್ಯಮಂತ್ರಿಗಳು ಇಲಾಖೆಗೆ ಸಾಕಷ್ಟು ಹಣಕಾಸಿನ ನೆರವು ನೀಡಿ ಇಲಾಖೆ ಬಲಗೊಳ್ಳಲು ಸಹಕರಿಸಿದ್ದಾರೆ. ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು, ಜನಸ್ನೇಹಿಯಾಗಿದೆ ಎಂದರು.

ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮುಖ್ಯ ಅತಿಥಿಗಳಾಗಿದ್ದರು.

ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್,ತಿಮ್ಮಯ್ಯ ಎ.ಆರ್.ಕೃಷ್ಣಮೂರ್ತಿ, ಆಶ್ರಯ ಸಮಿತಿ ಅಧ್ಯಕ್ಷರಾದ‌ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ , ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next