Advertisement
ಶಿಕ್ಷಣ, ವಸತಿ ಹಾಗೂ ದಾಸೋಹದ ಮೂಲಕ ಲಕ್ಷಾಂತರ ಕುಟುಂಬಕ್ಕೆ ಸಾಕ್ಷಾತ್ ದೇವರಾಗಿದ್ದ ಡಾ.ಶಿವ ಕುಮಾರ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಬಂದಿದ್ದ ಪ್ರತಿಯೊಬ್ಬರಲ್ಲೂ ನಮ್ಮೊಂದಿಗೆ ಇದ್ದ ದೇವರನ್ನು ಕಳೆದು ಕೊಂಡಿದ್ದೇವೆಂಬ ಆತಂಕ, ನಿರಾಸೆ ಮನೆ ಮಾಡಿತ್ತು.
Related Articles
Advertisement
ಸೋಮವಾರ ಸಂಜೆ 4 ಗಂಟೆಗೆ ಆರಂಭವಾದ ಲಿಂಗಕಾಯದ ಅಂತಿಮ ದರ್ಶನ ಮಂಗಳವಾರ ಸಂಜೆಯವರೆಗೂ ನಿರಂತರವಾಗಿ ನಡೆಯಿತು. ಕ್ಯಾತಸಂದ್ರ ರೈಲು ನಿಲ್ದಾಣದ ಸಮೀಪದ ಮುಖ್ಯದ್ವಾರ ಹಾಗೂ ರಾಗಿಹೊಲ ಸಮೀಪದಿಂದ ಹಳೇ ಮಠದ ಬೀದಿಯ ಮುಖೇನ ಭಕ್ತರಿಗೆ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ನಿಯಂತ್ರಣಕ್ಕೆ ಪೊಲೀಸರು ಸಾಕಷ್ಟು ಶ್ರಮ ಪಡಬೇಕಾಯಿತು.
ರುದ್ರಾಕ್ಷಿ ರಥದಲ್ಲಿ ಮೆರವಣಿಗೆ: ಶ್ರೀಗಳ ಲಿಂಗಕಾಯದ ಅಂತಿಮ ಶರೀರದ ನಂತರ ಗೋಸಲಾ ಸಿದ್ದೇಶ್ವರ ವೇದಿಕೆಯಿಂದ ಹಳೇ ಮಠದ ಮುಖ್ಯದ್ವಾರದವರೆಗೂ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಕರೆತರಲಾಯಿತು. ಹಳೇ ಮಠದ ಪ್ರಸಾದ ಮಂದಿರದ ಎದುರು ಭಾಗದಿಂದ ರುದ್ರಾಕ್ಷಿ ಮಾಲೆಗಳನ್ನು ಸುತ್ತಿರುವ ರಥದಲ್ಲಿ ಉದ್ದಾನ ಶಿವಯೋಗಿ ಮಂದಿರದ ವರೆಗೂ ಭಾವಪೂರ್ಣ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆ ದೃಶ್ಯವನ್ನು ನೋಡಲು ಭಕ್ತ ಸಮೂಹ ಶ್ರೀಮಠದ ಬೀದಿ ಮಾತ್ರವಲ್ಲದೇ ಕಟ್ಟಡದ ಇಕ್ಕೆಲಗಳಲ್ಲೂ ಸೇರಿದ್ದರು.
ಭಾರತರತ್ನಕ್ಕೆ ಭಕ್ತರ ಆಗ್ರಹ
ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಕೇಂದ್ರ ಸರ್ಕಾರ ಭಾರತರತ್ನ ಘೋಷಣೆ ಮಾಡಬೇಕು ಎಂಬ ಕೂಗು ಶ್ರೀಗಳ ಅಂತಿಮ ದರ್ಶನದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತ ಸಾಗರದಿಂದ ಒಕ್ಕೊರಲಿನಿಂದ ಕೇಳಿಸುತ್ತಿತ್ತು. ಭಾರತ ರತ್ನಕ್ಕೆ ಆಗ್ರಹಿಸಿ ಬರೆದಿರುವ ಫ್ಲೆಕ್ಸ್ಗಳನ್ನು ಹಿಡಿದೇ ಬಹುತೇಕ ಭಕ್ತರು ಅಂತಿಮ ದರ್ಶನ ಪಡೆದರು.
ಸಮವಸ್ತ್ರ ಬಿಟ್ಟು ಪಂಚೆ,ಶಲ್ಯ ಧರಿಸಿದ ಪೊಲೀಸರು
ಶಿವಕುಮಾರ ಶ್ರೀಗಳ ಕ್ರಿಯಾ ವಿಧಿ ವಿಧಾನ ನಡೆಯಲಿರುವ ಸಮಾಧಿಯ ಬಳಿ ಭದ್ರತೆ ನೀಡುವುದಕ್ಕಾಗಿ ನಿಯೋಜನೆಗೊಂಡಿದ್ದ 8 ಪೊಲೀಸರು ಸಮವಸ್ತ್ರ ತೆಗೆದು, ಪಂಚೆ ಹಾಗೂ ಶಲ್ಯ ಧರಿಸಿದ್ದರು. ಭದ್ರತೆ ಹಾಗೂ ಮಠದ ಶಿಷ್ಟಾಚಾರದಂತೆ ಪೊಲೀಸರು ಶಲ್ಯ ಹಾಗೂ ಪಂಚೆ ಧರಿಸಿ ಗದ್ದುಗೆ ಪ್ರವೇಶಿಸಿದ್ದರು. ಸಮಾಧಿ ಸ್ಥಳಕ್ಕೆ ಮುಖ್ಯಮಂತ್ರಿ ಸೇರಿ ಹಲವು ರಾಜಕಾರಣಿಗಳು, ಗಣ್ಯರು, ಮಠಾಧಿಪತಿಗಳು ಬಂದಿದ್ದರಿಂದ ಅವರಿಗೆ ಭದ್ರತೆ ನೀಡುವ ಉದ್ದೇಶದಿಂದ 8 ಪೊಲೀಸರನ್ನು ನಿಯೋಜಿಸಲಾಗಿತ್ತು.
ರಾಜು ಖಾರ್ವಿ ಕೊಡೇರಿ