ಬಳ್ಳಾರಿ: ಮಾಜಿ ಸಚಿವ ಕರುಣಾಕರ ರೆಡ್ಡಿ ಅವರು ಒಂದು ಕಾಲದ ಆತ್ಮೀಯ ಮಿತ್ರ ಸಂಸದ ಬಿ.ಶ್ರೀರಾಮುಲು ಅವರ ವಿರುದ್ಧ ಭೂವಿವಾದಕ್ಕೆ ಸಂಬಂಧಿಸಿ ಸಿಜೆಎಂ ನ್ಯಾಯಾಲಯದಲ್ಲಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಿಂದಾಗಿ ಇಬ್ಬರ ನಡುವಿನ ಸಂಬಂಧ ಸಂಪೂರ್ಣ ಹಳಸಿ ಹೋಗಿದೆ ಎನ್ನುವುದು ಜಗಜ್ಜಾಹೀರಾಗಿದೆ.
ಏನೀ ಭೂವಿವಾದ ?
1997 ರಲ್ಲಿ ಹಂದಿನ್ನಗುಂಡು ಪ್ರದೇಶದಲ್ಲಿ ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಅವರು ಕ್ರಮವಾಗಿ 8 ಮತ್ತು 2.5 ಎಕರೆ ಜಮೀನನ್ನು ಖರೀದಿಸಿ ನಿವೇಶನಗಳನ್ನು ನಿರ್ಮಿಸುವ ಸಲುವಾಗಿ ಸುಷ್ಮಾ ಸ್ವರಾಜ್ ಕಾಲೋನಿ ಎಂದು ಹೆಸರಿಟ್ಟಿದ್ದರು. ಇದೀಗ ಆ ಜಮೀನನ್ನು ಶ್ರೀರಾಮುಲು ಅವರು ಮಾರಾಟ ಮಾಡಿದ್ದು ಮಾಲಿಕತ್ವದ ವಿಚಾರದಲ್ಲಿ ಇಬ್ಬರ ನಡುವೆ ಕಲಹ ಆರಂಭವಾಗಿದೆ.
ಕರುಣಾಕರ ರೆಡ್ಡಿ ಮಾಲಿಕತ್ವದ ಪಾಲು ಪಡೆಯುವ ಸಲುವಾಗಿ ಬೆಂಗಳೂರಿನ ವಕೀಲರೊಬ್ಬರ ಮೂಲಕ ಶ್ರೀರಾಮುಲು, ಕೆ.ತಿಮ್ಮರಾಜು ಮತ್ತು ಭೈರದೇವನಹಳ್ಳಿಯ ಡಿ.ರಾಘವೇಂದ್ರ ಎನ್ನುವವರ ಮೇಲೆ ನಗರದ ಸಿಜೆಎಂ ನ್ಯಾಯಾಲಯದಲ್ಲಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರಕರಣಗಳಿಗೆ ಸಂಬಂಧಿಸಿ ಶ್ರೀರಾಮುಲು ಮತ್ತು ಇಬ್ಬರಿಗೆ ನ್ಯಾಯಾಲಯ ವಿವರಣೆ ಕೇಳಿ ಸಮನ್ಸ್ ಜಾರಿ ಮಾಡಿದೆ.