Advertisement

ವಾಹನ ತಪಾಸಣೆ ಹೀಗೂ ಇರಬೇಕೆ?

12:02 AM Sep 11, 2019 | mahesh |

ಕೇಂದ್ರ ಸರಕಾರದ ಹೊಸ ಕಾನೂನಿನ ಪ್ರಕಾರ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ವಿಧಿಸುವ ದಂಡದ ಪ್ರಮಾಣ ಮೈ ಚಳಿ ಬಿಡಿಸುವಷ್ಟು ಬಿಸಿಯಾಗಿದ್ದು ವಾಹನ ಸವಾರರು ಜವಾಬ್ದಾರಿಯಿಂದ ವಾಹನ ಚಲಾವಣೆ ಮಾಡುವ ಅನಿವಾರ್ಯ ಸ್ಥಿತಿ ತಂದೊಡ್ಡಿದೆ. ಇದು ಸ್ವಾಗತಾರ್ಹ ವಿಚಾರವೇ ಹೌದು. ಆದರೆ ವಾಹನ ತಪಾಸಣೆಯ ಹೆಸರಿನಲ್ಲಿ ಸಂಚಾರಿ ಪೊಲೀಸರು ನೀಡುವ ಕಿರುಕುಳ ಮಾತ್ರ ಸಹನಾತೀತವೇ ಆಗಿಬಿಟ್ಟಿದೆ. ಒಬ್ಬ ರೌಡಿಯನ್ನು ಕೂಡ ಬಹುವಚನದಲ್ಲಿ ಸಂಬೋಧಿಸಿ, ಗೌರವದಿಂದ ಕರೆತರುವ ಪೊಲೀಸರು ವಾಹನದಲ್ಲಿ ಬರುವವರನ್ನು ಬೆತ್ತ ಹಿಡಿದು, ಅಡ್ಡಗಟ್ಟಿ, ಏಕವಚನದಲ್ಲಿ ಮಾತನಾಡಿಸಿ, ದಾಖಲೆಗಳನ್ನು ಕೇಳುವ ವೈಖರಿ ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಯವರು ನಡೆಸಿಕೊಳ್ಳುವ ರೀತಿಯಲ್ಲಿಯೇ ಇರುವುದಂತೂ ಖಂಡಿತ ಕ್ಷಮ್ಯವಲ್ಲ.

Advertisement

ಇನ್ನು ತಪಾಸಣೆಗೆ ತಮ್ಮ ವಾಹನ ಅಡಗಿಸಿ ಕಾದು ನಿಲ್ಲುವುದಕ್ಕೆ ಈ ಪೊಲೀಸರಿಗೆ ನಿರ್ದಿಷ್ಟ ಜಾಗವೆಂಬುದಿಲ್ಲ. ಎಲ್ಲಿ ಬೇಕಾದರೂ ನಿಲ್ಲುತ್ತಾರೆ. ನಿರ್ದಿಷ್ಟ ದೂರಕ್ಕೊಂದು ತಂಡ ಎಂಬ ನಿಯಮವೂ ಇಲ್ಲ. ಇಷ್ಟಬಂದಲ್ಲಿ ಕಂಬಳದ ಎತ್ತುಗಳಂತೆ ಒಂದು ಕಿಲೋಮೀಟರ್‌ ಅಂತರದಲ್ಲಿಯೂ ನಿಲ್ಲಬಹುದು. ಪ್ರತಿಯೊಂದು ವಾಹನವನ್ನೂ ನಿಲ್ಲಿಸಿ, ಚಾಲನಾ ಪರವಾನಗಿ, ವಿಮೆಯ ಪಾಲಿಸಿ, ಹೊಗೆ ಪರೀಕ್ಷೆಯ ದೃಢೀಕರಣ, ವಾಹನ ಮಾಲಕತ್ವದ ದಾಖಲೆ ಎಲ್ಲವನ್ನೂ ಪರಿಶೀಲಿಸಿ, ಯಾವ ವಿಚಾರದಲ್ಲಿ ಇವನ ಕೊರಳಿಗೆ ದಂಡದ ಕುಣಿಕೆ ಬಿಗಿಯುವುದು ಎಂದು ಅವರು ಚಿಂತನೆ ಮಾಡಲು ಹತ್ತು ನಿಮಿಷ ಬೇಕಾಗುತ್ತದೆ. ತುರ್ತು ಕೆಲಸಕ್ಕೆ ಹೋಗಬೇಕೆಂದರೂ ಅಂತಕನ ದೂತರಿಗೆ ಕಿಂಚಿತ್ತು ದಯೆಯಿಲ್ಲ ಎಂಬ ಹಾಗೆ ಯಾವುದೇ ರಿಯಾಯಿತಿಯೂ ಅವರಲ್ಲಿ ಇರುವುದಿಲ್ಲ. ಸಾಲುಗಟ್ಟಿ ನಿಂತ ವಾಹನಗಳಿಂದಾಗಿ ರಸ್ತೆ ತಡೆಯಾಗುವ ಬಗೆಗೆ ಚಿಂತೆಯೂ ಮಾಡುವುದಿಲ್ಲ.

ಇತ್ತೀಚೆಗೆ ಗೆಳೆಯರೊಬ್ಬರು ಬೈಕಿನಲ್ಲಿ ಕುಳಿತು ಒಂದು ಕಂಪೆನಿಯ ಇಂಟರ್‌ವ್ಯೂಗೆ ಮಂಗಳೂರಿನತ್ತ ಹೊರಟಿದ್ದರು. ಆರು ಕಡೆ ವಾಹನ ತಪಾಸಣೆ ನಡೆಯಿತು. ಒಂದು ಗಂಟೆ ತಡವಾಗಿ ತಲುಪಿದ ಅವರಿಗೆ ಉದ್ಯೋಗ ಸಂದರ್ಶನಕ್ಕೆ ಅವಕಾಶವೇ ಸಿಗಲಿಲ್ಲ. ಅನೇಕ ಖಾಸಗಿ ಕಂಪೆನಿಗಳಲ್ಲಿ ನೌಕರರಿಗೆ ದುಡಿಮೆಯ ವೇತನ ತಾಸುಗಳ ಲೆಕ್ಕಾಚಾರದಲ್ಲಿ ಸಿಗುವ ಪದ್ಧತಿಯಿದೆ. ಹೆಜ್ಜೆ, ಹೆಜ್ಜೆಗೆ ವಾಹನ ತಪಾಸಣೆಯ ದಂಡನೆಯನ್ನು ಅನುಭವಿಸುತ್ತ ಕಚೇರಿ ತಲುಪುವಾಗ ಹೊತ್ತು ಮೀರಿದ ಫ‌ಲವಾಗಿ ಆಡಳಿತ ವರ್ಗದ ಕೆಂಗಣ್ಣಿಗೆ ಗುರಿಯಾಗುವುದರ ಜೊತೆಗೆ ಒಂದು ತಾಸಿನ ಸಂಬಳವನ್ನೂ ಕಳೆದುಕೊಳ್ಳಬೇಕಾದ ದುಃಸ್ಥಿತಿಯೂ ಪ್ರಾಪ್ತವಾಗುತ್ತದೆ.

ಕಾನೂನುಬದ್ಧವಾದ ತಪಾಸಣೆಗೆ ಯಾರು ಬೇಡವೆನ್ನುತ್ತಾರೆ? ಆದರೆ ಆರಂಭದಲ್ಲಿ ಒಂದು ತಂಡ ತಪಾಸಣೆ ಮಾಡಿದ ಬಳಿಕ ಏನೂ ದಂಡನಾರ್ಹ ಅಪರಾಧವಿಲ್ಲದೆ ಹೋದರೆ ಮುಂದಿನ ತಪಾಸಣೆಯ ಕರ್ಮವಾದರೂ ಏಕೆ? ಈ ವಾಹನ ತಪಾಸಣೆಯಾಗಿದೆ ಎಂಬ ಒಂದು ಅಧಿಕೃತ ಚೀಟಿಯನ್ನು ವಾಹನದ ಮುಖಕ್ಕೆ ಆರಂಭದಲ್ಲೇ ಅಂಟಿಸಿಬಿಟ್ಟರೆ ಸವಾರರು ಬೇಕಾದ ಸ್ಥಳಕ್ಕೆ ಹೋಗಬಹುದಲ್ಲವೆ? ಅಥವಾ ತಪಾಸಣೆಯಾದ ವಾಹನಗಳಿಗೆ ಒಂದು ಬಾರ್‌ ಕೋಡ್‌ ನೀಡಿ ಎಲ್ಲ ತಪಾಸಣೆಯ ತಂಡಗಳಿಗೂ ಅಂತರ್ಜಾಲದ ಮುಖಾಂತರ ಮಾಹಿತಿ ರವಾನಿಸಬಹುದಲ್ಲವೆ? ವೃಥಾ ಕಿರುಕುಳ ನೀಡುವುದರಲ್ಲಿ ಆರ್ಥವಿದೆಯೆ? ಹೀಗೆಂದು ಇದು ಸಾಚಾತನದ ತಪಾಸಣೆಯೆಂದು ಖಂಡಿತ ಭಾವಿಸಬಾರದು. ನೂರು ರೂಪಾಯಿ ಗರಿಷ್ಠ ಮೊತ್ತ ಈಗ ಸಾವಿರ ರೂಪಾಯಿಗೆ ಏರಿದೆ. ಆಗ ಐವತ್ತು ರೂಪಾಯಿ ಕಿಸೆಗಿಳಿಸಿಕೊಂಡು ತಪ್ಪೆಸಗಿದ ಸವಾರರಿಗೂ ಪ್ರೋತ್ಸಾಹಪೂರ್ವಕ ಬೆನ್ನು ತಟ್ಟಿ ಕಳುಹಿಸುತ್ತಿದ್ದ ಪೊಲೀಸರೂ ಈಗಲೂ ಅದನ್ನು ಮಾಡದೆ ಬಿಡುವುದಿಲ್ಲ. ಆದರೆ ಐದುನೂರಕ್ಕಿಂತ ಕಡಮೆ ಮೊತ್ತಕ್ಕೆ ಬೆನ್ನು ತಟ್ಟುವುದಿಲ್ಲ. ಅವರು ಹುಡುಕಿ ಹುಡುಕಿ ಕೇಸು ಹಾಕಲು ಪ್ರಯತ್ನಿಸುವುದು ಈ ಮೊತ್ತದ ಏರಿಕೆಯಿಂದಾಗಿ. ತಪ್ಪೆಸಗಿದವರು ಬಚಾವಾಗುತ್ತಾರಾದರೂ ಏನೂ ತಪ್ಪೆಸಗದವರು ಅಲ್ಲಲ್ಲಿ ತಪಾಸಣೆಯೆಂಬ ಘೋರ ಹಿಂಸೆಗೆ ಗುರಿಯಾಗಲೂ ಮೂಲವಾಗಿರುವುದು ಈ ಒಳ ಸಂಪಾದನೆಯ ಕಾರಣದಿಂದ.

ಇನ್ನು ಯಾವ ಜಾಗದಲ್ಲಿ ವಾಹನ ತಪಾಸಣೆಗೆ ನಿಲ್ಲಬೇಕೆಂಬ ಕನಿಷ್ಠ ಪರಿಜ್ಞಾನವೂ ಈ ಸಂಚಾರಿ ಪೊಲೀಸರಿಗಿಲ್ಲ. ಇತ್ತೀಚೆಗೆ ಮಂಗಳೂರು, ಮೈಸೂರು ಹೆದ್ದಾರಿಯ ಜೋಡುಮಾರ್ಗದ ಬಳಿ ಅನಿರೀಕ್ಷಿತ ದಾಳಿಗೆ ಸಜ್ಜಾಗಿ ನಿಂತಿದ್ದರು. ಎರಡೂ ಬದಿಯಿಂದ ಸಾಲುಗಟ್ಟಿ ಬರುವ ವಾಹನಗಳು, ಧೋ ಎಂದು ಸುರಿಯುತ್ತಿರುವ ಮಳೆ. ಅರೆಕ್ಷಣ ಯಾಮಾರಿದರೂ ವೈಕುಂಠಕ್ಕೆ ಕರೆದೊಯ್ಯಲು ಶಕ್ತವಾಗುವ ಹೊಂಡಗಳು. ಇಂತಹ ಕಡೆ ಇದ್ದಕ್ಕಿದ್ದಂತೆ ಇವರು ನುಗ್ಗಿ ವಾಹನ ನಿಲ್ಲಿಸಲು ಸೂಚಿಸಿದರೆ ಆ ವಾಹನದವನು ತತ್‌ಕ್ಷಣ ನಿಲ್ಲಿಸದಿದ್ದರೆ ಅಪರಾಧ, ನಿಲ್ಲಿಸಿದರೆ ಹಿಂದಿನ ವಾಹನದವನು ಬಂದು ಹೊಡೆಯದೆ ಬಿಡುವುದಿಲ್ಲ. ನಾವು ನೋಡುತ್ತಿದ್ದ ಹಾಗೆಯೇ ಘನ ವಾಹನವೊಂದು ವೃದ್ಧರೊಬ್ಬರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯುವುದು ಕೂದಲಿನೆಳೆ ಅಂತರದಲ್ಲಿ ತಪ್ಪಿಹೋಯಿತು. ಅಪಘಾತವಾಗುವುದನ್ನು ತಡೆಯುವುದೇ ವಾಹನ ಸುರಕ್ಷತೆಯ ಕಾನೂನಿನ ಉದ್ದೇಶವಾಗಿದ್ದರೆ ಇಂತಹ ಜಾಗಗಳಲ್ಲಿ ಸರಕಾರದ ನಿಯಮ ಪಾಲನೆಗೆ ಮುನ್ನುಗ್ಗುವ ಈ ಸಂಚಾರಿ ನಿಯಮ ರಕ್ಷಕರಿಗೆ ಅನಾಹುತವಾಗುವುದೆಂಬ ಅರಿವು ಬೇಕಲ್ಲವೆ?

Advertisement

ಸಂಚಾರಿಗಳನ್ನು ನಿಯಮ ಪಾಲನೆಗೆ ಬದ್ಧಗೊಳಿಸುವುದು ತಪ್ಪಲ್ಲ. ಆದರೆ ಅದರ ಹೆಸರಿನಲ್ಲಿ ಅತಿರೇಕದ ಪ್ರದರ್ಶನ ಮಾಡ ಹೊರಟಿರುವುದರಿಂದ ಸಂಚಾರಿಗಳಿಗೆ ಆಗುವ ತೊಂದರೆ, ಟ್ರಾಫಿಕ್‌ ಜಾಮ್‌ ಇತ್ಯಾದಿಗಳನ್ನು ಪರಿಹರಿಸಲು ಕಾನೂನನ್ನು ಜಾರಿಗೆ ತರುವವರಿಗೂ ಅಗತ್ಯವಾದ ಒಂದು ನಿಯಮಾವಳಿ ಬೇಕು ಅನಿಸುತ್ತದೆ. ಬರುವ ಪ್ರತಿಯೊಬ್ಬ ಸವಾರನೂ ಸಾರಿಗೆ ನಿಯಮ ಉಲ್ಲಂಘಿಸಲು ಕಾತರನಾಗಿರುವುದಿಲ್ಲ. ಕಡಲೆಯ ಜೊತೆಗೆ ಎಳ್ಳು ಹುರಿದರೆ ಕಡಲೆ ಬಿಸಿಯಾಗುವ ಮೊದಲೇ ಎಳ್ಳು ಕರಟಿ ಹೋದ ಹಾಗೆ ನಿಯಮಬದ್ಧವಾಗಿರುವವರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಲ್ಲವೆ?

ವಾಹನ ತಪಾಸಣೆಯ ಹೆಸರಿನಲ್ಲಿ ಸಂಚಾರಿ ಪೊಲೀಸರು ನೀಡುವ ಕಿರುಕುಳ ಮಾತ್ರ ಸಹನಾತೀತವೇ ಆಗಿಬಿಟ್ಟಿದೆ. ಪೊಲೀಸರು ವಾಹನದಲ್ಲಿ ಬರುವವರನ್ನು ಬೆತ್ತ ಹಿಡಿದು ಅಡ್ಡಗಟ್ಟಿ, ಏಕವಚನದಲ್ಲಿ ಮಾತನಾಡಿಸಿ, ದಾಖಲೆಗಳನ್ನು ಕೇಳುವ ವೈಖರಿ ಒಬ್ಬ ಭಯೋತ್ಪಾದಕನನ್ನು ಭದ್ರತಾ ಪಡೆಯವರು ನಡೆಸಿಕೊಳ್ಳುವ ರೀತಿಯಲ್ಲಿಯೇ ಇರುತ್ತದೆ. ಇನ್ನು ಆರಂಭದಲ್ಲಿ ಒಂದು ತಂಡ ತಪಾಸಣೆ ಮಾಡಿದ ಬಳಿಕ ಏನೂ ದಂಡನಾರ್ಹ ಅಪರಾಧವಿಲ್ಲದೆ ಹೋದರೆ ‘ಈ ವಾಹನ ತಪಾಸಣೆಯಾಗಿದೆ’ ಎಂಬ ಒಂದು ಅಧಿಕೃತ ಚೀಟಿಯನ್ನು ಕೊಟ್ಟರೆ ಒಳಿತಲ್ಲವೇ?

Advertisement

Udayavani is now on Telegram. Click here to join our channel and stay updated with the latest news.

Next