Advertisement

ಜನಾಂಗೀಯ ನಿಂದನೆ ಪಾಕಿಸ್ಥಾನ ತಂಡದ ಸಂಸ್ಕೃತಿಯಲ್ಲ: ಅಖ್ತರ್‌

10:56 PM Dec 29, 2019 | Team Udayavani |

ಕರಾಚಿ: ದಾನಿಶ್‌ ಕನೇರಿಯ ಹಿಂದೂ ಎನ್ನುವ ಕಾರಣಕ್ಕೆ ಪಾಕಿಸ್ಥಾನ ಕ್ರಿಕೆಟಿಗರು ಕೀಳಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ಪಾಕಿಸ್ಥಾನದ ಮಾಜಿ ವೇಗದ ಬೌಲರ್‌ ಶೋಯಿಬ್‌ ಅಖ್ತರ್‌ ನೀಡಿರುವ ಹೇಳಿಕೆ ಕ್ರಿಕೆಟ್‌ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಅಖ್ತರ್‌ ಸ್ಪಷ್ಟನೆ ನೀಡಿದ್ದಾರೆ.

Advertisement

“ಜನಾಂಗೀಯ ನಿಂದನೆ ಪಾಕ್‌ ತಂಡದ ಸಂಸ್ಕೃತಿ ಅಲ್ಲ’ ಎಂಬುದಾಗಿ ಅಖ್ತರ್‌ ಹೇಳಿದ್ದಾರೆ. ಈ ಮೂಲಕ ತನ್ನ ಹೇಳಿಕೆಯಿಂದಾಗಿರುವ ವಿವಾದವನ್ನು ತಗ್ಗಿಸುವ ಪ್ರಯತ್ನ ನಡೆಸಿದ್ದಾರೆ. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅಖ್ತರ್‌, “ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಸಂಪೂರ್ಣ ವಿಷಯಾಂತರ ಮಾಡಲಾಗಿದೆ. ಕನೇರಿಯ ಹಿಂದೂ ಎನ್ನುವ ಕಾರಣಕ್ಕೆ ಒಂದಿಬ್ಬರು ಆಟಗಾರರು ಅಂತಹ ನಿಲುವು ಹೊಂದಿದ್ದರು. ಹಾಗಂತ ತಂಡದ ಉಳಿದ ಆಟಗಾರರು ಯಾವತ್ತೂ ಕನೇರಿಯ ಅವರನ್ನು ಆ ರೀತಿಯಲ್ಲಿ ನೋಡಿರಲಿಲ್ಲ’ ಎಂದಿದ್ದಾರೆ.

“ಹಣಕ್ಕೆ ಮಾರಾಟವಾಗಿಲ್ಲ’
ಈ ನಡುವೆ, ಕನೇರಿಯ ಹಣಕ್ಕಾಗಿ ಇಂಥ ಕೆಲಸ ಮಾಡಿದ್ದಾರೆ ಎಂಬ ಪಾಕ್‌ ಮಾಜಿ ಆಟಗಾರ ಜಾವೇದ್‌ ಮಿಯಾಂದಾದ್‌ ಹೇಳಿಕೆಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. “ಪಾಕ್‌ ತಂಡಕ್ಕಾಗಿ ನಾನು ಬೆವರು ಸುರಿಸಿ 10 ವರ್ಷ ಕ್ರಿಕೆಟ್‌ ಆಡಿದ್ದೇನೆ. ಹಣಕ್ಕಾಗಿ, ಪ್ರಚಾರಕ್ಕಾಗಿ ನಾನೆಂದೂ ಯಾವುದೇ ವಿಷಯವನ್ನು ದೊಡ್ಡದು ಮಾಡಿಲ್ಲ. ನನಗಾಗಿರುವ ಅನ್ಯಾಯವನ್ನು ಅಖ್ತರ್‌ ಹೇಳಿದ್ದಾರೆ. ಅದು ನಿಜ ಎನ್ನುವುದನ್ನು ನಾನೂ ಒಪ್ಪಿಕೊಂಡಿದ್ದೇನೆ. ಹಣಕ್ಕಾಗಿ ಮಾರಾಟವಾದ ಕ್ರಿಕೆಟಿಗರು ಸ್ಪಾಟ್‌ ಫಿಕ್ಸಿಂಗ್‌ ಮಾಡಿ ಈಗ ಮತ್ತೆ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ…’ ಎಂದು ಕನೇರಿಯ ಮಿಯಾಂದಾದ್‌ಗೆ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next