Advertisement

ಉದ್ಯಾನವನ ಶಿವನ ಅಭಿಷೇಕಕ್ಕೆ ಕಾಲ್ನಡಿಗೆಯಲ್ಲಿ 40 ಕಿ.ಮೀ. ದೂರದ ಕಪಿಲೆ ನೀರು

05:12 PM Mar 09, 2024 | Team Udayavani |

ಚಾಮರಾಜನಗರ: ಮಹಾಶಿವರಾತ್ರಿಯಂದು ತಾಲೂಕಿನ ಹೆಗ್ಗೊಠಾರ ಗ್ರಾಮದ ಐದಾರು ಕುಟುಂಬಗಳಲ್ಲಿ ವಿಶಿಷ್ಟ ಆಚರಣೆಯಿದ್ದು ತಮ್ಮೂರಿನ ಶಿವಲಿಂಗದ ಅಭಿಷೇಕಕ್ಕೆ 40 ಕಿ. ಮೀ. ದೂರದ ಕಪಿಲಾ ನದಿಯ ನೀರನ್ನು ತಲೆ ಮೇಲೆ ಹೊತ್ತು ಬರಿಗಾಲಲ್ಲಿ ನಡೆದುಬರುತ್ತಾರೆ.

Advertisement

ಹೆಗ್ಗೊಠಾರ ಗ್ರಾಮದ ಐದಾರು ಮನೆತನದ ತಲಾ ಒಬ್ಬೊಬ್ಬರು ಶಿವರಾತ್ರಿ ದಿನ ಬೆಳ್ಳಂ ಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾ ನದಿಯಿಂದ ಬರಿಗಾಲಲ್ಲಿ ನಡೆದು ತಾಮ್ರದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಗ್ರಾಮದ ಸಿದ್ದರಾಮೇಶ್ವರನ ಅಭಿಷೇಕಕ್ಕೆ ನೀಡುತ್ತಾರೆ.

ಗ್ರಾಮದ ಐದರಿಂದ ಆರು ಮನೆಗಳ ಒಬ್ಬೊಬ್ಬ ಪುರುಷರು ಈ ರೀತಿ ಕಪಿಲಾ ನದಿ ಯಿಂದ ನೀರು ಹೊತ್ತು ತಂದು ಅಭಿಷೇಕದ ಕೈಂಕರ್ಯ ಸಲ್ಲಿಸುತ್ತಾರೆ. ಒಂದೊಂದು ವರ್ಷ ಆರು ಜನರು ಈ ಸೇವೆ ಸಲ್ಲಿಸಿದರೆ, ಒಮ್ಮೊಮ್ಮೆ ಐವರು ನೀರು ತರುತ್ತಾರೆ. ಈ ಬಾರಿ ಐದು ಕುಟುಂಬದ ಮುಖ್ಯಸ್ಥರು ತಲೆಯ ಮೇಲೆ ಕಪಿಲಾ ನದಿಯ ನೀರನ್ನು ಹೊತ್ತು ಬೇಸಿಗೆಯ ಬಿಸಿಲಿನಲ್ಲಿ 40 ಕಿ.ಮೀ. ದೂರ ಬರಿಗಾಲಲ್ಲಿ ನಡೆದು ತಮ್ಮೂರಿಗೆ ಬಂದು ಶಿವನ ಅಭಿಷೇಕಕ್ಕೆ ಕಪಿಲೆಯನ್ನು ತಂದರು.

ರಾಜು, ಕುಮಾರಸ್ವಾಮಿ, ಕುಮಾರ, ಮಹದೇವಸ್ವಾಮಿ ಜೊತೆಗೆ ಬೇಡಪುರ ಗ್ರಾಮದವರೋರ್ವರು ಈ ಬಾರಿ ನೀರು ತಂದರು. ಈ ಐವರು ಬೆಳಿಗ್ಗೆ ಆರು ಗಂಟೆಗೆ ನಂಜನಗೂಡು ಮೂಲಕ ನಗರ್ಲೆ ಗ್ರಾಮಕ್ಕೆ ತೆರಳಿದರು. ಅಲ್ಲಿರುವ ಕಪಿಲಾ ನದಿ ತಟಕ್ಕೆ ಹೋಗಿ ಸ್ನಾನ ಮಾಡಿ, ತಾಮ್ರದ ಕೊಡಗಳನ್ನು ಬೆಳಗಿ, ಅದಕ್ಕೆ ವಿಭೂತಿ, ಅರಿಶಿನ ಕುಂಕುಮ ಹಚ್ಚಿ, ಕಾಯಿ ಒಡೆದು ಪೂಜೆ ಮಾಡಿದರು. ಬಳಿಕ ಕಪಿಲೆಯನ್ನು ಬಿಂದಿಗೆಗೆ ತುಂಬಿಕೊಂಡು ತಲೆಮೇಲೆ ಹೊತ್ತು 10 ಕಿ.ಮೀ. ದೂರ ನಡೆದು ಆನಂಬಳ್ಳಿ ತಲುಪಿ, ಅಲ್ಲಿ ಪದ್ಧತಿಯಂತೆ ಮನೆಯೊಂದರಲ್ಲಿ ಕೊಡಗಳನ್ನು ಇಳಿಸಿ, ಉಪಾಹಾರ ಸೇವಿಸಿ ಬಳಿಕ ತಲೆ ಮೇಲೆ ಕೊಡ ಹೊತ್ತು ಹೊರಟರು.

ಅಲ್ಲಿಂದ ದೇವನೂರಿಗೆ ಬಂದು ಅಲ್ಲಿನ ಗುರುಮಲ್ಲೇಶ್ವರ ಮಠದಲ್ಲಿ ಕೊಡವನ್ನು ಇಳಿಸಿ, ಪ್ರಸಾದ ಸೇವಿಸಿ ಮತ್ತೆ ಕೊಡ ಹೊತ್ತು, ಕೌಲಂದೆ, ಹೆಗ್ಗವಾಡಿ, ಬೆಂಡರವಾಡಿಗೆ ಬಂದರು. ಬೆಂಡರವಾಡಿ ಕೆರೆಯ ಬಳಿ ಸ್ವಲ್ಪ ವಿಶ್ರಾಂತಿ ಪಡೆದು ತಮ್ಮೂರಿಗೆ ಸಂಜೆಯ ಇಳಿಹೊತ್ತಿನಲ್ಲಿ ತಲುಪಿದರು.

Advertisement

ಈ ದಾರಿಯಲ್ಲಿ ಒಟ್ಟು ಮೂರು ಕಡೆಗಳಲ್ಲಿ ಮಾತ್ರ ತಲೆಮೇಲಿನ ಬಿಂದಿಗೆಯನ್ನು ಇಳಿಸುತ್ತಾರೆ. ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಕೊಡ ಇಳಿಸಿದರು. ಸಿದ್ದರಾಮೇಶ್ವರನ ಸನ್ನಿಧಿಯಲ್ಲಿ ಕಪಿಲಾ ಜಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಪಿಲಾ ಜಲದೊಂದಿಗೆ 101 ಬಿಂದಿಗೆಗಳಲ್ಲಿ ನೀರು ಹಾಕಿ ಸಿದ್ದರಾಮೇಶ್ವರನಿಗೆ ರಾತ್ರಿಯಿಡೀ 5 ಬಾರಿ ಅಭಿಷೇಕ ನಡೆಸಿ ಪೂಜೆ ಸಲ್ಲಿಸಿದರು. ಇಡೀ ರಾತ್ರಿ ಗ್ರಾಮಸ್ಥರೆಲ್ಲ ಒಟ್ಟಾಗಿ ದೇವಸ್ಥಾನದಲ್ಲಿ ಜಾಗರಣೆ ನಡೆಸಿದರು.

ಶಿವರಾತ್ರಿಯ ಮಾರನೆಗೆ ಸಿದ್ದರಾಮೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ನಡೆ ಯುತ್ತದೆ. ಹೆಗ್ಗೋಠಾರ ಗ್ರಾಮದಲ್ಲಿ ಸುಮಾರು 700 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ದರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಈ ವಿಶೇಷ ಪೂಜೆ ನಡೆಯುತ್ತದೆ. ಸಿದ್ದರಾಮೇಶ್ವರನಿಗೆ ಕಪಿಲಾ ದಿಯಿಂದ ನೀರು ತಂದು ಪೂಜೆ ಸಲ್ಲಿಸುವ ವಾಡಿಕೆ ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next